ಅಮರಾವತಿ:
ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ, ವೈಎಸ್ಆರ್ಸಿಪಿ ವರಿಷ್ಠ ಜಗನ್ ಮೋಹನ್ ರೆಡ್ಡಿ ಅವರನ್ನು ಕೊಲಂಬಿಯಾದ ಡ್ರಗ್ಸ್ ದೊರೆ ಪ್ಯಾಬ್ಲೊ ಎಸ್ಕೊಬಾರ್ಗೆ ಹೋಲಿಸಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಟೀಕಿಸಿದ್ದಾರೆ. ಈ ಮೂಲಕ ನಾಯ್ಡು ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ದ್ವೇಷದ ರಾಜಕೀಯ ಮಾಡುತ್ತಿದೆ, ರಾಜ್ಯದಲ್ಲಿ ಕಾನೂನು-ಸುವ್ಯವಸ್ಥೆ ಹಾಳಾಗಿದೆ ಎಂದು ಆರೋಪಿಸುತ್ತಿರುವ ಜಗನ್ಗೆ ತಿರುಗೇಟು ಕೊಟ್ಟಿದ್ದಾರೆ.
ಜಗನ್ ಅವಧಿಯಲ್ಲಿ ಹದಗೆಟ್ಟ ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಮಾದಕ ವಸ್ತುಗಳ ಸರಬರಾಜು ನಡೆಯುತ್ತಿದ್ದ ಬಗ್ಗೆ ಉಲ್ಲೇಖಿಸಿದ್ದಾರೆ. ಈ ಕುರಿತಂತೆ ಶ್ವೇತಪತ್ರ ಬಿಡುಗಡೆ ಮಾಡಿದ ನಾಯ್ಡು, ಆಂಧ್ರ ಪ್ರದೇಶದಲ್ಲಿ ಅಂತಹ ಸ್ಥಿತಿಯನ್ನು ನಾನು ಎಂದೂ ನೋಡಿರಲಿಲ್ಲ. ವೈಎಸ್ಆರ್ಸಿಪಿ ವರಿಷ್ಠರ ಆಡಳಿತಾವಧಿ ಅಷ್ಟು ಕೆಟ್ಟದಾಗಿತ್ತು ಎಂದಿದ್ದಾರೆ. ಆಂಧ್ರದಲ್ಲಿ ಆ ವ್ಯಕ್ತಿ ಯಾವ ರೀತಿಯ ಆಡಳಿತ ನಡೆಸಿದ್ದಾರೆಂದರೆ, ಅವರನ್ನು ಪ್ಯಾಬ್ಲೊ ಎಸ್ಕೊಬಾರ್ಗೆ ಹೋಲಿಸಬಹುದು ಎಂದು ವಿಧಾನಸಭೆಯಲ್ಲಿ ನಾಯ್ಡು ಹೇಳಿದ್ದಾರೆ.
ಆಂಧ್ರಪ್ರದೇಶ ಜಗನ್ ಆಳ್ವಿಕೆಯಲ್ಲಿ ದೇಶದ ಗಾಂಜಾ ರಾಜಧಾನಿಯಾಗಿತ್ತು. ಪ್ರತಿ ಗ್ರಾಮದಲ್ಲೂ ಸುಲಭವಾಗಿ ಗಾಂಜಾ ಸಿಗುತ್ತಿತ್ತು. ಒಮ್ಮೆಯಾದರೂ ಈ ಸಮಸ್ಯೆಯನ್ನು ಜಗನ್ ನಿವಾರಿಸಿದ್ದರೆ? ಅಧಿಕಾರದಲ್ಲಿದ್ದಾಗ ಜನರನ್ನು ವೈಎಸ್ಸಾರ್ ನಾಯಕರು ಭಯಭೀತಗೊಳಿಸುತ್ತಿದ್ದರು ಎಂದು ದೂರಿದರು.ನಾನು ಈ ದೇಶದ ಹಿರಿಯ ರಾಜಕಾರಣಿ. ಜಗನ್ ಅಧಿಕಾರದಲ್ಲಿದ್ದಾಗ ಆಂಧ್ರದಲ್ಲಿದ್ದಂತಹ ಪರಿಸ್ಥಿತಿಯನ್ನು ನಾನೆಂದೂ ನೋಡಿಲ್ಲ. ಆಂಧ್ರದಲ್ಲಿ ನಡೆದಿದ್ದನ್ನು ನೋಡಿ ಜಗನ್ ಅವರನ್ನು ಯಾರಿಗಾದರೂ ಹೋಲಿಕೆ ಮಾಡುವುದಿದ್ದರೆ ಅದು ಡ್ರಗ್ ದೊರೆ ಪ್ಯಾಬ್ಲೋ ಎಸ್ಕೋಬಾರ್ ಜತೆ ಮಾತ್ರ ಎಂದು ಛೇಡಿಸಿದ್ದಾರೆ. ಎಸ್ಕೊಬಾರ್ ಒಬ್ಬ ಮಾದಕ ವಸ್ತುಗಳ ಕಳ್ಳಸಾಗಣೆಯಲ್ಲಿ ಕುಖ್ಯಾತ ವ್ಯಕ್ತಿಯಾಗಿದ್ದು, ನೂರಾರು ಕೋಟಿ ಡಾಲರ್ ಬೆಲೆಯ ಮಾದಕ ವಸುವನ್ನು ಅಕ್ರಮವಾಗಿ ಮಾರಾಟ ಮಾಡಿದ್ದ ಮತ್ತು ತನ್ನನ್ನು ವಿರೋಧಿಸಿದ ರಾಜಕಾರಣಿಗಳು ಹಾಗೂ ನಾಯಕರನ್ನು ಕೊಲ್ಲುತ್ತಿದ್ದ ಎಂದು ನಾಯ್ಡು ಹೇಳಿದ್ದಾರೆ.
