ಭಾರತ ಭೇಟಿ ಬಗ್ಗೆ ಸುಳಿವು ಕೊಟ್ರಾ ಡೊನಾಲ್ಡ್ ಟ್ರಂಪ್?

ನ್ಯೂಯಾರ್ಕ್: 

    ಪ್ರಧಾನಿ ನರೇಂದ್ರ ಮೋದಿ   ಒಬ್ಬ ಮಹಾನ್ ವ್ಯಕ್ತಿ ಮತ್ತು ಒಳ್ಳೆಯ ಸ್ನೇಹಿತ…. ಹೀಗೆಂದವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್  ರಷ್ಯಾದೊಂದಿಗಿನ   ಭಾರತದ ತೈಲ ವ್ಯಾಪಾರ ವಹಿವಾಟು  , ಅಮೆರಿಕದೊಂದಿಗಿನ ವ್ಯಾಪಾರ ಒಪ್ಪಂದದಲ್ಲಿ   ಭಾರತ ಮಾಡುತ್ತಿದ್ದ ವಿಳಂಬದಿಂದಾಗಿ ಭಾರತಕ್ಕೆ ವಿರುದ್ಧವಾದ ಹೇಳಿಕೆಗಳನ್ನೇ ನೀಡುತ್ತಿದ್ದ ಟ್ರಂಪ್ ಇದೀಗ ಈಗ ಏಕಾಏಕಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳಿದ್ದಾರೆ. ಅಲ್ಲದೇ ಮುಂದಿನ ವರ್ಷ ತಾವು ಭಾರತಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ ಎಂದು ಕೂಡ ಹೇಳಿದ್ದಾರೆ.

    ತೂಕ ಇಳಿಸುವ ಔಷಧಗಳ ಬೆಲೆಗಳನ್ನು ಕಡಿಮೆ ಮಾಡುವ ಹೊಸ ಯೋಜನೆಯನ್ನು ಅನಾವರಣಗೊಳಿಸಿದ ಬಳಿಕ ಶುಕ್ರವಾರ ಶ್ವೇತಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, ಪ್ರಧಾನಿ ನರೇಂದ್ರ ಮೋದಿ ಒಬ್ಬ ಮಹಾನ್ ವ್ಯಕ್ತಿ ಮತ್ತು ಸ್ನೇಹಿತ ಎಂದು ಹೇಳಿ ಅವರ ನಾಯಕತ್ವದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಎರಡೂ ರಾಷ್ಟ್ರಗಳ ನಡುವಿನ ವ್ಯಾಪಾರ ಸಂಬಂಧಗಳನ್ನು ಬಲಪಡಿಸುವ ಸಲುವಾಗಿ ತಾವು ಮುಂದಿನ ವರ್ಷ ಭಾರತಕ್ಕೆ ಭೇಟಿ ನೀಡುವುದಾಗಿಯೂ ಅವರು ತಿಳಿಸಿದ್ದಾರೆ. 

    ಪ್ರಧಾನಿ ಮೋದಿ ಅವರೊಂದಿಗಿನ ತಮ್ಮ ಸಂಭಾಷಣೆಗಳು ಸಕಾರಾತ್ಮಕವಾಗಿ ಮುಂದುವರಿಯುತ್ತಿವೆ. ಭಾರತವು ರಷ್ಯಾದಿಂದ ಹೆಚ್ಚಾಗಿ ತೈಲ ಖರೀದಿ ಮಾಡುವುದನ್ನು ನಿಲ್ಲಿಸಿದರು. ಮೋದಿ ನನ್ನ ಒಳ್ಳೆಯ ಸ್ನೇಹಿತ. ನಾವು ಮಾತನಾಡುತ್ತೇವೆ ಎಂದು ಹೇಳಿದರು. ಭಾರತಕ್ಕೆ ನಾನು ಬರಬೇಕು ಎಂದು ಪ್ರಧಾನಿ ಮೋದಿ ಬಯಸುತ್ತಿದ್ದಾರೆ. ನಾವು ಅದನ್ನು ಲೆಕ್ಕಾಚಾರ ಮಾಡುತ್ತೇವೆ. ನಾನು ಹೋಗುತ್ತೇನೆ. ಮುಂದಿನ ವರ್ಷ ಭಾರತಕ್ಕೆ ಪ್ರಯಾಣಿಸುವ ಸಾಧ್ಯತೆ ಇದೆ ಎಂದು ಅವರು ಹೇಳಿದರು.

    ವಾಷಿಂಗ್ಟನ್ ಮತ್ತು ನವದೆಹಲಿ ನಡುವೆ ವ್ಯಾಪಾರ ಮಾತುಕತೆಗಳು ನಡೆಯುತ್ತಿದ್ದು, ಈ ನಡುವೆಯೇ ಟ್ರಂಪ್ ಈ ಹೇಳಿಕೆಯನ್ನು ನೀಡಿದ್ದಾರೆ. ರಷ್ಯಾದ ಕಚ್ಚಾ ತೈಲದ ನಿರಂತರ ಆಮದಿನ ಮೇಲೆ ಭಾರತ ಹೆಚ್ಚುವರಿ ಶೇ. 25ರಷ್ಟು ಸುಂಕ ಸೇರಿದಂತೆ ಶೇ. 50ರಷ್ಟು ಸುಂಕವನ್ನು ವಿಧಿಸುವ ಯುನೈಟೆಡ್ ಸ್ಟೇಟ್ಸ್ ನಿರ್ಧಾರಕ್ಕೆ ತಕ್ಕಂತೆ ಮಾತುಕತೆಗಳು ನಡೆಯುತ್ತಿವೆ.

    ಈ ಕುರಿತು ವಾರದ ಆರಂಭದಲ್ಲಿ, ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಲೀವಿಟ್ ಅವರು ಭಾರತ-ಯುಎಸ್ ಸಂಬಂಧಗಳನ್ನು ಬಲಗೊಳಿಸಲು ಟ್ರಂಪ್ ಅವರ ಬದ್ಧತೆ ಬಗ್ಗೆ ಪುನರುಚ್ಚರಿಸಿದ್ದರು. ಇತ್ತೀಚೆಗೆ ಟ್ರಂಪ್ ಅವರು ಹಿರಿಯ ಭಾರತೀಯ-ಅಮೆರಿಕನ್ ಅಧಿಕಾರಿಗಳೊಂದಿಗೆ ಶ್ವೇತಭವನದಲ್ಲಿ ದೀಪಾವಳಿ ಆಚರಿಸುವಾಗ ಪ್ರಧಾನಿ ಮೋದಿ ಅವರೊಂದಿಗೆ ಮಾತನಾಡಿರುವುದಾಗಿ ತಿಳಿಸಿದ್ದರು. ರಷ್ಯಾದಿಂದ ತೈಲ ಖರೀದಿ ವಿಚಾರದ ಬಗ್ಗೆ ಅಮೆರಿಕದ ನಿಲುವಿಗೆ ಪ್ರತಿಯಾಗಿ ಭಾರತದ ವಿದೇಶಾಂಗ ಸಚಿವಾಲಯವು ಕೂಡ ಭಾರತದ ಇಂಧನ ಮೂಲದ ನಿರ್ಧಾರಗಳು ರಾಷ್ಟ್ರೀಯ ಹಿತಾಸಕ್ತಿಗಳಿಂದ ಮಾರ್ಗದರ್ಶಿಸಲ್ಪಡುತ್ತವೆ ಎಂದು ಸ್ಪಷ್ಟಪಡಿಸಿತ್ತು. 

    ಈ ಕುರಿತು ಮಾತನಾಡಿದ ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, ಅಸ್ಥಿರ ಪರಿಸ್ಥಿತಿಯಲ್ಲಿ ಗ್ರಾಹಕರ ಹಿತಾಸಕ್ತಿಗಳನ್ನು ಕಾಪಾಡುವುದು ನಮ್ಮ ಮೊದಲ ಆದ್ಯತೆಯಾಗಿದೆ. ನಮ್ಮ ಆಮದು ನೀತಿಗಳು ಸಂಪೂರ್ಣವಾಗಿ ಈ ಉದ್ದೇಶದಿಂದ ನಡೆಸಲಾಗುತ್ತದೆ ಎಂದು ಹೇಳಿದ್ದರು.

    ಸ್ಥಿರ ಬೆಲೆಗಳನ್ನು ಖಚಿತಪಡಿಸುವುದು ಮತ್ತು ವೈವಿಧ್ಯಮಯ ಮೂಲಗಳ ಮೂಲಕ ಇಂಧನ ಪೂರೈಕೆಯನ್ನು ಸುರಕ್ಷಿತಗೊಳಿಸುವುದು ಕೂಡ ಭಾರತದ ಗುರಿಯಾಗಿದೆ. ಹಲವು ವರ್ಷಗಳಿಂದ ನಮ್ಮ ಇಂಧನ ಸಂಗ್ರಹಣೆಯನ್ನು ವಿಸ್ತರಿಸಲು ಪ್ರಯತ್ನಿಸುತ್ತಿದ್ದೇವೆ. ಕಳೆದ ದಶಕದಲ್ಲಿ ಇದು ಪ್ರಗತಿಯನ್ನು ಸಾಧಿಸಿದೆ ಎಂದು ಅವರು ತಿಳಿಸಿದ್ದಾರೆ.

Recent Articles

spot_img

Related Stories

Share via
Copy link