ಜೆಡಿಎಸ್‌ ನ ನಿರ್ಧಾರಗಳು ದ್ವಂದ್ವ ಪ್ರಕೃತಿಯದ್ದಾಗಿದೆ : ಡಿಸಿಎಂ

ಬೆಂಗಳೂರು

     “ಕುಮಾರಣ್ಣ ಮೈತ್ರಿ ಕರ್ನಾಟಕಕ್ಕೆ ಮಾತ್ರ ಎನ್ನುತ್ತಿದ್ದಾರೆ. ಆ ಪಕ್ಷದ ಅಧ್ಯಕ್ಷರು ಕೇರಳಕ್ಕೆ ಒಂದು ಭಾಗ, ಕರ್ನಾಟಕಕ್ಕೆ ಒಂದು ಭಾಗ ಎಂದು ಹೇಗೆ ಮಾಡುತ್ತಾರೋ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ವ್ಯಂಗ್ಯವಾಡಿದರು. ಕೆಪಿಸಿಸಿ ಕಚೇರಿಯಲ್ಲಿ ನಡೆದ ವಿವಿಧ ಪಕ್ಷಗಳ ಮುಖಂಡರ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಜೆಡಿಎಸ್ ಎನ್‌ಡಿಎಗೆ ಸೇರಿದ ಕಾರಣ, ಕೇರಳ ಸೇರಿದಂತೆ ಇತರೇ ರಾಜ್ಯಗಳ ಜೆಡಿಎಸ್ ಪಕ್ಷದ ನೂರಾರು ನಾಯಕರು ಕಾಂಗ್ರೆಸ್ ಪಕ್ಷಕ್ಕೆ ಅದರಲ್ಲೂ ‘ಇಂಡಿಯಾ’ ಗೆ ಸೇರುತ್ತಿದ್ದಾರೆ ಎಂದರು.

    ನಾನು ಕೇವಲ ಪಕ್ಷಕ್ಕೆ ಆಹ್ವಾನ ನೀಡಲು ಬಂದಿಲ್ಲ. ಒಬ್ಬೊಬ್ಬ ನಾಯಕರು, ಕಾರ್ಯಕರ್ತರು ಕನಿಷ್ಠ 10 ಜನರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಗುರಿ ನೀಡಲು ಬಂದಿದ್ದೇನೆ. ಕಾಂಗ್ರೆಸ್ ಪಕ್ಷವೇ ಈ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ ಈ ದೇಶದ ಇತಿಹಾಸ, ಎಲ್ಲರೂ ಸೇರಿ ಮತ್ತಷ್ಟು ಪಕ್ಷವನ್ನು ಬಲಪಡಿಸೋಣ. ಇತರರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಕೆಲಸವನ್ನು ಬೆಂಗಳೂರಿಗೆ ಬಂದು ಮಾಡಬೇಕಾಗಿಲ್ಲ, ನೀವು ಇರುವ ಸ್ಥಳಗಳಲ್ಲೇ ಈ ಕೆಲಸ ಮಾಡಬೇಕು ಎಂದು ಹೇಳಿದರು.

    ಕಳೆದ ವರ್ಷ ಇದೇ ಹೊತ್ತಿನಲ್ಲಿ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಅವರ ಜೊತೆ ಭಾರತ್ ಜೋಡೋ ಯಾತ್ರೆಯಲ್ಲಿ ಹೆಜ್ಜೆ ಹಾಕುತ್ತಿದ್ದೆವು. ಆದರೆ ಇಂದು ತಾಯಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡಿ ಅಂಬಾರಿ ಜೊತೆ ಹೆಜ್ಜೆ ಹಾಕುತ್ತಿದ್ದೇವೆ.

   ಅಂಬಾರಿ ಮೆರವಣಿಗೆಯಲ್ಲಿ ಗ್ಯಾರಂಟಿ ಯೋಜನೆಗಳ ಬಗ್ಗೆ ಟ್ಯಾಬ್ಲೋ ಮೆರವಣಿಗೆ ಮಾಡಲಾಯಿತು. ಇಡೀ ದೇಶವೇ ‘ಕರ್ನಾಟಕ ಮಾದರಿ’ ಅನುಕರಣೆ ಮಾಡಲು ಕಾಯುತ್ತಿದೆ. ಈ ದೇಶದ ಪ್ರಧಾನಿ ಮೋದಿಯವರು ಗ್ಯಾರಂಟಿ ಯೋಜನೆಯಿಂದ ರಾಜ್ಯ ದಿವಾಳಿಯಾಗುತ್ತದೆ ಎಂದರು. ಆದರೆ ಈಗ ಐದು ಗ್ಯಾರಂಟಿಗಳ ಬಗ್ಗೆ ಎಲ್ಲರೂ ವ್ಯಾಖ್ಯಾನ ಮಾಡುತ್ತಿದ್ದಾರೆ ಎಂದು ಉಪಮುಖ್ಯಮಂತ್ರಿ ಹೇಳಿದರು.

    ಯಡಿಯೂರಪ್ಪ ಅವರು ಒಂದು ಕಾಳು ಅಕ್ಕಿ ಕಡಿಮೆಯಾದರೂ ಹೋರಾಟ ಮಾಡುತ್ತೇನೆ ಎಂದು ಹೇಳುತ್ತಿದ್ದರು. ಗೃಹಲಕ್ಷಿ ಯೋಜನೆಯಿಂದ ಅತ್ತೆ- ಸೊಸೆಗೂ ಜಗಳ ತಂದು ಹಾಕುತ್ತಿದೆ ಸರ್ಕಾರ ಎಂದು. ಆದರೆ ಎಲ್ಲರ ಮಾತುಗಳು ಸುಳ್ಳಾಗಿವೆ, ಮೈಸೂರು ದಸರಾಗೆ ಲಕ್ಷಾಂತರ ತಾಯಂದಿರು, ಅಕ್ಕ- ತಂಗಿಯರು ತಮ್ಮ ಮಕ್ಕಳನ್ನು ಕರೆದುಕೊಂಡು ಬಂದು, ಇಡೀ ಮೈಸೂರಿನ ತುಂಬಾ ಮಹಿಳೆಯರೇ ಇದ್ದರು. ನನ್ನ ಮನೆಯವರನ್ನು ದಸರಾ ನೋಡಲು ಕರೆದುಕೊಂಡು ಹೋಗಿದ್ದೆ, ಇಂತಹ ಬರಗಾಲದಲ್ಲೂ ಜನ ಸಂತೋಷದಿAದ ಇರುವುದನ್ನು ನೋಡಿದೆ. ವಾಹನ ದಟ್ಟಣೆ ಹೆಚ್ಚಿದ್ದ ಕಾರಣ ಒಂದು ಗಂಟೆ ತಡವಾಯಿತು ಆದರೂ ಜನರನ್ನು ಕಂಡು ಸಂತೋಷವಾಯಿತು.

    ನಾವು ಕೇವಲ ಬಸ್ ಪ್ರಯಾಣ ಮಾತ್ರ ಉಚಿತ ನೀಡಿದ್ದೇವೆ. ಹೋಟೆಲ್, ದೇವಸ್ಥಾನ, ಶಾಪಿಂಗ್ ಸೇರಿದಂತೆ ಅನೇಕ ಕಡೆಗಳಲ್ಲಿ ಖರ್ಚು ಮಾಡಿರುತ್ತಾರೆ. ಇದಕ್ಕೆ ನಾವು ಹಣ ಕೊಟ್ಟಿದ್ದೇವೆಯೇ? ಇಲ್ಲ ಆದರೆ ಗ್ಯಾರಂಟಿ ಯೋಜನೆಗಳಿಂದ ಹಣದ ವಹಿವಾಟು ಹೆಚ್ಚಾಗಿದೆ. ಹೋಟೆಲ್, ವಸತಿ ಸೇರಿದಂತೆ ಅನೇಕ ಕಡೆ ಬಿಲ್ ಕಟ್ಟುತ್ತಾರೆ. ಇದರಿಂದ ತೆರಿಗೆ ಸಂಗ್ರಹ ಪರೋಕ್ಷವಾಗಿ ಹೆಚ್ಚಳವಾಗುತ್ತಿದೆ ಎಂದು ಹೇಳಿದರು.

    ಗೃಹಲಕ್ಷಿಯರು ಶಕ್ತಿ ತುಂಬಿದರು, ಗೃಹಲಕ್ಷಿಯರು ಮನೆ ಬೆಳಗುತ್ತಿದ್ದಾರೆ, ತಮ್ಮ ಪಾಲಿಗೆ ಬಂದ ಹಣವನ್ನು ಸಂಸಾರಕ್ಕೆ ವಿತರಣೆ ಮಾಡುತ್ತಿದ್ದಾರೆ. ಇದು ಜನರಿಗೆ ನಮ್ಮ ಪಕ್ಷ ನೀಡಿರುವ ಶಕ್ತಿ. ನವರಾತ್ರಿಯಲ್ಲಿ ವಿಜಯದಶಮಿಯಾಗಿ ಮೊದಲನೇ ದಿನ. ಈ ನಾಡಿಗೆ ಆವರಿಸಿರುವ ಬರಗಾಲ ಮುಕ್ತಿಯಾಗಲಿ, ಜನರಿಗೆ ನೆಮ್ಮದಿ ಸಿಗಲಿ, ನಾಡಿನಲ್ಲಿ ಶಾಂತಿ ನೆಲೆಸಬೇಕು ಎಂದು ಪ್ರಾರ್ಥನೆ ಮಾಡಿದ್ದೇವೆ.

    ಜೆಡಿಎಸ್ ಪಕ್ಷದ ಸಾವಿರಾರು ಕಾರ್ಯಕರ್ತರನ್ನು ಪಕ್ಷಕ್ಕೆ ಬರ ಮಾಡಿಕೊಳ್ಳಲು ಮೈಸೂರಿನಿಂದ ಓಡೋಡಿ ಬಂದೆ. ಮುಖ್ಯಮಂತ್ರಿಗಳು ಸಹ ಈ ಕಾರ್ಯಕ್ರಮಕ್ಕೆ ಬರಬೇಕಾಗಿತ್ತು, ಕೊನೆ ಕ್ಷಣದಲ್ಲಿ ಬೇರೆ ಕಾರ್ಯಕ್ರಮ ನಿಗದಿಯಾದ ಕಾರಣ ಬರಲಾಗಲಿಲ್ಲ.

    ಶ್ರೀಕಾಂತ್ ಅವರು ಹಳೆಯ ಗೆಳೆಯ, ಒಳ್ಳೆಯ ಸಂಘಟನಾ ಚತುರ. ಬಹಳ ಕಾಲದಿಂದ ಗಾಳ ಹಾಕುತ್ತಲೇ ಇದ್ದೆ, ಬಲೆಗೆ ಬಿದ್ದಿರಲಿಲ್ಲ. ಈತನಿಗೆ ಸಾಕಷ್ಟು ಆಶ್ವಾಸನೆ ನೀಡಿದ್ದೆವು, ಬಹಿರಂಗವಾಗಿ ಹೇಳಲು ಆಗುವುದಿಲ್ಲ.
ಬದುಕಿನಲ್ಲಿ ಏನಾದರೂ ಸಾಧನೆ ಮಾಡಬೇಕು ಎಂದು ಶಿವಮೊಗ್ಗ, ಬೆಂಗಳೂರಿನಲ್ಲಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದರು. ಶ್ರೀಕಾಂತ್ ಅವರಿಗೆ ನಾಯಕರನ್ನು ಸೃಷ್ಟಿಮಾಡುವ ದೊಡ್ಡ ಶಕ್ತಿಯಿದೆ. ಇದಕ್ಕೆ ಸಾಕ್ಷಿಯಾಗಿ, ಯಶವಂತಪುರ, ಶಿವಮೊಗ್ಗದ ಎಲ್ಲಾ ಪಕ್ಷಗಳ ನಾಯಕರು ಬಂದಿದ್ದಾರೆ ಎಂದರು.

ಮಹಮದ್ ಷಫಿ ಅವರು ಸಹ ಪಕ್ಷದ ಆಸ್ತಿಯಾಗಿದ್ದವರು. ಏಕೆ ದುಡುಕಿನ ನಿರ್ಧಾರ ತೆಗೆದುಕೊಂಡರೋ ಗೊತ್ತಿಲ್ಲ, ಮತ್ತೆ ಅವರನ್ನು ಭವ್ಯವಾಗಿ ಆಹ್ವಾನ ಮಾಡುತ್ತಿದ್ದೇವೆ. ಖುದ್ದಾಗಿ ಪರಮೇಶ್ವರ್ ಅವರೇ ಬರುತ್ತೇನೆ ಎಂದು ಹೇಳಿದ್ದರು. ದಸರಾಗೆ ದುಡಿದ ಪೊಲೀಸರಿಗೆ ಅಭಿನಂದನಾ ಸಮಾರಂಭ ಇದ್ದ ಕಾರಣ ಬರಲಾಗಲಿಲ್ಲ.

ಈ ನಾಡಿನ ಜನತೆಯೇ ನಮ್ಮ ದೇವರುಗಳು. ಕಾಲನ ಓಟದಲ್ಲಿ ಯಾವುದೂ ಶಾಶ್ವತವಲ್ಲ, ಬಿಜೆಪಿ- ಜೆಡಿಎಸ್ ಗೆಳೆಯರಿಗೆ ಈ ಮಾತನ್ನು ಹೇಳುತ್ತಿದ್ದೇನೆ. ಜನರ ಸೇವೆಯೇ ಜನಾರ್ದನ ಸೇವೆ ಎಂದು ನಾವೆಲ್ಲಾ ಕೆಲಸ ಮಾಡಬೇಕಿದೆ. ಪಕ್ಕಕ್ಕೆ ಸೇರುವವರೆಲ್ಲಾ ಹಳೆಯದನ್ನೆಲ್ಲಾ ಮರೆತು ಪಕ್ಷಕ್ಕೆ ದುಡಿಯಬೇಕು ಎಂದರು.

ಇದೇ ವೇಳೆ ಮಾಜಿ ಮೇಯರ್ ನಾಗರಾಜ್, ಮಾಜಿ ಉಪ ಮೇಯರ್ ಪಾಲಾಕ್ಷ, ರಾಜಣ್ಣ, ಮಾಜಿ ನಗರ ಸಭಾ ಸದಸ್ಯರಾದ ಉಮಾನ ಅವರು ಸೇರಿದಂತೆ ಸಾವಿರಾರು ಕಾರ್ಯಕರ್ತರು ಜೆಡಿಎಸ್ ಮತ್ತು ಬಿಜೆಪಿ ಪಕ್ಷ ತೊರೆದು ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆಯಾದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap