ಮುಂಬಯಿ:
ಕಳೆದ ಪಂಜಾಬ್ ವಿರುದ್ಧ ಪಂದ್ಯದಲ್ಲಿ ಪ್ರಿಯಾನ್ಶ್ ಆರ್ಯರನ್ನು ಔಟ್ ಮಾಡಿದ ಬಳಿಕ ನೋಟ್ಬುಕ್ ಸಂಭ್ರಮಾಚರಣೆ ಮಾಡಿ ಭಾರೀ ದಂಡಕ್ಕೆ ಗುರಿಯಾಗಿದ್ದ ಲಕ್ನೋ ಸ್ಪಿನ್ನರ್ ದಿಗ್ವೇಶ್ ರಾಥಿ ಗೆ ಪಂದ್ಯದ ಸಂಭಾವನೆಯ ಶೇ.25ರಷ್ಟು ದಂಡ ವಿಧಿಸಲಾಗಿತ್ತು. ಈ ತಪ್ಪಿನಿಂದ ಬುದ್ಧಿ ಕಲಿಯದ ದಿಗ್ವೇಶ್ ಮುಂಬೈ ವಿರುದ್ಧದ ಪಂದ್ಯದಲ್ಲೂ ನೋಟ್ಬುಕ್ ಸೆಲೆಬ್ರೇಷನ್ ಮಾಡಿ ಬಿಸಿಸಿಐ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಮುಂಬೈ ತಂಡದ ಆಟಗಾರ ನಮನ್ ಧೀರ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದ ಬಳಿಕ ದಿಗ್ವೇಶ್ ರಾಥಿ ನೋಟ್ಬುಕ್ ಸೆಲೆಬ್ರೇಷನ್ ಮಾಡಿದರು. ದ್ವಿತೀಯ ಬಾರಿ ಈ ತಪ್ಪು ಮಾಡಿದ ಕಾರಣ ಇವರಿಗೆ ಬಿಸಿಸಿಐ ಈ ಬಾರಿ ಎಷ್ಟು ದಂಡ ವಿಧಿಸಲಿದೆ ಎಂದು ಕಾದು ನೋಡಬೇಕಿದೆ. ಪಂದ್ಯದಲ್ಲಿ ಉತ್ತಮ ಬೌಲಿಂಗ್ ದಾಳಿ ನಡೆಸಿದ ರಾಥಿ ನಾಲ್ಕು ಓವರ್ನಲ್ಲಿ ಕೇವಲ 21 ರನ್ ಬಿಟ್ಟುಕೊಟ್ಟು 1 ವಿಕೆಟ್ ಪಡೆಯುವ ಮೂಲಕ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಶುಕ್ರವಾರ ಇಲ್ಲಿನ ಏಕನಾ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಲಕ್ನೋ ಸೂಪರ್ ಜಯಂಟ್ಸ್ ತಂಡ, ತನ್ನ ಪಾಲಿನ 20 ಓವರ್ಗಳಲ್ಲಿ 203 ರನ್ಗಳನ್ನು ಕಲೆ ಹಾಕಿತು. ಬೃಹತ್ ಮೊತ್ತದ ಗುರಿ ಹಿಂಬಾಲಿಸಿದ ಮುಂಬೈ ಇಂಡಿಯನ್ಸ್ ನಿಗದಿತ 20 ಓವರ್ಗಳಿಗೆ 191 ರನ್ ಗಳಿಸಲಷ್ಟೇ ಶಕ್ತವಾಯಿತು.
17ನೇ ಓವರ್ನಲ್ಲಿ ಸೂರ್ಯ ಔಟಾಗುವುದರೊಂದಿಗೆ ತಂಡ ಸೋಲಿನ ಸುಳಿಗೆ ಸಿಲುಕಿತು. ಹಾರ್ದಿಕ್(28 ರನ್), ತಿಲಕ್ ವರ್ಮಾಗೆ ತಂಡವನ್ನು ಗೆಲ್ಲಿಸಲು ಸಾಧ್ಯವಾಗಲಿಲ್ಲ. 2 ಓವರ್ಗೆ 29 ರನ್ ಬೇಕಿದ್ದಾಗ 19ನೇ ಓವರ್ನಲ್ಲಿ ಕೇವಲ 7 ರನ್ ನೀಡಿದ ಶಾರ್ದೂಲ್ ಲಕ್ನೋಗೆ ಗೆಲುವು ತಂದುಕೊಟ್ಟರು.
