ಬೆಂಗಳೂರು
ಬೆಂಗಳೂರು ನಗರದಲ್ಲಿ ದಿನದಿಂದ ದಿನಕ್ಕೆ ವಾಹನಗಳ ಸಂಖ್ಯೆ ಹೆಚ್ಚುತ್ತಿದೆ. ಇದರಿಂದ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಸಿಗ್ನಲ್ಗಳಲ್ಲಿ ಕಿಮೀಗಟ್ಟಲೆ ವಾಹನಗಳು ನಿಲ್ಲುತ್ತವೆ. ಇಷ್ಟೋ ಸಾರಿ ಸಿಗ್ನಲ್ಗಳಲ್ಲಿ ಆಂಬ್ಯುಲೆನ್ಸ್ಗಳು ಸಿಲುಕಿಹಾಕಿಕೊಂಡು, ಸಮಸ್ಯೆಯಾಗಿದ್ದೂ ಇದೆ. ಹೀಗಾಗಿ, ಆಂಬ್ಯುಲೆನ್ಸ್ಗಳ ಸುಗಮ ಸಂಚಾರಕ್ಕಾಗಿ ಬೆಂಗಳೂರು ಸಂಚಾರ ಪೊಲೀಸರು ನೂತನ ಪ್ರಯೋಗಕ್ಕೆ ಮುಂದಾಗಿದ್ದಾರೆ. ಆಂಬ್ಯುಲೆನ್ಸ್ಗಳ ಸುಗಮ ಸಂಚಾರಕ್ಕೆ ಹೊಸ ಆ್ಯಪ್ ಬಿಡುಗಡೆ ಮಾಡಿದ್ದಾರೆ.
ಆಂಬ್ಯುಲೆನ್ಸ್ಗಳ ಸುಗಮ ಸಂಚಾರಕ್ಕೆ ಟ್ರಾಫಿಕ್ ಪೊಲೀಸರು “ಇ-ಪಾತ್” ಎಂಬ ಆ್ಯಪ್ ಪರಿಚಿಯಿಸಿದ್ದಾರೆ. ಆಂಬ್ಯುಲೆನ್ಸ್ ಚಾಲಕರು ಇ-ಪಾತ್ ಆ್ಯಪ್ ಹೊಂದದ್ದರೆ ಯಾವುದೇ ಸಿಗ್ನಲ್ನಲ್ಲಿ ನಿಲ್ಲದೆ ಚಲಿಸಬಹುದಾಗಿದೆ. ಆಂಬ್ಯುಲೆನ್ಸ್ ಸಿಗ್ನಲ್ ಬಳಿ ಬರುತ್ತಿರುವ ಮಾಹಿತಿ GPS ಮತ್ತು ಅಡಾಪ್ಟಿವ್ ಮೂಲಕ ಸಂಚಾರಿ ಪೊಲೀಸರಿಗೆ ತಿಳಿಯುತ್ತದೆ. ಆಗ, ಆಂಬ್ಯುಲೆನ್ಸ್ಗಾಗಿ ಸಿಗ್ನಲ್ ಕ್ಲಿಯರ್ ಮಾಡಲಾಗುತ್ತದೆ. ಆಂಬ್ಯುಲೆನ್ಸ್ ಸಿಗ್ನಲ್ನಲ್ಲಿ ನಿಲ್ಲದೆ ಹೋಗಬಹುದು.
ಇ-ಪಾತ್ ಆ್ಯಪ್ ಪ್ರಯೋಗಿಕ ಪರೀಕ್ಷೆ ಯಶಸ್ವಿಯಾಗಿದೆ. ಈ ಹಿನ್ನೆಲೆಯಲ್ಲಿ ತಿಂಗಳ ಅಂತ್ಯದಲ್ಲಿ ಬೆಂಗಳೂರಿನ ಎಲ್ಲ ಆಂಬುಲೆನ್ಸ್ ಚಾಲಕರು ಈ ಆ್ಯಪ್ ಬಳಸವಂತೆ ಸೂಚನೆ ನೀಡಲಾಗಿದೆ. ಈಗಾಗಲೇ ಖಾಸಗಿ ಆಂಬ್ಯುಲೆನ್ಸ್ ಮಾಲೀಕರು ಹಾಗೂ ಸಂಘಟನೆ ಜೊತೆ ಸಭೆ ನಡೆದಿದ್ದು, ಎಲ್ಲ ಆಂಬ್ಯುಲೆನ್ಸ್ ಚಾಲಕರು ಆ್ಯಪ್ ಬಳಸುವಂತೆ ಸೂಚಿಸಲಾಗಿದೆ. ಇದರಿಂದ ಆಂಬ್ಯುಲೆನ್ಸ್ಗಳು ಟ್ರಾಫಿಕ್ ಸಿಗ್ನಲ್ಗಳಲ್ಲಿ ಸಿಲುಕುವುದನ್ನು ತಡೆಗಟ್ಟಬಹುದು.
ಇ-ಪಾತ್ ಆ್ಯಪ್ ಕಾರ್ಯ ನಿರ್ವಹಣೆ …..!
- ಆಂಬ್ಯುಲೆನ್ಸ್ ಚಾಲಕ ಫ್ಲೇ ಸ್ಟೋರ್ನಲ್ಲಿ ಇ-ಪಾತ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಬೇಕು.
- ಆ್ಯಂಬುಲೆನ್ಸ್ ಎಲ್ಲಿಂದ ಎಲ್ಲಿಗೆ ಹೋಗುತ್ತೆ ಅಂತ ಮಾಹಿತಿ ಅಪ್ಲೋಡ್ ಮಾಡಬೇಕು.
- ಪ್ರಿಯಾರಿಟಿ ಯಾವುದು ಎಂದು ಆ್ಯಪ್ನಲ್ಲಿ ಮಾಹಿತಿ ನೀಡಬೇಕು.
- ಗಂಭೀರ ಅಪಘಾತ, ಹೃದಯಾಘಾತದಂತಹ ತುರ್ತು ಸೇವೆಗೆ ಪ್ರಮುಖ ಆದ್ಯತೆ ನೀಡಲಾಗುತ್ತದೆ.
- ಅಪ್ಲೋಡ್ ಆದ ಮಾಹಿತಿ ಸಂಚಾರ ನಿರ್ವಹಣಾ ಕೇಂದ್ರಕ್ಕೆ ಹೋಗುತ್ತೆ.
- ಇದನ್ನ ಪರಿಶೀಲಿಸಿ ಜಿಪಿಎಸ್ ಆಧಾರದಲ್ಲಿ ಅಡಾಪ್ಟಿವ್ ಸಿಗ್ನಲ್ಗಳ ಮೂಲಕ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗುತ್ತದೆ.
- ಸಿಗ್ನಲ್ ಇಲ್ಲದ ಕಡೆ ಆಂಬ್ಯುಲೆನ್ಸ್ ವೇಗ ಕಡಿಮೆಯಾದರೆ ಅಲರ್ಟ್ ಮೆಸೇಜ್ ಸಂಚಾರಿ ಪೊಲೀಸರಿಗೆ ಹೋಗುತ್ತದೆ.
- ಅದರ ಆಧಾರದಲ್ಲಿ ಸುಗಮ ಸಂಚಾರಕ್ಕೆ ಟ್ರಾಫಿಕ್ ಪೊಲೀಸರು ವ್ಯವಸ್ಥೆ ಮಾಡುತ್ತಾರೆ ಎಂದು ಎಂ.ಎನ್ ಅನುಚೇತ್, ಬೆಂಗಳೂರು ಸಂಚಾರಿ ಜಂಟಿ ಆಯುಕ್ತ ತಳಿಸಿದರು.
