ಸಿ ಎಂ ಇಬ್ರಾಹೀಂ ಉಚ್ಚಾಟನೆ : ಅರ್ಜಿ ವಜಾಗೊಳಿಸಿದ ಕೋರ್ಟ್

ಬೆಂಗಳೂರು:

     ತಮ್ಮನ್ನು ಪಕ್ಷದಿಂದ ಅಮಾನತುಗೊಳಿಸಿ ಉಚ್ಚಾಟನೆ ಮಾಡಿರುವ ಜೆಡಿಎಸ್ ನಿರ್ಧಾರದ ವಿರುದ್ಧ ರಾಜಕಾರಣಿ ಸಿ ಎಂ ಇಬ್ರಾಹಿಂ ಅವರು ಸಲ್ಲಿಸಿದ್ದ ಮೊಕದ್ದಮೆಯನ್ನು ನಗರದ ನ್ಯಾಯಾಲಯ ತಿರಸ್ಕರಿಸಿದೆ.

    ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಸ್ಥಾನದಿಂದ ತಮ್ಮನ್ನು ಉಚ್ಚಾಟನೆ ಮಾಡಿರುವ ಕ್ರಮ ಪ್ರಶ್ನಿಸಿ, ಸಿಎಂ ಇಬ್ರಾಹಿಂ ಅವರು ಸಲ್ಲಿಸಿದ್ದ ಅರ್ಜಿಯನ್ನು ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ವಜಾ ಮಾಡಿದೆ. ಪಕ್ಷ ವಿರೋಧಿ ಚಟುವಟಿಕೆಗಳ ಹಿನ್ನೆಲೆಯಲ್ಲಿ ಜೆಡಿಎಸ್‌ ಪಕ್ಷದಿಂದ ಇಬ್ರಾಹಿಂ ಅವರನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಎಚ್.ಡಿ.ದೇವೇಗೌಡ ಅವರು ಉಚ್ಚಾಟನೆ ಮಾಡಿದ್ದರು.

    ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಎಚ್‌.ಡಿ.ದೇವೇಗೌಡ ಅವರು ನಿಯಮಗಳಿಗೆ ವಿರುದ್ಧವಾಗಿ ತಮ್ಮನ್ನು ರಾಜ್ಯಾಧ್ಯಕ್ಷ ಹುದ್ದೆಯಿಂದ ವಜಾ ಮಾಡಿದ್ದರು ಎಂದು ಇಬ್ರಾಹಿಂ ಅವರು ದೂರಿದ್ದರು. ಆದರೆ, ಅರ್ಜಿಯನ್ನು ಕೋರ್ಟ್‌ ಶುಕ್ರವಾರ ವಜಾ ಮಾಡಿದೆ.

    ಇದಕ್ಕೂ ಮೊದಲು, ಜನವರಿ 2024 ರಲ್ಲಿ, ಸಿಟಿ ಸಿವಿಲ್ ನ್ಯಾಯಾಲಯವು ಪಕ್ಷವು ಸಲ್ಲಿಸಿದ ಮೊಕದ್ದಮೆಯಲ್ಲಿ ಸಿಎಂ ಇಬ್ರಾಹಿಂ ಮತ್ತು ಇತರರು ಜೆಡಿಎಸ್‌ನ ಹೆಸರು, ಲೋಗೋ, ಚಿಹ್ನೆ, ಲೆಟರ್‌ಹೆಡ್ ಇತ್ಯಾದಿಗಳನ್ನು ಬಳಸದಂತೆ ನಿರ್ಬಂಧಿಸಿತ್ತು.

    ಇಬ್ರಾಹಿಂ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದರು ಎಂಬುದು ಪಕ್ಷದ ಆರೋಪವಾಗಿತ್ತು. ಅವರು ಅಕ್ಟೋಬರ್ 16, 2023 ರಂದು ಸಮಾನಾಂತರ ಸಭೆಗಳನ್ನು ನಡೆಸಿದರು ಮತ್ತು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದೊಂದಿಗೆ ಜೆಡಿಎಸ್ ಮೈತ್ರಿಯನ್ನು ವಿರೋಧಿಸಿದರು.

Recent Articles

spot_img

Related Stories

Share via
Copy link