ತುಮಕೂರು
ಸ್ಪರ್ಧಾ ಕಣದಲ್ಲಿ 7ಮಂದಿ| ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಮಧ್ಯೆ ನೇರಾ ಹಣಾಹಣಿ
ವಿಧಾನಪರಿಷತ್ ತುಮಕೂರು ಸ್ಥಳೀಯ ಸಂಸ್ಥೆಗಳ ಕ್ಷೇತ್ರಕ್ಕೆ ಇಂದು ಬೆಳಿಗ್ಗೆ 8 ರಿಂದ 4ರವರೆಗೆ ಮತದಾನ ನಡೆಯಲಿದ್ದು, 338 ಮತಕೇಂದ್ರ ಸ್ಥಾಪನೆಯೊಂದಿಗೆ ಜಿಲ್ಲಾಡಳಿತ ನಿಷ್ಪಕ್ಷಪಾತ ಮತದಾನಕ್ಕೆ ಅಗತ್ಯ ತಯಾರಿ ನಡೆಸಿದೆ.
ಕಾಂಗ್ರೆಸ್ನಿಂದ ರಾಜೇಂದ್ರ ರಾಜಣ್ಣ, ಜೆಡಿಎಸ್ನಿಂದ ಆರ್.ಅನಿಲ್ಕುಮಾರ್, ಬಿಜೆಪಿಯಿಂದ ಎನ್. ಲೋಕೇಶ್ಗೌಡ, ಜೆಡಿಯು ಬೆಂಬಲಿತ ಕೆಆರ್ಎಸ್ ಪಕ್ಷದಿಂದ ಕೆ.ಎಸ್.ಗಜೇಂದ್ರಕುಮಾರ್, ಪಕ್ಷೇತರರಾಗಿ ಆರ್.ಜಯರಾಮಯ್ಯ, ಆರ್.ಎ.ಪ್ರಕಾಶ್ ಹಾಗೂ ಎಂ.ಎಸ್.ವಿಜಯಪ್ರಕಾಶ್ ಕಣಕ್ಕಿಳಿದಿದ್ದು, ಬ್ಯಾಲೆಟ್ಪೇಪರ್ನಲ್ಲಿ ಅಭ್ಯರ್ಥಿ ಹೆಸರಿನ ಮುಂದೆ ಅಂಕಿಗಳಲ್ಲಿ ಪ್ರಾಶಸ್ತ್ಯ ಮತ ದಾಖಲಿಸುವ ಮೂಲಕ ಮತ ಚಲಾಯಿಸಲು ಅವಕಾಶ ಕಲ್ಪಿಸಲಾಗಿದೆ.
ಮತದಾನಕ್ಕಾಗಿ ಜಿಲ್ಲೆಯಲ್ಲಿ ಒಟ್ಟು 338 ಮತಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಈ ಪೈಕಿ 194 ಸಾಮಾನ್ಯ, 95 ಸೂಕ್ಷ್ಮ ಹಾಗೂ 49 ಅತಿಸೂಕ್ಷ್ಮ ಮತಕೇಂದ್ರಗಳೆಂದು ಗುರುತಿಸಲಾಗಿದೆ. ಸೂಕ್ಷ್ಮ ಹಾಗೂ ಅತಿಸೂಕ್ಷ್ಮ ಮತ ಕೇಂದ್ರಗಳಿಗೆ ಹೆಚ್ಚಿನ ಭದ್ರತೆ ಒದಗಿಸಲು ಪೊಲೀಸ್ ಇಲಾಖೆಗೆ ತಿಳಿಸಲಾಗಿದೆ. ಎಲ್ಲಾ ಕೇಂದ್ರಗಳಲ್ಲಿಯೂ ಮತದಾನದ ವೇಳೆ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಮುಂಜಾಗ್ರತಾ ಕ್ರಮವಹಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಮೊದಲ ಡೋಸ್ ಖಚಿತತಗೆ ಸೂಚನೆ:
ಕೋವಿಡ್ ನಿಯಮಾವಳಿಗಳ£ ಮತಕೇಂದ್ರಗಳನ್ನು ಸ್ಯಾನಿಟೈಸ್ ಮಾಡಿಸಲಾಗಿದ್ದು,. ಮತದಾನ ಕೇಂದ್ರದ ಒಳಗೆ ಮತದಾರರು ಬರುವಾಗ ಕಡ್ಡಾಯವಾಗಿ ಥರ್ಮಲ್ ಸ್ಕ್ರೀನಿಂಗ್ಗೆ ಒಳಪಡಿಸಿ, ಮಾಸ್ಕ್ ಧರಿಸಿರುವ ಬಗ್ಗೆ ಖಚಿತಪಡಿಸಿಕೊಳ್ಳಲು ಆಶಾ ಕಾರ್ಯ ಕರ್ತೆಯರು/ ಎಎನ್ಎಂಗಳನ್ನು ನಿಯೋಜಿಸಲಾಗಿದೆ ಎಂದರಲ್ಲದೆ ಮತಚಲಾವಣೆಗೆ ಬರುವ ಎಲ್ಲಾ ಮತದಾರರು ಕಡ್ಡಾಯವಾಗಿ ಕನಿಷ್ಟ ಮೊದಲ ಡೋಸ್ ಲಸಿಕೆ ಪಡೆದಿರುವ ಬಗ್ಗೆ ಖಚಿತಪಡಿಸಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಶಾಂತಿಯುತ ಮತದಾನಕ್ಕೆ ವ್ಯವಸ್ಥೆ:
ವಿಧಾನ ಪರಿಷತ್ ಚುನಾವಣೆಗೆ ಸಂಬಂಧಿಸಿದಂತೆ ಎಲ್ಲಾ 338 ಮತ ಕೇಂದ್ರಗಳಲ್ಲಿಯೂ ಶಾಂತಿಯುತ ಮತದಾನಕ್ಕಾಗಿ ಸುಮಾರು 600 ಮಂದಿ ಪೊಲೀಸ್ ಸಿಬ್ಬಂದಿಯನ್ನು ನೇಮಕ ಮಾಡಲಾಗಿದ್ದು, ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಈಗಾಗಲೇ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಥಾಧಿಕಾರಿ ರಾಹುಲ್ ಕುಮಾರ್ ಷಹಪುರವಾಡ್ ತಿಳಿಸಿದ್ದಾರೆ.
ಕಡೇ ಗಳಿಗೆಯ ಮತ ಓಲೈಕೆಗೆ ಪೈಪೋಟಿ
ಚುನಾವಣೆಗೆ ಮುನ್ನಾ ದಿನವಾದ ಗುರುವಾರ ಜಿಲ್ಲೆಯಾದ್ಯಂತ ಹಣ ಹಂಚಿಕೆಯದ್ದೇ ದೊಡ್ಡ ಚರ್ಚೆಯಾಗಿದ್ದು, ಮಧ್ಯಾಹ್ನದವರೆಗೂ ಜೆಡಿಎಸ್ ಅಭ್ಯರ್ಥಿ ಫೋನ್ಗೆ ಸಿಗುತ್ತಿಲ್ಲವೆಂಬ ಸುದ್ದಿ ಬಿಸಿ ಬಿಸಿ ಚರ್ಚೆಗೆ ಗ್ರಾಸವೊದಗಿಸಿತಲ್ಲದೆ ನಾನಾ ಅನುಮಾನಗಳಿಗೆ ಎಡೆ ಮಾಡಿತು. ಕಾಂಗ್ರೆಸ್ ಅಭ್ಯರ್ಥಿಗಿಂತ ಜೆಡಿಎಸ್-ಬಿಜೆಪಿಯವರು ಮತದಾರರನ್ನು ಓಲೈಕೆ ಮಾಡಲು ಪೈಪೋಟಿ ನಡೆಸಿದ್ದಾರೆಂಬ ವಿಷಯ ಚುನಾವಣಾ ಅಖಾಡದಲ್ಲಿ ಸಂಚಲನ ಮೂಡಿಸಿದ್ದು, ಪ್ರಥಮ ಪ್ರಾಶಸ್ತ್ಯ ಮತದೊಟ್ಟಿಗೆ ದ್ವಿತೀಯ ಪ್ರಾಶಸ್ತ್ಯ ಮತಗಳಿಕೆಯತ್ತಲೂ ಪಕ್ಷಾತೀತವಾಗಿ ಸದಸ್ಯರ ಬೆಂಬಲಗಳಿಸಲು ಮುಂದಾಗಿದ್ದುದು ಕಂಡುಬಂದಿತು.
ಪ್ರಸ್ತುತ ಚುನಾವಣೆಯಲ್ಲಿ 2623 ಪುರುಷರು ಹಾಗೂ 2936 ಮಹಿಳೆಯರು ಸೇರಿದಂತೆ ಒಟ್ಟು 5559 ಮತದಾರರು ಮತದಾನ ಮಾಡಲಿದ್ದು, ಚುನಾವಣಾ ಆಯೋಗದ ನಿರ್ದೇಶನದಂತೆ ಚುನಾವಣೆಯನ್ನು ಶಾಂತಿಯುತವಾಗಿ ನಡೆಸಲು ಪ್ರತಿ ಮತಕೇಂದ್ರಕ್ಕೂ ಮತಗಟ್ಟೆ ಅಧಿಕಾರಿ, ಸಹಾಯಕ ಮತಗಟ್ಟೆ ಅಧಿಕಾರಿ, ಮತದಾರರನ್ನು ಗುರುತು ಹಚ್ಚುವ ಅಧಿಕಾರಿಗಳು ಹಾಗೂ ವೀಕ್ಷಕರು ಸೇರಿದಂತೆ ಒಟ್ಟು 1200 ಅಧಿಕಾರಿ/ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದೆ.
– ವೈ.ಎಸ್.ಪಾಟೀಲ್, ಜಿಲ್ಲಾ ಚುನಾವಣಾಧಿಕ
ಚುನಾವಣೆ ಪ್ರಮುಖಾಂಶಗಳು
1.ಸ್ಪರ್ಧಾ ಕಣದಲ್ಲಿ 7 ಅಭ್ಯರ್ಥಿಗಳು
2.338 ಮತದಾನ ಕೇಂದ್ರಗಳ ಸ್ಥಾಪನೆ
3.95ಸೂಕ್ಷ್ಮ, 49 ಅತಿಸೂಕ್ಷ್ಮ ಮತಗಟ್ಟೆ
4. 5559 ಒಟ್ಟು ಮತದಾರರು
5. 600 ಪೊಲೀಸ್, 1200 ಮತಗಟ್ಟೆ ಸಿಬ್ಬಂದಿ ನಿಯೋಜನೆ
6. ಯಾವುದೇ ಶಾಹಿಹಾಕೋಲ್ಲ, ನೋಟಾ ಇಲ್ಲ
7. ಮತಕೇಂದ್ರ ಪ್ರವೇಶಕ್ಕೆ ಮಾಸ್ಕ್ ಥರ್ಮಲ್ ಸ್ಕ್ರೀನಿಂಗ್ ಕಡ್ಡಾಯ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
