ಬೆಂಗಳೂರು
ಬಿಲ್ಡರ್ಸ್ ಗಳು ತಾವೇ ಅರಿತು ರಾಜಕಾಲುವೆ ತೆರವಿಗೆ ಸಹಕಾರ ನೀಡಿದರೆ ಒಳ್ಳೆಯದು. ಇಲ್ಲದಿದ್ದರೆ ನಮ್ಮ ಬಳಿ ಬೇರೆ ರೀತಿಯ ಕಾನೂನು ಅವಕಾಶಗಳಿದ್ದು, ಅವುಗಳನ್ನು ಬಳಸಬೇಕಾಗುತ್ತದೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಗುರುವಾರ ನಗರ ಪ್ರದಕ್ಷಿಣೆ ನಂತರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ರಾಜಕಾಲುವೆ ತೆರವಿಗೆ ಸಹಕಾರ ನೀಡಬೇಕು. ನ್ಯಾಯಾಲಯ, ಕಾನೂನು ಹೋರಾಟದ ಮೂಲಕ ಕೆಲವರು ಕಾಮಗಾರಿ ಮಾಡದಂತೆ ತಡೆಯಾಜ್ಞೆ ತಂದಿದ್ದಾರೆ. ನಿಮ್ಮ ಕೆಲಸದಿಂದ ಮೇಲ್ಸೇತುವೆ, ರಾಜಕಾಲುವೆ ನಿರ್ಮಾಣ ಕಾಮಗಾರಿಗಳನ್ನು ನಿಲ್ಲಿಸುವಂತಾಗುತ್ತದೆ. ಇದಕ್ಕೆ ಕಾರಣರಾದವರ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸಂಪೂರ್ಣ ಅಧಿಕಾರ ನೀಡಲಾಗಿದೆ ಎಂದು ಹೇಳಿದ್ದಾರೆ.
ಖಾಸಗಿ ಬಿಲ್ಡರ್ಸ್, ಡೆವಲಪರ್ಸ್ ಗಳು ಒತ್ತುವರಿ ಮಾಡಿ, ಕಾಲುವೆ ಮುಚ್ಚಿರುವುದನ್ನು ಗಮನಿಸಿದ್ದೇನೆ. ಖಾಸಗಿ ಬಿಲ್ಡರ್ಸ್ ಗಳು ಮುಚ್ಚಿರುವ ರಾಜಕಾಲುವೆ ತೆರವುಗೊಳಿಸಲು ಎಷ್ಟೇ ಒತ್ತಡ ಇದ್ದರೂ ನಮಗಿರುವ ಕಾನೂನು ಬಳಸಲು ಸೂಚಿಸಿದ್ದೇನೆ. ಖಾಸಗಿಯವರು ರಾಜಕಾಲುವೆ ಒತ್ತುವರಿ ಮಾಡಿರುವುದರಿಂದ ಜನಸಾಮಾನ್ಯರಿಗೆ ತೊಂದರೆ ಆಗುತ್ತಿದೆ. ಇದಕ್ಕೆ ಯಾವುದೇ ಬಿಲ್ಡರ್ಸ್ ಗಳು, ಡೆವಲಪರ್ಸ್ ಗಳು ಅವಕಾಶ ಮಾಡಿಕೊಡಬಾರದು ಎಂದರು.
ರಾಜಕಾಲುವೆ, ರಸ್ತೆಗಳು ಎಷ್ಟು ಅಗಲ ಇರಬೇಕೋ ಅಷ್ಟು ಅಗಲ ಇರಬೇಕು. ಇದಕ್ಕಾಗಿ ದಿವ್ಯಶ್ರೀ ಅಪಾರ್ಟ್ಮೆಂಟ್ ಬಳಿ ರಾಜಕಾಲುವೆ ಅಗಲ ಅಳತೆಗೆ ಆದೇಶ ನೀಡಿದ್ದೇನೆ. ಇಲ್ಲಿ ನೀರು ಹೆಚ್ಚಾದರೆ ಕಾಲುವೆ ಅಗಲೀಕರಣ ಮಾಡಲು ಸೂಚನೆ ನೀಡಿದ್ದೇನೆ. ರಾಜಕಾಲುವೆ ಅಗಲೀಕರಣವನ್ನು ಅವರು ಮಾಡದಿದ್ದರೆ ಆ ಕೆಲಸವನ್ನು ನಾವೇ ಮಾಡುತ್ತೇವೆ.
ಇನ್ನು ಮುಂದೆ ನೊಟೀಸ್ ನೀಡುವುದಿಲ್ಲ. ಬಾಯಿ ಮಾತಲ್ಲಿ ಹೇಳುತ್ತೇವೆ. ಕೇಳದಿದ್ದರೆ ನಂತರ ಕಾನೂನು ಬಳಸಿ ನಮ್ಮ ಕೆಲಸ ಮಾಡುತ್ತೇವೆ. ಒಂದೇ ದಿನದಲ್ಲಿ ಬದಲಾವಣೆ ಮಾಡುತ್ತೇನೆ ಎಂದು ಹೇಳುವುದಿಲ್ಲ. ಆದರೆ ತಕ್ಷಣದಲ್ಲಿ ನೀರು ಸರಾಗವಾಗಿ ಹರಿಯುವಂತೆ ಮಾಡಲು ಕೆಲವು ಸೂಚನೆ ನೀಡಿದ್ದೇನೆ.ಈ ಭೇಟಿ ವೇಳೆ ಕೆಲವು ತಾಂತ್ರಿಕ ವಿಚಾರಗಳನ್ನು ಗಮನಿಸಿದ್ದೇನೆ.ನಗರದಲ್ಲಿ 859 ಕಿ.ಮೀ ಪ್ರಾಥಮಿಕ ಹಾಗೂ ದ್ವಿತೀಯ ಕಾಲುವೆಗಳಿವೆ. ಆ ಪೈಕಿ 491ಕಿ.ಮೀ ನಷ್ಟು ಕಾಲುವೆ ಕಾಮಗಾರಿ ಆರಂಭವಾಗಿದೆ.
195 ಕಿ.ಮೀ ನಷ್ಟು ಕಾಲುವೆ ಕಾಮಗಾರಿ 2022-23 ನೇ ಸಾಲಿನಲ್ಲಿ ಗುರುತಿಸಿದ್ದಾರೆ. 173 ಕಿ.ಮೀ ನಷ್ಟು ಕಾಲುವೆ ಕಾಮಗಾರಿ ಬಾಕಿ ಉಳಿದಿದೆ.ಮುಂದಿನ ದಿನಗಳಲ್ಲಿ ಮಳೆ ನೀರಿನಿಂದ ಯಾವುದೇ ತೊಂದರೆ ಆಗದಂತೆ ಮುಂಜಾಗ್ರತಾ ಕ್ರಮವಾಗಿ ಬೆಸ್ಕಾಂ, ಬಿಡಬ್ಲ್ಯೂಎಸ್ಎಸ್ಬಿ, ಬಿಡಿಎ ಹಾಗೂ ಬಿಬಿಎಂಪಿ ಒಟ್ಟಾಗಿ ಕೆಲಸ ಮಾಡಬೇಕು.
ಈ ಭಾಗದಲ್ಲಿ ಕೆರೆಗಳಲ್ಲಿ ಹೂಳೆತ್ತುವ ಕೆಲಸ ಉತ್ತಮವಾಗಿ ಆಗುತ್ತಿದೆ. ಕಾಮಗಾರಿಗಳ ಪ್ರಗತಿಯೇ ಬೆಂಗಳೂರಿನ ಅಭಿವೃದ್ಧಿ.ಇದಕ್ಕಾಗಿ ನಾನು ಕಚೇರಿಯಲ್ಲಿ ಕೂತು ಮಾರ್ಗದರ್ಶನ ನೀಡುವುದಿಲ್ಲ. ಕಣ್ಣಾರೆ ಕಂಡು ಇಲ್ಲಿನ ಪರಿಸ್ಥಿತಿ ಅರಿತು ಮಾರ್ಗದರ್ಶನ ನೀಡಲು ನಗರ ಪ್ರದಕ್ಷಣೆ ಹಾಕಿದ್ದೇನೆ.ಈ ವರ್ಷದ ಮಳೆಗೆ ನಾವು ಸಜ್ಜಾಗಬೇಕು. ಜಾಗೃತರಾಗಬೇಕು. ಅದಕ್ಕಾಗಿ ಬಾಟಲ್ ನೆಕ್ ಇರುವ ಕಡೆಗಳಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮಾರ್ಗದರ್ಶನ ನೀಡಲಾಗಿದೆ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2023/06/shivakumar.jpg)