ನವದೆಹಲಿ :
ಚಾರ್ಧಾಮ್ ಯಾತ್ರೆಗೆ ಆನ್ಲೈನ್ ಬುಕ್ಕಿಂಗ್ ಇಂದಿನಿಂದ ಆರಂಭವಾಗಿದೆ. ಕೇದಾರನಾಥ, ಬದರಿನಾಥ್, ಗಂಗೋತ್ರಿ ಮತ್ತು ಯಮುನೋತ್ರಿ ಧಾಮಕ್ಕೆ ಭೇಟಿ ನೀಡುವ ಭಕ್ತರಿಗೆ ನೋಂದಣಿ ಕಡ್ಡಾಯವಾಗಿರುತ್ತದೆ. ನೊಂದಣಿ ಮಾಡಿಕೊಳ್ಳದವರಿಗೆ ಚಾರ್ಧಾಮ್ ಯಾತ್ರೆಗೆ ಅವಕಾಶವಿಲ್ಲ. ಹೀಗಾಗಿ ಭಕ್ತರು ನೊಂದಣಿ ಮಾಡಿಕೊಳ್ಳುವುದು ಅತ್ಯಾವಶ್ಯಕ.
ದೇಶ ಹಾಗೂ ಪ್ರಪಂಚದಾದ್ಯಂತ ಭಕ್ತರು ಚಾರ್ಧಾಮ್ ಯಾತ್ರೆಯನ್ನು ಮಾಡುತ್ತಾರೆ. ಈ ಬಾರಿ ಯಾತ್ರೆಗೆ ತೆರಳುವ ಪ್ರತಿಯೊಬ್ಬರೂ ಇಂದಿನಿಂದ ನೋಂದಾಯಿಸಿಕೊಳ್ಳಬಹುದಾಗಿದೆ. ಬೆಳಗ್ಗೆ 7 ಗಂಟೆಯಿಂದ ನೋಂದಣಿಗಾಗಿ ವೆಬ್ಸೈಟ್ ತೆರೆಯಲಾಗಿದೆ. ಇದಲ್ಲದೇ ಮೊಬೈಲ್ ಆ್ಯಪ್, ವಾಟ್ಸಾಪ್ ಸಂಖ್ಯೆ ಮತ್ತು ಟೋಲ್ ಫ್ರೀ ಸಂಖ್ಯೆಗಳ ನೋಂದಣಿ ಸೌಲಭ್ಯವೂ ಲಭ್ಯವಿದೆ.
ಚಾರ್ಧಾಮ್ ಎಂದು ಕರೆಯಲಾಗುವ ಕೇದಾರನಾಥ, ಬದರಿನಾಥ್, ಗಂಗೋತ್ರಿ ಮತ್ತು ಯಮುನೋತ್ರಿ ದೇವಸ್ಥಾನಗಳನ್ನು ವರ್ಷದಲ್ಲಿ ಆರು ತಿಂಗಳು ಮಾತ್ರ ತೆರೆಯಲಾಗುತ್ತದೆ. ಉಳಿದ ಆರು ತಿಂಗಳು ದೇವಸ್ಥಾನಗಳ ಬಾಗಿಲನ್ನು ಮುಚ್ಚಲಾಗಿರುತ್ತದೆ. ಈ ವರ್ಷ ಚಾರ್ಧಾಮ್ ಯಾತ್ರೆಯು ಮೇ10 ರಿಂದ ಪ್ರಾರಂಭವಾಗುತ್ತಿದೆ. ಮೇ10ರಂದು ಪೂಜಾ ಕಾರ್ಯಗಳೊಂದಿಗೆ ಕೇದಾರನಾಥ ದೇವಸ್ಥಾನವನ್ನು ಭಕ್ತರ ದರ್ಶನಕ್ಕಾಗಿ ತೆರೆಯಲಾಗುತ್ತದೆ. ಅಂದಿನಿಂದ ಆರು ತಿಂಗಳು ಭಕ್ತರು ಕೇದಾರನಾಥ ದೇವಸ್ಥಾನಕ್ಕೆ ಭೇಟಿ ನೀಡಬಹುದು. ಆದರೆ ಇದಕ್ಕಾಗಿ ಮುಂಗಡ ಟಿಕೆಟ್ ಬುಕ್ಕಿಂಗ್ ಮಾಡಿಕೊಳ್ಳಬೇಕಾಗುತ್ತದೆ.
ಪ್ರವಾಸೋದ್ಯಮ ಇಲಾಖೆ ನೋಂದಣಿಗೆ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ. ಈ ಬಾರಿ ಚಾರ್ಧಾಮ್ ಯಾತ್ರೆ ಆರಂಭಕ್ಕೆ 25 ದಿನ ಮುಂಚಿತವಾಗಿ ಯಾತ್ರಾರ್ಥಿಗಳಿಗೆ ನೋಂದಣಿ ಸೌಲಭ್ಯ ನೀಡಲಾಗುತ್ತಿದೆ. ಇದರಿಂದ ಹೊರ ರಾಜ್ಯಗಳಿಂದ ಬರುವ ಯಾತ್ರಾರ್ಥಿಗಳು ತಮ್ಮ ಪ್ರಯಾಣದ ಯೋಜನೆಗಳನ್ನು ಮಾಡಿಕೊಳ್ಳಬಹುದು ಮತ್ತು ಸುಲಭವಾಗಿ ನೋಂದಾಯಿಸಿಕೊಳ್ಳಬಹುದು. ಈ ಬಾರಿಯೂ ದೇಶದ ಯಾವುದೇ ಮೂಲೆಯ ಯಾತ್ರಾರ್ಥಿಗಳು ನಾಲ್ಕು ಮಾಧ್ಯಮಗಳ ಮೂಲಕ ನೋಂದಣಿ ಮಾಡಿಕೊಳ್ಳಬಹುದು. ನೋಂದಣಿಗಾಗಿ, ಹೆಸರು, ಮೊಬೈಲ್ ಸಂಖ್ಯೆ ಮತ್ತು ವಾಸಸ್ಥಳದ ವಿಳಾಸದೊಂದಿಗೆ ಪ್ರಯಾಣಿಸುವ ಸದಸ್ಯರ ವಿವರಗಳನ್ನು ಒದಗಿಸಬೇಕಾಗುತ್ತದೆ.
ನೋಂದಾಯಿಸಿಕೊಳ್ಳುವುದು ಹೇಗೆ?
ಪ್ರವಾಸೋದ್ಯಮ ಇಲಾಖೆಯ ವೆಬ್ಸೈಟ್, registrationandtouristcare.uk.gov.in ಗೆ ಲಾಗ್ ಇನ್ ಮಾಡುವ ಮೂಲಕ ನೋಂದಣಿ ಮಾಡಬಹುದು. ಇದಲ್ಲದೆ ವಾಟ್ಸಾಪ್ ಸಂಖ್ಯೆ-8394833833 ನಲ್ಲಿ ಯಾತ್ರೆ (ಪ್ರಯಾಣ) ಎಂದು ಬರೆದು ಸಂದೇಶ ಕಳುಹಿಸುವ ಮೂಲಕವೂ ನೀವು ನೋಂದಾಯಿಸಿಕೊಳ್ಳಬಹುದು. ವೆಬ್ಸೈಟ್ನಲ್ಲಿ ನೋಂದಾಯಿಸಲು ಸಾಧ್ಯವಾಗದ ಪ್ರಯಾಣಿಕರಿಗೆ, ಪ್ರವಾಸೋದ್ಯಮ ಇಲಾಖೆಯು ಟೋಲ್ ಫ್ರೀ ಸಂಖ್ಯೆ – 0135-1364 ಗೆ ಕರೆ ಮಾಡುವ ಮೂಲಕ ನೋಂದಣಿ ಸೌಲಭ್ಯವನ್ನು ಒದಗಿಸಿದೆ. ಅಲ್ಲದೆ, ನೀವು ಸ್ಮಾರ್ಟ್ ಫೋನ್ನಲ್ಲಿ ಟೂರಿಸ್ಟ್ಕರೆರ್ತಾರಾಖಂಡ್ ಮೊಬೈಲ್ ಅಪ್ಲಿಕೇಶನ್ ಮೂಲಕ ನೋಂದಾಯಿಸಿಕೊಳ್ಳಬಹುದು.
ಕಳೆದ ವರ್ಷ 74 ಲಕ್ಷಕ್ಕೂ ಹೆಚ್ಚು ಯಾತ್ರಾರ್ಥಿಗಳು ಚಾರ್ಧಾಮ್ ಯಾತ್ರೆಗೆ ನೋಂದಾಯಿಸಿ ಕೊಂಡಿದ್ದರು. ಇದರಲ್ಲಿ 56 ಲಕ್ಷ ಯಾತ್ರಾರ್ಥಿಗಳು ಚಾರ್ಧಾಮ್ಗೆ ಭೇಟಿ ನೀಡಿದರು. ಈ ಬಾರಿಯೂ ಭಕ್ತರ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯನ್ನು ಇಲಾಖೆ ಹೊಂದಿದೆ. ಈ ಬಗ್ಗೆ ಮಾತನಾಡಿದ ಪ್ರವಾಸೋದ್ಯಮ ಕಾರ್ಯದರ್ಶಿ ಸಚಿನ್ ಕುರ್ವೆ, ‘ಚಾರ್ಧಾಮ ಯಾತ್ರೆಗೆ ಬರುವ ಭಕ್ತರ ನೋಂದಣಿಯನ್ನು ಏಪ್ರಿಲ್ 15 ರಿಂದ ಪ್ರಾರಂಭಿಸಲಾಗುತ್ತಿದೆ. ಚಾರ್ಧಾಮ್ ಯಾತ್ರೆಯು ಮೇ 10 ರಿಂದ ಪ್ರಾರಂಭವಾಗುತ್ತಿದೆ. ಯಾತ್ರೆಗೆ ಬರುವ ಭಕ್ತರು ನೋಂದಣಿ ಮಾಡಿಸುವುದು ಕಡ್ಡಾಯ’ ಎಮದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ
![](https://prajapragathi.com/wp-content/uploads/2024/04/chardham.gif)