ಬೆಂಗಳೂರು:
ಮೇಕೆದಾಟು ವಿಷಯದಲ್ಲಿ ರಾಜಕೀಯಕ್ಕಿಂತ ನಾಡಿನ ಜನರ ಹಿತ ಮುಖ್ಯ. ನಮ್ಮ ನೆಲ, ಜಲ, ಭಾಷೆ, ಗಡಿಗೆ ಸಂಬಂಧಿಸಿದ ವಿಷಯದಲ್ಲಿ ನಾವೆಲ್ಲ ಒಂದೇ ಎಂದು ನೆರೆ ರಾಜ್ಯಕ್ಕೆ ಸಂದೇಶ ಕಳುಹಿಸಿದ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಮುಖ್ಯ ನಾಯಕರು ಮಾತಿನ ಚಾಟಿ ಬೀಸಿ ವಿಧಾನಸಭೆಯಿಂದಲೇ ತಮಿಳುನಾಡಿಗೆ ಖಡಕ್ ಸಂದೇಶ ರವಾನಿಸಿದ್ದಾರೆ.
ಮಂಗಳವಾರ ಪ್ರಶ್ನೋತ್ತರ ಕಲಾಪದ ಬಳಿಕ ಶೂನ್ಯ ವೇಳೆಯಲ್ಲಿ ತಮಿಳುನಾಡು ವಿಧಾನಸಭೆ ನಿರ್ಣಯದ ವಿಷಯ ಪ್ರಸ್ತಾಪವಾಯಿತು. ಈ ವೇಳೆ, ತಮಿಳುನಾಡಿನ ಗದಾ ಪ್ರಹಾರ ಸಹಿಸಲ್ಲ, ಮೇಕೆದಾಟು ಯೋಜನೆ ಅನುಷ್ಠಾನ ಮಾಡಿಯೇ ತೀರುತ್ತೇವೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶಪಥ ಮಾಡಿದರೆ,
ನಮ್ಮ ಯೋಜನೆ ಬಗ್ಗೆ ನಿರ್ಣಯ ಮಾಡಲು ಅವರಿಗೆ ಹಕ್ಕೇ ಇಲ್ಲವೆಂದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಪಾದಿಸಿದರು. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರೂ ದನಿಗೂಡಿಸಿ, ತಮಿಳುನಾಡು ವಿನಾಕಾರಣ ಕ್ಯಾತೆ ತೆಗೆಯುತ್ತ ಯೋಜನೆಗೆ ಅಡ್ಡಿ ಮಾಡುತ್ತಾ ವಿಷಯ ಜೀವಂತವಿಡಲು ಪ್ರಯತ್ನ ಮಾಡುತ್ತಿದೆ ಎಂದು ತರಾಟೆಗೆ ತೆಗೆದುಕೊಂಡರು.
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ; ರಾಜ್ಯದ ಹಲವು ಜಿಲ್ಲೆಗಳಲ್ಲಿ ಇಂದು ಮಳೆ ಮುನ್ಸೂಚನೆ
ತಮಿಳುನಾಡು ನಿರ್ಣಯಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಮೂರು ಪಕ್ಷದ ಪ್ರಮುಖ ನಾಯಕರು, ವಿಧಾನಸಭೆ ಹಾಗೂ ವಿಧಾನಪರಿಷತ್ನಲ್ಲಿ ಖಂಡನಾ ನಿರ್ಣಯ ಕೈಗೊಂಡು ಪ್ರತಿರೋಧ ವ್ಯಕ್ತಪಡಿಸಲು ಒಕ್ಕೊರಲ ನಿಲುವಿಗೆ ಬಂದರು. ಬುಧವಾರ ಕಲಾಪದಲ್ಲಿ ನಿರ್ಣಯ ಕೈಗೊಳ್ಳಲಾಗುತ್ತದೆ.
ಎಚ್.ಕೆ.ಪಾಟೀಲ್ ಅವರಿಂದ ಚರ್ಚೆ ಆರಂಭವಾಯಿತು. ಬಳಿಕ ಮಾತನಾಡಿದ ಸಿದ್ದರಾಮಯ್ಯ, ಒಂದು ಸಹಜ ವರ್ಷದಲ್ಲಿ 177.25 ಟಿಎಂಸಿ ನೀರನ್ನು ಬಿಳಿಗೊಂಡ್ಲುವಿನಿಂದ ತಮಿಳುನಾಡಿಗೆ ಬಿಡಬೇಕು ಎಂದು ನ್ಯಾಯಾಲಯದ ತೀರ್ಪು ಹೇಳಿದೆ. ಇದರ ಅನುಷ್ಠಾನಕ್ಕೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ರಚನೆಯಾಗಿದೆ.
ಈ ನೀರನ್ನು ಪಡೆದುಕೊಳ್ಳುವುದು ಮಾತ್ರ ತಮಿಳುನಾಡಿಗಿರುವ ಹಕ್ಕು. ಕೋರ್ಟ್ ತೀರ್ಪಿನ ನಂತರ ಈವರೆಗೆ ತಮಿಳುನಾಡಿಗೆ ಸುಮಾರು 582 ಟಿಎಂಸಿ ನೀರು ಹೆಚ್ಚುವರಿಯಾಗಿ ಹರಿದು ಹೋಗಿದೆ. ಅಷ್ಟೇ ಅಲ್ಲದೆ ನಮ್ಮನ್ನು ಅಥವಾ ಕೇಂದ್ರ ಸರ್ಕಾರವನ್ನು ಕೇಳದೆ ತಮಗೆ ಬೇಕಾದ ಯೋಜನೆ ಮಾಡಿಕೊಂಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಯೋಜನೆ ಮಾಡಿಯೇ ತೀರುತ್ತೇವೆ:
ಮೇಕೆದಾಟು ಅಥವಾ ಕಾವೇರಿ ಯಾವುದೇ ಯೋಜನೆ ವಿಚಾರದಲ್ಲಿ ನಮ್ಮ ನಿಲುವು ಸ್ಪಷ್ಟ, ಯೋಜನೆಯನ್ನು ಮಾಡಿಯೇ ತೀರುತ್ತೇವೆ. ನಮ್ಮ ನೀರಿನ ಹಕ್ಕು ಪಡೆದುಕೊಳ್ಳಲು ನಾವು ಪರಿತಪಿಸುವುದು ರಾಜ್ಯದ ಹಿತ ದೃಷ್ಟಿಯಿಂದ ಸರಿಯಲ್ಲ. ಈ ವಿಚಾರವನ್ನು ಪ್ರಬಲವಾಗಿ ತೆಗೆದುಕೊಂಡು ಹೋಗುತ್ತೇವೆ. ಕೇಂದ್ರಕ್ಕೂ ಒತ್ತಾಯ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಧಾನಸಭೆಯಿಂದಲೇ ತಮಿಳುನಾಡಿಗೆ ಗಡಸು ದನಿಯಲ್ಲಿ ಪ್ರತಿಕ್ರಿಯೆ ನೀಡಿದರು.
ಯೋಜನೆ ಕಾರ್ಯಗತಗೊಳಿಸಲು ಎಲ್ಲ ರೀತಿಯ ಕ್ರಮ ಕೈಗೊಳ್ಳುತ್ತೇವೆ ಎಂದ ಸಿಎಂ, ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರಿಗೆ ಅನಾರೋಗ್ಯವಿದೆ, ಇಲ್ಲವಾದರೆ ಮಂಗಳವಾರವೇ ದೆಹಲಿಗೆ ಹೋಗುತ್ತಿದ್ದರು. ನಾನು ಈ ಅಸೆಂಬ್ಲಿ ಮುಗಿಯುತ್ತಿದ್ದಂತೆ ದೆಹಲಿಗೆ ಹೋಗುತ್ತೇನೆ ಎಂದರು. ತಮಿಳುನಾಡಿನವರು ನದಿ ಪಾತ್ರದ ತಳ ಭಾಗದಲ್ಲಿ ಯೋಜನೆ ಮಾಡುತ್ತಿದ್ದಾರೆ.
ಅತಿ ಹೆಚ್ಚು ಚಿನ್ನ ಹೊಂದಿರುವ ಟಾಪ್ 10 ದೇಶಗಳಲ್ಲಿ ‘ಭಾರತ’ಕ್ಕೂ 8 ಸ್ಥಾನ
ಅದಕ್ಕೆ ನೀರಿನ ಹಂಚಿಕೆ ಇಲ್ಲ. ಈ ಬಗ್ಗೆ ತಾಂತ್ರಿಕ ಮಾಹಿತಿ ಪಡೆದುಕೊಳ್ಳುತ್ತೇವೆ. ಹೊಗೇನಕಲ್ ಎರಡನೇ ಹಂತದ ಯೋಜನೆ ಕೈಗೆತ್ತಿಕೊಳ್ಳುವ ಮಾತನ್ನು ತಮಿಳುನಾಡು ಸರ್ಕಾರ ಹೇಳುತ್ತಿದೆ. ಇದು ನಮ್ಮ ನೀರಿನ ಹಕ್ಕಿನ ಮೇಲೆ ಹೊಡೆತ. ಅದಕ್ಕಾಗಿ ವಿರೋಧ ಮಾಡಿದ್ದೇವೆ, ಮುಂದೆಯೂ ಮಾಡುತ್ತೇವೆ ಎಂದರು.
ಈ ಹಿಂದೆ ಚೆನ್ನೈಗೆ ನೀರಿರಲಿಲ್ಲ. ರೈಲಿನ ಮೂಲಕ ಟ್ಯಾಂಕರ್ನಲ್ಲಿ ನೀರು ತೆಗೆದುಕೊಂಡು ಹೋಗುವ ಪರಿಸ್ಥಿತಿ ಇತ್ತು. ಆ ಸಂದರ್ಭದಲ್ಲಿ ಕರ್ನಾಟಕ, ಮಹಾರಾಷ್ಟ್ರ, ಆಂಧ್ರ 15 ಟಿಎಂಸಿ ನೀರನ್ನು ತಮಿಳುನಾಡಿಗೆ ಕೊಟ್ಟಿವೆ.
ಅವರಿಗೆ ಅಷ್ಟಾದರೂ ಕನಿಷ್ಠ ಸೌಜನ್ಯ ಇರಬೇಕು. ತೆಲುಗು ಗಂಗಾ ಯೋಜನೆ ತಮಿಳುನಾಡಿನ ವ್ಯಾಪ್ತಿಗೆ ಬರುವುದೇ ಇಲ್ಲ. ಕೃಷ್ಣಾ ಜಲಾನಯನ ಅವರಿಗೆ ಬರುವುದೇ ಇಲ್ಲ. ಆ ಸಂದರ್ಭದಲ್ಲಿ ಇದ್ದ ನಿಯಮ ಮೀರಿ ಮಾನವೀಯತೆ ದೃಷ್ಟಿಯಿಂದ ನೀರು ಕೊಡಲಾಯಿತು. ಈಗ ಅವರು ಕುಡಿಯುತ್ತಿರುವುದು ಕೃಷ್ಣಾ ಜಲಾನಯನ ಪ್ರದೇಶದ ನೀರು ಎಂಬ ಅರಿವು ಇರಬೇಕಿತ್ತು.
‘ವಿಸಿಯಾಗಲು ಸೂಟು-ಬೂಟು ಹಾಕಿಕೊಂಡು ರೆಡಿಯಾಗಿದ್ದಾರೆ, ಬದನೆಗೊಂದು- ಸೌತೆಕಾಯಿಗೊಂದು ಯೂನಿವರ್ಸಿಟಿ ಸ್ಥಾಪಿಸಿ’
ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ
ವಿನಾ ಕಾರಣ ಕ್ಯಾತೆ ತೆಗೆಯಲು ತಮಿಳುನಾಡು ನಿರ್ಣಯವನ್ನು ಖಂಡಿಸುತ್ತೇವೆ. ಇಲ್ಲಿ ಕೈಗೊಂಡ ತೀರ್ವನವನ್ನು ಸಿಎಂ ಅವರು ಪ್ರಧಾನಿ, ಕೇಂದ್ರ ಜಲಶಕ್ತಿ ಸಚಿವರಿಗೆ ತಿಳಿಸಲಿ. ಪರಿಸರ ನಿರಾಕ್ಷೇಪಣ ಪತ್ರ ಪಡೆದು ಯೋಜನೆ ಜಾರಿ ಮಾಡಲಿ.
ಬಿ.ಎಸ್.ಯಡಿಯೂರಪ್ಪ ಮಾಜಿ ಮುಖ್ಯಮಂತ್ರಿ
ನಾವು ನಮ್ಮ ನೆಲ, ಜಲ, ಭಾಷೆ, ಗಡಿಗೆ ಸಂಬಂಧಿಸಿದಂತೆ ರಾಜಕಾರಣ ಮಾಡಿಲ್ಲ, ಮುಂದೆಯೂ ಮಾಡಲ್ಲ. ಒಕ್ಕೂಟ ವ್ಯವಸ್ಥೆಯಲ್ಲಿ ಒಕ್ಕೂಟ ಧರ್ಮ ಪಾಲನೆ ಕೇಂದ್ರ ಸರ್ಕಾರದ ಕರ್ತವ್ಯ.
ಮುಸ್ಲಿಂ ವ್ಯಾಪಾರಿಗಳಿಗೆ ಜಾತ್ರೆಗಳಲ್ಲಿ ನಿರ್ಬಂಧ-ಮಾಹಿತಿ ತರಿಸಿಕೊಂಡು ಕ್ರಮ ಕೈಗೊಳ್ಳುತ್ತೇನೆ: ಆರಗ ಜ್ಞಾನೇಂದ್ರ
ಸಿದ್ದರಾಮಯ್ಯ ವಿಪಕ್ಷ ನಾಯಕ
ಇಡೀ ಸದನ ಒಕ್ಕೊರಿನಿಲಿಂದ ಕರ್ನಾಟಕದ ನೆಲ, ಜಲದ ವಿಷಯದಲ್ಲಿ ಒಂದಾಗಿ ಇದ್ದೇವೆಂಬುದನ್ನು ನಾಡಿಗಷ್ಟೇ ಅಲ್ಲದೆ ಎಲ್ಲ ಕಡೆ ತಿಳಿಸಲಾಗಿದೆ. ಸ್ಪಷ್ಟ ಸಂದೇಶ ತಿಳಿಸಿರುವುದಕ್ಕೆ ಸಂತೋಷವಾಗುತ್ತಿದೆ.
|ವಿಶ್ವೇಶ್ವರ ಹೆಗಡೆ ಕಾಗೇರಿ ವಿಧಾನಸಭೆ ಸ್ಪೀಕರ್
ಸರ್ಕಾರದ ನಿಲುವು ಸ್ಪಷ್ಟ, ಖಚಿತ
ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಸರ್ಕಾರದ ನಿಲುವನ್ನು ವಿಧಾನಸಭೆಯಲ್ಲಿ ಹೇಳಿದರು. ತಮಿಳುನಾಡು ವಿಷಯದಲ್ಲಿ ನಾವು ನಿರ್ಣಯ ಕೈಗೊಂಡರೆ ಸುಪ್ರೀಂ ಕೋರ್ಟ್ಗೆ ಪ್ರಚೋದಿಸಿದಂತಾಗುತ್ತದೆಯೇ ಎಂಬುದನ್ನು ಕಾನೂನು ತಜ್ಞರ ಜತೆ ಸಮಾಲೋಚಿಸಿ ನಿರ್ಣಯ ಮಂಡಿಸಲಾಗುತ್ತದೆ ಎಂದರು. ತಮಿಳುನಾಡು ನಿರ್ಣಯದ ವಿರುದ್ಧ ರಾಜ್ಯ ಸರ್ಕಾರ ತೀವ್ರ ಪ್ರತಿಭಟನೆ ಮಾಡಲಿದೆ. ನಾವು ಕೂಡು ನೆಲ, ಜಲ ಭಾಷೆ ವಿಷಯದಲ್ಲಿ ಯಾವುದೇ ರಾಜಿಗೆ ತಯಾರಾಗಿಲ್ಲ.
ಬೆಲೆಯೇರಿಕೆ ಬಗೆಗೆ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ವಿಧಾನಸೌಧದ ಮೊಗಸಾಲೆಯಲ್ಲಿ ಮಾತನಾಡಿದರು
ಆರಂಭದಲ್ಲಿ ಈ ಪ್ರಕರಣದಲ್ಲಿ ತಮಿಳು ನಾಡು ಸರ್ಕಾರ ಪ್ರವೇಶ ಮಾಡಲಿಲ್ಲ. ಮೂರನೇ ವ್ಯಕ್ತಿ ಮೂಲಕ ಶುರು ಮಾಡಿ, ಈಗ ಅವರೂ ಕೋರ್ಟ್ ಮುಂದೆ ಅರ್ಜಿ ಹಾಕಿದ್ದಾರೆ. ಕಾವೇರಿ ಜಲ ವಿವಾದ ಇಲ್ಲ ಎಂಬ ಭಾವನೆಯಲ್ಲಿ ನಾವಿದ್ದರೂ ತಮಿಳುನಾಡು ಅಲ್ಲಲ್ಲಿ ಸಮಸ್ಯೆ ಸೃಷ್ಟಿ ಮಾಡುತ್ತಾ ವಿವಾದ ಜೀವಂತ ವಾಗಿಡಲು ಪ್ರಯತ್ನಿಸುತ್ತಿರುವುದು ಸಾಧುವಲ್ಲ. ನಮ್ಮದು ಖಂಡಿತ ಪ್ರತಿಭಟನೆ ಇದ್ದೇ ಇದೆ. ನಾವು ಯಾವುದನ್ನು ಸಹಿಸಲ್ಲ. ಪ್ರತಿ ಬಾರಿ ಪ್ರಚೋದನೆ ಮಾಡುವುದನ್ನು ಸಹಿಸಿಕೊಂಡು ಕುಳಿತರೆ ಅಶಕ್ತರು ಎನಿಸಿಕೊಳ್ಳಲು ಆಗಲ್ಲ. ಕೌಂಟರ್ ಕೊಡುತ್ತೇವೆ ಎಂದು ಗರ್ಜಿಸಿದರು.
ಅಣೆಕಟ್ಟಿಗೆ ವಿರೋಧ ಇಲ್ಲ:
ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ತಮಿಳುನಾಡು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದರು. ಇದಕ್ಕೆ ಉತ್ತರ ಬರೆದಿರುವ ನೆರೆ ರಾಜ್ಯದ ಮುಖ್ಯಮಂತ್ರಿಗಳು, ಬೆಂಗಳೂರಿಗೆ ಸುಪ್ರೀಂಕೋರ್ಟ್ ಹಂಚಿಕೆ ಮಾಡಿರುವ 4.5 ಟಿಎಂಸಿ ಬಳಕೆ ಬಗ್ಗೆ ತಕರಾರು ತೆಗೆದಿಲ್ಲ. ಆದರೆ ಕುಡಿಯುವ ನೀರು ಶೇಖರಣೆಗೆ 67 ಟಿಎಂಸಿ ಸಾಮರ್ಥ್ಯದ ಅಣೆಕಟ್ಟು ಏಕೆ ಎಂದು ಪ್ರಶ್ನೆ ಮಾಡಿದ್ದಾರೆ.
ಹೀಗಾಗಿ ಬೆಂಗಳೂರು ನೀರಿನ ಬಳಕೆಗೆ ಬೇಕಿರುವ ಅಣೆಕಟ್ಟು ಕಟ್ಟಲು ತಮಿಳುನಾಡು ವಿರೋಧ ಇಲ್ಲ ಎಂದು ನಾನು ಭಾವಿಸುತ್ತೇನೆ ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿದರು. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಮೇಕೆದಾಟು ಯೋಜನೆ ಕಾರ್ಯಗತ ಮಾಡುವ ಬಗ್ಗೆ ಮಹತ್ವದ ಸಲಹೆ ನೀಡಿದ್ದಾರೆ. 67 ಟಿಎಂಸಿ ಸಾಮರ್ಥ್ಯದ ಜಲಾಶಯವನ್ನು ಒಂದೇ ಹಂತದಲ್ಲಿ ಮಾಡುವ ಬದಲು ಎರಡು ಹಂತಗಳಲ್ಲಿ ಮಾಡಿ ಎಂದು ಹೇಳಿದ್ದಾರೆ ಎಂದು ಎಚ್ಡಿಕೆ ಸದನದ ಗಮನ ಸೆಳೆದರು.
ಭೂ ಕಬಳಿಕೆ ಪ್ರಕರಣಗಳಿಗೆ ಸಿಗದ ತಾರ್ಕಿಕ ಅಂತ್ಯ, ಸರ್ಕಾರ ನೀಡಿದ್ದ ಭರವಸೆಗಳೆ ಮುಕ್ತಾಯ
ಸಲಹೆ ಪಡೆದು ಮುಂದುವರಿಯಿರಿ:
ತಮಿಳುನಾಡು ನಿರ್ಣಯದ ವಿರುದ್ಧ ಖಂಡನಾ ನಿರ್ಣಯ ಪ್ರಟಿಸುವ ಮುನ್ನ ಅಡ್ವೋಕೇಟ್ ಜನರಲ್ ಅವರಿಂದ ಕಾನೂನು ಸಲಹೆ ಪಡೆದು ಮುಂದುವರಿಸುವುದು ಸೂಕ್ತ ಎಂದು ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು. ಮೇಲ್ಮನೆಯಲ್ಲಿ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್, ಮೇಕೆದಾಟು ವಿಚಾರ ಪ್ರಸ್ತಾಪಿಸಿದರು. ಇದಕ್ಕೆ ಎಲ್ಲ ಪಕ್ಷದವರು ಸರ್ವಾನುಮತದಿಂದ ಖಂಡನಾ ನಿರ್ಣಯ ಕಳುಹಿಸಲು ತೀರ್ವನಿಸಿದರು.
ಸಾವಿರ ಕೋಟಿ ಮೌಲ್ಯದ ಸುಳ್ಳು ಜಾತಿ ಪ್ರಮಾಣಪತ್ರ ವಿರುದ್ಧ ಕ್ರಮ
ಅರ್ಹರಲ್ಲದ ಮೇಲ್ಜಾತಿಯವರು ಸುಳ್ಳು ಜಾತಿ ಪ್ರಮಾಣ ಪಡೆದರೆ ಶಿಸ್ತು ಕ್ರಮ ನಿಶ್ಚಿತ. ಈ ವಿಷಯದಲ್ಲಿ ರಾಜೀ ಪ್ರಶ್ನೆಯೇ ಇಲ್ಲ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಸ್ಪಷ್ಟಪಡಿಸಿದರು. ವಿಧಾನಸಭೆಯಲ್ಲಿ ನಿಯಮ 69ರಡಿ ಸಾರ್ವಜನಿಕ ಮಹತ್ವದ ವಿಷಯಗಳ ಚರ್ಚೆಯಲ್ಲಿ ಬಿಜೆಪಿಯ ಪಿ.ರಾಜೀವ್ ಪ್ರಸ್ತಾಪಿಸಿದ ವಿಷಯಕ್ಕೆ ಸಚಿವರು ಉತ್ತರಿಸಿದರು. ಜಾತಿ ಪ್ರಮಾಣ ಪತ್ರ ಕೊಟ್ಟವರ ಮೇಲೂ ಖಂಡಿತವಾಗಿ ಕ್ರಮ ಜರುಗಿಸುತ್ತೇವೆ.
ನಿರ್ದಿಷ್ಟ ಪ್ರಕರಣಗಳಿದ್ದರೆ ಸರ್ಕಾರದ ಗಮನಕ್ಕೆ ತಂದರೆ ಕೂಡಲೇ ಕಠಿಣ ಕ್ರಮವನ್ನು ತೆಗೆದುಕೊಳ್ಳುವುದಾಗಿ ತಿಳಿಸಿದರು. ಬೇಡ ಜಂಗಮ ಹೆಸರಿನಲ್ಲಿ ಕೆಲ ಮೇಲ್ಜಾತಿಯವರು ಪರಿಶಿಷ್ಟ ಜಾತಿ ಪ್ರಮಾಣ ಪತ್ರ ತೆಗೆದುಕೊಳ್ಳುತ್ತಿದ್ದಾರೆ. ಜಾತಿ ಪ್ರಮಾಣ ಪತ್ರ ದುರ್ಬಳಕೆಯಾಗುತ್ತಿದೆ. ಮೀಸಲಾತಿಗೆ ಅರ್ಥವೇ ಇಲ್ಲವಾಗಿದೆ.
ಮದುವೆ ಬಳಿಕ ಪತಿಯ ಜಾತಿ ಪತ್ನಿಗೆ ವರ್ಗಾವಣೆಯಾಗಲ್ಲ; ಹೈಕೋರ್ಟ್ ಮಹತ್ವದ ಆದೇಶ
ಜಂಗಮ, ಆರಾಧ್ಯ ಹೆಸರಿನವರೂ ಬೇಡ ಜಂಗಮ ಪ್ರಮಾಣಪತ್ರ ಪಡೆದುಕೊಂಡಿದ್ದಾರೆ. ಹಿರೇಮಠ ಹೆಸರಿನವರೂ ಬೇಡ ಜಂಗಮ ಪ್ರಮಾಣ ಪತ್ರ ಪಡೆದರೆ ಹೇಗೆ ಎಂದು ಬಿಎಸ್ಪಿಯ ಎನ್.ಮಹೇಶ್ ಪ್ರಶ್ನಿಸಿದರು. ಅದಕ್ಕೆ ಪೂರಕವಾಗಿ ಗೂಳಿಹಟ್ಟಿ ಶೇಖರ್, ಬೇಡ ಜಂಗಮ ಜನಸಂಖ್ಯೆ ರಾಜ್ಯದಲ್ಲಿ 3500 ಇದೆ.
ಸಣ್ಣ ನೀರಾವರಿ ಇಲಾಖೆ ಸಹಾಯಕ ಎಂಜಿನಿಯರ್ ಒಬ್ಬರು ಸೇರಿ ಅನೇಕರು ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದಿದ್ದಾರೆ. ಬೆಂಗಳೂರು ದಕ್ಷಿಣ ಹಾಗೂ ಉತ್ತರ ತಾಲೂಕಿನಲ್ಲಿ ಇಂತಹ ಜಾತಿ ಪ್ರಮಾಣ ಪತ್ರ ನೀಡಲಾಗಿದೆ ಎಂದು ಹೆಸರುಗಳನ್ನು ಉಲ್ಲೇಖಿಸಿ ಸರ್ಕಾರವನ್ನು ತರಾಟೆ ತೆಗೆದುಕೊಂಡರು.
ಆಸ್ತಿ ಖಾಸಗಿ ಪಾಲು?
ಸರ್ಕಾರದ 800- 1000 ಕೋಟಿ ರೂ. ಮೌಲ್ಯದ ಆಸ್ತಿ ಸಂರಕ್ಷಣೆಗೆ ನಮ್ಮ ವಕೀಲರು ಆಸಕ್ತಿಯೇ ತೋರಿಸದೆ, ಅಸಡ್ಡೆಯಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು. ಮೇಲ್ಮನೆಯಲ್ಲಿ ಬಿಜೆಪಿಯ ವೈ.ಎ. ನಾರಾಯಣ ಸ್ವಾಮಿ, ಸರ್ಕಾರಿ ಆಸ್ತಿ-ಪಾಸ್ತಿ ಸಂರಕ್ಷಿಸುವಲ್ಲಿ ಸರ್ಕಾರಿ ವಕೀಲರು ವಿಫಲರಾಗಿದ್ದಾರೆ.
ನಟ ಡಾ. ಪುನೀತ್ ರಾಜ್ಕುಮಾರ್ ಅವರಿಗೆ ಮರಣೋತ್ತರ ಸಹಕಾರ ರತ್ನ ಪ್ರಶಸ್ತಿ
ಸರ್ಕಾರ ಯಾವ ಕ್ರಮವಹಿಸುತ್ತಿದೆ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಸಚಿವರು, ಎಷ್ಟೋ ಪ್ರಕರಣಗಳಲ್ಲಿ ನಮ್ಮ ವಕೀಲರು ಆಸ್ತಿ ಪರ ಯಾವುದೇ ಅರ್ಜಿ ಸಲ್ಲಿಸಿಲ್ಲ. ಇವರ ವಿರುದ್ಧ ಕ್ರಮ ಜರುಗಿಸಲು ಸೂಚಿಸಿದ್ದೇನೆ. ಈ ರೀತಿಯ ಪ್ರಕರಣಗಳಲ್ಲಿನ ಆಸ್ತಿ ಮೌಲ್ಯ ಲೆಕ್ಕ ಹಾಕಿದರೆ, 800ರಿಂದ 1 ಸಾವಿರ ಕೋಟಿ ರೂ. ಇದೆ. ಅಲ್ಲದೆ, ನಿಗಮ- ಮಂಡಳಿಗಳಲ್ಲಿ ನೇಮಕ ಮಾಡಿಕೊಳ್ಳುತ್ತಿರುವ ಕಾನೂನು ಸಲಹಾಗಾರರು ನಮ್ಮ ವ್ಯಾಪ್ತಿಗೆ ಸಿಗುತ್ತಿಲ್ಲ.
ಈ ಬಗ್ಗೆ ಆಯಾ ಗಮನ ನೀಡಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ನಾನು ಮೂರು ತಿಂಗಳಿಗೊಮ್ಮೆ ಅರ್ಜಿಗಳ ಪರಿಸ್ಥಿತಿ ಪರಿಶೀಲಿಸುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಸರ್ಕಾರದ ಅಡ್ವೋಕೇಟ್ ಜನರಲ್ ಶಿಫಾರಸು ಇಲ್ಲದೆ, ಕಾನೂನು ಸಲಹಾಗಾರರನ್ನು ನೇಮಕ ಮಾಡಿಕೊಳ್ಳುವುದಿಲ್ಲ ಎಂದರು.
ಈ ಮೊದಲು ಮಾತನಾಡಿದ ನಾರಾಯಣ ಸ್ವಾಮಿ, ನಾನು ಕೇಳಿದ ಪ್ರಶ್ನೆಗೆ ಬಿಬಿಎಂಪಿ ಉತ್ತರ ನೀಡಿದ್ದು, ಶೇ.90 ಪ್ರಕರಣಗಳು ಪಾಲಿಕೆಯ ಪರವಾಗಿದೆ ಎಂದು ಉತ್ತರ ನೀಡಿದ್ದಾರೆ. ಈ ಉತ್ತರ ನೋಡಿದರೆ, ನಗು ಬರುತ್ತದೆ. ಇಷ್ಟು ಪ್ರಕರಣಗಳಲ್ಲಿ ವಿಜೇತರಾಗಿದ್ದಾರೆಯೇ? ಎಂದು ವ್ಯಂಗ್ಯ ಮಾಡಿದರು.
ಶತಮಾನೋತ್ಸವದ ವೈಭದಲ್ಲಿ ರೆಡ್ ಕ್ರಾಸ್ ಸಂಸ್ಥೆ: ಅಂಚೆ ಇಲಾಖೆಯ ಸಹಯೋಗದೊಂದಿಗೆ ವಿಶೇಷ ಅಂಚೆ ಲಕೋಟೆ ಬಿಡುಗಡೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2022/03/Capture-244.gif)