ನನೆಗುದಿಗೆ ಬಿದ್ದಿರುವ ಕೇಂದ್ರದ ಯೋಜನೆಗಳಿಗೆ ಕಾಯಕಲ್ಪ ಸಿಗುವುದೇ?

 ತುಮಕೂರು:                                                                                                                                                   ದಿಶಾ ಸಮಿತಿ ನೂತನ ಅಧ್ಯಕ್ಷರಾಗಿ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ | ಇಂದು ಸಭೆ

         ಖಡಕ್, ನೇರ ಮಾತುಗಳಿಂದ ಅಧಿಕಾರಿಗಳಿಗೆ ಚಾಟಿ ಬೀಸುವ ಛಾತಿಯ ಎ.ನಾರಾಯಣಸ್ವಾಮಿ ಅವರು ದಿಶಾಸಮಿತಿಯ ನೂತನ ಅಧ್ಯಕ್ಷರಾಗಿ ನಿಯೋಜಿತರಾಗಿ, ಇಂದು ಸಭೆ ನಡೆಸುತ್ತಿದ್ದು, ಯಾವರೀತಿ ಪ್ರಗತಿಯ ಪರಾಮರ್ಶೆ ಮಾಡುವರು, ಅದರ ಫಲಶೃತಿ ಮುಂದಿನ ದಿನಗಳಲ್ಲಿ ಕಾಣಬಹುದೇ ಕಾದುನೋಡಬೇಕಿದೆ.

ಜಿಲ್ಲಾ ದಿಶಾ ಸಮಿತಿ ಅಧ್ಯಕ್ಷರಾಗಿ ನೂತನವಾಗಿ ನಿಯೋಜಿತರಾದ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಅಧ್ಯಕ್ಷತೆಯಲ್ಲಿ ಪ್ರಥಮ ಸಭೆ ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಿಗದಿಯಾಗಿದ್ದು,

ಕೇಂದ್ರ ಸರಕಾರಕ್ಕೆ ಸಂಬಂಧಿಸಿದ ನನೆಗುದಿಗೆ ಬಿದ್ದಿರುವ ಸಿರಾದ ಹೆರಿಟೇಜ್ ಹಬ್, ತುಮಕೂರು-ದಾವಣಗೆರೆ, ತುಮಕೂರು-ರಾಯದುರ್ಗ, ತುಮಕೂರು-ಅರಸೀಕೆರೆ ದ್ವಿಪಥ ಮಾರ್ಗ, ಭದ್ರಾ ಮೇಲ್ದಂಡೆ, ಎತ್ತಿನಹೊಳೆ ನೀರು ಸೇರಿದಂತೆ ಜಿಲ್ಲೆಯ ಜ್ವಲಂತ ಸಮಸ್ಯೆಗಳಿಗೆ ಕೇಂದ್ರ ಸಚಿವರು ಪರಿಹಾರ ಕಲ್ಪಿಸುವರೇ ಎಂಬ ನಿರೀಕ್ಷೆಗಳು ಹೆಚ್ಚಾಗಿವೆ.

ಕಳೆದ ವರ್ಷಾಂತ್ಯದಲ್ಲಿ ಕೇಂದ್ರ ಸಾಮಾಜಿಕ ನ್ಯಾಯ ಸಬಲೀಕರಣ ರಾಜ್ಯ ಸಚಿವರಾಗಿ ಅಧಿಕಾರ ವಹಿಸಿಕೊಂಡ ಬಳಿಕ ತುಮಕೂರು ಜಿಲ್ಲೆಯಲ್ಲೂ ಜನಾಶೀರ್ವಾದ ಯಾತ್ರೆಯ ಮೂಲಕ ಅದ್ದೂರಿ ಸ್ವಾಗತವನ್ನು ಎ.ನಾರಾಯಣಸ್ವಾಮಿ ಅವರಿಗೆ ಕೋರಲಾಗಿತ್ತು.

ಇದೀಗ ಕೇಂದ್ರ ಸಚಿವರಾಗಿರುವ ಕಾರಣಕ್ಕೆ ನಿಯಮದ ಅನುಸಾರ ಸಂಸದ ಜಿ.ಎಸ್.ಬಸವರಾಜ್ ಅವರ ಬದಲಾಗಿ ಎ.ನಾರಾಯಣಸ್ವಾಮಿ ಅವರನ್ನೇ ದಿಶಾ ಸಮಿತಿ ಅಧ್ಯಕ್ಷರಾಗಿ ನಿಯುಕ್ತಿಗೊಳಿಸಿ ಅಧ್ಯಕ್ಷತೆಯಲ್ಲೇ ಇಡೀ ಜಿಲ್ಲೆಯ ಕೇಂದ್ರ ಪುರಸ್ಕøತ ಯೋಜನೆಗಳು ಸೇರಿ ಪ್ರಗತಿ ಕಾಮಗಾರಿಗಳ ಪರಾಮರ್ಶೆ ಸಭೆಯನ್ನು ಇಂದು ಬೆಳಿಗ್ಗೆ 10.30ಕ್ಕೆ ನಡೆಸಲಾಗುತ್ತಿದೆ.

ಕಡತದಲ್ಲೇ ಉಳಿದಿದೆ ಸಿರಾ ಹೆರಿಟೇಜ್ ಹಬ್ : ಖಡಕ್, ನೇರ ಮಾತುಗಳಿಂದ ಅಧಿಕಾರಿಗಳಿಗೆ ಚಾಟಿ ಬೀಸುವ ಛಾತಿಯ ಎ.ನಾರಾಯಣಸ್ವಾಮಿ ಅವರು ದಿಶಾಸಮಿತಿಯ ಅಧ್ಯಕ್ಷರಾಗಿ ಯಾವರೀತಿ ಪ್ರಗತಿಯ ಪರಾಮರ್ಶೆ ಮಾಡುವರು, ಅದರ ಫಲಶೃತಿ ಮುಂದಿನ ದಿನಗಳಲ್ಲಿ ಕಾಣಬಹುದೇ ಎಂಬ ನಿರೀಕ್ಷೆಗಳು ಹೆಚ್ಚಾಗಿದೆ. ಪ್ರಮುಖವಾಗಿ ಕೇಂದ್ರ ಸಚಿವರೇ ಪ್ರತಿನಿಧಿಸುತ್ತಿರುವ ಶಿರಾ-ಹಿರಿಯೂರು ಕ್ಷೇತ್ರದಲ್ಲಿ ಮೀಸಲಿರಿಸಿರುವ 900 ಎಕರೆ ವಿಸ್ತೀರ್ಣದ ಕರ್ನಾಟಕ ಹೆರಿಟೇಜ್ ಹಬ್ ಕಡತದಲ್ಲಿ ಉಳಿದಿರುವ ಬಗ್ಗೆ ಪ್ರಶ್ನಿಸುವರೇ?,

ಇದೇ ವಿಷಯವಾಗಿ ಕೇಂದ್ರ ಸಚಿವರಾಗುವುದಕ್ಕೂ ಮುನ್ನ ಸಂಸದರಾಗಿ ಪ್ರಸ್ತಾಪಿಸಿದರೂ ಏನೂ ಕ್ರಮವಾಗದಿರುವ ಬಗ್ಗೆ ಪ್ರಸ್ತುತ ಅಧ್ಯಕ್ಷರಾಗಿ ಯಾವ ಕ್ರಮ ವಹಿಸುವರು ಎಂಬುದು ಸಹ ಕುತೂಹಲ ಮೂಡಿಸಿದೆ. ಹಿಂದಿನ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಈ ಹೆರಿಟೇಜ್ ಹಬ್ ಸಂಬಂಧ ಸಂಪುಟ ನಿರ್ಣಯವಾಗಿ ಸಿರಾದ ಉಜ್ಜನಕುಂಟೆ, ಮಾನಂಗಿಯಲ್ಲಿ 811 ಎಕರೆ ಜಾಗವನ್ನು ಸಹ ಕೋರಲಾಗಿದೆ.

ಶಟಲ್‍ನಂತಾಗಿರುವ ರೈಲು ಮಾರ್ಗದ ಯೋಜನೆಗಳಿಗೆ ಎಕ್ಸ್‍ಪ್ರೆಸ್ ವೇಗ ಸಿಗುವುದೇ?

ಕ್ಕೆ ಪ್ರಮುಖವಾಗಿ ಆಮೆಗತಿಯಲ್ಲಿ ಸಾಗುತ್ತಿರುವ ತುಮಕೂರು-ದಾವಣಗೆರೆ ರೈಲು ಮಾರ್ಗಕ್ಕೆ, ತುಮಕೂರು-ರಾಯದುರ್ಗ ರೈಲು ಮಾರ್ಗಕ್ಕೆ ಕ್ರಮವಾಗಿ 50 ಕೋಟಿ, 100 ಕೋಟಿ ಅನುದಾನವನ್ನು ಪ್ರಸಕ್ತ ಕೇಂದ್ರ ಬಜೆಟ್‍ನಲ್ಲಿ ಮೀಸಲಿರಿಸಿದ್ದು, ತುಮಕೂರು ಅರಸೀಕೆರೆ ದ್ವಿಪಥ ಮಾರ್ಗದ ಪ್ರಗತಿ ವೇಗವನ್ನು ಹೆಚ್ಚಿಸುವುದಾಗಿ ಘೋಷಿಸಲಾಗಿದೆ. ಈ ಕುರಿತು ಸಭೆಯಲ್ಲಿ ನಿರ್ಧಿಷ್ಟ ಗಡುವಿನ ಸೂಚನೆಯೊಂದಿಗೆ ಅಧಿಕಾರಿಗಳಿಂದ ಸಚಿವರು ಕೆಲಸ ತೆಗೆಸುವರೇ? ಕಾದು ನೋಡಬೇಕಿದೆ.

ಭದ್ರಾ, ಎತ್ತಿನಹೊಳೆ, ರೋಪ್‍ವೇ ಪ್ರಸ್ತಾಪವಾಗುವುದೇ?: ರಾಷ್ಟ್ರೀಯ ಯೋಜನೆಯಾಗಿ ಘೋಷಣೆಯಾಗದೆ ಕುಂಟುತ್ತಾ ಸಾಗಿರುವ ಭದ್ರಾಮೇಲ್ದಂಡೆ, ಎತ್ತಿನಹೊಳೆಯ ಯೋಜನೆ ತುಮಕೂರು-ಚಿತ್ರದುರ್ಗ ವ್ಯಾಪ್ತಿಯಲ್ಲೇ ಬರಲಿದ್ದು, ಈ ಯೋಜನೆಗೆ ಕೇಂದ್ರ ಸಚಿವರು ವೇಗ ಕೊಡುವರೇ ಎಂಬ ನಿರೀಕ್ಷೆ ಸಹ ಜನರಲ್ಲಿದ್ದು, ಸಂಸದ ಬಸವರಾಜು ಅವರ ಅಧ್ಯಕ್ಷತೆಯಲ್ಲಿ ನಡೆದ ಹಿಂದಿನ ದಿಶಾಸಭೆಗಳಲ್ಲಿ ನಿರ್ಣಯವಾಗಿ ಕೇಂದ್ರದ ಮುಂದಿರುವ ಮಧುಗಿರಿ ಉಪವಿಭಾಗ ವ್ಯಾಪ್ತಿಯ ಜವಳಿ ಪಾರ್ಕ್,

ಇಡೀ ರಾಜ್ಯದ ನದಿ ಜೋಡಣೆಯಿಂದ 600 ಟಿಎಂಸಿ ನೀರು ಪಡೆಯುವ ಕುರಿತ ಪ್ರಸ್ತಾವನೆಗಳು, ಜಲಜೀವನ್ ಮಿಷನ್‍ನಡಿ ಇಡೀ ಜಿಲ್ಲೆಯ 330 ಪಂಚಾಯಿಗಳ ಹಳ್ಳಿಗಳ ಮನೆ ಮನೆಗೆ ನೀರೊದಗಿಸಲು ಅಗತ್ಯವಾದ 2 ಟಿಎಂಸಿ ನೀರು ಅಲೋಕೇಷನ್ ಆಗಿಲ್ಲ. ಬರೀ 652 ಎಂಸಿಎಫ್‍ಟಿಯಷ್ಟು ಮಾತ್ರ ಆಗಿದೆ.

ಮಧುಗಿರಿ ಏಕಶಿಲಾ ಬೆಟ್ಟಕ್ಕೆ ರೋಪ್ ವೇ ಒದಗಿಸಲು ಕೇಂದ್ರದ ಬಜೆಟ್‍ನಲ್ಲಿ ಘೋಷಣೆಯಾದ ಪರ್ವತ್ ಮಾಲಾ ಯೋಜನೆ ಸಹಕಾರಿಯೆನಿಸಿದ್ದು, ಈ ಬಗ್ಗೆ ಸಭೆ ನಿರ್ಣಯಿಸುವುದೇ?.., ವಿಶೇಷವಾಗಿ ಸಚಿವರು ಪ್ರತಿನಿಧಿಸುವ ಪಾವಗಡಕ್ಕೆ ನೀರಿನ ಯೋಜನೆಯ ಜಾರಿಯಾಗದಿರುವುದರ ಬಗ್ಗೆ ಸಚಿವರ ಗಮನ ಹರಿಸಬೇಕಿದೆ.

ದಿಶಾ ನಿಯಮಾವಳಿಯಂತೆ ಜಿಲ್ಲೆಯ ಸಂಸದರು ಕೇಂದ್ರ ಸಚಿವರಾಗಿದ್ದರೆ ಅವರೇ ಸಭೆಯ ಅಧ್ಯಕ್ಷತೆ ವಹಿಸಬೇಕು.ಇಲ್ಲವೇ ಹಿರಿಯ ಸಂಸದರು ಅಧ್ಯಕ್ಷತೆ ವಹಿಸುತ್ತಿದ್ದರು. ಕೇಂದ್ರ ಸಚಿವರಾಗಿ ನಿಯೋಜನೆಗೊಂಡಿದ್ದರಿಂದ ನಾರಾಯಣಸ್ವಾಮಿ ಅವರು ಜಿಲ್ಲೆಯ ದಿಶಾಸಮಿತಿ ಅಧ್ಯಕ್ಷರಾಗಿ ಸಭೆ ನಡೆಸಲಿದ್ದು,

ನಾರಾಯಣಸ್ವಾಮಿ ಅವರು ಸಂಸದರಲ್ಲದೇ ಕೇಂದ್ರ ಸಚಿವರೂ ಆಗಿರುವುದರಿಂದ ಹಿಂದಿನ ದಿಶಾಸಮಿತಿ ನಿರ್ಣಯಗಳು, ಜಿಲ್ಲೆಯ ಹಲವು ಕೇಂದ್ರ ಪುರಸ್ಕøತ ಯೋಜನೆಗಳಿಗೆ ವೇಗ ಸಿಗುವ ನಿರೀಕ್ಷೆ ಇದೆ. ಕೇಂದ್ರದಿಂದ ಜಿಲ್ಲೆಗೆ ದೊರೆಯುವ ಅನುದಾನಗಳ ಸಮಗ್ರ ಮಾಹಿತಿ ಪಟ್ಟಿ 10 ಸಭೆಗಳಾದರೂ ಸದಸ್ಯರಿಗೆ ಸಿಕ್ಕಿಲ್ಲ. ಕೇಂದ್ರ ಸಚಿವರಾದರೂ ಕೊಡಿಸುವರೇ?

-ಕುಂದುರನಹಳ್ಳಿ ರಮೇಶ್, ಜಿಲ್ಲಾ ದಿಶಾ ಸಮಿತಿ ಸದಸ್ಯ.

 – ಎಸ್.ಹರೀಶ್ ಆಚಾರ್ಯ ತುಮಕೂರು

               ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link