‘ವೆಟ್ಟೈಯಾನ್’ ಸಿನಿಮಾದ ವಿರುದ್ಧ ದೂರು ದಾಖಲು

ಚೆನ್ನೈ :

    ರಜನೀಕಾಂತ್ ನಿನ್ನೆಯಷ್ಟೆ ಚೆನ್ನೈನ ಅಪೋಲೊ ಆಸ್ಪತ್ರೆಯಿಂದ ಡಿಸ್​ಚಾರ್ಜ್ ಆಗಿ ಮನೆಗೆ ಮರಳಿದ್ದಾರೆ. ಅಭಿಮಾನಿಗಳಿಗೆ ಈ ಸುದ್ದಿ ಖುಷಿ ನೀಡಿದೆ. ಇದರ ಬೆನ್ನಲ್ಲೆ ಬಿಡುಗಡೆಗೆ ತಯಾರಾಗಿರುವ ರಜನೀಕಾಂತ್​ರ ಹೊಸ ಸಿನಿಮಾ ‘ವೆಟ್ಟೆಯಾನ್’ ವಿರುದ್ಧ ಪ್ರಕರಣ ದಾಖಲಾಗಿದೆ. ಸಿನಿಮಾದ ಟ್ರೈಲರ್ ಇತ್ತೀಚೆಗಷ್ಟೆ ಬಿಡುಗಡೆ ಆಗಿದ್ದು, ಟ್ರೈಲರ್​ನಲ್ಲಿ ಕೇಳಿ ಬರುವ ಕೆಲ ಸಂಭಾಷಣೆಗಳ ವಿರುದ್ಧ ವಕೀಲರೊಬ್ಬರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲು ಮಾಡಿದ್ದು, ಸಿನಿಮಾದಲ್ಲಿ ಬಳಸಲಾಗಿರುವ ಕೆಲವು ಸಂಭಾಷಣೆಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

    ಪಲನಿವೇಲುಸ್ವಾಮಿ ಎಂಬುವರು ಹೈಕೋರ್ಟ್​ನ ಮಧುರೈ ಬೆಂಚ್​ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿದ್ದು, ‘ವೆಟ್ಟೆಯಾನ್’ ಸಿನಿಮಾದಲ್ಲಿ ಬಳಸಲಾಗಿರುವ ಎನ್​ಕೌಂಟರ್ ಕುರಿತಾದ ಸಂಭಾಷಣೆಗಳ ಬಗ್ಗೆ ಆಕ್ಷೇಪಣೆ ಎತ್ತಿದ್ದು, ಸಿನಿಮಾದ ಬಿಡುಗಡೆಗೆ ತಾತ್ಕಾಲಿಕ ತಡೆ ನೀಡಬೇಕೆಂದು ಮನವಿ ಮಾಡಿದ್ದರು. ಸಿನಿಮಾದ ಟ್ರೈಲರ್​ನಲ್ಲಿ ನಾಯಕ ಎನ್​ಕೌಂಟರ್ ಕುರಿತಾಗಿ ಹೀರೋಯಿಕ್ ಸಂಭಾಷಣೆಗಳನ್ನು ಹೇಳುವ ದೃಶ್ಯಗಳಿವೆ. ಈ ದೃಶ್ಯಗಳು ಹಾಗೂ ಸಂಭಾಷಣೆಗಳ ಬಗ್ಗೆ ಪಲನಿವೇಲುಸ್ವಾಮಿ ಆಕ್ಷೇಪ ಎತ್ತಿದ್ದಾರೆ.

   ಅರ್ಜಿಯ ವಿಚಾರಣೆ ನಡೆಸಿದ ದ್ವಿಸದಸ್ಯ ಪೀಠವು, ಸಿಬಿಎಫ್​ಸಿ ಹಾಗೂ ಸಿನಿಮಾ ನಿರ್ಮಾಣ ಮಾಡಿರುವ ಲೈಕಾ ಪ್ರೊಡಕ್ಷನ್ ಹೌಸ್​ಗೆ ನೊಟೀಸ್​ ಜಾರಿ ಮಾಡಿದೆ. ಆದರೆ ಸಿನಿಮಾದ ಬಿಡುಗಡೆ ಮೇಲೆ ತಾತ್ಕಾಲಿಕ ತಡೆ ನೀಡಲು ಪೀಠವು ನಿರಾಕರಿಸಿದೆ. ಸಿಬಿಎಫ್​ಸಿ ಹಾಗೂ ಲೈಕಾ ಪ್ರೊಡಕ್ಷನ್ ಹೌಸ್​ನ ಪ್ರತಿಕ್ರಿಯೆ ಬಂದ ಬಳಿಕ ಈ ಅರ್ಜಿಯ ಮುಂದಿನ ವಿಚಾರಣೆ ನಡೆಯಲಿದೆ.
   ‘ವೆಟ್ಟೈಯಾನ್’ ಸಿನಿಮಾದಲ್ಲಿ ರಜನೀಕಾಂತ್ ಪೊಲೀಸ್ ಪಾತ್ರಧಾರಿಯಾಗಿ ನಟಿಸಿದ್ದು, ಅವರು ಎನ್​ಕೌಂಟರ್​ ಸ್ಪೆಷಲಿಸ್ಟ್ ಆಗಿರುತ್ತಾರೆ. ಅಪರಾಧಿಗಳನ್ನು ಗುಂಡಿಕ್ಕಿ ಕೊಲ್ಲುವುದು ಅವರ ಕೆಲಸ, ವಕೀಲರ ಪಾತ್ರದಲ್ಲಿ ನಟಿಸಿರುವ ಅಮಿತಾಬ್ ಬಚ್ಚನ್ ಈ ಎನ್​ಕೌಂಟರ್​ಗಳನ್ನು ವಿರೋಧಿಸುತ್ತಾರೆ. ಆಗ ರಜನೀಕಾಂತ್, ಎನ್​ಕೌಂಟರ್​ ಒಳ್ಳೆಯದು ಎಂಬರ್ಥದ ಡೈಲಾಗ್​ಗಳನ್ನು ಹೇಳಿರುವ ದೃಶ್ಯಗಳು ಟ್ರೈಲರ್​ನಲ್ಲಿವೆ. ಸಿನಿಮಾವನ್ನು ಜ್ಞಾನವೇಲು ನಿರ್ದೇಶನ ಮಾಡಿದ್ದು, ಸಿನಿಮಾ ಅಕ್ಟೋಬರ್ 10ಕ್ಕೆ ಬಿಡುಗಡೆ ಆಗಲಿದೆ. ಸಿನಿಮಾದಲ್ಲಿ ರಜನೀಕಾಂತ್ ಜೊತೆಗೆ ಅಮಿತಾಬ್ ಬಚ್ಚನ್, ಫಹಾದ್ ಫಾಸಿಲ್, ರಾಣಾ ದಗ್ಗುಬಾಟಿ ಅವರುಗಳು ನಟಿಸಿದ್ದಾರೆ.

Recent Articles

spot_img

Related Stories

Share via
Copy link