ಚಿಕ್ಕನಾಯಕನಹಳ್ಳಿ :
ಪಟ್ಟಣದ ಆದಿತ್ಯಾದಿ ನವಗ್ರಹ ಕೃಪಾ ಪೋಷಿತ ಬಯಲು ನಾಟಕ ಕಲಾ ಮಂಡಳಿಯಿಂದ ನಡೆದ 98ನೇ ವರ್ಷದ ರಾಜಾವಿಕ್ರಮ ಅಥವಾ ಶನಿಪ್ರಭಾವ ಪೌರಾಣಿಕ ನಾಟಕವು 101ನೇ ಪ್ರದರ್ಶನ ಕಂಡಿತು.
ಪ್ರತಿ ವರ್ಷ ಈ ಪೌರಾಣಿಕ ನಾಟಕವು ದೇವಾಂಗ ಸಂಘದ ವತಿಯಿಂದ ನಡೆಯುತ್ತಿದ್ದು, ಯಕ್ಷಗಾನ ರಂಗಭೂಮಿ ಕಲಾವಿದರು ನಾಟಕ ನಡೆಸಿಕೊಂಡು ಬರುತ್ತಿದ್ದಾರೆ, ನಾಟಕವು ಶಿವರಾತ್ರಿಯಂದು ಜಾಗರಣೆ ಪ್ರಯುಕ್ತ ನಡೆಯುತ್ತಿದೆ. ಈಗಿನ ಪಾತ್ರಧಾರಿಗಳು ಕಳೆದ 20 ವರ್ಷಕ್ಕೂ ಅಧಿಕ ವರ್ಷಗಳಿಂದ ಪಾತ್ರ ನಿರ್ವಹಿಸುತ್ತಾ ಬಂದಿದ್ದಾರೆ.
ಶನಿಮಹದೇವರ ಪಾತ್ರಧಾರಿ ಶಿಕ್ಷಕ ಕುಮಾರಸ್ವಾಮಿ ಮಾತನಾಡಿ, ನಮ್ಮ ಹಿಂದಿನ ಹಿರಿಯ ಕಲಾವಿದರು ಶನಿಪ್ರಭಾವ ನಾಟಕ ಆರಂಭಿಸಿ ನೂರು ವರ್ಷಗಳ ಸನ್ನಿಹಿತವಾಗುತ್ತಿದ್ದು ಈ ಕಲೆ ಇನ್ನಷ್ಟು ವರ್ಷಗಳ ಕಾಲ ಮುಂದುವರೆಯಬೇಕು, ಈಗಿನ ಯುವ ಪೀಳಿಗೆಯು ನಾಟಕದ ಕಲೆಯನ್ನು ತಿಳಿದರೆ ಮಾತ್ರ ನಾಟಕ ದ್ವಿಶತಕದತ್ತ ದಾಪುಗಾಲಾಕುತ್ತದೆ, ಹಾಗಾಗಿ ಯುವಪೀಳಿಗೆ ಕಲೆಯ ಕಡೆ ಗಮನ ನೀಡಿ ರಂಗಭೂಮಿ ಕಲೆಯನ್ನು ಬೆಳೆಸಲು ಕಾರಣರಾಗಬೇಕು ಎಂದು ತಿಳಿಸಿದ್ದಾರೆ.
ವಿಕ್ರಮ ರಾಜನ ಪಾತ್ರದಲ್ಲಿ ಮಂಜುನಾಥ್, ಚೋಳರಾಜನ ಪಾತ್ರದಲ್ಲಿ ವೆಂಕಟೇಶ್, ಚಂದ್ರಸೇನನ ಪಾತ್ರಧಾರಿಯಾಗಿ ರಂಗನಾಥ್, ರಾಕ್ಷಸ ಪಾತ್ರಧಾರಿಯಾಗಿ ಭಾಸ್ಕರ್, ಮಲ್ಲಿಕ್, ಶೇಖರ್, ಬ್ರಾಹ್ಮಣರ ಪಾತ್ರಧಾರಿಯಾಗಿ ನಾಗರಾಜು, ಸಾನಂದ್, ರಂಗನಾಥ್, ಬನಶಂಕರಯ್ಯ, ಸಖಿಯರ ಪಾತ್ರದಲ್ಲಿ ರವಿಕಿರಣ್, ಅನಂತ, ಸಾರಥಿಯಾಗಿ ರಮೇಶ್ ಸೇರಿದಂತೆ ಭಾಗವತರು, ಕಲಾವಿದರ ಹಲವು ಪಾತ್ರಗಳಿದ್ದವು.
ಪೌರಾಣಿಕ ಬಯಲು ನಾಟಕವನ್ನು ಉಳಿಸಿ ಬೆಳೆಸಬೇಕೆಂಬ ದೃಷ್ಠಿಯಿಂದ ನಾಟಕವನ್ನು ಕಲಾವಿದರು ಹಲವು ದಶಕಗಳಿಂದ ನಡೆದುಕೊಂಡು ಬಂದಿದ್ದಾರೆ. ಪ್ರತಿ ವರ್ಷದಂತೆ ನಾಟಕ ನೋಡಲು ನೂರಾರು ಮಂದಿ ಆಗಮಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ