ಹೈದ್ರಾಬಾದ್ :
‘ಪುಷ್ಪ 2’ ಸಿನಿಮಾ ಸದ್ಯ ವಿವಾದಗಳ ಮೂಲಕ ಸುದ್ದಿ ಆಗುತ್ತಿದೆ. ನಿರ್ದೇಶಕ ಸುಕುಮಾರ್ ಹಾಗೂ ಹೀರೋ ಅಲ್ಲು ಅರ್ಜುನ್ ಮಧ್ಯೆ ಯವುದೂ ಸರಿ ಇಲ್ಲ, ಹೀರೋ ಶೂಟಿಂಗ್ ಬರದೆ ವಿದೇಶಕ್ಕೆ ಹೋಗಿದ್ದಾರೆ ಎಂಬಿತ್ಯಾದಿ ವದಂತಿಗಳು ವೈರಲ್ ಆಗುತ್ತಿವೆ. ಈಗ ಗೊಂದಲಕ್ಕೆ ಅನೇಕರು ಸ್ಪಷ್ಟನೆ ನೀಡಿದ್ದಾರೆ. ಇವುಗಳ ಮಧ್ಯೆ ನಿರ್ದೇಶಕ ಸುಕುಮಾರ್ ಅವರು ಚಿತ್ರದ ಕ್ಲೈಮ್ಯಾಕ್ಸ್ ಶೂಟ್ಗೆ ರೆಡಿ ಆಗಿದ್ದಾರೆ. ಎರಡೆರಡು ಕ್ಲೈಮ್ಯಾಕ್ಸ್ ಶೂಟ್ ಮಾಡಲು ಅವರು ಸಿದ್ಧತೆ ಮಾಡಿಕೊಂಡಿದ್ದಾರೆ.
ಸದ್ಯ ಒಂದು ತಿಂಗಳ ಶೂಟ್ ಬಾಕಿ ಇದೆ ಎಂದು ವರದಿ ಆಗಿದೆ. ಅಲ್ಲು ಅರ್ಜುನ್ ಅವರು ಶೀಘ್ರವೇ ಸೆಟ್ ಸೇರಿಕೊಳ್ಳಲಿದ್ದಾರೆ. ಸದ್ಯ ಇತರ ಕಲಾವಿದರ ಶೂಟ್ಗಳನ್ನು ಮಾಡಲಾಗುತ್ತಿದೆ. ಆದಾಗ್ಯೂ ಒಂದು ತಿಂಗಳ ಶೂಟ್ ಬಾಕಿ ಇದೆ ಎಂದು ಹೇಳಲಾಗುತ್ತಿದೆ. ಫೈಟಿಂಗ್ ಹಾಗೂ ಸಾಂಗ್ ಒಂದನ್ನು ಶೂಟ್ ಮಾಡಿದರೆ ಬಹುತೇಕ ಚಿತ್ರೀಕರಣ ಮುಗಿದಂತೆ ಆಗಲಿದೆ. ಆ ಬಳಿಕ ನಿರ್ದೇಶಕರು ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿ ಆಗಲಿದ್ದಾರೆ.
ಕೆಲವು ವರದಿಗಳ ಪ್ರಕಾರ ಸುಕುಮಾರ್ ಅವರು ಎರಡು ಕ್ಲೈಮ್ಯಾಕ್ಸ್ಗೆ ಸಿದ್ಧತೆ ಮಾಡಿಕೊಂಡಿದ್ದಾರೆ. ಎರಡನ್ನೂ ಶೂಟ್ ಮಾಡಿ ಕೊನೆಯಲ್ಲಿ ಯಾವುದನ್ನು ಇಡಬೇಕು, ಯಾವುದನ್ನು ತೆಗೆಯಬೇಕು ಎಂದು ನಿರ್ಧರಿಸಲಿದ್ದಾರೆ. ಎಡಿಟಿಂಗ್ ವೇಳೆ ಅವರು ಟ್ವಿಸ್ಟ್ ನೀಡಲಿದ್ದಾರೆ. ಇತ್ತೀಚೆಗೆ ಸಿನಿಮಾಗಳ ದೃಶ್ಯಗಳು, ಕಥೆ ಲೀಕ್ ಆಗುತ್ತಿರೋ ಪ್ರಕರಣಗಳು ನಡೆಯುತ್ತಿವೆ. ಇದನ್ನು ತಪ್ಪಿಸಲು ಸುಕುಮಾರ್ ಅವರು ಈ ಪ್ಲ್ಯಾನ್ ಮಾಡಿದ್ದಾರೆ.
‘ಕೆಜಿಎಫ್ 2’ಗೆ ಮೂರನೇ ಪಾರ್ಟ್ ಬರಲಿದೆ. ಅದೇ ರೀತಿ ಸುಕುಮಾರ್ ಕೂಡ ಈ ಸಿನಿಮಾಗೆ ಮೂರನೇ ಪಾರ್ಟ್ ತರೋ ಆಲೋಚನೆಯಲ್ಲಿ ಇದ್ದಾರೆ. ‘ಪುಷ್ಪ 2: ದಿ ರೂಲ್’ ಸಿನಿಮಾ ಡಿಸೆಂಬರ್ 6ರಂದು ಬಿಡುಗಡೆ ಆಗಲಿದೆ. ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಫಹಾದ್ ಫಾಸಿಲ್ ಸೇರಿ ಅನೇಕ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ. ‘ಮೈತ್ರಿ ಮೂವೀ ಮೇಕರ್ಸ್’ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ
