ಹೈಕಮಾಂಡ್‌ ಕರೆ: ಒಂದೇ ವಿಮಾನದಲ್ಲಿ ದಿಲ್ಲಿಗೆ ದೌಡಾಯಿಸಿದ ಸಿಎಂ, ಡಿಸಿಎಂ

ಬೆಂಗಳೂರು:

   ಇಂದು ಬೆಳಗ್ಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಒಂದೇ ವಿಮಾನದಲ್ಲಿ ದೆಹಲಿಗೆ ತೆರಳಿದ್ದಾರೆ. ಬೆಂಗಳೂರು ಕಾಲ್ತುಳಿತದ  ಘೋರ ದುರಂತ ನಡೆದ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್ ನಾಯಕರಿಗೆ ಹೈಕಮಾಂಡ್  ಬುಲಾವ್ ಬಂದಿದ್ದು, ಈ ಕುರಿತು ವಿವರ ಕೇಳಲಿದ್ದಾರೆ ಹಾಗೂ ಮುಂದಿನ ನಡೆಗಳ ಬಗ್ಗೆ ಚರ್ಚಿಸಲಿದ್ದಾರೆ ಎಂದು ಭಾವಿಸಲಾಗಿದೆ. ಇಬ್ಬರೂ ನಾಯಕರು ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಲಿದ್ದಾರೆ.

   ಬೆಂಗಳೂರು ಕಾಲ್ತುಳಿತ ದುರಂತದ ರಾಜ್ಯ ಸರ್ಕಾರದ ಕಾರ್ಯವಿಧಾನದ ಬಗ್ಗೆ ರಾಜ್ಯದಲ್ಲಿ ಒಂದು ಬಗೆಯ ಅಸಮಾಧಾನ ಮೂಡಿಸಿದೆ. ಇದರ ನಂತರ ಹಾನಿ ಸರಿಪಡಿಸಲು ತೆಗೆದುಕೊಂಡಿರುವ ಐಪಿಎಸ್‌ ಅಮಾನತು ಕೂಡ ಅಧಿಕಾರಿಗಳ ವಲಯದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ ಎನ್ನಲಾಗಿದೆ. ಇದು ಕಾಂಗ್ರೆಸ್‌ ಪಕ್ಷದ ವರ್ಚಸ್ಸಿಗೂ ಹಾನಿಯುಂಟುಮಾಡಿದ್ದು, ಹೈಕಮಾಂಡ್‌ ಇದನ್ನು ಗಂಭೀರವಾಗಿ ಪರಿಗಣಿಸಿದೆ ಎನ್ನಲಾಗಿದೆ. ವರಿಷ್ಠರು ಘಟನೆ ನಡೆದ ದಿನ ಪ್ರಾಥಮಿಕ ಮಾಹಿತಿ ಪಡೆದಿದ್ದರೂ, ಇದೀಗ ಸಂಪೂರ್ಣ ವರದಿ ಪಡೆಯಲಿದ್ದಾರೆ.

   ಕಾಲ್ತುಳಿತ ಪ್ರಕರಣದ ಜೊತೆಗೆ ಸಿಎಂ ಸಿದ್ದರಾಮಯ್ಯ ಅವರು ಹೈಕಮಾಂಡ್ ನಾಯಕರ ಜೊತೆಗೆ ಎಂಎಲ್‌ಸಿ ನಾಮನಿರ್ದೇಶನ ಗೊಂದಲ ವಿಚಾರ, ಸಚಿವ ಸಂಪುಟ ‌ಪುನರ್ ರಚನೆ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರಗಳನ್ನು ಕೂಡ ಹೈಕಮಾಂಡ್ ನಾಯಕರ ಜೊತೆಗೆ ಚರ್ಚೆ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ.

   ವಿಪಕ್ಷಗಳು ಡಿಸಿಎಂ ಡಿಕೆ ಶಿವಕುಮಾರ್ ರಾಜೀನಾಮೆಗೆ ಪಟ್ಟು ಹಿಡಿದಿವೆ. ಅತ್ತ ಹೈಕಮಾಂಡ್ ಬುಲಾವ್​ ನೀಡಿದ್ದು, ದೆಹಲಿಗೆ​ ಡಿಕೆ ಶಿವಕುಮಾರ್ ತೆರಳಿದ್ದರು. ಡಿಕೆಶಿ ಅವರು ದೆಹಲಿ ತೆರಳಿದ್ದು ಹೈಕಮಾಂಡ್ ಭೇಟಿಗಲ್ಲ ಎಂದು ಇಲ್ಲಿ ಕೈ ನಾಯಕರು ಸಮರ್ಥಿಸಿಕೊಂಡಿದ್ದರು. ಡಿಕೆಶಿ ದೆಹಲಿ ಭೇಟಿ ಬಗ್ಗೆ ಮಾತಾಡಿದ ಮಾಜಿ ಸಂಸದ ಡಿಕೆ ಸುರೇಶ್​, ಈ ಬಗ್ಗೆ ಹರಿದಾಡುತ್ತಿರುವ ಸುದ್ದಿಯಲ್ಲಿ ಸತ್ಯವಿಲ್ಲ ಎಂದಿದ್ದಾರೆ. ಡಿಕೆ ಶಿವಕುಮಾರ್ ಅವರು ದೆಹಲಿಯಲ್ಲಿ ಕಸ ವಿಲೇವಾರಿ ಯೋಜನೆ ನೋಡೋಕೆ ಹೋಗಿದ್ದಾರೆ. ಬೆಂಗಳೂರಿನಲ್ಲೂ ಆ ಸಿಸ್ಟಂ ತರೋಕೆ ನೋಡ್ತಿದ್ದಾರೆ ಎಂದಿದ್ದಾರೆ.

Recent Articles

spot_img

Related Stories

Share via
Copy link