![ಸಾವಿನಲ್ಲೂ ಸಾರ್ಥಕತೆ - ಮಂಡ್ಯ ಯುವಕನ ಅಂಗಾಗ ದಾನ, ಪೋಷಕರ ಸಮಯಪ್ರಜ್ಞೆ, ಆರು ಜನರ ಬಾಳಿಗೆ ಬೆಳಕು](https://assets-news-bcdn.dailyhunt.in/cmd/resize/1024x576_90/fetchdata16/images/2a/ce/e5/2acee54f01f13fb9e75b3c87ffe44ff9d55c98106f7e5cdfd500be8b4636c52b.webp)
ಆ ಯುವಕನ ಹೆಸರಯ ಶರತ್ ವಯಸ್ಸು 19. ಮಂಡ್ಯ ಜಿಲ್ಲೆ ಮಳವಳ್ಳಿ ನಿವಾಸಿ. ಡಿಸೆಂಬರ್ 24ರಂದು ಶರತ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. ತಲೆಗೆ ಪೆಟ್ಟು ಬಿದ್ದಿತ್ತು. ತಕ್ಷಣ ಅವರನ್ನು ಮಳವಳ್ಳಿ ಸರ್ಕಾರಿ ಆಸ್ಪತ್ರೆಗೆ ಕರೆ ತರಲಾಯಿತು.
ಅಲ್ಲಿನ ವೈದ್ಯರ ಸೂಚನೆ ಮೇರೆಗೆ ಹೆಚ್ಚಿನ ಚಿಕಿತ್ಸಗಾಗಿ ಮೈಸೂರಿನ ಸ್ಪಂದನಾ ಆಸ್ಪತ್ರೆಗೆ ಕರೆತರಲಾಯಿತು. ಡಿಸೆಂಬರ್ 24, ಮಧ್ಯರಾತ್ರಿ 1.10 ಸುಮಾರಿಗೆ ಗಂಭೀರ ಸ್ಥಿತಿಯಲ್ಲಿದ್ದ ಶರತ್ರನ್ನು ಮೈಸೂರಿನ ಅಪೋಲೊ ಬಿ.ಜಿ. ಎಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆರಂಭಿಕ ಸಿಟಿ ಸ್ಕ್ಯಾನಿಂಗ್ ನಲ್ಲಿ ಮೆದುಳಿನ ಕಾಂಡದ ಇನ್ಫಾರ್ಕ್ಟ್ ಗೋಚರಿಸಿತು. ಜೀವ ಬೆಂಬಲ ಮತ್ತು ತೀವ್ರ ನಿಗಾಗಾಗಿ ಅವರನ್ನು ಮಧ್ಯಾಹ್ನ 1.30 am ಕ್ಕೆ ಐಸಿಯುಗೆ ದಾಖಲಿಸಲಾಯಿತು.
ಶರತ್ ಅವರ ಆರೋಗ್ಯವು ಬಹಳ ಗಂಭೀರ ಸ್ಥಿತಿಯಲ್ಲಿತ್ತು. ಎರಡು ದಿನಗಳ ಕಾಲ ಲೈಫ್ ಸಪೋರ್ಟ್ನಲ್ಲಿ ಇರಿಸಲಾಗಿತ್ತು. ಮೂರನೇ ದಿನ ಡಿಸೆಂಬರ್ 26 ರಂದು ಮೆದುಳು ಕಾಂಡದ ವೈಫಲ್ಯದಿಂದಾಗಿ ಅವರು ಮೆದುಳು ಸತ್ತಿರುವುದು ಧೃಡವಾಯಿತು. ಅಪೋಲೊ ಬಿ.ಜಿ.ಎಸ್. ಆಸ್ಪತ್ರೆಯ ವೈದ್ಯರು ಅಧಿಕೃತವಾಗಿ ಇದನ್ನು ಪೋಷಕರಿಗೆ ತಿಳಿಸಿದರು.
ಮಗನ ಸಾವಿನ ದುಖಃದಲ್ಲೂ ಪೋಷಕರ ಸಮಯಪ್ರಜ್ಞೆ
ಇನ್ನು ಶರತ್ ರವರ ಮಿದುಳು ಹೊರತಪಡಿಸಿ ಉಳಿದ ಅಂಗಾಂಗಗಳು ಆರೋಗ್ಯವಾಗಿದ್ದವು. ಹೆಚ್ಚಿನ ಪರೀಕ್ಷೆಗೆ ಒಳಪಡಿಸಿದಾಗ ಅವರು ಅಂಗಾಂಗ ದಾನ ಮಾಡುವ ಸ್ಥಿತಿಯಲ್ಲಿರುವುದು ತಿಳಿಯಿತು. ಈ ವಿಚಾರವನ್ನು ಶರತ್ ಅವರ ಮನೆಯವರಿಗೆ ತಿಳಿಸಲಾಯಿತು. ಶರತ್ ಅವರ ಅಂಗಾಂಗದಿಂದ 6 ಜನರ ಬಾಳು ಬೆಳಗಬಹುದು ಎಂಬುದನ್ನು ವಿವರಿಸಲಾಯಿತು.
ಮನೆ ಬೆಳಗುವ ಮಗನ ಆ ಪರಿಸ್ಥಿತಿಯಲ್ಲಿ ದುಖಃತಪ್ತರಾಗಿದ್ದ ಅವರ ತಂದೆ ತಾಯಿ ಆ ದುಖಃದಲ್ಲೂ ತಮ್ಮ ಮಗನ ಅಂಗಾಂಗಗಳನ್ನು ದಾನ ಮಾಡಲು ಒಪ್ಪಿದರು. ಈ ಮೂಲಕ ಮಗನ ಸಾವು ವ್ಯರ್ಥವಾಗದಂತೆ ನೋಡಿಕೊಂಡರು.
ಆರು ಜನರ ಬಾಳಿಗೆ ಬೆಳಕಾದ ಶರತ್
ಅಂಗ ದಾನ ಪ್ರೋಟೋಕಾಲ್ಗಳ ಪ್ರಕಾರ ಜೀವ ಸಾರ್ಥಕಥೆಯ ಅಧಿಕಾರಿಗಳು ಅಂಗ ಸ್ವೀಕರಿಸುವವರ ಕಾಯುವ ಪಟ್ಟಿಗೆ ಅನುಗುಣವಾಗಿ ಪ್ರಕ್ರಿಯೆಯನ್ನು ಪ್ರಾರಂಭಿಸಿದರು. ಡಿಸೆಂಬರ್ 26 ರಂದು 5.10 pmಗೆ ಶ್ರೀ ಶರತ್ ಅವರ ಹೃದಯ, 2 ಕಿಡ್ನಿಗಳು, 1 ಯಕೃತ್ತು, 1 ಮೇದೋಜೀರಕ ಗ್ರಂಥಿ, ಕಾರ್ನಿಯಾವನ್ನು ಪಡೆಯಲಾಯಿತು. ಈ ಎಲ್ಲಾ ಅಂಗಾಂಗಗಳನ್ನು ನಿಯಮಗಳ ಪ್ರಕಾರ ದಾಖಲಿಸಿಕೊಂಡು ಕಾಯುತ್ತಿದ್ದವರಿಗೆ ಅಳವಡಿಸಲು ಕಳುಹಿಸಿಕೊಡಲಾಯಿತು.
ಅಂಗಾಂಗ ದಾನ ಪಡೆದ ಆಸ್ಪತ್ರೆಯ ವಿವರ
1 ಕಿಡ್ನಿ – ಅಪೋಲೊ ಬಿಜಿಎಸ್ ಆಸ್ಪತ್ರೆ
1 ಕಿಡ್ನಿ – ಐನ್ಯು, ಬೆಂಗಳೂರು
1 ಯಕೃತ್ತು – ಅಪೋಲೊ ಬಿಜಿಎಸ್ ಆಸ್ಪತ್ರೆ
ಹೃದಯ – ಕೊಲಂಬಿಯಾ ಏಷ್ಯಾ ಯಶವಂತಪುರ, ಬೆಂಗಳೂರು
ಮೇದೋಜೀರಕ ಗ್ರಂಥಿ – ಅಪೋಲೋ ಬಿಜಿಎಸ್ ಆಸ್ಪತ್ರೆ
ಕಾರ್ನಿಯಾ – ಮೈಸೂರು ಕಣ್ಣಿನ ಬ್ಯಾಂಕ್.
ಈ ಮೂಲಕ ಶರತ್ ಅಕಾಲಿಕವಾಗಿ ಸಾವನ್ನಪ್ಪಿದ್ದರು ಹಲವರ ಪ್ರಾಣ ಉಳಿಸಿ ಅವರ ಮೂಲಕ ಬದುಕಿದ್ದಾರೆ. ಶರತ್ ಅವರ ಪೋಷಕರ ಈ ನಿರ್ಧಾರದಿಂದಾಗಿ ಹಲವರ ಜೀವ ಉಳಿದಿದೆ. ಶರತ್ ಪೋಷಕರ ಈ ಧೃಡ ನಿರ್ಧಾರ ಎಲ್ಲರಿಗೂ ಮಾದರಿಯಾಗಲಿ. ಮೃತಪಟ್ಟ ನಂತರ ದೇಹ ಮಣ್ಣಲ್ಲಿ ಮಣ್ಣಾಗುವ ಬದಲು ಅಂಗಾಂಗ ದಾನ ಮಾಡುವ ಮೂಲಕ ಹಲವರ ಬಾಳಿಗೆ ಬೆಳಕಾಗಲಿ ಅನ್ನೋದೆ ಎಲ್ಲರ ಆಶಯ.
– ರಾಮ್, ಮೈಸೂರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2021/12/1444.gif)