ಮಂಡ್ಯ:
ಅನುಕಂಪ ಗಿಟ್ಟಿಸುವಲ್ಲಿ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ನಂಬರ್ ಒನ್ ಆಗಿದ್ದಾರೆಂದು ಸಚಿವ ಚಲುವರಾಯಸ್ವಾಮಿಯವರು ವ್ಯಂಗ್ಯವಾಡಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಸಿಂಪಲ್ ಮನುಷ್ಯ ಎಂಬುದು ಬಿಂಬಿಸಿಕೊಳ್ಳುತ್ತಾರೆ. ನೀವು ಪ್ಯಾಂಟ್, ಪಂಚೆ, ಸೂಟ್ ಹಾಕಿಕೊಂಡು ಬಂದರೆ ನಮಗೆ ಹೊಟ್ಟೆ ತುಂಬಲ್ಲ. ರಾಜ್ಯಕ್ಕೆ ಅನುಕೂಲವಾಗುವ ಕಾರ್ಯಕ್ರಮ ಕೊಡಿಸಬೇಕಿತ್ತು ಎಂದು ಟೀಕಿಸಿದರು.
ಕರ್ನಾಟಕಕ್ಕೆ ಕುಮಾರಸ್ವಾಮಿ ಬಂದರೆ ಹೊಟ್ಟೆ ಕಿಚ್ಚು ಎಂಬ ಕುಮಾರಸ್ವಾಮಿಯವರ ಹೇಳಿಕೆಗೆ ಪ್ರತಿಕ್ರಿಯಿಸಿ, ಅಯ್ಯೋ ಪಾಪಾ ಇವಾಗ ಏನು ತಮಿಳುನಾಡಿನಲ್ಲಿದ್ದಾರಾ? ಇಲ್ಲೆ ಓಡಾಡುತ್ತಿದ್ದಾರೆ. ವಾರಕ್ಕೆ ನಾಲ್ಕು ದಿನ ಇಲ್ಲೆ ಇರಲಿ ನಮಗೆ ಬೇಜಾರಿಲ್ಲ. ಅವರ ಎಲ್ಲಿದ್ದಾರೆ ಅನ್ನೋದು ಮುಖ್ಯವಲ್ಲ. ಕರ್ನಾಟಕಕ್ಕೆ ಏನು ಮಾಡುತ್ತಾರೆ ಎನ್ನುವುದು ಮುಖ್ಯ ಎಂದರು.
ಕೇಂದ್ರ ಬಜೆಟ್ ನಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗಿದೆ. ಏನಾದರೂ ಒಂದು ಘೋಷಣೆ ಮಾಡಬೇಕಿತ್ತು. 25 ಸಾವಿರ ಕೋಟಿ ರೂ. ನೀರಾವರಿಗೆ ಕೊಡಿಸಿ ರಾಜ್ಯದ ಸಮಗ್ರ ಅಭಿವೃದ್ಧಿ ಮಾಡಬೇಕಿತ್ತು. ಆಗ ನಾನೇ ಸಚಿವರನ್ನು ಅಭಿನಂದಿಸತ್ತಿದ್ದೆ ಎಂದು ತಿಳಿಸಿದರು.ನಮ್ಮ ರಾಜ್ಯದ ನೂರಾರು ವರ್ಷಗಳ ನಂತರ ಬರಗಾಲ ಎದುರಿಸಿದೆ. ಕೇಂದ್ರ ಸರ್ಕಾರ ಮಾತ್ರ ದುಡ್ಡು ಕೊಟ್ಟಿಲ್ಲ. ಪ್ರಧಾನಿ ಮೋದಿ ಬಳಿ ಹೋಗರು ಅವರಿಗೆ ಸಾಧ್ಯವಾದರೆ ಅವರ ಜೊತೆ ಕುಮಾರಸ್ವಾಮಿ ಮಾತನಾಡಲಿ ಎಂದರು.
ಕೇಂದ್ರ ಬಜೆಟ್ ರಾಷ್ಟ್ರಕ್ಕೆ ಅನುಕೂಲವಾಗುವ ಬಜೆಟ್ ಅಲ್ಲ. ರಾಜ್ಯದ ಬಜೆಟ್ ಗಿಂತ ಒಂದು ಹೆಜ್ಜೆ ಕೆಳೆಗಿಳಿದಿದ್ದಾರೆ. ಕೇಂದ್ರ ಸರ್ಕಾರ ಪ್ರಚಾರ ಪ್ರಿಯರಾಗುತ್ತಿದ್ದಾರಷ್ಟೇ. ಮೂಗಿಗೆ ತುಪ್ಪ ಸವರಿಸುವ ಹಾಗೆ ಮಾಡಿದ್ದಾರೆ. ಬಿಹಾರಿಗೆ ಕೊಟ್ಟ ಹಾಗೇ ಕರ್ನಾಟಕಕ್ಕೆ ಏಕೆ ಅನುದಾನ ಕೊಟ್ಟಿಲ್ಲ ಎಂದು ಪ್ರಶ್ನಿಸಿದರು.ಕರ್ನಾಟಕದ 19 ಮಂದಿ ಲೋಕಸಭಾ ಸದಸ್ಯರಿದ್ದಾರೆ. ಮೋದಿ ಪ್ರಧಾನಿಯಾಗಲು ಮೋದಿ ಅವರಿಗೆ ಕರ್ನಾಟಕ ದೊಡ್ಡ ಶಕ್ತಿ ತುಂಬಿದೆ. ಆಧರೆ, 7ನೇ ಹಣಕಾಸು ಯೋಜನೆ ವ್ಯತ್ಯಾಸದ ಹಣ ಕೊಟ್ಟಿಲ್ಲ. ತುಂಗಭದ್ರಾ ಅಣೆಕಟ್ಟೆಗೂ ಅನುದಾನವಿಲ್ಲ. ನಾವು ಯಾವ ರೀತಿ ಈ ಬಜೆಟ್ ಅಭಿನಂದಿಸುವುದು ಎಂದು ಪ್ರಶ್ವಿಸಿದರು.
ಕರ್ನಾಟಕಕ್ಕೆ ಯಾವುದೇ ವಿಶೇಷ ಕಾರ್ಯಕ್ರಮ ಕೊಟ್ಟಿಲ್ಲ. ತಮಿಳುನಾಡು, ಕೇರಳ ರಾಜ್ಯಗಳಿಗೆ ತೆಗೆದುಕೊಂಡ ಹೋಗಿದ್ದಾರೆ. ನಮ್ಮ ರಾಜ್ಯದ ಜನ ಏನು ಮಾಡಿದ್ದಾರೆ. ಕಾಂಗ್ರೆಸ್ ಅಧಿಕಾರದಲ್ಲಿದೆ ಎಂದು ಯಾವುದೇ ಕೊಡುಗೆ ನೀಡಿಲ್ಲ. ಇದು ರಾಷ್ಟ್ರಕ್ಕೆ ಅನುಕೂಲವಾಗುವ ಬಜೆಟ್ ಅಲ್ಲ ಎಂದು ಕಿಡಿಕಾರಿದರು.
ಕಾಂಗ್ರೆಸ್ನಲ್ಲಿ ನಾಯಕತ್ವ ಬದಲಾವಣೆ ಸನ್ನಿಹಿತವಾಗಿದೆ ಎಂಬ ಪ್ರತಿಪಕ್ಷ ನಾಯಕ ಆರ್. ಅಶೋಕ್ ಹೇಳಿಕೆಯನ್ು ಟೀಕಿಸಿ, ನಿಮ್ಮದೇ ಪಕ್ಷದ ನಾಯಕರು ನಾಯಕತ್ವ ವಿಚಾರದಲ್ಲಿ ಬೀದಿಗೆ ಬಂದಿದ್ದಾರೆ. ಬಿಜೆಪಿಯೊಳಗಿನ ಭಿನ್ನಾಭಿಪ್ರಾಯಗಳನ್ನು ಪರಿಹರಿಸಲು ಅಶೋಕ್ ಸಮಯ ನೀಡಬೇಕು ಎಂದು ಹೇಳಿದರು.