ಬೆಳಗಾವಿ:
ಮಹಾತ್ಮ ಗಾಂಧೀಜಿ ಅವರು 1924 ರಲ್ಲಿ ಅಧ್ಯಕ್ಷತೆ ವಹಿಸಿದ್ದ ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಆಚರಣೆ ಕಾರ್ಯಕ್ರಮದಿಂದ ಇಡೀ ದೇಶಕ್ಕೆ ಸಂದೇಶ ರವಾನೆ ಆಗಬೇಕು ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಅವರು ಹೇಳಿದರು.
ಬೆಳಗಾವಿ ಹೊರವಲಯದ ಶೂನ್ಯ ರೆಸಾರ್ಟ್ ನಲ್ಲಿ ಮಂಗಳವಾರ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಶಕ್ತಿ ಮತ್ತು ನಂಬರ್ 136+2+2= 140. ಸಂಸತ್ ಚುನಾವಣೆಯಲ್ಲಿ ಕಲ್ಯಾಣ ಕರ್ನಾಟಕ ಬಿಟ್ಟು ಉಳಿದಕಡೆ ವಾತಾವರಣ ಅಷ್ಟು ಚನ್ನಾಗಿರಲಿಲ್ಲ.ಮೂರು ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆ ಫಲಿತಾಂಶದಿಂದ ಗೌರವ ಬಂದಿದೆ ಇದರಿಂದ ಕಾರ್ಯಕರ್ತರ ವಿಶ್ವಾಸ ಹೆಚ್ಚಿದೆ ಎಂದರು. 2028 ರ ಚುನಾವಣೆಗೆ ಈ ಫಲಿತಾಂಶ ಮುನ್ನುಡಿ ಬರೆದಿದೆ. ಎಲ್ಲೆಲ್ಲಿ ಅಭ್ಯರ್ಥಿಗಳ ಕೊರತೆ ಇತ್ತೋ ಅಲ್ಲಿ ಆ ಕೊರತೆ ಸರಿ ಮಾಡಿದ್ದೇವೆ. ಈಗಿನಿಂದಲೇ 2028 ರ ಚುನಾವಣೆಗೆ ರೆಡಿ ಆಗಿ. ಅಭ್ಯರ್ಥಿಗಳನ್ನು ಫೈನಾಲಿಸ್ ಮಾಡಿ ಇಡಿ ಎಂದು ಕರೆ ನೀಡಿದರು.
1924 ರಲ್ಲಿ ಮಹಾತ್ಮ ಗಾಂಧೀಜಿ ಅವರ ಅಧ್ಯಕ್ಷತೆಯಲ್ಲಿ ನಡೆದ ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಆಚರಣೆಗೆ ಸಿದ್ಧತೆಗಳು ನಡೆದಿವೆ. ಇಡೀ ವರ್ಷ ಕಾರ್ಯಕ್ರಮ ಮಾಡಲು ಯೋಜನೆ ರೂಪಿಸಲಾಗಿದೆ. ಸರಕಾರ ಮತ್ತು ಕಾಂಗ್ರೆಸ್ ಪಕ್ಷ ಒಟ್ಟಾಗಿ ಮಾಡಲಿದೆ ಎಂದು ಮಾಹಿತಿ ನೀಡಿದರು. ಕಾಂಗ್ರೆಸ್ ಪಕ್ಷಕ್ಕೆ ಇರುವ ಇತಿಹಾಸ ಬೇರೆ ಪಕ್ಷಗಳಿಗೆ ಇಲ್ಲ. ಇದರ ಸದ್ಬಳಕೆ ಮಾಡಿಕೊಳ್ಳಿ, ಈ ಸಮಾವೇಶ ಐತಿಹಾಸಿಕ ಸಮಾವೇಶ ಇದೊಂದು ಸುವರ್ಣ ಅವಕಾಶ. ಇದರಲ್ಲಿ ನೀವೆಲ್ಲರೂ ಪಾಲ್ಗೊಳ್ಳಬೇಕು. ಎಐಸಿಸಿ ಮುಖಂಡರು ಇವತ್ತು ಇಡೀ ದಿನ ಬೆಳಗಾವಿಯಲ್ಲಿ ಇದ್ದು, ಪೂರ್ವಸಿದ್ಧತೆಗಳ ಪರಿಶೀಲನೆ ಮಾಡಿ, ಮಾಹಿತಿ ಪಡೆದರು. ಈ ಅಭೂತಪೂರ್ವ ಕಾರ್ಯಕ್ರಮದ ಯಶಸ್ಸಿಗೆ ನಾನಾ ಸಮಿತಿಗಳನ್ನು ರಚನೆ ಮಾಡಲಾಗಿದೆ. ಇದು ಬರೀ ಬೆಳಗಾವಿ ಕಾರ್ಯಕ್ರಮ ಅಲ್ಲ. ಇಡೀ ರಾಜ್ಯದ ಕಾರ್ಯಕ್ರಮ. ನೀವೆಲ್ಲರೂ ಸಕ್ರಿಯರಾಗಿ ಪಾಲ್ಗೊಳ್ಳಬೇಕು.
