ಪಟನಾ:
ಬಿಹಾರ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆಯಾಗಿದ್ದು, ಇಡೀ ದೇಶದ ಚಿತ್ತ ಈ ಎಲೆಕ್ಷನ್ ಮೇಲೆ ಇದೆ 243 ವಿಧಾನಸಭಾ ಕ್ಷೇತ್ರಗಳಿರುವ ಬಿಹಾರದಲ್ಲಿ ಎರಡು ಹಂತದ ಮತದಾನ ನಡೆಯಲಿದ್ದು, ನವೆಂಬರ್ 06 ಮತ್ತು ನವೆಂಬರ್ 11 ರಂದು ಚುನಾವಣೆಗೆ ದಿನ ನಿಗದಿ ಮಾಡಲಾಗಿದೆ. ಆದರೆ ಈ ಮಧ್ಯೆ ಬಹಳ ಅಚ್ಚರಿ ಘಟನೆ ನಡೆದಿದ್ದು, ಚಿರಾಗ್ ಪಾಸ್ವಾನ್ಅವರ ಎಲ್ಜೆಪಿ ಮತ್ತು ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ನಡುವೆ ಮೈತ್ರಿ ನಡೆದಿದೆ ಎನ್ನಲಾಗುತ್ತಿದೆ. ಇದಕ್ಕೆ ಪುಷ್ಟಿ ನೀಡುವಂತೆ ಈ ವದಂತಿಯನ್ನು ತಳ್ಳಿ ಹಾಕಲು ಸಾಧ್ಯವಿಲ್ಲ ಎಂದು ಎಲ್ಜೆಪಿ ಪಕ್ಷ ತಿಳಿಸಿದೆ.
ಬಿಹಾರದ 243 ವಿಧಾನಸಭಾ ಕ್ಷೇತ್ರಗಳಲ್ಲಿ ತಮ್ಮ ಪಕ್ಷಕ್ಕೆ ಕನಿಷ್ಠ 40 ಸ್ಥಾನಗಳು ಬೇಕೆಂದು ಎಲ್ಜೆಪಿ ನಾಯಕ ಚಿರಾಗ್ ಪಾಸ್ವಾನ್ ಆಗ್ರಹಿಸಿದ್ದು, ಕಳೆದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ ಐದು ಸ್ಥಾನಗಳಲ್ಲೂ ಜಯ ಗಳಿಸಿದ್ದರಿಂದ ಅವರ ಬೇಡಿಕೆಯನ್ನು ಮನ್ನಣೆಗೆ ತೆಗೆದುಕೊಳ್ಳಬೇಕಾದ ಒತ್ತಡ ಬಿಜೆಪಿ ಮೇಲೆ ಇದೆ.
ಪಾಸ್ವಾನ್ ಬೇಡಿಕೆಗೆ ಸ್ಪಂದಿಸಿರುವ, ಬಿಜೆಪಿ ಕೇವಲ 25 ಸ್ಥಾನಗಳನ್ನು ನೀಡಲು ಸಿದ್ಧವಿದೆ ಎನ್ನಲಾಗಿದ್ದು, ಗೆಲ್ಲುವ ಸಾಧ್ಯತೆಯಿರುವ ಕ್ಷೇತ್ರಗಳೇ ಬೇಕು ಎಂದು ಪಾಸ್ವಾನ್ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ. ಒಟ್ಟಾರೆ ಸೀಟು ಹಂಚಿಕೆ ಕುರಿತು ಹಿಂದಿನಂತೆಯೇ ಈ ಬಾರಿಯೂ ಹಗ್ಗಜಗ್ಗಾಟ ನಡೆದಿದ್ದು, ಪ್ರಶಾಂತ್ ಕಿಶೋರ್ ಜೊತೆಗಿನ ಮೈತ್ರಿ ಬಿಜೆಪಿ ಮೇಲೆ ಒತ್ತಡ ತರಲು ಬಳಸಿರುವರ ರಾಜಕೀಯ ತಂತ್ರಗಾರಿಕೆ ಎನ್ನಲಾಗಿದೆ.
ಈ ಹಿಂದೆಯೂ ಸೀಟು ಹಂಚಿಕೆ ಕುರಿತಾಗಿ ಸ್ಪಷ್ಟ ಎಚ್ಚರಿಕೆ ನೀಡಿದ್ದ ಚಿರಾಗ್ ಪಾಸ್ವಾನ್, “ನಾನು ತರಕಾರಿಯಲ್ಲಿರುವ ಉಪ್ಪಿನಂತೆ. ನನ್ನ ಪ್ರಭಾವ ಕ್ಷೇತ್ರದಲ್ಲಿ 20,000 ರಿಂದ 25,000 ಮತಗಳವರೆಗೆ ಇದೆ. ಅಗತ್ಯವಿದ್ದರೆ ಮೈತ್ರಿಕೂಟದಿಂದ ಹೊರಬರುವ ಆಯ್ಕೆಯೂ ನನ್ನ ಮುಂದಿದೆ,” ಎಂದು ಹೇಳಿಕೆ ನೀಡಿದ್ದಾರೆ.
ಇನ್ನು ಮೂಲಗಳ ಪ್ರಕಾರ, ಬಿಹಾರ ಎನ್ಡಿಎ ಮೈತ್ರಿಕೂಟದಲ್ಲಿ ಸೀಟು ಹಂಚಿಕೆ ಮಾತುಕತೆ ಅಂತಿಮ ಹಂತಕ್ಕೆ ತಲುಪಿದೆ. ಒಟ್ಟು 243 ಕ್ಷೇತ್ರಗಳಲ್ಲಿ, ಬಿಜೆಪಿ ಮತ್ತು ಎನ್ಡಿಎ ಮೈತ್ರಿ ಪಕ್ಷಗಳು ತಲಾ 100 ಸ್ಥಾನಗಳಲ್ಲಿ ಸ್ಪರ್ಧಿಸಲು ಒಪ್ಪಂದಕ್ಕೆ ಬಂದಿವೆ ಎಂದು ವರದಿಯಾಗಿದೆ. ಉಳಿದ ಸ್ಥಾನಗಳನ್ನು ಮೈತ್ರಿಯ ಇತರ ಪಕ್ಷಗಳಿಗೆ ಹಂಚಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಪ್ರಸ್ತುತ ಬಿಹಾರ ಎನ್ಡಿಎ ಮೈತ್ರಿಕೂಟದಲ್ಲಿ ಬಿಜೆಪಿ, ಜನತಾ ದಳ (ಯುನೈಟೆಡ್), ಲೋಕ ಜನಶಕ್ತಿ ಪಕ್ಷ (ಎಲ್ಜೆಪಿ), ಹಿಂದುಸ್ತಾನಿ ಅವಾಮಿ ಮೋರ್ಚಾ (ಜಾತ್ಯತೀತ) ಹಾಗೂ ರಾಷ್ಟ್ರೀಯ ಲೋಕ್ ಮೋರ್ಚಾ (ಆರ್ಎಲ್ಎಂ) ಪ್ರಮುಖ ಪಕ್ಷಗಳಾಗಿವೆ. ಈ ಹಿಂದೆಯೂ ಬಿಹಾರದಲ್ಲಿ ಎನ್ಡಿಎ ಮೈತ್ರಿಕೂಟದಿಂದ ಹೊರ ಬಂದು ಚಿರಾಗ್ ಪಾಸ್ವಾನ್ ಚುನಾವಣೆಯಲ್ಲಿ ಏಕಾಂಗಿಯಾಗಿ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರು. ಪಾಸ್ವಾನ್ ಅವರ ಈ ನಡೆ ಬಿಜೆಪಿ-ಜೆಡಿಯು ನೇತೃತ್ವದ ಎನ್ಡಿಎಗೆ ಭಾರೀ ತಲೆನೋವಾಗಿ ಪರಿಣಮಿಸಿತು. ಆದರೆ, ಚಿರಾಗ್ ನಡೆಯ ಹಿಂದೆ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಇದ್ದಾರೆ ಎಂಬ ಅನುಮಾನ ಆಗಲು ಮೂಡಿತು.
ಈ ಹಿಂದೆ ಪ್ರಶಾಂತ್ ಕಿಶೋರ್, ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಈಗ ಅದೇ ಪ್ರಶಾಂತ್ ಕಿಶೋರ್ ಚಿರಾಗ್ ಪಾಸ್ವಾನ್ಗೆ ಸಲಹೆಗಳನ್ನು ನೀಡುತ್ತಿದ್ದಾರೆ ಎಂಬ ಗುಮಾನಿ ಎಲ್ಲೆಡೆ ಹರಡಿದೆ.








