ಕೊಚ್ಚಿ:
ಪ್ಯಾನ್ ಇಂಡಿಯಾ ಸ್ಟಾರ್ ನಟ, ನಿರ್ಮಾಪಕರಾಗಿರುವ ದುಲ್ಕರ್ ಸಲ್ಮಾನ್, ಮೊಮ್ಮುಟ್ಟಿ ಮತ್ತು ಪೃಥ್ವಿರಾಜ್ ಸುಕುಮಾರನ್ಗೆ ಮತ್ತೆ ಸಂಕಷ್ಟ ಎದುರಾಗಿದೆ. ಕೆಲ ದಿನಗಳ ಹಿಂದೆಯಷ್ಟೇ ಕಂದಾಯ ಗುಪ್ತಚರ ಮತ್ತು ಕಸ್ಟಮ್ಸ್ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದ್ದರು. ಇದೀಗ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ಮಾಡಿ ಶೋಧ ಕಾರ್ಯ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಕಡವಂತ್ರದಲ್ಲಿರುವ ಮಮ್ಮುಟ್ಟಿ ಅವರ ಮನೆ ಮೇಲೂ ದಾಳಿ ನಡೆಸಲಾಗುತ್ತಿದೆ. ಏಕಕಾಲದಲ್ಲಿ 17 ಸ್ಥಳಗಳಲ್ಲಿ ಶೋಧ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ.
ಭೂತಾನ್/ನೇಪಾಳ ಮಾರ್ಗಗಳ ಮೂಲಕ ಭಾರತಕ್ಕೆ ಲ್ಯಾಂಡ್ ಕ್ರೂಸರ್ ಮತ್ತು ಡಿಫೆಂಡರ್ನಂತಹ ಐಷಾರಾಮಿ ಕಾರುಗಳ ಅಕ್ರಮ ಆಮದು ಮತ್ತು ನೋಂದಣಿಯಲ್ಲಿ ಭಾಗಿಯಾಗಿರುವ ಸಿಂಡಿಕೇಟ್ ಬಗ್ಗೆ ಮಾಹಿತಿಯ ಆಧಾರದ ಮೇಲೆ ಈ ದಾಳಿ ನಡೆಸಲಾಗಿದೆ ಎಂದು ಇಡಿ ತಿಳಿಸಿದೆ. ಈ ವಂಚನೆಯ ಜಾಲವು ವಾಹನಗಳನ್ನು ಮೊದಲು ಹಿಮಾಚಲ ಪ್ರದೇಶದಲ್ಲಿ ನೋಂದಾಯಿಸಿ, ನಂತರ ಅವುಗಳನ್ನು ಭಾರತದ ವಿವಿಧ ಭಾಗಗಳಿಗೆ ಸಾಗಿಸುವುದಾಗಿದೆ. ಆ ಕಾರುಗಳನ್ನು ಭಾರಿ ದೊಡ್ಡ ಮೊತ್ತಕ್ಕೆ ಸಿನಿಮಾ ಸೆಲೆಬ್ರಿಟಿಗಳು, ಉದ್ಯಮಿಗಳಿಗೆ ಮಾರಾಟ ಮಾಡಲಾಗುತ್ತಿದೆ. ಅದರಲ್ಲೂ ಕೇರಳದಲ್ಲಿಯೇ ಇಂಥಹಾ ಕಾರುಗಳ ಮಾರಾಟ ಹೆಚ್ಚಾಗಿದೆ ಎನ್ನಲಾಗುತ್ತಿದೆ.
ಎರ್ನಾಕುಲಂ, ತ್ರಿಶೂರ್, ಕೋಝಿಕ್ಕೋಡ್, ಮಲಪ್ಪುರಂ, ಕೊಟ್ಟಾಯಂ ಮತ್ತು ಕೊಯಮತ್ತೂರಿನಲ್ಲಿ ತಪಾಸಣೆ ನಡೆಸಲಾಯಿತು. ಚಲನಚಿತ್ರ ತಾರೆಯರಾದ ಪೃಥ್ವಿರಾಜ್, ದುಲ್ಕರ್ ಸಲ್ಮಾನ್ ಮತ್ತು ಅಮಿತ್ ಚಕ್ಕಲಕ್ಕಲ್ ಅವರ ನಿವಾಸಗಳು ಮತ್ತು ಸಂಸ್ಥೆಗಳು, ಕೆಲವು ವಾಹನ ಮಾಲೀಕರು, ಆಟೋ ಕಾರ್ಯಾಗಾರಗಳು ಮತ್ತು ವ್ಯಾಪಾರಿಗಳು ಸೇರಿದಂತೆ 17 ಸ್ಥಳಗಳಲ್ಲಿ ತಪಾಸಣೆ ನಡೆಸಲಾಗಿದೆ. ದುಲ್ಕರ್ ಸಲ್ಮಾನ್ ಬಳಿ ಹಲವು ಕಾರುಗಳಿದ್ದು, ಅದರಲ್ಲಿ ವಿದೇಶಿ ಕಾರುಗಳೂ ಸೇರಿವೆ. ಪೃಥ್ವಿರಾಜ್ ಸುಕುಮಾರನ್ ಸಹ ಹಲವಾರು ವಿದೇಶಿ ಕಾರುಗಳನ್ನು ಹೊಂದಿದ್ದಾರೆ. ಅವರ ಸಂಗ್ರಹದಲ್ಲಿ ಆಸ್ಟಿನ್ ಮಾರ್ಟಿನ್ ಕಾರು ಸಹ ಇದೆ. ಕೇರಳದ ಕೊಚ್ಚಿಯ ತೇವರದಲ್ಲಿ ಪೃಥ್ವಿರಾಜ್ ಸುಕುಮಾರನ್ ಮನೆಯಿದೆ.








