ದುಬೈ:
ಏಷ್ಯಾ ಕಪ್ ಟಿ20 ಟೂರ್ನಿಯಲ್ಲಿ ಭಾರತ ತಂಡ ಫೈನಲ್ ಪ್ರವೇಶಿಸಿದೆ. ಆದರೆ ಟೂರ್ನಿಯುದ್ದಕ್ಕೂ ಭಾರತದ ಕಳಪೆ ಫೀಲ್ಡಿಂಗ್ ತೀವ್ರ ಟೀಕೆಗೆ ಗುರಿಯಾಗಿದೆ. ಆಡಿದ 5 ಪಂದ್ಯಗಳಲ್ಲಿ ಭಾರತೀಯ ಆಟಗಾರರು ಬರೋಬ್ಬರಿ 12 ಕ್ಯಾಚ್ ಗಳನ್ನು ಕೈಚೆಲ್ಲಿದ್ದು, ಈ ಪೈಕಿ ಎರಡು ಪಂದ್ಯಗಳಲ್ಲೇ ಒಂಬತ್ತು ಕ್ಯಾಚ್ ಗಳನ್ನು ಕೈಚೆಲ್ಲಿರುವುದು ಭಾರತ ತಂಡದ ಫೀಲ್ಡಿಂಗ್ ಗುಣಮಟ್ಟಕ್ಕೆ ಕನ್ನಡಿ ಹಿಡಿದಿದೆ. ಅಲ್ಲದೆ ಫೀಲ್ಡಿಂಗ್ ಕೋಚ್ ಟಿ. ದಿಲೀಪ್ ಅವರ ತಲೆದಂಡದ ಸಾಧ್ಯತೆ ಕಂಡುಬಂದಿದೆ.
2024-25ರ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯಲ್ಲಿ ಭಾರತದ ಕಳಪೆ ಪ್ರದರ್ಶನದ ನಂತರ, ದಿಲೀಪ್ ಅವರನ್ನು ತಂಡದಿಂದ ಕೈಬಿಡಲಾಗಿತ್ತು. ಆದರೆ ಸೂಕ್ತ ಫೀಲ್ಡಿಂಗ್ ಕೋಚ್ ಆಯ್ಕೆ ಮಾಡಲು ವಿಫಲವಾದ ಕಾರಣ ಬಿಸಿಸಿಐ, ದಿಲೀಪ್ ಅವರನ್ನು ತಂಡದ ಫೀಲ್ಡಿಂಗ್ ಕೋಚ್ ಆಗಿ ಮರು ನೇಮಕ ಮಾಡಿತ್ತು. ಈ ಬಾರಿ ಟೂರ್ನಿಯಲ್ಲಿ ಭಾರತದ ಫೀಲ್ಡಿಂಗ್ ಹಾಂಗ್ಕಾಂಗ್ ತಂಡಕ್ಕಿಂತಲೂ ಕಳಪೆ ಮಟ್ಟದಲ್ಲಿತ್ತು.
ಭಾರತ ತಂಡದ ಭಾಗವಾಗಿರುವ ವರುಣ್ ಚಕ್ರವರ್ತಿ ಕೂಡ ಸ್ವತಃ ತಂಡದ ಲೋಪಗಳನ್ನು ಒಪ್ಪಿಕೊಂಡಿದ್ದಾರೆ. ನಾವು ಫೈನಲ್ಗೆ ಅರ್ಹತೆ ಪಡೆಯುವುದರಿಂದ ತಂಡವಾಗಿ ನಾವು ಖಂಡಿತವಾಗಿಯೂ ಎಲ್ಲ ಕ್ಯಾಚಿಂಗ್ ಅವಕಾಶಗಳನ್ನು ಬಳಸಿಕೊಳ್ಳಬೇಕು ಎಂದು ಬಾಂಗ್ಲಾ ಪಂದ್ಯದ ಬಳಿಕ ಚಕ್ರವರ್ತಿ ನುಡಿದರು.








