ನಾವು ಅಧಿಕಾರಕ್ಕೆ ಬಂದಾಗೆಲ್ಲಾ ಬಡವರ ಬದುಕಿಗಾಗಿ ಕಾರ್ಯಕ್ರಮ ರೂಪಿಸಿದೆ: ಡಿ.ಕೆ. ಶಿವಕುಮಾರ್

ದಾವಣಗೆರೆ :  

   ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗೆಲ್ಲಾ ಬಡವರ ಬದುಕಿಗಾಗಿ ಕಾರ್ಯಕ್ರಮಗಳನ್ನು ರೂಪಿಸಿಕೊಂಡು ಬಂದಿದೆ. ಸಮಾಜದಲ್ಲಿ ಪುಟಾಣಿ ಮಕ್ಕಳಿಂದ ಹಿರಿಯ ನಾಗರೀಕರವರೆಗೆ, ಯುವಕರಿಂದ ಮಹಿಳೆಯರವರೆಗೆ ಎಲ್ಲರಿಗೂ ಕಾರ್ಯಕ್ರಮ ನೀಡಿರುವುದು ಕಾಂಗ್ರೆಸ್ ಸರ್ಕಾರ ಮಾತ್ರ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.

   ದಾವಣಗೆರೆ ಜಿಲ್ಲಾ ವ್ಯಾಪ್ತಿ ಯ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ, ಉದ್ಘಾಟನೆ ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮಾತನಾಡಿದರು. 

   “ಇಂದು ಭೂ ಗ್ಯಾರಂಟಿ ಯೋಜನೆ ಮೂಲಕ ಹಟ್ಟಿ, ತಾಂಡಾಗಳ ಸಾವಿರಾರು ಜನರಿಗೆ ಭೂಮಿ ಹಕ್ಕು ಪತ್ರ ನೀಡಿದ್ದೇವೆ. ಈ ಹಿಂದೆ ಬೇರೆ ಯಾವುದೇ ಸರ್ಕಾರ ಇಂತಹ ಕಾರ್ಯಕ್ರಮ ಮಾಡಿರಲಿಲ್ಲ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗೆಲ್ಲಾ ಬಡವರ ಬದುಕಿಗಾಗಿ, ಬಡವರ ಹೊಟ್ಟೆ ತುಂಬಿಸಲು ಕಾರ್ಯಕ್ರಮ ರೂಪಿಸುತ್ತಾ ಬಂದಿದೆ. ಬಿಜೆಪಿಯವರು ಅಧಿಕಾರ ನಡೆಸಿದ್ದಾರೆ. ಆದರೆ ಅವರು ಭಾವನೆ ಮೇಲೆ ರಾಜಕಾರಣ ಮಾಡಿದ್ದಾರೆ. ನಾವು ಜನರ ಬದುಕು ಕಟ್ಟಲು ರಾಜಕೀಯ ಮಾಡಿದ್ದೇವೆ. ನಮ್ಮ ಸರ್ಕಾರ ಕೊಟ್ಟಿರುವ ಕೊಡುಗೆಗಳಿಗೆ ನಿಮ್ಮ ಕಣ್ಣುಗಳೇ ಸಾಕ್ಷಿ” ಎಂದು ತಿಳಿಸಿದರು.

   “ಅಧಿಕಾರ ನಶ್ವರ, ಸಾಧನೆಗಳು ಅಜರಾಮರ, ಮತದಾರನೇ ಈಶ್ವರ. ನೀವು ಕೊಟ್ಟ ಶಕ್ತಿಗೆ, ನಿಮ್ಮ ಋಣ ತೀರಿಸಲು ನಾವು ಇಲ್ಲಿಗೆ ಬಂದಿದ್ದೇವೆ. ದಾವಣಗೆರೆಯಲ್ಲಿ 7 ವಿಧಾನಸಭಾ ಕ್ಷೇತ್ರಗಳ ಪೈಕಿ ಆರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರನ್ನು ಹಾಗೂ ಓರ್ವ ಸಂಸದರನ್ನು ಆಯ್ಕೆ ಮಾಡಿ ನಿಮ್ಮ ಸೇವೆ ಮಾಡಲು ಅವಕಾಶ ಮಾಡಿಕೊಟ್ಟಿರುವುದಕ್ಕೆ ಪಕ್ಷದ ಅಧ್ಯಕ್ಷನಾಗಿ ನಿಮಗೆ ಕೋಟಿ ನಮನ ಅರ್ಪಿಸುತ್ತೇನೆ” ಎಂದು ತಿಳಿಸಿದರು.

   “ದೀಪ ಮಾತನಾಡುವುದಿಲ್ಲ, ಜ್ಯೋತಿ ಅದರ ಪರಿಚಯ ಮಾಡಿಕೊಡುತ್ತದೆ. ನಮಗೆ 140 ಶಾಸಕರನ್ನು ನೀಡಿ ನಮಗೆ ಅಧಿಕಾರ ಕೊಟ್ಟಿದ್ದೀರಿ. ನಮ್ಮ ಸರ್ಕಾರ ನುಡಿದಂತೆ ನಡೆದು ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು, ಸಮಾಜದ ಎಲ್ಲಾ ವರ್ಗಕ್ಕೆ ಸೇವೆ ಮಾಡಿ ನಿಮ್ಮ ಋಣ ತೀರಿಸುತ್ತಿದೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೊದಲ ದಿನವೇ ಐದು ಗ್ಯಾರಂಟಿ ಯೋಜನೆಗಳ ಜಾರಿಗೆ ಅನುಮೋದನೆ ನೀಡಿ ನಿಮ್ಮ ಋಣ ತೀರಿಸುವ ಭಾಗ್ಯ ಸಿಕ್ಕಿದ್ದು ನಮ್ಮ ಪುಣ್ಯ” ಎಂದರು.

  “ಜಿಲ್ಲಾ ಸಚಿವರಾದ ಎಸ್ ಎಸ್ ಮಲ್ಲಿಕಾರ್ಜುನ್ ಅವರ ಜೊತೆಗೆ ಜಿಲ್ಲೆಯ ಇತರೆ ಐವರು ಶಾಸಕರು ಸೇರಿ ಜಿಲ್ಲೆಯಲ್ಲಿ ಅಭಿವೃದ್ಧಿ ಕೆಲಸ ಮಾಡುತ್ತಿದ್ದಾರೆ.  ಈ ಜಿಲ್ಲೆಯ ಶಾಸಕರು ಹಾಗೂ ಸಂಸದರನ್ನು ನಾವು ನಿಮ್ಮ ಮಡಿಲಿಗೆ ಹಾಕಿದ್ದೇವೆ. ಅವರು ನಿಮಗಾಗಿ ಶ್ರಮಿಸುತ್ತಿದ್ದಾರೆ. ಸರ್ಕಾರ ನಿಮ್ಮ ಪರವಾಗಿ ಕೆಲಸ ಮಾಡಲಿದೆ. ನಿಮ್ಮ ಆಶೀರ್ವಾದ ನಮ್ಮ ನಾಯಕರ ಮೇಲೆ ಇರಬೇಕು. ಮುಂದಿನ ಚುನಾವಣೆಯಲ್ಲಿ ಜಿಲ್ಲೆಯ 7 ಕ್ಷೇತ್ರಗಳಲ್ಲೂ ಕಾಂಗ್ರೆಸ್ ಶಾಸಕರನ್ನು ಆಯ್ಕೆ ಮಾಡಿ 2028ರಲ್ಲಿ ಇನ್ನಷ್ಟು ಬಲಿಷ್ಠ ಸರ್ಕಾರ ತರಲು ಸಹಾಯ ಮಾಡಬೇಕು. ಈ ಸರ್ಕಾರ ನಿಮ್ಮ ಸರ್ಕಾರ, ಇದನ್ನು ಉಳಿಸುವುದು ನಿಮ್ಮ ಕೆಲಸ” ಎಂದು ಕರೆ ಕೊಟ್ಟರು.

  “ನಮ್ಮ ಸರ್ಕಾರ ಯಾವುದೇ ಅಡೆತಡೆಗಳಿಗೆ ಜಗ್ಗಲಿಲ್ಲ, ಬಗ್ಗಲಿಲ್ಲ. ಬಡವರಿಗೆ ಸಹಾಯ ಮಾಡಲೇಬೇಕು ಎಂಬುದು ಕಾಂಗ್ರೆಸ್ ಸರ್ಕಾರದ ಗುರಿ. ಸಾಧನೆ ಇಲ್ಲದೆ ಸತ್ತರೆ ಸಾವಿಗೆ ಅವಮಾನ, ಆದರ್ಶ ಇಲ್ಲದೆ ಬದುಕಿದರೆ, ಬದುಕಿಗೆ ಅವಮಾನ. ನಮ್ಮ ಸರ್ಕಾರ ಪ್ರತಿ ಇಲಾಖೆಯಲ್ಲಿ ಜನಪರ ಕೆಲಸ ಮಾಡುತ್ತಿದೆ. ಕಂದಾಯ, ಕೃಷಿ, ನೀರಾವರಿ, ಗೃಹ, ಆರೋಗ್ಯ ಸೇರಿದಂತೆ ಎಲ್ಲಾ ಇಲಾಖೆಗಳು ಸೇರಿ ನಿಮ್ಮ ಬದುಕು ಕಟ್ಟಲು 4.08 ಲಕ್ಷ ಕೋಟಿ ಮೊತ್ತದ ಬಜೆಟ್ ಮಂಡಿಸಲಾಗಿದೆ” ಎಂದು ತಿಳಿಸಿದರು.

  “ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲಾ ವರ್ಗಗಳ ಬಗ್ಗೆ ಚಿಂತನೆ ಮಾಡುತ್ತದೆ. ಬಿಸಿಯೂಟ, ಸ್ತ್ರೀಶಕ್ತಿ, ಅನ್ನಭಾಗ್ಯ, ಗೃಹಲಕ್ಷ್ಮಿ, ಗೃಹಜ್ಯೋತಿ, ಶಕ್ತಿ ಯೋಜನೆ ನೀಡಿದೆ. ಭಾರತ ಜೋಡೋ ಸಂದರ್ಭದಲ್ಲಿ ಚಿತ್ರದುರ್ಗದ ಮೇಲೆ ಬಳ್ಳಾರಿ ಕಡೆಗೆ ಸಾಗುವಾಗ ರಾಹುಲ್ ಗಾಂಧಿ ಅವರಿಗೆ ಹಿರಿಯ ಮಹಿಳೆಯೊಬ್ಬರು ಬಂದು ಸೌತೇಕಾಯಿ ಕೊಟ್ಟರು. ಕೊಡುವಾಗ ಇದು ನಿಮ್ಮ ಅಜ್ಜಿ ಕೊಟ್ಟ ಭೂಮಿಯಲ್ಲಿ ಬೆಳೆದ ಸೌತೇಕಾಯಿ ತಗೊಳ್ಳಿ ಎಂದು ಹೇಳಿದರು. ಇದು ಕಾಂಗ್ರೆಸ್ ಕಾರ್ಯಕ್ರಮ. ಬಡವರಿಗೆ ಮನೆ, ಭೂಮಿ, ನಿವೇಶನ, ಭೂ ದಾಖಲೆಗಳನ್ನು ಕೊಟ್ಟಿದ್ದರೆ ಅದು ಕಾಂಗ್ರೆಸ್ ಸರ್ಕಾರ” ಎಂದು ತಿಳಿಸಿದರು.  

   ಶಾಮನೂರು ಶಿವಶಂಕರಪ್ಪ ಅವರು ನಮ್ಮ ಹಿರಿಯರು. ಅವರು ಒಂದು ವ್ಯಕ್ತಿಯಷ್ಟೇ ಅಲ್ಲ, ಕಾಂಗ್ರೆಸ್ ಪಕ್ಷಕ್ಕೆ ಒಂದು ದೊಡ್ಡ ಶಕ್ತಿ. ಕೋವಿಡ್ ಸಮಯದಲ್ಲಿ ಬಿಜೆಪಿ ಸರ್ಕಾರ ಜನರಿಗೆ ಸಹಾಯ ಮಾಡಿರಲಿಲ್ಲ. ಆದರೆ ಶಾಮನೂರು ಶಿವಶಂಕರಪ್ಪ ಅವರು 10 ಕೋಟಿ ವೆಚ್ಚ ಮಾಡಿ ಈ ಜಿಲ್ಲೆಯ ಜನರಿಗೆ ಉಚಿತ ಲಸಿಕೆ ಹಂಚಿದ್ದರು. ಅವರ ಕೆಲಸ ನೋಡಿ ನನ್ನ ಹೃದಯ ಕರಗಿತ್ತು. ಇದು ಶಾಮನೂರು ಶಿವಶಂಕರಪ್ಪ ಅವರ ಹೃದಯ ಶ್ರೀಮಂತಿಕೆ” ಎಂದು ಬಣ್ಣಿಸಿದರು.

  “ಇಂದು ಶಾಮನೂರು ಶಿವಶಂಕರಪ್ಪ ಅವರ 95ನೇ ಜನ್ಮದಿನ ಆಚರಣೆ ಮಾಡಿ ನಾವು ಅವರ ಆಶೀರ್ವಾದ ಪಡೆದಿದ್ದೇವೆ. ನಮ್ಮ ಹಿರಿಯ ನಾಯಕರಿಗೆ ಶುಭ ಹಾರೈಸಲು ಇಡೀ ಸರ್ಕಾರ ಇಲ್ಲಿಗೆ ಬಂದಿದೆ. ಉದ್ಯಮದ ಮೂಲ ಉದ್ಯೋಗ ಸೃಷ್ಟಿ ಮಾಡಿದ್ದಾರೆ. ಶಿಕ್ಷಣ ಸಂಸ್ಥೆ ಕಟ್ಟಿ ಶಿಕ್ಷಣ ಕೊಟ್ಟಿದ್ದಾರೆ, ಸಾಮಾಜಿಕ ಕ್ಷೇತ್ರದಲ್ಲಿ ನೂರಾರು ನಾಯಕರನ್ನು ಸೃಷ್ಟಿ ಮಾಡಿದ್ದಾರೆ. ಇದು ಈ ಕುಟುಂಬ ಕೊಟ್ಟಿರುವ ಕೊಡುಗೆ. ದೇವರು ನಮಗೆ ಎರಡು ಆಯ್ಕೆ ಕೊಟ್ಟಿದ್ದಾನೆ. ಒಂದು ಕೊಟ್ಟು ಹೋಗುವುದು, ಮತ್ತೊಂದು ಬಿಟ್ಟು ಹೋಗುವುದು. ನಮಗೆ ಸಿಕ್ಕ ಅವಕಾಶದಲ್ಲಿ ಸಮಾಜಕ್ಕೆ ಏನು ಕೊಟ್ಟು ಹೋಗುತ್ತೇವೆ ಎಂಬುದು ಮುಖ್ಯ” ಎಂದು ಹೇಳಿದರು.

   ಇಂದು ಶಾಮನೂರು ಶಿವಶಂಕರಪ್ಪ ಅವರು ಶಿಕ್ಷಣ, ಉದ್ಯಮ ಕ್ಷೇತ್ರಗಳಲ್ಲಿ ಸುಮಾರು 40-50 ಸಾವಿರ ಜನರಿಗೆ ಉದ್ಯೋಗ ನೀಡಿದ್ದಾರೆ. ಆಮೂಲಕ ಹೊಸ ಪರಿವರ್ತನೆ ಮಾಡಿದ್ದಾರೆ. ಅವರ ಜನ್ಮದಿನದಂದು ಅವರಿಗೆ ಶುಭಕೋರಲು ನಾವಿಂದು ಬಂದಿದ್ದೇವೆ. ಉದ್ಯಮ ಮಾಡುವುದು ಸುಲಭವಿಲ್ಲ. ಅದಕ್ಕೆ ಹೆಚ್ಚಿನ ಶ್ರಮ ಬೇಕು. ಅವರಿಗೆ ಒಳ್ಳೆಯದಾಗಲಿ, ಅವರ ಕುಟುಂಬ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಹಾಗೂ ಔದ್ಯೋಗಿಕವಾಗಿ ಬಹಳಷ್ಟು ಸೇವೆ ಮಾಡಿದೆ. ಅವರ ಆಸೆಗಳೆಲ್ಲವು ಈಡೇರಲಿ, ಅವರ ಆಯಸ್ಸು ಇನ್ನಷ್ಟು ಹೆಚ್ಚಲಿ ಎಂದು ಶಿವಶಂಕರಪ್ಪ, ಎಸ್ ಎಸ್ ಮಲ್ಲಿಕಾರ್ಜುನ್ ಹಾಗೂ ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ಶುಭಕೋರುತ್ತೇನೆ” ಎಂದರು.

Recent Articles

spot_img

Related Stories

Share via
Copy link