ನವದೆಹಲಿ:
ದೆಹಲಿಯಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೇರುತ್ತಿದ್ದಂತೆ ಹಲವು ವಿಷಯಗಳಲ್ಲಿ ಬದಲಾವಣೆಯನ್ನು ತರುತ್ತಿದೆ. ಲೆಫ್ಟಿನೆಂಟ್ ಗವರ್ನರ್ ಮತ್ತು ದೆಹಲಿ ಸರ್ಕಾರದ ನಡುವಿನ ಕಾನೂನು ವಿವಾದಗಳು ಅಂತ್ಯಗೊಳಿಸುವ ಸೂಚನೆಯಾಗಿ, ರಾಷ್ಟ್ರ ರಾಜಧಾನಿಯಲ್ಲಿನ ಬಿಜೆಪಿ ನೇತೃತ್ವದ ಸರ್ಕಾರವು ಲೆಫ್ಟಿನೆಂಟ್ ಗವರ್ನರ್ ವಿರುದ್ಧದ ಹಲವಾರು ಪ್ರಕರಣಗಳನ್ನು ಹಿಂಪಡೆಯಲು ಪ್ರಾರಂಭಿಸಿದೆ ಎಂದು ಮೂಲಗಳು ತಿಳಿಸಿವೆ.
ಈ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ ಎಂದು ತಿಳಿದುಬಂದಿದೆ. ಲೆಫ್ಟಿನೆಂಟ್ ಗವರ್ನರ್ ಮತ್ತು ಕೇಂದ್ರ ಸರ್ಕಾರದ ವಿರುದ್ಧ ರಾಜಕೀಯ ನಕಾರಾತ್ಮಕತೆಯ ಹಿನ್ನೆಲೆಯಲ್ಲಿ ದಾಖಲಾಗಿದ್ದ ಎಲ್ಲಾ ಪ್ರಕರಣಗಳನ್ನು ಹಿಂಪಡೆಯಲು ನಾವು ನಿರ್ಧರಿಸಿದ್ದೇವೆ ಎಂದು ನೂತನವಾಗಿ ರಚನೆಗೊಂಡಿರುವ ದೆಹಲಿ ಸರ್ಕಾರ ಹೇಳಿದೆ ಎಂದು ತಿಳಿದು ಬಂದಿದೆ.
ಈ ಪ್ರಕರಣಗಳಲ್ಲಿ ಕೆಲವು ಹಲಿ ವಿದ್ಯುತ್ ನಿಯಂತ್ರಣ ಆಯೋಗದ (DERC) ಅಧ್ಯಕ್ಷರು, ದೆಹಲಿ ಜಲ ಮಂಡಳಿಗೆ ಹಣಕಾಸು ನೆರವು, ದೆಹಲಿ ಗಲಭೆ ಪ್ರಕರಣಗಳಲ್ಲಿ ವಕೀಲರ ನೇಮಕಾತಿ, ವಿದೇಶಗಳಲ್ಲಿ ಶಿಕ್ಷಕರ ತರಬೇತಿ ಮತ್ತು ಯಮುನಾ ಮಾಲಿನ್ಯದ ಕುರಿತು ಉನ್ನತ ಮಟ್ಟದ ಸಮಿತಿಗೆ ಸಂಬಂಧಿಸಿದ ಕೇಸ್ಗಳಾಗಿವೆ.
ಆಮ್ ಆದ್ಮಿ ಪಕ್ಷ ಅಧಿಕಾರದಲ್ಲಿದ್ದಾಗ ದೆಹಲಿ ಸರ್ಕಾರ ಮತ್ತು ಲೆಫ್ಟಿನೆಂಟ್ ಗವರ್ನರ್ಗಳಾದ ನಜೀಬ್ ಜಂಗ್, ಅನಿಲ್ ಬೈಜಲ್ ಮತ್ತು ವಿಕೆ ಸಕ್ಸೇನಾ ನಡುವೆ ಒಂದೆಲ್ಲಾ ಒಂದು ವಿಷಯಕ್ಕೆ ಜಟಾಪಟಿ ನಡೆಯುತ್ತಿತ್ತು. ಹಲವಾರು ಭಿನ್ನಾಭಿಪ್ರಾಯಗಳು ನ್ಯಾಯಾಲಯಗಳ ಮೆಟ್ಟಿಲೇರಿದ್ದವು. ಅರವಿಂದ್ ಕೇಜ್ರಿವಾಲ್ ಮತ್ತು ನಂತರ ಆತಿಶಿ ನೇತೃತ್ವದ ಆಪ್ ಸರ್ಕಾರವು, ಲೆಫ್ಟಿನೆಂಟ್ ಗವರ್ನರ್ (ಎಲ್ಜಿ) ಉದ್ದೇಶಪೂರ್ವಕವಾಗಿ ಕೆಲ ನೀತಿಗಳ ಅನುಷ್ಠಾನಕ್ಕೆ ಅಡ್ಡಿ ಮಾಡುತ್ತಿದ್ದಾರೆ ಎಂದು ದೂರಿದ್ದರು.
ದೆಹಲಿ ವಿದ್ಯುತ್ ನಿಯಂತ್ರಣ ಆಯೋಗದ ಅಧ್ಯಕ್ಷರ ನೇಮಕದ ಬಗ್ಗೆಆಪ್ ಮತ್ತು ಲೆಫ್ಟಿನೆಂಟ್ ಗವರ್ನರ್ ನಡುವೆ ಭಿನ್ನಾಭಿಪ್ರಾಯವಿತ್ತು. ಲೆಫ್ಟಿನೆಂಟ್ ಗವರ್ನರ್ ವಿದ್ಯುತ್ ಸಬ್ಸಿಡಿ ಯೋಜನೆಯನ್ನು ಕೊನೆಗೊಳಿಸಲು ಬಯಸುತ್ತಿದ್ದಾರೆ ಎಂದು ಆಪ್ ಆರೋಪಿಸಿದ್ದರು. ಸರ್ಕಾರಿ ವಕೀಲರನ್ನು ನೇಮಿಸುವ ಅಧಿಕಾರವನ್ನು ಲೆಫ್ಟಿನೆಂಟ್ ಗವರ್ನರ್ಗೆ ವಹಿಸುವ ಕೇಂದ್ರದ ನಿರ್ಧಾರವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ನಲ್ಲಿ ಬಾಕಿ ಇರುವ ಅರ್ಜಿ ಸೇರಿದಂತೆ ಇನ್ನೂ ಹಲವಾರು ಅರ್ಜಿಗಳು ಬಾಕಿ ಇವೆ.
ಇದೀಗ ಆಡಳಿತಾರೂಢ ಬಿಜೆಪಿ ಸರ್ಕಾರ ದೆಹಲಿ ಸರ್ಕಾರ ಮತ್ತು ಎಲ್ಜಿ ಕಚೇರಿ ಹಾಗೂ ಕೇಂದ್ರ ಸರ್ಕಾರದ ನಡುವಿನ ಘರ್ಷಣೆಯನ್ನು ಪರಿಹರಿಸಲು ಈ ಪ್ರಕರಣಗಳು ಮತ್ತು ಇತರ ಪ್ರಕರಣಗಳನ್ನು ಹಿಂಪಡೆಯುವ ನಿರ್ಧಾರಕ್ಕೆ ಬಂದಿದೆ ಎಂದು ತಿಳಿದು ಬಂದಿದೆ.
