ಹಾಸನ:
ಅಮೆರಿಕದಿಂದ ಕಾಲಿಗೆ ಚೈನ್ ಹಾಕಿಕೊಂಡು ದೇಶದ ಜನರನ್ನು ತಂದು ಬಿಸಾಕಿದ್ದು ಇಡೀ ದೇಶಕ್ಕೆ ಅವಮಾನ ಮಾಡಿದರು. ಭಾರತದಲ್ಲಿ 18 ಲಕ್ಷ ಜನ ಪಾಸ್ಪೋರ್ಟ್ ಸರೆಂಡರ್ ಮಾಡಿದ್ದಾರೆ. ಆದರೆ, ಇದರ ಬಗ್ಗೆ ಯಾವುದೇ ಚರ್ಚೆಯಾಗುತ್ತಿಲ್ಲ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.
ಹಾಸನದಲ್ಲಿ ಮಾತನಾಡಿದ ಅವರು, ಕಳೆದ 11 ವರ್ಷದಿಂದ ಏನನ್ನೂ ಮಾಡಿಲ್ಲ. ಲೆಕ್ಕ ಇಲ್ಲ, ಬುಕ್ ಇಲ್ಲ. ಸಾಹೇಬ್ರು ದಿನಕ್ಕೆ ಮೂರು ಬಾರಿ ಬಟ್ಟೆ ಬದಲಾಯಿಸುತ್ತಾರೆ. 16 ಗಂಟೆ ಕೆಲಸ ಮಾಡ್ತಾರೆ ಅಂತಾರೆ. ಆದರೆ, ಅವರ ಕಣ್ಣುಗಳು ಹೊಳೆಯುತ್ತಿವೆ. ಏನು ಕೆಲಸ ಮಾಡ್ತಾರೆ ಅನ್ನೋದು ಜನರಿಗೆ ಗೊತ್ತಾಗುತ್ತಿಲ್ಲ ಎಂದು ಕಳೆದ 10 ವರ್ಷದಲ್ಲಿ ದೇಶದ ಆರ್ಥಿಕತೆ ಕುಸಿದಿರುವ ಬಗ್ಗೆ ಲಾಡ್ ಆಕ್ಷೇಪ ವ್ಯಕ್ತಪಡಿಸಿದಲ್ಲದೇ, ಪ್ರಧಾನಮಂತ್ರಿ ಮೋದಿಯವರ ಜೀವನಶೈಲಿ ಕುರಿತು ಕಿಡಿಕಾರಿದರು.
ಮೋದಿ ಒಂದು ಪ್ರೆಸ್ ಮೀಟ್ ನಡೆಸಲಿ: ರಾಜಕೀಯ ವಿಷಯದ ಚರ್ಚೆಗಳಿಂದ ದೂರವಿರುವುದರ ಬಗ್ಗೆ ಕಿಡಿಕಾರಿದ ಲಾಡ್, ಎಲ್ಲಾ ರಾಜ್ಯಗಳಿಗೆ ಹೋಗಿ ಮೋದಿ ಸಾಹೇಬ್ರು ಪ್ರೆಸ್ ಮೀಟ್ ಮಾಡಲಿ. ಎಂದಾದರೂ ಓಪನ್ ಡಿಸ್ಕಷನ್ ಮಾಡಿದ್ದಾರಾ? ಎಂದು ಪ್ರಶ್ನಿಸಿದರು.
11 ವರ್ಷದಲ್ಲಿ ಒಂದೇ ಒಂದು ಪತ್ರಿಕಾಗೋಷ್ಠಿ ಮಾಡಿದ್ದಾರಾ? ಕೇವಲ ಮನ್ ಕೀ ಬಾತ್ ಎನ್ನುತ್ತಾರೆ. ಕಳೆದ ಲೋಕಸಭೆ ಚುನಾವಣೆ ವೇಳೆ ಮೋದಿಯವರು ಮಂಗಳಸೂತ್ರ, ಪಾಕಿಸ್ತಾನ ಎರಡೇ ಮಾತನಾಡಿದ್ದು. 10 ವರ್ಷದಿಂದ ಬಿಜೆಪಿಯವರಿಗೆ ಮೋದಿ ಬಿಟ್ಟರೆ ಯಾವ ನಾಯಕರು ಕಾಣಲಿಲ್ಲವೇ? ಮಹಾರಾಜ ಅಲ್ಲಿಂದ ಇಳಿಯುವುದೇ ಪರಿಹಾರ ಎಂದರು.
ರಾಹುಲ್ ಗಾಂಧಿ ಜೊತೆ ಮೋದಿಯವರು 5 ಗಂಟೆ ಚರ್ಚೆ ಮಾಡುತ್ತಾರಾ ಎಂದು ಸವಾಲು ಹಾಕಿದ ಸಂತೋಷ್ ಲಾಡ್, ಬಿಜೆಪಿಯಲ್ಲಿ ಕೆಲಸ ಮಾಡುವವರಿಗೆ ಪ್ರಧಾನ ಮಂತ್ರಿ ಹುದ್ದೆ ಕೊಟ್ಟರೆ ದೇಶ ಉಳಿಯುತ್ತದೆ. ಈಗಾಗಲೇ ದೇಶ ನೂರಾರು ವರ್ಷ ಹಿಂದೆ ಸಾಗಿದೆ. ಪ್ರಧಾನಿ ಬದಲಾದರೆ ದೇಶದ ಆರ್ಥಿಕ ಪರಿಸ್ಥಿತಿ ಉಳಿಯುತ್ತದೆ. ಯುವಕರೂ ಉಳಿಯುತ್ತಾರೆ ಎಂದರು. ಖೇಲೋ ಇಂಡಿಯಾಗೆ ಬಿಡುಗಡೆ ಮಾಡಿದ ಹಣದಲ್ಲಿ ಬಹುತೇಕ ಪಾಲು ಉತ್ತರ ಪ್ರದೇಶ ಮತ್ತು ಗುಜರಾತ್ಗೆ ಕೊಟ್ಟರು. ಆದರೆ ಪದಕ ಬರಲಿಲ್ಲ. ಹರಿಯಾಣಗೆ ₹70 ಕೋಟಿ ನೀಡಿದರು. ಅಲ್ಲಿ ಹೆಚ್ಚು ಮಂದಿ ಪದಕ ಗೆದ್ದರು. ಈ ರೀತಿ ಆಡಳಿತ ಕೇಂದ್ರ ಸರ್ಕಾರದ್ದಾಗಿದೆ ಎಂದು ಟೀಕಿಸಿದರು.
ಮಹಾರಾಜ ಸ್ಥಾನದಿಂದ ಇಳಿಯುವುದೇ ಪರಿಹಾರ: ಪ್ರಧಾನಿ ಸ್ಥಾನಕ್ಕೆ ಬದಲಾವಣೆ ಅಗತ್ಯವಿದೆ. ಭಾರತವನ್ನು ಉಳಿಸಬೇಕಾದರೆ, ಮೋದಿ ಅವರ ಜಾಗದಲ್ಲಿ ಕಾರ್ಯಕ್ಷಮತೆಯುಳ್ಳ ಮತ್ತೊಬ್ಬ ವ್ಯಕ್ತಿಯನ್ನು ನೇಮಕ ಮಾಡಬೇಕು. ನಿತಿನ್ ಗಡ್ಕರಿ ಅಥವಾ ಬೇರೆ ಯಾರೇ ಆದರೂ ಬರಲಿ, ಯುವಕರ ಭವಿಷ್ಯ ಉಳಿಯಲಿದೆ. ಮೋದಿ ಇಲ್ಲದೆ ಬಿಜೆಪಿಗೆ ಯಾರೂ ಇಲ್ಲವೆ ? ಎಂದು ಸಚಿವ ಸಂತೋಷ್ ಲಾಡ್ ಕೇಂದ್ರ ಬಿಜೆಪಿಗೆ ಪ್ರಶ್ನಿಸಿದರು.
ರಾಜ್ಯದಲ್ಲಿ ಅಕ್ರಮ ಕಾರ್ಮಿಕ ಕಾರ್ಡ್ಗಳನ್ನು ತಡೆಯಲು ತಮ್ಮ ಇಲಾಖೆಯು ಅಂಬೇಡ್ಕರ್ ಸೇವಾ ಕೇಂದ್ರವನ್ನು ಸ್ಥಾಪಿಸಿದೆ ಎಂದು ಅವರು ಹೇಳಿದರು. ಏಜೆನ್ಸಿಗಳಿಂದ ಕಿರುಕುಳ ನೀಡಲಾಗುತ್ತಿದೆ ಎಂದು ಹೇಳಲಾಗುವ ಹೊರಗುತ್ತಿಗೆ ನೌಕರರ ಹಿತಾಸಕ್ತಿಗಳನ್ನು ರಕ್ಷಿಸಲು ಆಯಾ ಜಿಲ್ಲೆಗಳ ಉಪ ಆಯುಕ್ತರ ನೇತೃತ್ವದಲ್ಲಿ ಕಾರ್ಮಿಕ ಸಂಘಗಳನ್ನು ಸ್ಥಾಪಿಸಲಾಗುವುದು.
ಜಿಲ್ಲಾ ಕೇಂದ್ರಗಳಲ್ಲಿ ಕಾರ್ಮಿಕರ ಮಕ್ಕಳಿಗೆ ವಸತಿ ಶಾಲೆಗಳನ್ನು ಸ್ಥಾಪಿಸುವ ಹೊಸ ಪ್ರಸ್ತಾವನೆಯನ್ನು ತಮ್ಮ ಇಲಾಖೆ ಸಲ್ಲಿಸಿದೆ ಮತ್ತು ಮುಖ್ಯಮಂತ್ರಿ ಈ ನಿಟ್ಟಿನಲ್ಲಿ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ ಎಂದು ಸಂತೋಷ್ ಹೇಳಿದರು.
