ನಾಡ ಕಚೇರಿಯಲ್ಲಿ ಕರೆಂಟ್ ಕಣ್ಣಾಮುಚ್ಚಾಲೆ

ಹುಳಿಯಾರು:

ವಿದ್ಯುತ್ ಇಲ್ಲದೆ ಸೇವೆ ಸ್ಥಗಿತ : ಸಾರ್ವಜನಿಕರು ಹೈರಾಣ

ಇಲ್ಲಿ ಕರೆಂಟ್ ಇದ್ದರೆ ಮಾತ್ರ ಜನರಿಗೆ ಸೇವೆ ಸಿಗುತ್ತದೆ, ಸೌಲಭ್ಯಗಳು ದೊರೆಯುತ್ತವೆ. ಕರೆಂಟ್ ಹೋದರೆ ಎಲ್ಲವೂ ಸ್ಥಗಿತಗೊಂಡು ಸಿಬ್ಬಂದಿ ಕೈ ಕಟ್ಟಿ ಕೂತರೆ, ಸಾರ್ವಜನಿಕರು ಬಾಗಿಲಲ್ಲಿ ಕಾಯುತ್ತಾ ಕುಳಿತುಕೊಳ್ಳುವ ಅನಿವಾರ್ಯ ಕರ್ಮ ನಿರ್ಮಾಣವಾಗುತ್ತದೆ. ಹೌದು, ಇದು ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹಂದನಕೆರೆ ನಾಡ ಕಚೇರಿಯ ದುಸ್ಥಿತಿ.

ನಾಡ ಕಚೇರಿಯಲ್ಲಿ ಬೆಳಗ್ಗೆ ಬಾಗಿಲು ತೆಗೆದ ಕ್ಷಣದಿಂದಲೂ ಸಂಜೆ ಬಾಗಿಲು ಹಾಕುವ ತಮಕ ಜನಜಂಗುಳಿ ಇದ್ದದ್ದೆ. ದಿನನಿತ್ಯ ಸಾವಿರಾರು ಜನರು ಹಳ್ಳಿಗಳಿಂದ ತಮ್ಮ ವೈಯಕ್ತಿಕ ಕೆಲಸ ಕಾರ್ಯಗಳನ್ನು ಬಿಟ್ಟು ವಿವಿಧ ಕೆಲಸ ಕಾರ್ಯಗಳಿಗೆ ನಾಡ ಕಚೇರಿಗೆ ಬರುವುದು ಸಾಮಾನ್ಯ. ಹೀಗೆ ನಿತ್ಯವೂ ಕಿಕ್ಕಿರಿದು ಬರುವ ಜನರಿಗೆ ಸಮರ್ಪಕ ಸೇವೆ ನೀಡುವುದು ಅಧಿಕಾರಿಗಳ ಕರ್ತವ್ಯ.

ಅದರಂತೆ ಇಲ್ಲಿನ ಸಿಬ್ಬಂದಿ ಉತ್ತಮ ಸೇವೆ ನೀಡಲು ಸಿದ್ಧರಿರುತ್ತರಾದರೂ ವಿದ್ಯುತ್ ಕಣ್ಣಾಮುಚ್ಚಾಲೆ ಆಟ ಇಲ್ಲಿನ ಸಿಬಂದಿಯ ಕೈ ಕಟ್ಟಿ ಕೂರುವಂತೆ ಮಾಡಿದೆ.

ಯುಪಿಎಸ್, ಜನರೇಟರ್ ವ್ಯವಸ್ಥೆ ಇಲ್ಲ :

ನಿತ್ಯ ಸಾವಿರಾರು ಜನರು ಬರುವ ಹಂದನಕೆರೆ ಹೋಬಳಿಯ ನಾಡ ಕಚೇರಿಗೆ ಯುಪಿಎಸ್ ಅಥವಾ ಜನರೇಟರ್ ವ್ಯವಸ್ಥೆ ಇಲ್ಲದಿರುವುದರಿಂದ ಪ್ರತಿಯೊಂದು ಕೆಲಸ ಕಾರ್ಯಗಳಿಗೂ ವಿದ್ಯುತ್ ಬರುವವರೆಗೂ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.

ಇಲ್ಲಿನ ಸಿಬ್ಬಂದಿ ವಿದ್ಯುತ್ ಇಲ್ಲದ ಸಂದರ್ಭದಲ್ಲಿ ಜನರಿಗೆ ನಾಳೆ ಬನ್ನಿ ಅಥವಾ ಕರೆಂಟ್ ಬರುವ ತನಕ ಕಾಯಿರಿ ನಿಮ್ಮ ಕೆಲಸ ಮಾಡಿ ಕೊಡುತ್ತೇವೆ ಎನ್ನುವುದು ಸಾಮಾನ್ಯವಾಗಿದೆ. ಇದರಿಂದ ಸಣ್ಣಪುಟ್ಟ ಕಾರ್ಯಗಳಿಗೂ ಜನ ಸಾಮಾನ್ಯರು ಅಲೆದಾಡುವಂತಾಗಿದೆ.

ಕೂಲಿ, ಸಮಯ 2 ವ್ಯರ್ಥ :

ಹಂದಕೆರೆ ಹೋಬಳಿಯಲ್ಲಿ ರೈತರು, ಕೂಲಿ ಕಾರ್ಮಿಕರು ಹಾಗೂ ಹಿಂದುಳಿದ ವರ್ಗದವರು ಹೆಚ್ಚಾಗಿದ್ದಾರೆ. ಅಲ್ಲದೆ ಸಮರ್ಪಕ ಸಾರಿಗೆ ವ್ಯವಸ್ಥೆ ಇಲ್ಲದಿವುದೂ ಸಹ ಈ ಭಾಗದ ಜನರ ದೌರ್ಭಾಗ್ಯ.

ಇವುಗಳ ಜೊತೆಗೆ ಈಗ ನಾಡ ಕಚೇರಿಯಲ್ಲಿ ವಿದ್ಯುತ್ ಸಮಸ್ಯೆ. ಇಷ್ಟೆಲ್ಲಾ ಸಮಸ್ಯೆಗಳ ಪರಿಣಾಮ ಜನರು ಒಂದು ಕೆಲಸಕ್ಕೆ ಅನೇಕ ಬಾರಿ ಅಲೆಯಲೇ ಬೇಕಿದೆ. ಇದರಿಂದ ಇಲ್ಲಿನ ಜನರ ನಿತ್ಯದ ಕೂಲಿ ಹಾಗೂ ಸಮಯ ಎರಡೂ ವ್ಯರ್ಥವಾಗುತ್ತಿದೆ.

ಬದಲಿ ವ್ಯವಸ್ಥೆ ಮಾಡದ ಇಲಾಖೆ :

ಬೇಸಿಗೆ ಕಾಲದಲ್ಲಂತೂ ವಿದ್ಯುತ್ ಅಡಚಣೆ ಸಹಜವಾಗಿರುತ್ತದೆ. ಮಳೆಗಾಲದಲ್ಲಿ ಗಾಳಿಗೆ ಕಂಬಗಳು ಬೀಳುವ, ಕಂಬದ ಮೇಲೆ ಮರಗಳು ಬಿದ್ದು ಲೈನ್ ಕಟ್ ಆಗಿ ವಿದ್ಯುತ್ ಸಮಸ್ಯೆ ನಿರ್ಮಾಣವಾಗುತ್ತದೆ.

ಇದಕ್ಕೆ ಬದಲಿ ವ್ಯವಸ್ಥೆ ಮಾಡದೆ ಇರುವುದು ದುರದೃಷ್ಟಕರವಾದ ಸಂಗತಿಯಾಗಿದೆ. ಈ ಬಗ್ಗೆ ಸಾರ್ವಜನಿಕರು ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಇನ್ನಾದರೂ ಕಂದಾಯ ಇಲಾಖೆಯ ಮೇಲಧಿಕಾರಿಗಳು ಇತ್ತ ಗಮನ ಹರಿಸಿ ಯುಪಿಎಸ್ ವ್ಯವಸ್ಥೆ ಕಲ್ಪಿಸಿ ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ಅಡ್ಡಿಯಾಗದಂತೆ ನೋಡಿಕೊಳ್ಳುವರೇ ಎಂಬುದನ್ನು ಕಾದು ನೋಡಬೇಕಿದೆ.

ನಿರಾಶೆಯಿಂದ ಹಿಂದಿರುಗುವುದು ಸಾಮಾನ್ಯ :

ಪಹಣಿ, ಆಧಾರ್ ಕಾರ್ಡ್ ನೋಂದಣಿ, ಸಂಧ್ಯಾ ಸುರಕ್ಷಾ ಹಾಗೂ ವಿಧವಾ ವೇತನ ಸೇರಿದಂತೆ ಇನ್ನಿತರ ಸೌಲಭ್ಯಗಳಿಗಾಗಿ ಅರ್ಜಿ ಸಲ್ಲಿಸಲು ದಿನವಿಡೀ ವಿದ್ಯುತ್‍ಗಾಗಿ ಕಾದು ಕುಳಿತುಕೊಳ್ಳುವ ಅನಿರ್ವಾಯತೆ ಇದೆ. ಕಚೇರಿಗೆ ಬರುವ ಬಹಳಷ್ಟು ಮಂದಿ ನಿರಾಶೆಯಿಂದ ಹಿಂದಿರುಗುತ್ತಿದ್ದಾರೆ. ಈ ಬಗ್ಗೆ ಕೇಳಿದರೆ ಇಲ್ಲಿನ ಅಧಿಕಾರಿಗಳು ಮೇಲಧಿಕಾರಿಗಳ ಕಡೆ ಬೆರಳು ತೋರಿಸಿ ಕೈ ಚೆಲ್ಲಿ ಕೂರುತ್ತಾರೆ.

-ಪ್ರಶಾಂತ್, ಗ್ರಾಪಂ ಸದಸ್ಯ, ದೊಡ್ಡಎಣ್ಣೇಗೆರೆ, ಹಂದನಕೆರೆ ಹೋಬಳಿ

ಶೀಘ್ರದಲ್ಲೆ ಯುಪಿಎಸ್ ರಿಪೇರಿ :

ಯುಪಿಎಸ್ ಕೆಟ್ಟು ಹೋಗಿದ್ದು, ರಿಪೇರಿ ಸಂಬಂಧ ಮೇಲಧಿಕಾರಿಗೆ ಪತ್ರ ಬರೆದಿದ್ದೇವೆ. ಕೆಲವೇ ದಿನಗಳಲ್ಲಿ ಜಿಲ್ಲಾಧಿಕಾರಿಗಳ ಕಚೇರಿಗೆ ಕಳುಹಿಸಿಕೊಟ್ಟು ರಿಪೇರಿ ಮಾಡಿಸುತ್ತೇವೆ. ಅಲ್ಲಿಯವರೆಗೂ ಸಾರ್ವಜನಿಕರು ಸ್ವಲ್ಪ ಅಡ್ಜೆಸ್ಟ್ ಮಾಡಿಕೊಳ್ಳಬೇಕು. ಆದರೂ ಜನರಿಗೆ ತೊಂದರೆಯಾಗದಂತೆ ಕೆಲಸ ಮಾಡಿ ಕೊಡುತ್ತಿದ್ದೇವೆ.

-ಪುಷ್ಪಾವತಿ, ಉಪ ತಹಸೀಲ್ದಾರ್, ನಾಡಕಚೇರಿ, ಹಂದನಕೆರೆ

-ಎಚ್.ಬಿ.ಕಿರಣ್‍ಕುಮಾರ್

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link