ಲಖನೌ:
ಕನ್ವರ್ ಯಾತ್ರೆಗೆ ಉತ್ತರ ಪ್ರದೇಶ ಸರ್ಕಾರ ವಿಧಿಸಿರುವ ನಿಯಮಗಳಿಗೆ ಬಿಜೆಪಿ ಮಿತ್ರಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ.ಕೇಂದ್ರ ಸಚಿವ, ಬಿಜೆಪಿ ಮಿತ್ರ ಪಕ್ಷ ಎಲ್ ಜೆಪಿಯ ನಾಯಕ ಚಿರಾಗ್ ಪಾಸ್ವಾನ್ ಉತ್ತರ ಪ್ರದೇಶ ಸರ್ಕಾರದ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಪರಿಷ್ಕೃತ ನಿಯಮಗಳ ಪ್ರಕಾರ, ಕನ್ವರ್ ಯಾತ್ರೆ ಮಾರ್ಗದಲ್ಲಿ ಅಂಗಡಿಗಳು ಮಾಲೀಕರ ಹೆಸರು ನಮೂದಿಸುವಂತೆ ಉತ್ತರ ಪ್ರದೇಶ ಸರ್ಕಾರ ಸೂಚನೆ ನೀಡಿದೆ.
ಈ ನಡೆಯನ್ನು ವಿರೋಧಿಸಿರುವ ಪಾಸ್ವಾನ್, ತಾವು ಜಾತಿ ಅಥವಾ ಧರ್ಮದ ಹೆಸರಿನಲ್ಲಿ ಯಾವುದೇ ವಿಭಜನೆಯನ್ನು “ಖಂಡಿತವಾಗಿ” ಬೆಂಬಲಿಸುವುದಿಲ್ಲ ಅಥವಾ ಪ್ರೋತ್ಸಾಹಿಸುವುದಿಲ್ಲ ಎಂದು ಹೇಳಿದ್ದಾರೆ. ಸಮಾಜದಲ್ಲಿ ಶ್ರೀಮಂತರು ಮತ್ತು ಬಡವರು ಎಂಬ ಎರಡು ವರ್ಗದ ಜನರು ಇದ್ದಾರೆ ಮತ್ತು ವಿವಿಧ ಜಾತಿಗಳು ಮತ್ತು ಧರ್ಮಗಳ ವ್ಯಕ್ತಿಗಳು ಎರಡೂ ವರ್ಗಗಳಲ್ಲಿ ಬರುತ್ತಾರೆ ಎಂದು ನಂಬುವುದಾಗಿ ಪಾಸ್ವಾನ್ ಹೇಳಿದ್ದಾರೆ.
“ನಾವು ಈ ಎರಡು ವರ್ಗದ ಜನರ ನಡುವಿನ ಅಂತರವನ್ನು ಕಡಿಮೆ ಮಾಡಬೇಕಾಗಿದೆ. ದಲಿತರು, ಹಿಂದುಳಿದವರು, ಮೇಲ್ಜಾತಿಗಳು ಮತ್ತು ಮುಸ್ಲಿಮರು ಸೇರಿದಂತೆ ಸಮಾಜದ ಎಲ್ಲಾ ವರ್ಗಗಳನ್ನು ಒಳಗೊಂಡಿರುವ ಬಡವರಿಗಾಗಿ ಕೆಲಸ ಮಾಡುವುದು ಪ್ರತಿ ಸರ್ಕಾರದ ಜವಾಬ್ದಾರಿಯಾಗಿದೆ. ಎಲ್ಲರೂ ಇದ್ದಾರೆ. ನಾವು ಅವರಿಗಾಗಿ ಕೆಲಸ ಮಾಡಬೇಕು ಎಂದು ಪಾಸ್ವಾನ್ ಹೇಳಿದ್ದಾರೆ.