ಕಾಂಗ್ರೆಸ್‌ ನಿಂದ ಜನಪರ ಪ್ರಣಾಳಿಕೆ : ಡಿ ಕೆ ಶಿವಕುಮಾರ್

ಬೆಂಗಳೂರು

      ಸರ್ವ ಜನಾಂಗದ ಶಾಂತಿಯ ತೋಟ – ಇದುವೆ ಕಾಂಗ್ರೆಸ್ ಬದ್ದತೆ’ ಎಂಬ ಹೆಸರಿನಡಿ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಇದುವೆ ಕಾಂಗ್ರೆಸ್ ಬದ್ದತೆಯಾಗಿದ್ದು, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಮಾಜದ ಸ್ವಾಸ್ಥ್ಯಾ ಹಾಳು ಮಾಡುತ್ತಿರುವ ಬಜರಂಗದಳ, ಪಿಎಫ್‌ಐ ನಿಷೇಧಿಸುವುದಾಗಿ ಘೋಷಿಸಿದೆ.

    ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸುವುದಾಗಿ ಬಿಜೆಪಿ ಹೇಳಿದ್ದರೆ, ಸಮಾಜದ ಆರೋಗ್ಯ ಹಾಳು ಮಾಡುವ ಸಂಘಟನೆಗಳನ್ನು ನಿಷೇಧ ಮಾಡುವುದಾಗಿ ಕಾಂಗ್ರೆಸ್ ತಿಳಿಸಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಚುನಾವಣಾ ಪ್ರಣಾಳಿಕೆಯನ್ನು ಏಐಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಬಿಡುಗಡೆ ಮಾಡಿದರು.

     200 ಯುನಿಟ್ ಉಚಿತ ವಿದ್ಯುತ್ ನೀಡುವ ಗೃಹಜ್ಯೋತಿ, ನಿರುದ್ಯೋಗ ಯುವ ನಿಧಿ, 10 ಕೆಜಿ ಉಚಿತ ಅಕ್ಕಿ, ಮನೆಯಜಮಾನಿಗೆ ಮಾಸಿಕ 2 ಸಾವಿರ ರೂ. ಗೃಹಲಕ್ಷಿ÷್ಮ ಯೋಜನೆ, ಮಹಿಳೆಯರಿಗೆ ಉಚಿತ ಬಸ್‌ಪಾಸ್‌ನ ಶಕ್ತಿ ಗ್ಯಾರೆಂಟಿ ಯೋಜನೆ ಜತೆಗೆ ವಿವಿಧ ವರ್ಗಗಳ ಮೀಸಲಾತಿ ಪ್ರಮಾಣವನ್ನು ಶೇ. 50 ರಿಂದ ಶೇ. 75ಕ್ಕೆ ಏರಿಸುವ ಭ್ರಷ್ಟಾಚಾರ ನಿಗ್ರಹಕ್ಕೆ ಹೊಸ ಕಾನೂನು, ಸರ್ಕಾರಿ ನೌಕರರಿಗೆ ಹಳೆ ಪಿಂಚಣಿ ವ್ಯವಸ್ಥೆ ಜಾರಿ, ಅಂಗನವಾಡಿ ಕಾರ್ಯಕರ್ತೆಯರಿಗೆ 15 ಸಾವಿರ ರೂ. ಮಾಸಿಕ ಗೌರವಧನ, ಬಿಜೆಪಿ ಸರ್ಕಾರ ಜಾರಿ ಮಾಡಿರುವ ಕೃಷಿ ಕಾಯ್ದೆ, ನೂತನ ಶಿಕ್ಷಣ ನೀತಿ ರದ್ದು, ರೈತರಿಗೆ 10 ಲಕ್ಷದವರೆಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ, ಹಾಲಿನ ಪ್ರೋತ್ಸಾಹ ದರ 5 ರಿಂದ 7 ರೂ.ಗೆ ಏರಿಕೆ, ನೀರಾವರಿ ಯೋಜನೆಗಳಿಗೆ 1.5 ಲಕ್ಷ ಕೋಟಿ ವೆಚ್ಚ, ಕೃಷಿ ಉತ್ಪನ್ನಗಳ ಬೆಲೆ ನಿಗಿದಿಗೆ ಪ್ರತಿ ವಿಭಾಗದಲ್ಲೂ ಕೃಷಿ ಬೆಲೆ ಆಯೋಗ ಸ್ಥಾಪನೆ, ಪೊಲೀಸರಿಗೆ ವರ್ಷಕ್ಕೆ ಒಂದು ತಿಂಗಳ ಹೆಚ್ಚುವರಿ ವೇತನ ಖಾಲಿ ಇರುವ ಸರ್ಕಾರಿ ಹುದ್ದೆಗಳ ಭರ್ತಿ ಸೇರಿದಂತೆ ಹತ್ತು ಹಲವು ವಾಗ್ದಾನಗಳನ್ನು ನೀಡಿದೆ.

      ರಾಜ್ಯದಲ್ಲಿ ಮತ್ತೆ ಅಧಿಕಾರದ ಗದ್ದುಗೆ ಏರಲು ಶತಪ್ರಯತ್ನ ನಡೆಸಿರುವ ಕಾಂಗ್ರೆಸ್, ಈ ಚುನಾವಣಾ ಪ್ರಣಾಳಿಕೆಯಲ್ಲಿ ರೈತರು, ಮಹಿಳೆಯರು, ಯುವಕರು, ಪರಿಶಿಷ್ಟ ವರ್ಗ, ಪಂಗಡ, ಅಲ್ಪ ಸಂಖ್ಯಾತರನ್ನು ಓಲೈಸುವ ಪ್ರಯತ್ನದಲ್ಲಿ ನಿರತವಾಗಿದೆ. ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದು ನಿಶ್ಚಿತ, ಕೈ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮೊದಲ ಸಚಿವ ಸಂಪುಟ ಸಭೆಯಲ್ಲೇ ಕಾಂಗ್ರೆಸ್‌ನ ಗ್ಯಾರೆಂಟಿ ಯೋಜನೆಗಳ ಜಾರಿ ಮಾಡುತ್ತೇವೆ, ಇದು ನನ್ನ ವಾಗ್ದಾನ ಎಂದರು.

      ಈ ಚುನಾವಣಾ ಪ್ರಣಾಳಿಕೆಯಲ್ಲಿ ಹತ್ತು ಹಲವು ಜನಪರ ಭರವಸೆಗಳನ್ನು ನೀಡಿದ್ದೇವೆ. ಈ ಎಲ್ಲ ಭರವಸೆಗಳನ್ನು ಈಡೇರಿಸುತ್ತೇವೆ. ಈಡೇರಿಸದ ಭರವಸೆಗಳನ್ನು ನಾವು ನೀಡಿಲ್ಲ ಎಂದವರು ಹೇಳಿದರು.

ಮೀಸಲಾತಿ ಹೆಚ್ಚಳ ಜಾತಿ ಗಣತಿ ವರದಿ ಜಾರಿ

     ಪರಿಶಿಷ್ಟ ಜಾತಿ ಮೀಸಲಾತಿಯನ್ನು ಶೇ. 15 ರಿಂದ ಶೇ. 17ಕ್ಕೆ. ಪರಿಶಿಷ್ಟ ಪಂಗಡದ ಮೀಸಲಾತಿಯನ್ನು ಶೇ. 3 ರಿಂದ 7ಕ್ಕೆ, ಮುಸ್ಲಿಮರಿಗೆ ಶೇ. 4ರ ಮೀಸಲಾತಿ ಮರುಸ್ಥಾಪನೆ, ಲಿಂಗಾಯತ, ಒಕ್ಕಲಿಗ ಮತ್ತಿತರ ಸಮುದಾಯಗಳ ಆಶೋತ್ತರಗಳನ್ನು ಈಡೇರಿಸಲು ಮೀಸಲಾತಿಯನ್ನು ಶೇ. 50 ರಿಂದ 75ಕ್ಕೆ ಹೆಚ್ಚಿಸಲು ಕ್ರಮಕೈಗೊಳ್ಳುವ ಭರವಸೆಯನ್ನು ಪ್ರಣಾಳಿಕೆಯಲ್ಲಿ ನೀಡಲಾಗಿದೆ.

    ಹಿಂದಿನ ಕಾಂಗ್ರೆಸ್ ಸರ್ಕಾರ ಸಿದ್ಧಪಡಿಸಿದ ಹಿಂದುಳಿದ ವರ್ಗಗಳ ಜನಗಣತಿ ವರದಿಯನ್ನು ಅನುಷ್ಠಾನಕ್ಕೆ ತರುವುದಾಗಿಯೂ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಹೇಳಿದೆ. ಪರಿಶಿಷ್ಟ ಜಾತಿ ಪಂಗಡದ ಯುವಕರಿಗೆ ಟ್ಯಾಕ್ಸಿ, ಆಟೋ, ಸರಕು ಸಾಗಾಣೆ ವಾಹನ ಖರೀದಿಗೆ. ಶೇ. 3ರ ಬಡ್ಡಿ ದರದಲ್ಲಿ ಸಾಲ, ಡಾ. ಭೀಮ್‌ರಾವ್ ಅಂಬೇಡ್ಕರ್ ಉದ್ಯಮಶೀಲತ ನಿಧಿ ಸ್ಥಾಪನೆ. ಎಸ್‌ಸಿ, ಎಸ್‌ಟಿ ಕಾಯ್ದೆಯ ಸೆಕ್ಷನ್ 7ಡಿ ರದ್ದುಪಡಿಸುವ ಭರವಸೆಯನ್ನೂ ಕಾಂಗ್ರೆಸ್ ನೀಡಿದೆ.

ರೈತರಿಗೆ ಆದ್ಯತೆ

    ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಪಕ್ಷ ರೈತರ ಕಲ್ಯಾಣಕ್ಕೆ ಹಲವು ಯೋಜನೆಗಳ ಜಾರಿ ಭರವಸೆ ನೀಡಿದ್ದು, ಅದರಂತೆ ರೈತರಿಗೆ ಬಡ್ಡಿರಹಿತ ಸಾಲವನ್ನು 3 ಲಕ್ಷದಿಂದ 10 ಲಕ್ಷಕ್ಕೆ ವಿಸ್ತರಣೆ, ಶೇ. 3ರ ಬಡ್ಡಿ ದರದಲ್ಲಿ 15 ಲಕ್ಷದವರೆಗೂ ಸಾಲ, ಹಾಲಿನ ಪ್ರೋತ್ಸಾಹ ಧನವನ್ನು ಪ್ರತಿ ಲೀಟರ್‌ಗೆ 5 ರೂ.ನಿಂದ 7ರೂ.ಗೆ ಏರಿಕೆ, ಪ್ರತಿವಿಭಾಗದಲ್ಲೂ ಕೈಷಿ ಬೆಲೆ ಆಯೋಗ ಸ್ಥಾಪನೆ, ಸ್ವಾಮಿನಾಥನ್ ವರದಿಯಂತೆ ರೈತರ ಉತ್ಪನ್ನಗಳಿಗೆ ಕನಿಷ್ಟ ಬೆಂಬಲ ಬೆಲೆ ನಿಗದಿ, ಕೃಷಿ ಸಂಬಂಧಿತ ಸ್ಟಾರ್ಟಪ್ ಮತ್ತು ಸಂಶೋಧನೆಗಳ ಉತ್ತೇಜನಕ್ಕೆ 500 ಕೋಟಿ ರೂ.ಗಳ ಕೃಷಿ ಉನ್ನತೀ ನಿಧಿ, ಗ್ರಾಮೀಣ ಪ್ರದೇಶಗಳಿಗೆ 3ಪೇಸ್‌ನಲ್ಲಿ ಹಗಲು ಹೊತ್ತಿನಲ್ಲಿ 8 ಗಂಟೆ ವಿದ್ಯುತ್ ಪೂರೈಕೆಯ ಭರವಸೆ ಜತೆಗೆ ಪ್ರತಿ ಜಿಲ್ಲೆಗೆ 1 ರೈತ ಮಾಲ್‌ಗಳ ಪ್ರಾರಂಭದ ಭರವಸೆಯನ್ನೂ ನೀಡಿದೆ.

ಕಾಯ್ದೆ ರದ್ದು

   ಬಿಜೆಪಿ ಸರ್ಕಾರ ಜಾರಿ ಮಾಡಿರುವ ಕೃಷಿ ಕಾಯ್ದೆಗಳು, ಎಪಿಎಂಸಿ ತಿದ್ದುಪಡಿ ಕಾಯ್ದೆಗಳ ರದ್ಧತಿ ಜತೆಗೆ ರೈತರ ವಿರುದ್ಧ ದಾಖಲಾಗಿರುವ ರಾಜಕೀಯ ಪ್ರೇರಿತ ಪ್ರಕರಣಗಳನ್ನು ಹಿಂತೆಯುವ ಭರವಸೆಗಳನ್ನು ಕಾಂಗ್ರೆಸ್ ಪಕ್ಷ ನೀಡಿದೆ.

ಹಳೆ ಪಿಂಚಣಿ ಜಾರಿ

     2006 ರ ನಂತರ ಸರ್ಕಾರಿ ಉದ್ಯೋಗಕ್ಕೆ ಸೇರಿರುವ ನೌಕರರಿಗೆ ಎನ್‌ಪಿಎಸ್ ರದ್ದು ಮಾಡಿ ಹಳೆ ಪಿಂಚಣಿ ಜಾರಿ ಮಾಡುವ ಭರವಸೆಯನ್ನೂ ಕಾಂಗ್ರೆಸ್ ನೀಡಿದೆ. ಹಾಗೆಯೇ, ರಾತ್ರಿ ಪಾಳಿಯ ಪೊಲೀಸ್ ಸಿಬ್ಬಂದಿಗೆ 5 ಸಾವಿರ ವಿಶೇಷ ಮಾಸಿಕ ಭತ್ಯೆ, ಎಲ್ಲ ಪೊಲೀಸರಿಗೆ ವರ್ಷಕ್ಕೆ 1 ತಿಂಗಳ ಹೆಚ್ಚುವರಿ ಪಾವತಿ ಭರವಸೆಯನ್ನು ನೀಡಿದೆ.

ಭ್ರಷ್ಟಾಚಾರ ನಿಗ್ರಹಕ್ಕೆ ಹೊಸ ಕಾಯ್ದೆ.

     ಭ್ರಷ್ಟಾಚಾರ ನಿಗ್ರಹಕ್ಕೆ ಹೊಸ ಕಾಯ್ದೆಯನ್ನು ಜಾರಿಗೆ ತಂದು ಲೋಕೋಪಯೋಗಿ ಗ್ರಾಮೀಣಾಭಿವೃದ್ಧಿ, ನೀರಾವರಿ, ನಗರಾಭಿವೃದ್ಧಿ, ಇಂಧನ ಇಲಾಖೆಗಳಲ್ಲಿ ಟೆಂಡರ್‌ಗಳಲ್ಲಿ ಪಾರದರ್ಶಕ ವ್ಯವಸ್ಥೆ ಮತ್ತು ಬಿಲ್‌ಗಳ ಪಾವತಿಯಲ್ಲೂ ಪಾರದರ್ಶಕತೆ ಜಾರಿ ಮಾಡುವ ಭರವಸೆಯನ್ನು ಕಾಂಗ್ರೆಸ್ ನೀಡಿದೆ. ಕನಕಪುರದಲ್ಲಿ ಅತ್ಯಾಧುನಿಕ ವಿಶ್ವದರ್ಜೆಯ ವಿಧಿವಿಜ್ಞಾನ ವಿಶ್ವವಿದ್ಯಾಲಯ ಸ್ಥಾಪನೆ, ಬಿಜೆಪಿ ಸರ್ಕಾರ ಜಾರಿಗೆ ತಂದ ಜನವಿರೋಧಿ ಕಾಯ್ದೆಗಳ ರದ್ದು, ಭಜರಂಗದಳ ಮತ್ತು ಪಿಎಫ್‌ಐಗಳ ನಿಷೇಧ ಪ್ರಸ್ತಾವವನ್ನು ಪ್ರಣಾಳಿಕೆಯಲ್ಲಿ ಮಾಡಲಾಗಿದೆ.

ಅಂಗನವಾಡಿ ಕಾರ್ಯಕರ್ತರ ವೇತನ ಹೆಚ್ಚಳ

    ಅಂಗನವಾಡಿ ಕಾರ್ಯಕರ್ತೆಯರ ವೇತನವನ್ನು 11,500 ರಿಂದ 15 ಸಾವಿರಕ್ಕೆ ಹೆಚ್ಚಳ, ಮಿನಿ ಅಂಗನವಾಡಿ ಕಾರ್ಯಕರ್ತರ ವೇತನ 7,500 ರಿಂದ 10 ಸಾವಿರಕ್ಕೆ ಹೆಚ್ಚಳ ಮತ್ತು ಇವರುಗಳಿಗೆ 2 ಲಕ್ಷ ರೂ. ವಿಶ್ರಾಂತಿ ವೇತನ ನೀಡುವುದಾಗಿ ಕಾಂಗ್ರೆಸ್ ಹೇಳಿದೆ.

     ಆಶಾಕಾರ್ಯಕರ್ತೆಯರ ಮಾಸಿಕ ಗೌರವ ಧನ 5 ರಿಂದ 8ಕ್ಕೆ ಹೆಚ್ಚಳ, ಬಿಸಿಯೂಟ ಅಡುಗೆಯವರ ಮಾಸಿಕ ಗೌರವಧನ 3,600 ರಿಂದ 6 ಸಾವಿರಕ್ಕೆ ಹೆಚ್ಚು ಮಾಡುವ ಭರವಸೆಯನ್ನು ಕಾಂಗ್ರೆಸ್ ನೀಡಿದೆ. ನೀರಾವರಿ ಯೋಜನೆಗಳಿಗೆ 5 ವರ್ಷಗಳಲ್ಲಿ 1.5 ಲಕ್ಷ ಕೋಟಿ ರೂ. ಒದಗಿಸುವ ಜತೆಗೆ ಮೇಕೆದಾಟು, ಮಹಾದಾಯಿ ಯೋಜನೆ ಜಾರಿ, ಎತ್ತಿನಹೊಳೆ ಯೋಜನೆಯನ್ನು 2 ವರ್ಷದಲ್ಲಿ ಸಂಪೂರ್ಣಗೊಳಿಸುವ ಭರವಸೆಯನ್ನೂ ಕಾಂಗ್ರೆಸ್ ನೀಡಿದೆ.

    ಪಿಯುಸಿಯಿಂದ ಉನ್ನತ ಶಿಕ್ಷಣದವರೆಗೆ ಎಲ್ಲ ವಿದ್ಯಾರ್ಥಿನಿಯರಿಗೆ ಉಚಿತ ಲ್ಯಾಪ್‌ಟಾಪ್, ಬಿಪಿಎಲ್ ಕುಟುಂಬದ ಮಕ್ಕಳಿಗೆ ವಿದ್ಯಾರ್ಥಿವೇತನ 15 ರಿಂದ 20ಕ್ಕ ಹೆಚ್ಚಳ, ವಿಶ್ವವಿದ್ಯಾಲಯಗಳ ಉನ್ನತೀಕರಣಕ್ಕೆ 2 ಸಾವಿರ ಕೋಟಿಗಳ ಆವರ್ತನಿಧಿ, ಸರ್ಕಾರಿ ಮತ್ತು ಅನುದಾನಿತ ಶಾಲಾ ಕಾಲೇಜುಗಳಲ್ಲಿ ಖಾಲಿ ಇರುವ ಶಿಕ್ಷಕರ ಮತ್ತು ಬೋಧಕೇತರ ಹುದ್ದೆಗಳಿಗೆ ನೇಮಕಾತಿ ಭರವಸೆ ನೀಡಿದೆ.

ನೂತನ ಶಿಕ್ಷಣ ನೀತಿ ರದ್ದು

    ಬಿಜೆಪಿ ಸರ್ಕಾರ ಜಾರಿ ಮಾಡುವ ನೂತನ ಶಿಕ್ಷಣ ನೀತಿಯನ್ನು ರದ್ದು ಮಾಡಿ ಕರ್ನಾಟಕ ಶಿಕ್ಷಣ ನೀತಿಯ ಅನುಷ್ಠಾನದ ಭರವಸೆಯನ್ನೂ ಕಾಂಗ್ರೆಸ್ ನೀಡಿದೆ.

ಎಲ್ಲ ವಿಭಾಗಗಳಲ್ಲೂ ಆಸ್ಪತ್ರೆ

    ಪ್ರತಿ ಕಂದಾಯ ವಿಭಾಗಗಳಲ್ಲಿ ತಲಾ 1 ಜಯದೇವ ರೀತಿಯ ಹೃದ್ರೋಗ, ಕಿದ್ವಾಯಿ ಮಾದರಿಯ ಕ್ಯಾನ್ಸರ್, ನಿಮ್ಹಾನ್ಸ್ ಮಾದರಿಯ ಮನೋರೋಗ ಮತ್ತು ಮಿದುಳು ಚಿಕಿತ್ಸಾ ಆಸ್ಪತ್ರೆ ಸ್ಥಾಪನೆಯ ಭರವಸೆ ಜತೆಗೆ ಡಾ. ಪುನೀತ್‌ರಾಜ್‌ಕುಮಾರ್ ಹೃದಯ ಆರೋಗ್ಯ ಯೋಜನೆ ಜಾರಿ ಮಾಡುವ ಭರವಸೆಯನ್ನು ನೀಡಿದೆ. ಬಡವರ ಮನೆ ನಿರ್ಮಾಣ ಯೋಜನೆಯ ಸಬ್ಸಿಡಿಯನ್ನು 3 ಲಕ್ಷಕ್ಕೆ ಹೆಚ್ಚಳ, ರಾಜ್ಯಸರ್ಕಾರದಿಂದ ನಿರ್ಮಿಸುವ ವಸತಿ ಯೋಜನೆಗಳ ಸಬ್ಸಿಡಿ 3.5ಲಕ್ಷಕ್ಕ ನಿಗದಿ ಮಾಡುವ ಭರವಸೆಯನ್ನು ಕಾಂಗ್ರೆಸ್ ನೀಡಿದೆ.

     ಮಂಗಳಮುಖಿಯರಿಗಾಗಿ ಮಂಡಳಿ ಸ್ಥಾಪಿಸುವ ಭರವಸೆಯನ್ನು ಕಾಂಗ್ರೆಸ್ ನೀಡಿ ಪೌರ ಕಾರ್ಮಿಕರ ಖಾಯಂ ಹಾಗೂ ಪೌರಕಾರ್ಮಿಕರಿಗೆ 10 ಲಕ್ಷಗಳ ವಿಮಾ ಯೋಜನೆ ಭರವಸೆಯನ್ನು ನೀಡಿದೆ. ಬೀದಿ ಬದಿ ವ್ಯಾಪಾರಿಗಳಿಗೆ ಒಂದು ಬಾರಿ ನೆರವಿನ ರೂಪದಲ್ಲಿ 20 ಸಾವಿರ ಅನುದಾನ, ಆಟೋ ಮತ್ತು ಟ್ಯಾಕ್ಸಿ ಚಾಲಕರ ಮಂಡಳಿ ಸ್ಥಾಪನೆ, ಪ್ರವಾಸೋದ್ಯಮ ಅಭಿವೃದ್ಧಿ ನಿಟ್ಟಿನಲ್ಲಿ ಹೋಂಸ್ಟೇ ಮಾಲೀಕರಿಗೆ ಶೇ. 5ರ ಬಡ್ಡಿ ದರದಲ್ಲಿ 10 ಲಕ್ಷ ಸಾಲ.

    ಸಣ್ಣ ವ್ಯಾಪಾರಿಗಳಿಗೆ ಮತ್ತು ಅಂಗಡಿಗಳಿಗೆ ಕಡಿಮೆ ಬಡ್ಡಿ ದರದಲ್ಲಿಸಾಲ ನೀಡಲು 1 ಸಾವಿರ ಕೋಟಿ ರೂ ಕಲ್ಯಾಣ ನಿಧಿ ಸ್ಥಾಪನೆ ಸ್ವಯಂ ಉದ್ಯೋಗದಲ್ಲಿ ತೊಡಗುವ ಸಣ್ಣ ಹೋಟೆಲ್/ ಬೇಕರಿ/ಸಿಹಿ ತಿನಿಸು ಮಳಿಗೆ ಸ್ಥಾಪನೆಗೆ ಶೇ. 6ರಷ್ಟು ಬಡ್ಡಿ ದರದಲ್ಲಿ 10 ರೂ.ವರೆಗೆ ಸಾಲ ಭರವಸೆಯನ್ನು ಕಾಂಗ್ರೆಸ್ ನೀಡಿದೆ. ಗ್ರಾಮೀಣ ಪ್ರದೇಶದಲ್ಲಿ ಕೆಲಸ ಮಾಡುವ ದಾದಿಯರು, ಅಂಗನವಾಡಿ ಆಶಾಕಾರ್ಯಕರ್ತರಿಗೆ ಶೇ 50ರಷ್ಟು ಎಲೆಕ್ಟಿçಕ್ ವಾಹನ ಕೊಂಡುಕೊಳ್ಳಲು ಸಹಾಯ ಧನ, ಪತ್ರಕರ್ತರ ಕಲ್ಯಾಣ ನಿಧಿ ಸ್ಥಾಫನೆಗೆ 500 ಕೋಟಿ ಮೀಸಲು, ವಕೀಲರ ಸಂರಕ್ಷಣಾ ಕಾಯ್ದೆ ಜಾರಿ ಭರವಸೆಯನ್ನೂ ನೀಡಿದೆ.

ಉದ್ಯೋಗ ಭರ್ತಿ

    1 ವರ್ಷದಲ್ಲಿ ಸರ್ಕಾರದ 2.5 ಲಕ್ಷಗಳ ಹುದ್ದೆಗಳ ಭರ್ತಿ, ಭಾಷೆ, ಸಾಹಿತ್ಯ, ಸಂಪ್ರದಾಯ ಮತ್ತು ಸಂಸ್ಕೃತಿಗೆ ಸಂಬಂಧೀಸಿದಂತೆ ಹಲವು ಯೋಜನೆಗಳ ಜಾರಿ ಭರವಸೆಯನ್ನೂ ಕಾಂಗ್ರೆಸ್ ನೀಡಿದೆ.

ಅರ್ಚಕರ ಗೌರವ ಧನ ಏರಿಕೆ

    ರಾಜ್ಯದ ಎಲ್ಲ ದೇವಸ್ಥಾನ ಮಠಗಳ ನವೀಕರಣಕ್ಕೆ 1 ಸಾವಿರ ಕೋಟಿ ಮೀಸಲು 60 ವರ್ಷ ಮೀರಿದ ಅರ್ಚಕರಿಗೆ ಮಾಸಿಕ 5 ಸಾವಿರ ಗೌರವ ಧನ, ಗ್ರಾಮಮಟ್ಟದಲ್ಲಿ ನಡೆಯುವ ಗ್ರಾಮದೇವತೆ ಮತ್ತು ತೇರುಗಳ ಹಬ್ಬಗಳಿಗೆ 20 ಸಾವಿರ ರೂ. ದೇಣಿಗೆ ನೀಡುವ ಭರವಸೆಯನ್ನೂ ನೀಡಿದೆ. ಹಾಗೆಯೇ ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ, ಮೈಸೂರು ಕರ್ನಾಟಕ ಮತ್ತು ಬೆಂಗಳೂರು ಅಭಿವೃದ್ಧಿಗೆ ಕಾಂಗ್ರೆಸ್ ಪಕ್ಷ ಹಲವು ಯೋಜನೆಗಳನ್ನು ಜಾರಿ ಮಾಡುವ ಭರವಸೆ ನೀಡಿದ್ದು, ಇಂದಿರಾ ಕ್ಯಾಂಟೀನ್‌ನನ್ನು ಪುನರ್ ಸ್ಥಾಪಿಸುವುದಾಗಿ ಹೇಳಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link