ನವದೆಹಲಿ:
ಬಾಲಿವುಡ್ ಸಿನಿಮಾ ಇಂಡಸ್ಟ್ರಿಯಲ್ಲಿ ವಿವಾದಗಳಿಗೆ ಹೆಸರುವಾಸಿಯಾಗಿರುವ ನಟಿ ಕಂಗನಾ ರಣಾವತ್, ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಿಂದ ಬಿಜೆಪಿ ಪಕ್ಷದಿಂದ ಸ್ಪರ್ಧಿಸಿ ಸಂಸದೆಯಾಗಿ ಆಯ್ಕೆಯಾಗಿದ್ದಾರೆ. ಕಂಗನಾ ಅವರು ಚಿತ್ರರಂಗದಲ್ಲಿ ಕೇವಲ ನಟಿ ಮಾತ್ರವಲ್ಲ, ನಿರ್ಮಾಪಕಿ ಮತ್ತು ನಿರ್ದೇಶಕಿಯೂ .
ಪ್ರಧಾನಿ ಮೋದಿಯವರ ಕಲ್ಯಾಣ ಕಾರ್ಯಕ್ರಮಗಳಿಂದ ಆಕರ್ಷಿತರಾಗಿ ಬಿಜೆಪಿ ಸೇರಿ ಸಂಸದರಾಗಿ ಆಯ್ಕೆಯಾಗಿದ್ದಾರೆ. ಕೆಲವು ವಿಷಯಗಳ ಬಗ್ಗೆ ಆಗಾಗ ಕಂಗನಾ ಅವರು ವಿವಾದಾತ್ಮಕ ಕಾಮೆಂಟ್ಗಳನ್ನು ಮಾಡುವುದು ನಿಮಗೆಲ್ಲರಿಗೂ ತಿಳಿದೇ ಇದೆ. ಚುನಾವಣೆಯಲ್ಲಿ ಗೆದ್ದ ಬಳಿಕ ಕಂಗನಾ ರಣಾವತ್, ದೆಹಲಿಗೆ ತೆರಳಲು ಚಂಡೀಗಢ ವಿಮಾನ ನಿಲ್ದಾಣಕ್ಕೆ ತೆರಳಿದಾಗ, ಅಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿಐಎಸ್ಎಫ್ ಮಹಿಳಾ ಕಾನ್ಸ್ಟೇಬಲ್ ಕುಲ್ವಿಂದರ್ ಕೌರ್, ಕಂಗನಾ ಕೆನ್ನೆಗೆ ಬಾರಿಸಿದ್ದರು.
ಈ ಘಟನೆ ಬಳಿಕ ಕುಲ್ವಿಂದರ್ ಹೆಸರು ದೇಶಾದ್ಯಂತ ಜನಪ್ರಿಯವಾಯಿತು. ಸಂಸದರೊಬ್ಬರಿಗೆ ಹೊಡೆದಿದ್ದಕ್ಕಾಗಿ ಹರಿಯಾಣ ಸರ್ಕಾರ ಆಕೆಯನ್ನು ಕರ್ತವ್ಯದಿಂದ ಅಮಾನತುಗೊಳಿಸಿ, ಬಂಧನ ಸಹ ಮಾಡಿತ್ತು. ಆದರೆ, ಪಂಜಾಬ್ ರೈತರು ಕುಲ್ವಿಂದರ್ ಕೌರ್ ಬೆಂಬಲಕ್ಕೆ ನಿಂತರು.
ಕಂಗನಾಗೆ ಕಪಾಳಮೋಕ್ಷ ಮಾಡಿದ್ದನ್ನು ಸಮರ್ಥಿಸಿಕೊಂಡು ಕುಲ್ವಿಂದರ್ ಕೌರ್, ತಾನು ಮಾಡಿದ್ದು ಒಳ್ಳೆಯ ಕೆಲಸ ಎಂದರು. ಮೂರು ವರ್ಷಗಳ ಹಿಂದೆ ಕೃಷಿ ಕಾನೂನುಗಳ ವಿರುದ್ಧ ರೈತರು ಪ್ರತಿಭಟನೆ ಮಾಡುವಾಗ ಕಂಗನಾ ಅನುಚಿತ ಕಾಮೆಂಟ್ಗಳನ್ನು ಮಾಡಿದ್ದರು. ಆ ಆಂದೋಲನದಲ್ಲಿ ನನ್ನ ತಾಯಿ ಕೂಡ ಭಾಗವಹಿಸಿದ್ದರು. ರೈತರ ಪ್ರತಿಭಟನೆಯನ್ನು ಅವಮಾನಿಸಿದ್ದಕ್ಕೆ ನಾನು ಕಂಗನಾಗೆ ಹೊಡೆದೆ ಎಂದು ಸಿಐಎಸ್ಎಫ್ ಮಹಿಳಾ ಕಾನ್ಸ್ಟೆಬಲ್ ಕೌರ್ ಸಮರ್ಥನೆ ನೀಡಿದ್ದರು.
ಕಪಾಳಮೋಕ್ಷ ಘಟನೆಯ ತನಿಖೆಗೆ ವಿಶೇಷ ತಂಡ ರಚಿಸಲಾಗಿತ್ತು. ಎಸ್ಐಟಿ ತನಿಖೆ ಪೂರ್ಣಗೊಳಿಸಿ ಅಧಿಕಾರಿಗಳಿಗೆ ವರದಿ ಸಲ್ಲಿಸಿದೆ. ಈ ಘಟನೆಯಲ್ಲಿ ಕುಲ್ವಿಂದರ್ ಅವರಿಗೆ ಚಿತ್ರರಂಗದ ಗಣ್ಯರು, ಸಾಮಾಜಿಕ ಮುಖಂಡರು ಮತ್ತು ರೈತರಿಂದ ದೊಡ್ಡ ಬೆಂಬಲ ಸಿಕ್ಕಿತು. ಬಾಲಿವುಡ್ ನಿರ್ದೇಶಕ ವಿಶಾಲ್ ದಾದ್ಲಾನಿ ಕೆಲಸ ನೀಡುವುದಾಗಿ ಘೋಷಿಸಿದ್ದರು.
ಇದೀಗ ಮಹಿಳಾ ಪೇದೆ, ಕಂಗನಾ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಕುಲ್ವಿಂದರ್ ಕೌರ್ ಅವರ ಅಮಾನತು ಆದೇಶವನ್ನು ಹಿಂಪಡೆಯಲಾಗಿದೆ. ಆಕೆ ಮರಳಿ ಕೆಲಸಕ್ಕೆ ಸೇರಿದ್ದಾರೆ. ಆದರೆ, ಕುಲ್ವಿಂದರ್ಗೆ ಇಲ್ಲೊಂದು ಟ್ವಿಸ್ಟ್ ಕಾದಿತ್ತು. ಅದೇನೆಂದರೆ, ಉನ್ನತ ಅಧಿಕಾರಿಗಳು ಆಕೆಯನ್ನು ವರ್ಗಾವಣೆ ಮಾಡಿದ್ದಾರೆ. ಚಂಡೀಗಢದಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ. ಇದರಿಂದ ಕುಲ್ವಿಂದರ್ ಅವರು ಚಂಡೀಗಢ ಬಿಟ್ಟು ದೂರದ ಬೆಂಗಳೂರಿಗೆ ಬರಬೇಕಾದ ಅನಿವಾರ್ಯತೆ ಎದುರಾಗಿದೆ.