ಬೆಂಗಳೂರು :
ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ಬೃಹತ್ ಸಾಂಸ್ಕೃತಿಕ ಹಬ್ಬ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಬ್ರಾಂಡ್ ಬೆಂಗಳೂರು ಅಡಿ ನಗರದ ದಶ ದಿಕ್ಕುಗಳಲ್ಲಿ ಸಂಭ್ರಮ ಜತೆಗೆ ಹಬ್ಬದ ವಾತಾವರಣ ನಿರ್ಮಾಣ ಮಾಡಿ ಸಾಂಸ್ಕೃತಿಕ ಕಾರ್ಯಕ್ರಮ, ಜಾನಪದ ಕ್ರೀಡೆ, ಎತ್ತಿನ ಬಂಡಿ, ಸೈಕಲ್, ದ್ವಿಚಕ್ರ ವಾಹನ ಜಾಥಾ, ಕಾರುಗಳ ರ್ಯಾಲಿ ಆಯೋಜಿಸಲು ತೀರ್ಮಾನಿಸಲಾಗಿದೆ.
ಕಂದಾಯ ಸಚಿವ ಅಶೋಕ್ ಅಧ್ಯಕ್ಷತೆಯಲ್ಲಿ ವಿಧಾನಸೌಧದಲ್ಲಿ ಈ ಕುರಿತು ಸೋಮವಾರ ಉನ್ನತ ಮಟ್ಟದ ಸಭೆ ನಡೆಯಿತು. ಸಭೆಯ ನಂತರ ಸುದ್ಧಿಗಾರರಿಗೆ ಮಾಹಿತಿ ನೀಡಿದ ಸಚಿವ ಗೋಪಾಲಯ್ಯ, ಮಾರ್ಚ್ 24 ಮತ್ತು 25 ರಂದು ಬೆಂಗಳೂರು ಹಬ್ಬ ನಡೆಯಲಿದ್ದು ಮೊದಲ ದಿನ ವಿಧಾನಸೌಧ ಮುಂಭಾಗದ ಮೆಟ್ಟಿಲುಗಳ ಮೇಲೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.
ಕಬ್ಬನ್ ಪಾರ್ಕ್, ಲಾಲ್ ಬಾಗ್ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಕಾರ್ಯಕ್ರಮ ನಡೆಯಲಿದೆ. ನಗರದ ಎಲ್ಲ ಪಾರ್ಕ್, ಕೆರೆ, ಐತಿಹಾಸಿಕ ಕಟ್ಟಡಗಳಿಗೆ ದೀಪಾಲಂಕಾರ ಮಾಡಲಾಗುವುದು. ಇದೊಂದು ರೀತಿ ರಾಜಧಾನಿಯ ಮನೆ ಮನೆ ಹಬ್ಬವಾಗಲಿದೆ ಎಂದು ಹೇಳಿದರು.
ಫುಡ್ ಫೆಸ್ಟಿವಲ್, ಚಿತ್ರಕಲಾ ಸ್ಪರ್ಧೆ, ಪುಸ್ತಕ ಜಾತ್ರೆ ಎಲ್ಲವೂ ಇರಲಿದೆ. ಖ್ಯಾತ ಕಲಾವಿದರು, ನಟರು, ಸಾಂಸ್ಕೃ ತಿಕ ದಿಗ್ಗಜರನ್ನು ಆಹ್ವಾನಿಸಲಾಗುವುದು. ಎರಡು ದಿನಗಳ ಕಾರ್ಯಕ್ರಮದ ರೂಪುರೇಷೆ ಸಿದ್ದಪಡಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಧಾನ ಕಾರ್ಯದರ್ಶಿ ಮಂಜುಳಾ ಅವರಿಗೆ ವಹಿಸಲಾಗಿದೆ ಎಂದು ಹೇಳಿದರು. ಸಭೆಯಲ್ಲಿ ಸಚಿವರಾದ ಅಶ್ವತ್ಥ ನಾರಾಯಣ, ಮುನಿರತ್ನ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
