ತುರುವೇಕೆರೆ:
ಜಾತ್ರೆಯಲ್ಲಿ ಕೋವಿಡ್ ಮಾರ್ಗಸೂಚಿ : ರೈತರಿಗೆ ಅರಿವು
ತಾಲ್ಲೂಕಿನ ಚಂಡೂರುಪುರ ಗ್ರಾಮದಲ್ಲಿ ನಡೆಯುವ ಶ್ರೀ ಶಂಭುಲಿಂಗೇಶ್ವರ ಸ್ವಾಮಿಯ ದನಗಳ ಜಾತ್ರೆಯು ದಿನದಿಂದ ದಿನಕ್ಕೆ ಸೊಗಡನ್ನು ಕಳೆದುಕೊಳ್ಳುತ್ತಿದೆ. ಪ್ರಸ್ತುತ ಕೊರೋನಾ ಸಂದರ್ಭದಲ್ಲಿಯೂ ದುಬಾರಿ ಬೆಲೆಯ, ಗುಣಮಟ್ಟದ ರಾಸುಗಳಿಂದ ಜಾತ್ರೆ ರೈತರ ಗಮನ ಸೆಳೆಯುತ್ತಿದ್ದರೂ ತನ್ನ ಮೊದಲಿನ ಆಕರ್ಷಣೆಯನ್ನು ಕಳೆದುಕೊಂಡು ನೀರಸವಾಗಿದೆ.
ವಿವಿಧ ಜಿಲ್ಲೆಗಳ ರೈತರು ಭಾಗಿ :
ಜಿಲ್ಲೆಯಲ್ಲಿ ಹೆಚ್ಚು ಪ್ರಸಿದ್ಧಿ ಪಡೆದಿರುವ ಪುರದ ಜಾತ್ರೆಯೂ ಕೊರೊನಾಕ್ಕೂ ಮೊದಲು 7 ದಿನ ನಡೆಯುತ್ತಿತ್ತು. ವಿಶಾಲ ಜಾತ್ರಾ ಮೈದಾನದಲ್ಲಿ ಹಳ್ಳಿಕಾರ್, ಅಮೃತಮಹಲ್ ಸೇರಿದಂತೆ ಹಲವಾರು ತಳಿಯ ಎತ್ತುಗಳು, ಅಪ್ಪಟ ನಾಟಿ ಹಸುಗಳು ಜಾತ್ರೆಯಲ್ಲಿ ಮಾರಾಟವಾಗುತ್ತಿದ್ದವು.
ಪ್ರತಿ ವರ್ಷ ಜನವರಿಯಲ್ಲಿ ನಡೆಯುವ ಜಾತ್ರೆಗೆ ಚಿತ್ರದುರ್ಗ, ಹಾವೇರಿ, ದಾವಣಗೆರೆ, ತುಮಕೂರು, ಮಂಡ್ಯ, ದೊಡ್ಡಬಳ್ಳಾಪುರ, ಕೋಲಾರ ಸೇರಿದಂತೆ ಹೊರ ರಾಜ್ಯಗಳಿಂದಲೂ ರಾಸುಗಳೊಂದಿಗೆ ರೈತರು ಮಾರಾಟಕ್ಕೆ ಆಗಮಿಸುತ್ತಿದ್ದರು. ಜಾತ್ರೆಯಲ್ಲಿ ಹಾಲು ಕೊಡುವ ಹಸುಗಳು ಹಾಗೂ ಹೊಲ ಉಳುವ ಎತ್ತುಗಳಿಗೆ ಬೇಡಿಕೆ ಹೆಚ್ಚಿರುತ್ತದೆ.
ಸುಮಾರು 50 ಸಾವಿರದಿಂದ 3 ಲಕ್ಷ ರೂ. ವರಗೆ ದನಗಳು ಇಲ್ಲಿ ಮಾರಾಟವಾಗುತ್ತವೆ. ರೈತರು, ದಲ್ಲಾಳಿಗಳು ದನಗಳ ಮಾರಾಟ ಹಾಗೂ ಖರೀದಿಯಲ್ಲಿ ಭಾಗವಹಿಸುತ್ತಾರೆ. ಟವಲ್ ಒಳಗೆ ರೈತರ ಕೈ ಹಿಡಿದು ರಾಸುಗಳ ಬೆಲೆ ನಿಗದಿ ಮಾಡುವ ದಲ್ಲಾಳಿಗಳ ಕಲೆ ಬಹಳ ಆಶ್ಚರ್ಯವಾಗಿರುತ್ತದೆ.
ಸ್ಥಳೀಯ ಗ್ರಾಪಂನಿಂದ ಸೌಲಭ್ಯ :
ಕೊರೋನಾ ಮಾರ್ಗಸೂಚಿಯಂತೆ ಶ್ರೀ ಶಂಭುಲಿಂಗೇಶ್ವರ ಸ್ವಾಮಿಗೆ ಬೆಳಗ್ಗೆ, ಸಂಜೆ ಪೂಜೆಗಳು ನಡೆಯುತ್ತಿದ್ದು, ದೇವರ ದರ್ಶನಕ್ಕೆ ಹಾಗೂ ಪೂಜೆಗೆ ಭಕ್ತರಿಗೆ ಅವಕಾಶ ನಿರಾಕರಿಸಲಾಗಿದೆ.
ಈ ವರ್ಷ ದೇವಸ್ಥಾನದ ಆವರಣದಲ್ಲಿ ಬೃಹತ್ ಶಿವನ ಪ್ರತಿಮೆ ನಿರ್ಮಿಸಲಾಗಿದ್ದು, ಸಂಕ್ರಾತಿಯಂದು ಉದ್ಘಾಟನೆಯಾಗಬೇಕಿತ್ತು ಆದರೆ ಕೊರೋನಾ ಮೂರನೆ ಅಲೆಯಿಂದಾಗಿ ಜಾತ್ರಾ ಕಾರ್ಯಕ್ರಮಗಳು ರದ್ದಾಗಿದ್ದು, ಕೇವಲ ರಾಸುಗಳಷ್ಟೆ ವಿಶೇಷ ಅಕರ್ಷಣೆಯಾಗಿವೆÉ. ಜಾತ್ರೆಯ ಬಯಲು ಆವರಣವು ಮರ-ಗಿಡಗಳಿಂದ ಕೂಡಿದ್ದು, ನೆರಳಿನ ಸೌಕರ್ಯವಿದೆ. ದನಕರುಗಳಿಗೆ ಕುಡಿಯುವ ನೀರು, ಬೆಳಕು ಸೇರಿದಂತೆ ಮೂಲಭೂತ ಸೌಕರ್ಯವನ್ನು ಸ್ಥಳೀಯ ಗ್ರಾಪಂ ಕಲ್ಪಿಸಿಕೊಟ್ಟಿದೆ.
ಸಾವಿರಾರು ರಾಸುಗಳು, ಕೊಳ್ಳುವÀ ಹಾಗೂ ಮಾರುವ ರೈತರು, ಅಪಾರ ಭಕ್ತರು ಪಾಲ್ಗೊಳ್ಳುತ್ತಿದ್ದ ಜಾತ್ರೆಯು ಈ ಬಾರಿ ಕೊರೋನಾದಿಂದಾಗಿ ಕಳೆಗುಂದಿದ್ದು ತನ್ನ ಮೊದಲಿನ ಆಕರ್ಷಣೆಯನ್ನು ಕಳೆದುಕೊಂಡಿದೆ.
ಕಮಿಟಿಯಿಂದ ಆತಂಕ ದೂರ :
ಈ ಹಿಂದೆ ಸಂಕ್ರಾಂತ್ರಿ ಹಬ್ಬದ ನಂತರ ಪ್ರಾರಂಭವಾಗುತ್ತಿದ್ದ ಪುರದ ಜಾತ್ರೆ, ಇತ್ತಿಚೆಗೆ ಜ.5 ರಂದು ಪ್ರಾರಂಭವಾಗಿ ಜ. 12 ಕ್ಕೂ ಮೊದಲು ಮುಕ್ತಾಯ ಗೊಳ್ಳುತ್ತದೆ. ಪ್ರತಿ ವರ್ಷ ಜನವರಿಯಲ್ಲಿ ನಡೆಯುವ ಜಾತ್ರೆಗೆ ಈ ವರ್ಷ ಕೊರೋನ ಮೂರನೆ ಅಲೆಯಿಂದಾಗಿ ಸರ್ಕಾರ ವಾರಂತ್ಯ ಕಫ್ರ್ಯೂ ಜಾರಿ ಮಾಡಿರುವುದರಿಂದ ಈ ಸಲ ಜಾತ್ರೆ ನಡೆಯುವ ಸಾಧ್ಯತೆ ಕಡಿಮೆ ಎಂದು ರೈತರು ಆತಂಕದಲ್ಲಿದ್ದರು.
ಆದರೇ ಜಾತ್ರ ಕಮಿಟಿಯವರು ಮುಂಜಾಗೃತೆ, ಕೋವಿಡ್ ನಿಯಮ ಪಾಲಿಸಿ ಜಾತ್ರೆ ನಡೆಸಲು ಅನುವು ಮಾಡಿಕೊಟಿದ್ದಾರೆ. ಜಾತ್ರೆಯಲ್ಲಿ ಕೋವಿಡ್ ಮಾರ್ಗ ಸೂಚಿ ಕುರಿತು ರೈತರಿಗೆ ಅರಿವು ಮೂಡಿಸಿದ್ದು, ಗುಂಪು ಸೇರದಂತೆ, ಮಾಸ್ಕ್ ಹಾಕಿ ಅಂತರ ಕಾಯ್ದುಕೊಳ್ಳುವಂತೆ ತಿಳಿಸಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
