ತುರುವೇಕೆರೆ:
ತಾಲೂಕಿನ ದೊಡ್ಡ ಶೆಟ್ಟಿಕೆರೆಯ ಕೆರೆಯ ಏರಿ ಕುಸಿದ ಹಿನ್ನೆಲೆಯಲ್ಲಿ ಕೆರೆಯ ಕೋಡಿಯನ್ನು ಒಡೆದು ಕೆರೆಯ ನೀರನ್ನು ಹೊರಕ್ಕೆ ಬಿಡಲಾಗಿದೆ. ಕಳೆದ ನಾಲ್ಕು ವರ್ಷಗಳ ಹಿಂದೆ ಕೆರೆಯ ಏರಿ ಕುಸಿದಿದ್ದು, ಸುಮಾರು 1.40 ಕೋಟಿ ವೆಚ್ಚದಲ್ಲಿ ದುರಸ್ಥಿ ಮಾಡಲಾಗುತ್ತಿತ್ತು. ಕಾಮಗಾರಿಯು ಕಳೆದ ಒಂದೆರಡು ತಿಂಗಳ ಹಿಂದಷ್ಟೆ ಮುಗಿದಿತ್ತು ಎನ್ನಲಾಗಿದೆ. ಹೆಚ್ಚಿನ ಮಳೆ ಹಿನ್ನಲೆಯಲ್ಲಿ ಈಗ ಕೆರೆಗೆ ಸಾಕಷ್ಟು ಮಳೆನೀರು ಹರಿದು ಬಂದಿದೆ. ಶನಿವಾರ ಮಧ್ಯಾಹ್ನ ಕೆರೆಯ ಏರಿ ಕುಸಿದಿದೆ. ಇದನ್ನು ಗಮನಿಸಿದ ಗ್ರಾಮಸ್ಥರು ಹೇಮಾವತಿ ನಾಲಾ ಇಂಜಿನಿಯರ್ಗಳ ಗಮನಕ್ಕೆ ತಂದಿದ್ದಾರೆ. ಸ್ಥಳಕ್ಕೆ ಧಾವಿಸಿದ ಅಧಿಕಾರಿಗಳು ಕೆರೆಯ ಏರಿ ಕುಸಿದಿದ್ದರಿಂದ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಭಾವಿಸಿ ಕೆರೆಯ ಕೋಡಿ ತೆರವುಗೊಳಿಸಿ ಅನಾಹುತವನ್ನು ತಡೆದಿದ್ದಾರೆ.
ಕಳೆದ ಹತ್ತಾರು ವರ್ಷಗಳಿಂದ ಕೆರೆಗೆ ನೀರು ತುಂಬಿರಲಿಲ್ಲ. ಆದರೆ ಇತ್ತೀಚೆಗೆ ಸುರಿದ ಭಾರಿ ಮಳೆ ಮತ್ತು ಹೇಮಾವತಿ ನೀರಿನಿಂದಾಗಿ ಕೆರೆ ಸಂಪೂರ್ಣ ತುಂಬಿತ್ತು. ಇದು ಗ್ರಾಮದ ಜನರಿಗೆ ತುಂಬಾ ಖುಷಿ ನೀಡಿತ್ತು. ಆದರೆ ಇತ್ತೀಚೆಗೆ ಕಳಪೆ ಕಾಮಗಾರಿ ಮಾಡಿರುವ ಹೇಮಾವತಿ ನಾಲಾ ಇಂಜಿಯರ್ ಮತ್ತು ಗುತ್ತಿಗೆದಾರರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕೆಂದು ಗ್ರಾಮದ ಮುಖಂಡರಾದ ಚೌದ್ರಿರಂಗಪ್ಪ, ಜಿಪಂ ಮಾಜಿ ಸದಸ್ಯ ಎನ್.ಆರ್.ಜಯರಾಮ್ ಒತ್ತಾಯಿಸಿದ್ದಾರೆ.
ಕಳಪೆ ಕಾಮಗಾರಿ ಮಾಡಿರುವ ಹಿನ್ನೆಲೆಯಲ್ಲಿ ಏರಿ ಕುಸಿತದಿಂದ ಲಕ್ಷಾಂತರ ರೂ. ಗಳು ನಷ್ಟ ಸಂಭವಿಸಿದೆ. ಇತ್ತ ಕೆರೆಯೊಳಗಿದ್ದ ನೀರು ಪೋಲಾಗಿದೆ. ಕೆರೆಯಿಂದ ಹೊರಗೆ ಬಿಡಲಾಗಿರುವ ನೀರು ಹೊಲಗಳ ಮೇಲೆ ಹರಿದು ಹೋಗಿರುವ ಪರಿಣಾಮ, ನೂರಾರು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಬೆಳೆಗಳು ನಷ್ಟವಾಗಿದೆ ಎಂದು ಗ್ರಾಪಂ ಸದಸ್ಯರಾದ ಸವಿತಾಶಿವಶಂಕರ್ ಮತ್ತು ವಿಶಾಲಾಕ್ಷಿ ತಿಳಿಸಿದ್ದಾರೆ.
ಕೆರೆ ಏರಿಗೆ ಆಗಿರುವ ಹಾನಿ, ನೀರಿನ ಪೋಲು ಹಾಗೂ ರೈತರಿಗೆ ಆಗಿರುವ ಬೆಳೆ ನಷ್ಟದ ಮೊತ್ತವನ್ನು ಕಳಪೆ ಕಾಮಗಾರಿ ಮಾಡಿರುವ ಅಧಿಕಾರಿಗಳು ಮತ್ತು ಗುತ್ತಿಗೆದಾರರಿಂದಲೆ ಸರ್ಕಾರ ವಸೂಲು ಮಾಡಬೇಕೆಂದು ಮುಖಂಡರಾದ ಗ್ರಾಪಂ ಮಾಜಿ ಅಧ್ಯಕ್ಷ ಡಿ.ಎನ್.ರಂಗಸ್ವಾಮಿ, ರಂಗನಾಥ್, ಶಿವಕುಮಾರ್, ಕಾಂತರಾಜು, ಭೈರವ, ಪಾಂಡು, ಶಂಕರೇಗೌಡ, ತಿಮ್ಮಣ್ಣ, ಕುಮಾರಸ್ವಾಮಿ, ನಾಗರಾಜು ಮತ್ತಿತರರು ಒತ್ತಾಯಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ