ತಿಪಟೂರು:
ಸಂಕಷ್ಟದಲ್ಲಿ ಉದ್ಯೋಗ ಮೇಳ ಆಯೋಜನೆ ಉತ್ತಮ ಕಾರ್ಯ : ಕೆರೆಗೋಡಿ ಶ್ರೀ
ದೇಶದಲ್ಲಿ ವಿದ್ಯಾವಂತ ನಿರುದ್ಯೋಗಿಗಳ ಸಂಖ್ಯೆ ಹೆಚ್ಚುತ್ತಿದೆ. ಎಲ್ಲರಿಗೂ ಉದ್ಯೋಗ ದೊರೆತರೇ ದೇಶದ ಮಾನವ ಸಂಪನ್ಮೂಲ ಬಳಕೆಯಾಗಿ ದೇಶ ಅಭಿವೃದ್ಧಿಯಾಗುತ್ತದೆ ಎಂದು ಕೆರೆಗೋಡಿ ಮಠದ ಶ್ರೀ ಗುರುಪರದೇಶಿಕೇಂದ್ರ ಸ್ವಾಮಿಜಿಗಳು ನುಡಿದರು.
ನಗರದ ಒಕ್ಕಲಿಗರ ಭವನದಲ್ಲಿ ಸಮಾಜ ಸೇವಕ ಕೆ.ಟಿ.ಶಾಂತಕುಮಾರ್ ಆಯೋಜಿಸಿದ್ದ ಉದ್ಯೋಗ ಮೇಳವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದ ಅವರು, ಕೊರೊನಾ ಮತ್ತು ಅತಿವೃಷ್ಟಿಯಿಂದ ಜನರು ಹೈರಾಣಾಗಿದ್ದಾರೆ.
ಇಂತಹ ಸಂದರ್ಭದಲ್ಲಿ ಕಾಲದಲ್ಲಿ ಪಟ್ಟಣದಿಂದ ಹಿಂದುರುಗಿದ ಮಕ್ಕಳು ಮನೆಯಲ್ಲಿ ಕೆಲಸವಿಲ್ಲದೆ ಕುಳಿತಿರುವುದನ್ನು ಕಂಡು ಉದ್ಯೋಗ ಮೇಳ ಮಾಡುತ್ತಿರುವುದು ಒಂದು ಉತ್ತಮವಾದ ಕೆಲಸವಾಗಿದ್ದು, ನಿರುದ್ಯೋಗಿಗಳು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ಶ್ರೀಗಳು ತಿಳಿಸಿದರು.
ಉದ್ಯೋಗಂ ಸ್ತ್ರೀ-ಪುರುಷ ಲಕ್ಷಣಂ :
ಸಮಾಜ ಸೇವಕ ಕೆ.ಟಿ.ಶಾಂತಕುಮಾರ್ ಮಾತನಾಡಿ, ಮೊದಲು ಉದ್ಯೋಗಂ ಪುರುಷ ಲಕ್ಷಣಂ ಎಂದಿತ್ತು. ಇಂದು ಮನೆಯ ಗಂಡ-ಹೆಂಡತಿ ಇಬ್ಬರೂ ಕೆಲಸ ಮಾಡಿದರೂ ಒಂದು ಸಂಸಾರವನ್ನು ಮುನ್ನಡೆಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಉದ್ಯೋಗವು ಸ್ತ್ರೀ-ಪುರುಷರಿಬ್ಬರ ಲಕ್ಷಣವಾಗಿದೆ ಎಂದರಲ್ಲದೇ, ದೇಶದಲ್ಲಿ ಹೆಚ್ಚಿನ ಮಾನವ ಸಂಪನ್ಮೂಲವಿದ್ದರೂ ಅದನ್ನು ಬಳಸಿಕೊಳ್ಳುವಂತಹ ಉದ್ಯೋಗಗಳು ಸೃಷ್ಠಿಯಾಗದೇ ವಿದ್ಯಾಭ್ಯಾಸ ಮುಗಿಸಿದ ಅದೆಷ್ಟೊ ಜನರು ಮನೆಯ ಹತ್ತಿರ ವ್ಯರ್ಥವಾಗಿ ಕಾಲ ಕಳೆಯುವಂತಾಗಿದೆ ಎಂದು ಜನರು ಹೇಳಿದಾಗ ನಿರುದ್ಯೋಗಿ ಯುವ ಜನರಿಗಾಗಿ ಈಗ ಮತ್ತೊಂದು ಉದ್ಯೋಗ ಮೇಳವನ್ನು ನಡೆಸುತ್ತಿದ್ದೇನೆ ಎಂದರು.
740 ಜನರಿಗೆ ಉದ್ಯೋಗ : ಉದ್ಯೋಗ ಮೇಳದಲ್ಲಿ 80 ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಿದ್ದು, ಸುಮಾರು 2,800 ಕ್ಕಿಂತಲೂ ಹೆಚ್ಚು ಉದ್ಯೋಗಾಕಾಂಕ್ಷಿಗಳು ನೊಂದಾಯಿಸಿಕೊಂಡಿದ್ದರು. ಇದರಲ್ಲಿ 740 ಜನರಿಗೆ ಉದ್ಯೋಗ ಸಿಕ್ಕಿದ್ದು ಉಳಿದವರಿಗೂ ಉದ್ಯೋಗ ದೊರಕಿಸಿಕೊಡುವ ಭರವಸೆಯನ್ನು ಕೆ.ಟಿ.ಶಾಂತಕುಮಾರ್ ನೀಡಿದ್ದಾರೆ.
ಇದೇ ಸಂದರ್ಭದಲ್ಲಿ ಕಲೆ, ಶಿಕ್ಷಣ, ಕೃಷಿ, ಸಾಹಿತ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಹಾಗೂ ಕೊರೊನಾ ವಾರಿಯರ್ಸ್ಗಳಿಗೆ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಕಲಾವಿದರಾದ ವಿಕ್ರಂಸೂರಿ, ನಮಿತಾ, ಅಪೂರ್ವ, ಮಧುಹೆಗ್ಡೆ, ದಯಾನಂದ್ಸಾಗರ್, ರೈತಸಂಘದ ರಾಜ್ಯಾಧ್ಯಕ್ಷ ಲಕ್ಷ್ಮೀನಾರಾಯಣಗೌಡ, ಜಿಲ್ಲಾಧ್ಯಕ್ಷ ಶಿವಪ್ರಕಾಶ್, ಸಾಸಲುಹಳ್ಳಿ ನವೀನ್, ಸುದರ್ಶನ್, ಹೇಮಂತ್ ಮತ್ತಿತರರು ಉಪಸ್ಥಿತರಿದ್ದರು.
ಸಮಾಜಕ್ಕೆ ಮಿಡಿಯುವ ವ್ಯಕ್ತಿ :
ಕೆ.ಟಿ.ಶಾಂತಕುಮಾರ್ ಸಮಾಜಕ್ಕೆ ಮಿಡಿಯುವಂತಹ ವ್ಯಕ್ತಿ. ಈ ಹಿಂದೆ ಬರಗಾಲ ಬಂದಾಗ ಟ್ಯಾಂಕರ್ ಮೂಲಕ ಹಳ್ಳಿ-ಹಳ್ಳಿಗಳಿಗೆ ನೀರನ್ನೊದಗಿಸಿದ್ದಾರೆ. ಹಾಗೆಯೇ ಗೋವುಗಳಿಗೆ ಮೇವನ್ನು ವಿತರಿಸಿದ್ದಾರೆ. ಈಗಾಗಲೇ 2 ಉದ್ಯೋಗ ಮೇಳಗಳನ್ನು ಯಶಸ್ವಿಯಾಗಿ ಆಯೋಜಿಸಿ 3ನೇ ಉದ್ಯೋಗ ಮೇಳವನ್ನು ಈಗ ಮಾಡುತ್ತಿದ್ದು, ಯುವ ಜನತೆಗೆ ಸೂಕ್ತ ಉದ್ಯೋಗ ದೊರೆಯಲಿ. ಶಾಂತಕುಮಾರ್ರಿಂದ ಸಮಾಜಕ್ಕೆ ಒಳ್ಳೆಯದಾಗುವಂತಹ ಹಲವಾರು ಕಾರ್ಯಗಳು ಮುಂದೆಯೂ ಜರುಗಲಿ ಎಂದು ಆಶೀರ್ವಚನ ನೀಡಿದರು.
ಕೇಂದ್ರದಲ್ಲಿ ಮೋದಿ ಪ್ರಧಾನಿಯಾದಾಗಿನಿಂದಲೂ ಉದ್ಯೋಗ ನೀಡುತ್ತೇನೆ ಎಂದು ಹೇಳುತ್ತಲೇ ಸರ್ಕಾರಿ ಉದ್ದಿಮೆ-ಸಂಸ್ಥೆಗಳನ್ನು ಮಾರುತ್ತಿದ್ದಾರೆ. ಇವರಿಂದ ಉದ್ಯೋಗ ಸೃಷ್ಠಿಯಂತೂ ಸಾಧ್ಯವೇ ಇಲ್ಲ. ಅದಕ್ಕಾಗಿ ವಿದ್ಯಾರ್ಥಿ ದೆಸೆಯಿಂದಲೇ ಕೌಶಲ್ಯವನ್ನು ವೃದ್ಧಿಸಿಕೊಂಡು ತಮ್ಮದೇ ಆದಂತಹ ಆವಿಷ್ಕಾರಗಳನ್ನು ಮಾಡಿ ಮುಂದೆ ಉದ್ಯೋಗ ನೀಡುವಂತಾಗಬೇಕು.
-ಕೆ.ಟಿ.ಶಾಂತಕುಮಾರ್, ಸಮಾಜ ಸೇವಕ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
