ನವದೆಹಲಿ:
ಸಿಬಿಐ ತನಿಖೆ ನಡೆಸುತ್ತಿರುವ 3,600 ಕೋಟಿ ರೂ.ಗಳ ಅಗಸ್ಟಾವೆಸ್ಟ್ಲ್ಯಾಂಡ್ ಪ್ರಕರಣದಲ್ಲಿ ಆರು ವರ್ಷಗಳ ಕಾಲ ಬಂಧನದಲ್ಲಿದ್ದ ಆರೋಪಿ ಮಧ್ಯವರ್ತಿ ಕ್ರಿಶ್ಚಿಯನ್ ಮೈಕೆಲ್ ಜೇಮ್ಸ್ಗೆ ಸುಪ್ರೀಂ ಕೋರ್ಟ್ ಮಂಗಳವಾರ ಜಾಮೀನು ನೀಡಿದೆ. ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರ ಪೀಠವು ಜಾಮೀನು ಮಂಜೂರು ಮಾಡಿದೆ. ಪ್ರಕರಣದ ತನಿಖೆ ನಡೆಯುತ್ತಿರುವಾಗಲೇ ಆರೋಪಿಗೆ ಜಾಮೀನು ಸಿಕ್ಕಿದೆ. ಆದಾಗ್ಯೂ, ಜೇಮ್ಸ್ ಸಂಬಂಧಿತ ಹಣ ವರ್ಗಾವಣೆ ಪ್ರಕರಣದ ಆರೋಪ ಎದುರಿಸುತ್ತಿರುವುದರಿಂದ ಮತ್ತು ಅವರ ಜಾಮೀನು ಅರ್ಜಿ ದೆಹಲಿ ಹೈಕೋರ್ಟ್ನಲ್ಲಿ ಬಾಕಿ ಇರುವುದರಿಂದ ಜೈಲಿನಿಂದ ಹೊರಬರಲು ಸಾಧ್ಯವಾಗಲಿಲ್ಲ.
ಅಗಸ್ಟಾ ವೆಸ್ಟ್ಲ್ಯಾಂಡ್ ವಿವಿಐಪಿ ಹೆಲಿಕಾಪ್ಟರ್ ಭ್ರಷ್ಟಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಮಧ್ಯವರ್ತಿ ಹಾಗೂ ಬ್ರಿಟಿಷ್ ಪ್ರಜೆ ಕ್ರಿಶ್ಚಿಯನ್ ಮೈಕಲ್ ಜೇಮ್ಸ್ 6 ವರ್ಷಗಳಿಂದ ಜೈಲಿನಲ್ಲಿರುವುದನ್ನು ಗಮನಿಸದ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರ ಪೀಠವು ಜಾಮೀನು ಮಂಜೂರು ಮಾಡಿದೆ. ಪ್ರಕರಣವು ನಡೆಯುತ್ತಿರುವ ವೇಗವನ್ನು ನೋಡಿದರೆ, ಮುಂದಿನ 25 ವರ್ಷಗಳಲ್ಲಿ ವಿಚಾರಣೆ ಪೂರ್ಣಗೊಳ್ಳುವುದಿಲ್ಲ ಎಂದು ಅನ್ನಿಸುತ್ತದೆ ಎಂದು ಪೀಠ ಹೇಳಿದೆ. ವಿಚಾರಣಾ ನ್ಯಾಯಾಲಯ ನಿರ್ಧರಿಸಿದ ಷರತ್ತುಗಳಿಗೆ ಒಳಪಟ್ಟು ಜೇಮ್ಸ್ ಜಾಮೀನಿನ ಮೇಲೆ ಬಿಡುಗಡೆಯಾಗಲಿದ್ದಾರೆ ಎಂದು ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿ ಸ್ಪಷ್ಟಪಡಿಸಿದೆ.
ಜೇಮ್ಸ್ ಪರ ವಾದ ಮಂಡಿಸಿದ ವಕೀಲರಾದ ಅಲ್ಜೋ ಕೆ ಜೋಸೆಫ್ ಮತ್ತು ವಿಷ್ಣು ಶಂಕರ್, ಅವರ ಆರು ವರ್ಷಗಳ ಸುದೀರ್ಘ ಸೆರೆವಾಸವನ್ನು ಉಲ್ಲೇಖಿಸಿದರು.ಡಿಸೆಂಬರ್ 6 ರಂದು ಸುಪ್ರೀಂ ಕೋರ್ಟ್ ಅವರ ಮನವಿಗೆ ಸಂಬಂಧಿಸಿದಂತೆ ಸಿಬಿಐನಿಂದ ಪ್ರತಿಕ್ರಿಯೆ ಕೇಳಿತ್ತು.
ಆಗಸ್ಟಾವೆಸ್ಟ್ಲ್ಯಾಂಡ್ ಹಗರಣವು ವಿವಿಐಪಿ ಹೆಲಿಕಾಪ್ಟರ್ ವಿನ್ಯಾಸ ಮತ್ತು ಉತ್ಪಾದನಾ ಕಂಪನಿಯಾದ ಆಗಸ್ಟಾ ವೆಸ್ಟ್ಲ್ಯಾಂಡ್ನಿಂದ 12 ವಿವಿಐಪಿ ಹೆಲಿಕಾಪ್ಟರ್ಗಳ ಖರೀದಿಗೆ ಸಂಬಂಧಿಸಿದೆ. ಈ ಒಪ್ಪಂದದಿಂದಾಗಿ ಸರ್ಕಾರದ ಬೊಕ್ಕಸಕ್ಕೆ 398.21 ಮಿಲಿಯನ್ ಯುರೋಗಳಷ್ಟು (ಸುಮಾರು ₹ 2,666 ಕೋಟಿ) ನಷ್ಟವಾಗಿದೆ ಎಂದು ಕೇಂದ್ರ ತನಿಖಾ ದಳದ (ಸಿಬಿಐ) ಆರೋಪಪಟ್ಟಿಯಲ್ಲಿ ಆರೋಪಿಸಿತ್ತು. 2018 ರಲ್ಲಿ ಜೇಮ್ಸ್ ಅವರನ್ನು ದುಬೈನಿಂದ ಗಡಿಪಾರು ಮಾಡಿದ ನಂತರ ಭಾರತ ಬಂಧಿಸಿತ್ತು. ಆರೋಪಪಟ್ಟಿಯಲ್ಲಿ ಜಾರಿ ನಿರ್ದೇಶನಾಲಯ (ED) , ಜೇಮ್ಸ್ ಅಗಸ್ಟಾವೆಸ್ಟ್ಲ್ಯಾಂಡ್ನಿಂದ 30 ಮಿಲಿಯನ್ ಯುರೋಗಳನ್ನು (ಸುಮಾರು ₹ 225 ಕೋಟಿ) ಪಡೆದಿದ್ದಾರೆ ಎಂದು ಆರೋಪಿಸಿತ್ತು.
