ಚಿಕ್ಕನಾಯಕನಹಳ್ಳಿ :
ತಾಪಂ ಸಾಮಾನ್ಯ ಸಭೆಗೆ ಅಧಿಕಾರಿಗಳು ಗೈರು ಹಾಜರಾಗುವಾಗ ಅನುಮತಿ ಪಡೆದು ಹೋಗಬೇಕು ಎಂದು ತಾಲ್ಲೂಕು ಪಂಚಾಯಿತಿ ಆಡಳಿತಾಧಿಕಾರಿ ರಾಜಸುಲೋಚನ ಹೇಳಿದರು.
ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿವಿಧ ಇಲಾಖೆಗಳ ಜೂನ್ ತಿಂಗಳ ಅಂತ್ಯದವರೆಗೆ ಪ್ರಗತಿ ಪರಿಶೀಲನೆ, 2021-22ನೇ ಸಾಲಿನ ವಾರ್ಷಿಕ ಲೆಕ್ಕಪತ್ರ ಅನುಮೋದನೆ ಹಾಗೂ ಲಿಂಕ್ ಡಾಕ್ಯೂಮೆಂಟ್ ಕ್ರಿಯಾ ಯೋಜನೆ ತಯಾರಿಸುವ ಕುರಿತು 15ನೇ ಹಣಕಾಸು ಯೋಜನೆಯ ಅದಿಭಾರ ಶುಲ್ಕ ಕ್ರಿಯಾ ಯೋಜನೆಯ ಬಗ್ಗೆ ಚರ್ಚಿಸಿ ಅನುಮೋದನೆ ಪಡೆಯಬೇಕು ಎಂದರಲ್ಲದೆ ಕೆಲವು ಅಧಿಕಾರಿಗಳು ತಾವು ಹಾಜರಾಗದೆ ನೌಕರರನ್ನು ಕಳುಹಿಸಿದರೆ ಹೇಗೆ ಎಂದು ಪ್ರಶ್ನಿಸಿದರು.
ಕೃಷಿ, ತೋಟಗಾರಿಕೆ ಹಾಗೂ ಸಾಮಾಜಿಕ ಅರಣ್ಯ ಇಲಾಖಾ ಅಧಿಕಾರಿಗಳು ಒಂದಾಗಿ ಚರ್ಚೆ ನಡೆಸಿ ಎನ್ಆರ್ಇಜಿ ಕಾಮಗಾರಿ ಕೈಗೊಳ್ಳಿ ಎಂದು ಸಲಹೆ ನೀಡಿದರು. ಪಶುಸಂಗೋಪನಾ ಇಲಾಖೆಯ ಅಧಿಕಾರಿಗಳು ಕ್ರಿಯಾ ಯೋಜನೆ ತಯಾರಿಸುವಾಗ ಇಲಾಖೆಯಿಂದ ಮೇವಿನಬೀಜ ವಿತರಿಸಿದಾಗ ಬಂಡ್ ಮೇಲೆ ಹಾಕಿ ಮೇವು ಬೆಳೆದರೆ ಬಂಡ್ ಗಟ್ಟಿಯಾಗುವುದರ ಜೊತೆಗೆ ಉತ್ತಮ ಮೇವು ಬೆಳೆಯಬಹುದು ಎಂದು ಸಲಹೆ ನೀಡಿದ ಅವರು, ಸರ್ಕಾರದ ಗೈಡ್ ಲೈನ್ ಪ್ರಕಾರ ಆಯವ್ಯಯ ತಯಾರಿಸಿ ಎಂದರು.
ಸಭೆಯಲ್ಲಿ ತಾಪಂ ಕಾರ್ಯ ನಿರ್ವಹಣಾಧಿಕಾರಿ ವಸಂತ್ಕುಮಾರ್, ಕೃಷಿ ಅಧಿಕಾರಿ ಹನುಮಂತರಾಜು, ಸಿಡಿಪಿಓ ಹೊನ್ನಪ್ಪ, ಪಶುಸಂಗೋಪನಾ ಇಲಾಖಾ ಅಧಿಕಾರಿ ನಾಗಭೂಷಣ್, ಬಿಆರ್ಸಿ ಸಂಗಮೇಶ್, ಜಿಲ್ಲಾ ಪಂಚಾಯ್ತಿ ಅಧಿಕಾರಿ ರವಿಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ