ಮಿಥುನ್ ರೈ-ಐವಾನ್ ಡಿ’ಸೋಜಾಗೆ ಕಾಂಗ್ರೆಸ್ ಹೈಕಮಾಂಡ್ ನೋಟಿಸ್‌

ಬೆಂಗಳೂರು: 

    ಕಾಂಗ್ರೆಸ್‌ನಲ್ಲಿ ಕಳೆದ ಕೆಲ ತಿಂಗಳಿಂದ ಸಿಎಂ ಗದ್ದುಗೆ ಗುದ್ದಾಟ ಮಿತಿಮೀರಿದೆ. ಸಿಎಂ-ಡಿಸಿಎಂ ಬ್ರೇಕ್‌ ಫಾಸ್ಟ್ ಸಭೆ ಮಾಡಿ ಸಂಧಾನ ಮಾಡಿದ್ರೂ ಇದು ನಿಲ್ಲದಾಗಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ರಾಜ್ಯಕ್ಕೆ ಭೇಟಿ ನೀಡಿದ್ದ ವೇಳೆ ಸಿಎಂ ಘೋಷಣೆ ಕೂಗಿದ್ದವರಿಗೆ ಐಐಸಿಸಿ ಶಾಕ್ ನೀಡಿದೆ.

   ನಾರಾಯಣ ಗುರು ಹಾಗೂ ಮಹಾತ್ಮ ಗಾಂಧಿ ನಡುವಿನ ಸಂವಾದದ ಶತಮಾನೋತ್ಸವ ಕಾರ್ಯಕ್ರಮ ಇತ್ತೀಚೆಗೆ ಮಂಗಳೂರಿನಲ್ಲಿ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಭಾಗಿಯಾಗಲು ಕೆ.ಸಿ.ವೇಣುಗೋಪಾಲ್ ಕೇರಳದಿಂದ ಮಂಗಳೂರಿಗೆ ಆಗಮಿಸಿದ್ದರು.

    ವೇಣುಗೋಪಾಲ್ ಮಂಗಳೂರು ವಿಮಾನ ನಿಲ್ದಾಣದಿಂದ ಆಚೆ ಬರುತ್ತಿದ್ದಂತೆಯೇ ಕಾಂಗ್ರೆಸ್ ಮುಖಂಡ ಮಿಥುನ್ ರೈ ಹಾಗೂ ಅವರ ಬೆಂಬಲಿಗರು ಡಿಕೆಶಿ ಪರವಾಗಿ ಘೋಷಣೆ ಕೂಗಿದ್ದರು. ಡಿಕೆ ಡಿಕೆ ಎಂದು ಘೋಷಣೆ ಕೂಗಿದ್ದಲ್ಲದೇ ಡಿಕೆ ಶಿವಕುಮಾರ್ ಅವರನ್ನು ಸಿಎಂ ಮಾಡಬೇಕೆಂದು ಆಗ್ರಹಿಸಿದ್ರು. ಸಿಎಂ-ಡಿಕೆಶಿ ನಡುವಿನ ಕುರ್ಚಿ ಕದನ ಶಾಂತವಾಗಿರುವಾಗಲೇ ಈ ರೀತಿ ಘೋಷಣೆ ಕೂಗಿರುವುದು ಹೈಕಮಾಂಡ್​ ಕೆಂಗಣ್ಣಿಗೆ ಗುರಿಯಾಗಿದೆ. ಹೀಗಾಗಿ ಕಾರಣ ಕೇಳಿ ಮಿಥುನ್ ರೈಗೆ ಎಐಸಿಸಿ ಕಾರ್ಯದರ್ಶಿ ರೋಜಿ ಜಾನ್ ಶೋಕಾಸ್ ನೋಟಿಸ್‌ ಜಾರಿ ಮಾಡಿದ್ದಾರೆ.

     ಸಿಎಂ ಸಿದ್ದರಾಮಯ್ಯ ಪೂರ್ಣಾವಧಿ ಸಿಎಂ ಎಂದು ಘೋಷಿಸಿದ್ದ ಪರಿಷತ್‌ ಸದಸ್ಯ ಐವಾನ್ ಡಿಸೋಜಾಗೂ ಕಾಂಗ್ರೆಸ್ ಶಿಸ್ತು ಸಮಿತಿ ನೋಟಿಸ್ ನೀಡಿದೆ. ಸೂಕ್ತ ಕಾರಣ ನೀಡುವಂತೆ ಕಾಂಗ್ರೆಸ್ ನೋಟಿಸ್ ನೀಡಿದೆ. ಈ ಮೂಲಕ ಕೈನಲ್ಲಿ ಮತ್ತೆ ಸಿಎಂ ಕುರ್ಚಿಯ ಕಿತ್ತಾಟ ಹೆಚ್ಚಾಗದಂತೆ ಕ್ರಮಕೈಗೊಂಡಿದೆ.

Recent Articles

spot_img

Related Stories

Share via
Copy link