ಕಲಬುರಗಿ:
ನನ್ನನ್ನು ಸೋಲಿಸುವ ಉದ್ದೇಶದಿಂದ ಕಳೆದ ವಿಧಾನಸಭೆ ಚುನಾವಣೆಯ ಸಂದರ್ಭ ಮತದಾರರ ಪಟ್ಟಿಯಿಂದ 6,900 ಮತಗಳನ್ನು ಡಿಲೀಟ್ ಮಾಡಿಸಲಾಗಿದೆ ಎಂದು ಕಲಬುರಗಿ ಜಿಲ್ಲೆಯ ಆಳಂದ ಕ್ಷೇತ್ರದ ಕಾಂಗ್ರೆಸ್ ಶಾಸಕರಾದ ಬಿಆರ್ ಪಾಟೀಲ್ ಆರೋಪಿಸಿದ್ದಾರೆ. ಬೆಂಗಳೂರಿನಲ್ಲಿ ಮಹದೇವಪುರದಲ್ಲಿ ಕಳೆದ ಲೋಕಸಭೆ ಚುನಾವಣೆಯಲ್ಲಿ ಮತಗಳ್ಳತನ ನಡೆದಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗಂಭೀರವಾಗಿ ಆರೋಪಿಸಿದ್ದರು. ಇದೀಗ ಬಿಆರ್ ಪಾಟೀಲ್ ಸಹ ಸ್ಪೋಟಕ ಆರೋಪ ಮಾಡಿದ್ದಾರೆ.
ಕಲಬುರಗಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನನ್ನನ್ನು ಸೋಲಿಸುವ ಉದ್ದೇಶದಿಂದ ಮತಗಳ್ಳತನ ನಡೆದಿತ್ತು. ಕಳೆದ 2023ರ ವಿಧಾನಸಭಾ ಚುನಾವಣೆಯಲ್ಲಿ ನನ್ನ ಪರವಾಗಿದ್ದ 6,900 ಮತಗಳನ್ನು ಡಿಲೀಟ್ ಮಾಡಿದ್ದರು. ಈ ವಿಚಾರವಾಗಿ ದೂರು ಕೂಡ ದಾಖಲಾಗಿದೆ. ಆದರೆ ಚುನಾವಣಾ ಆಯೋಗ ತನಿಖೆಗೆ ಸಹಕಾರ ನೀಡುತ್ತಿಲ್ಲ ಎಂದರು.
ನಮ್ಮ ಕಾರ್ಯಕರ್ತರ ಹೆಸರು ಮತ ಪಟ್ಟಿಯಿಂದ ಬಿಟ್ಟು ಹೋದದ್ದು ಗೊತ್ತಾಯಿತು. ಸುಮಾರು ಜನರಿಂದ ಈ ರೀತಿ ಕಂಪ್ಲೇಂಟ್ ಬಂತು. ತಕ್ಷಣ ನಾನು ಮತ್ತು ಪ್ರಿಯಾಂಕ ಖರ್ಗೆ ಚುನಾವಣಾ ಆಯೋಗ ಭೇಟಿ ಮಾಡಿ ಪ್ರತಿಭಟನೆ ಮಾಡಿದ ಮೇಲೆ ಅದನ್ನು ಡಿಲೀಟ್ ಮಾಡುವುದನ್ನು ನಿಲ್ಲಿಸಿದರು. ರಾಹುಲ್ ಗಾಂಧಿಯವರು ಹೇಳಿದ್ದು ಮತಗಳ್ಳತನ ಅಭಿಯಾನಕ್ಕೆ ಇನ್ನೊಂದು ಉದಾಹರಣೆಯಾಗಿದೆ ಎಂದಿದ್ದಾರೆ.
ಇದರ ಹಿನ್ನೆಲೆಯಲ್ಲಿರುವ ಉದ್ದೇಶ ನನಗೆ ಬೇಕಾದಂತಹ ಮತದಾರರನ್ನು ಮತಪಟ್ಟಿಯಿಂದ ಡಿಲೀಟ್ ಮಾಡಿ ಚುನಾವಣೆ ಗೆಲ್ಲುವಂತಹ ತಂತ್ರಗಾರಿಕೆ ಅವತ್ತು ಆಗಿತ್ತು. ಆದರೆ ಅಂದಿನ ದಿನಗಳಲ್ಲಿ ನಾವು ಜಾಗೃತರಾದ ತಕ್ಷಣ ಇದರಲ್ಲಿ ನಾವು ಯಶಸ್ವಿಯಾಗಿದ್ದೇವೆ. ಇಲ್ಲವಾದರೆ ನಾನು ಚುನಾವಣೆಯಲ್ಲಿ ಸೋಲುತ್ತಿದ್ದೆ ಎಂದು ಆಳಂದ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿ ಆರ್ ಪಾಟೀಲ್ ಗಂಭೀರವಾದ ಆರೋಪ ಮಾಡಿದರು.








