ಬೆಂಗಳೂರು :
ಬೆಂಗಳೂರಲ್ಲಿ ಮತ್ತೊಂದು ಭೀಕರವಾದ ಕೊಲೆ ಸಂಭವಿಸಿದೆ. ಕಾರ್ ಡ್ರೈವರ್ ಒಬ್ಬರನ್ನು ಅವರ ಸ್ನೇಹಿತರೇ ಸೇರಿ ಭೀಕರವಾಗಿ ಮುಗಿಸಿರುವ ಘಟನೆ ಬೆಂಗಳೂರಿನ ಮೈಸೂರು ರಸ್ತೆಯ ಬಾಪೂಜಿನಗರದಲ್ಲಿ ನಡೆದಿದೆ. ಕೌಶಿಕ್ (25 ) ಕೊಲೆಯಾದ ದುರ್ದೈವಿ. ಮೃತ ಕೌಶಿಕ್ ಬ್ಯಾಟರಾಯನಪುರದಲ್ಲಿ ರೌಡಿಶೀಟರ್ ಆಗಿದ್ದವನೂ ಹೌದು ಎಂದು ಗೊತ್ತಾಗಿದೆ.
2020ರಲ್ಲಿ ಕೊಲೆ ಕೇಸ್ ಒಂದರಲ್ಲಿ ಕೌಶಿಕ್ ಎ8 ಆರೋಪಿಯಾಗಿ ಜೈಲು ಸೇರಿದ್ದ. ಬಳಿಕ ಜಾಮೀನಿನ ಮೂಲಕ ಹೊರಬಂದು, ಕ್ಯಾಬ್ ಓಡಿಸಿಕೊಂಡು ಜೀವನ ಸಾಗಿಸುತ್ತಿದ್ದ. ಭಾನುವಾರ ರಾತ್ರಿ ಕೌಶಿಕ್, ಸ್ನೇಹಿತರೊಂದಿಗೆ ಪಾರ್ಟಿ ಮಾಡುತ್ತಿದ್ದ ವೇಳೆ ಜಗಳ ನಡೆದಿದೆ. ಬಳಿಕ ಜೊತೆಯಲ್ಲಿದ್ದ ಸ್ನೇಹಿತರೇ ಕೌಶಿಕ್ನನ್ನು ಹತ್ಯೆಗೈದಿದ್ದಾರೆ. ಮಧ್ಯರಾತ್ರಿ 2:30ರ ಸುಮಾರಿಗೆ ಆರೋಪಿಗಳು ಕೊಲೆ ಮಾಡಿ ಪರಾರಿಯಾಗಿದ್ದಾರೆ. ಘಟನಾ ಸ್ಥಳಕ್ಕೆ ಬ್ಯಾಟರಾಯನಪುರ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಬಳಿಕ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದ್ದಾರೆ. ಬ್ಯಾಟರಾಯನಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








