ಆನೇಕಲ್
ವರಮಹಾಲಕ್ಷ್ಮೀ ಹಬ್ಬದ ಚೀಟಿ ಹೆಸರಿನಲ್ಲಿ 5,00,00,000 ರೂಪಾಯಿ ಹೆಚ್ಚು ಹಣ ವಂಚಿಸಿ ಮಾಲೀಕ ಪರಾರಿ ಆಗಿರುವ ಘಟನೆ ಆನೇಕಲ್ ತಾಲೂಕಿನ ಕಾಚನಾಯಕನಹಳ್ಳಿಯಲ್ಲಿ ನಡೆದಿದೆ. ಚಿನ್ನ ಕೊಡುತ್ತೇನೆಂದು ಹಣ ಕಟ್ಟಿಸಿಕೊಂಡ ಸೇಟು ವಂಚನೆ ಮಾಡಿದ್ದಾನೆ. ಇನ್ನೂ ಈ ಚೀಟಿಗಾಗಿಯೇ ಲಕ್ಷಾಂತರ ರೂಪಾಯಿ ಸಾಲ ಮಾಡಿ ಮಹಿಳೆಯರು ಕಟ್ಟಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಆದರೆ ಇದೀಗ ಚಿನ್ನ ಅಡವಿಟ್ಟು ಮನೆ ಖಾಲಿ ಮಾಡಿಕೊಂಡು ಸೇಟು ಪರಾರಿಯಾಗಿರುವ ಮಾಹಿತಿ ಲಭ್ಯವಾಗಿದೆ. ಮುನಾರಾಮ್ ಎಂಬ ರಾಜಸ್ಥಾನಿ ಮೂಲದ ಮಾರ್ವಾಡಿ ಆನಂದ್ ಜ್ಯುವೆಲರ್ಸ್ ಅಂಡ್ ಕೇಸರ್ ಬ್ಯಾಂಕರ್ಸ್ನ ಮಾಲೀಕನಾಗಿದ್ದು, 10 ವರ್ಷಕ್ಕೂ ಹೆಚ್ಚು ದಿನದಿಂದ ಇಲ್ಲೇ ವಾಸ ಮಾಡುತ್ತಿದ್ದ ಎಂದು ತಿಳಿದಬಂದಿದೆ. ಅಲ್ಲದೆ, ಇವನು 100ಕ್ಕೂ ಹೆಚ್ಚು ಜನರಿಂದ ವರಮಹಾಲಕ್ಷಮಿ ಹಬ್ಬಕ್ಕೆಂದು ಚೀಟಿ ಹಾಕಿಸಿಕೊಂಡು ಚಿನ್ನ ಅಡ ಇಟ್ಟುಕೊಂಡಿದ್ದ.
ಆಗಸ್ಟ್ 16 ಶುಕ್ರವಾರ ವರಮಹಾಲಕ್ಷ್ಮಿ ಹಬ್ಬವಿದ್ದು, ಈ ಹಿನ್ನೆಲೆ ಚೀಟಿ ಹಾಕಿದ್ದ ಮಹಿಳೆಯರು ಚಿನ್ನ ಬಿಡಿಸಿಕೊಂಡು ಬರಲು ಹೋದಾಗ ಈ ವಂಚನೆ ಬೆಳಕಿಗೆ ಬಂದಿದೆ. ಇನ್ನು ಚಿನ್ನದ ಅಂಗಡಿ ಮಾಲೀಕ ಅಂಗಡಿ ಹಾಗೂ ಮನೆ ಖಾಲಿ ಮಾಡಿಕೊಂಡು ಪರಾರಿ ಆಗಿದ್ದು, ಇದನ್ನು ಕಂಡು ಆತಂಕಕ್ಕೊಳಗಾದ ಗ್ರಾಮಸ್ಥರು ಪೊಲೀಸ್ ಠಾಣೆಗೆ ಈ ಬಗ್ಗೆ ದೂರು ನೀಡಲು ಹೋಗಿದ್ದಾರೆ.
ಸೇಟುನಿಂದ ವಂಚನೆಗೊಳಗಾದವರು ಸೂರ್ಯ ನಗರ ಪೊಲೀಸ್ ಠಾಣೆಗೆ ಬಂದಿದ್ದಾರೆ. ಇನ್ನು ವರಮಹಾಲಕ್ಷ್ಮೀ ಹಬ್ಬಕ್ಕೆಂದು ಹಣ ಕಟ್ಟಿದವರು ಇದೀಗ ಕಣ್ಣೀರಿಡುತ್ತಿದ್ದಾರೆ. ಇನ್ನು ಘಟನೆ ಕುರಿತು ಸೂರ್ಯ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.