ಸೊರಗುತ್ತಿರುವ ಸರ್ಕಾರಿ ಶಾಲಾ ಮಕ್ಕಳು ಶಿಕ್ಷಣ

ಶಿರಾ:

ಹುಲಿಕುಂಟೆ ಹೋಬಳಿಯ 19 ಸರ್ಕಾರಿ ಶಾಲೆಗಳಿಗೆ ಕಾಯಂ ಶಿಕ್ಷಕರೆ ಇಲ್ಲ…..!

ರಾಷ್ಟ್ರದ ಭವಿಷ್ಯ ನಿರ್ಮಾಣಗೊಳ್ಳುವುದು ತರಗತಿಯ ಕೊಠಡಿಗಳಲ್ಲಿ ಎಂಬ ಮಾತು ಅಕ್ಷರಶಃ ಸತ್ಯವಾಗಿದೆ. ಶಿಕ್ಷಣ ಇಲಾಖೆಯು ವ್ಯಕ್ತಿ ಶಕ್ತಿಯ ಪ್ರತೀಕವಷ್ಟೆ ಅಲ್ಲದೆ ವಿಶಿಷ್ಟ ಅಂತರ್ಗತ ಶಕ್ತಿಯನ್ನು ಅಭಿವ್ಯಕ್ತಿಗೊಳಿಸುವ ಮಾಧ್ಯಮ ಅನ್ನುವ ಹೆಗ್ಗಳಿಕೆಗೂ ಪಾತ್ರವಾಗಿದೆ.

ಮಕ್ಕಳ ಬದುಕನ್ನು ರೂಪಿಸುವ ನಿಟ್ಟಿನಲ್ಲಿ ತನ್ನದೇ ಆದ ಮಹತ್ವದ ಶಕ್ತಿಯನ್ನು ಪಡೆದ ಶಿಕ್ಷಣ ಇಲಾಖೆಗೆ ತನ್ನದೇ ಮಹತ್ವದ ಜವಾಬ್ದಾರಿಗಳು ಕೂಡ ಇರುತ್ತವೆ ಎಂಬುದನ್ನು ಪ್ರತಿಯೊಬ್ಬ ಜನಪ್ರತಿನಿಧಿಗಳು ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಮತ್ತು ಶಿಕ್ಷಕ ವೃಂದÀವು ಕೂಡ ಅರಿಯಬೇಕಿದೆ.

ಇಷ್ಟೆಲ್ಲಾ ಪೀಠಿಕೆ ಹಾಕಲು ಒಂದು ಮಹತ್ವದ ಕಾರಣವೂ ಇದೆ. ಶಿರಾ ತಾಲ್ಲೂಕಿನ ಕ್ಷೇತ್ರ ಶಿಕ್ಷಣ ಇಲಾಖೆಯ ನರ ದೌರ್ಬಲ್ಯಗಳಿಂದಾಗಿ ಅತ್ಯಂತ ಬರ ಪೀಡಿತ ಪ್ರದೇಶವೆಂಬ ಕುಖ್ಯಾತಿಗೆ ಒಳಗಾಗಿರುವ ಶಿರಾ ತಾಲ್ಲೂಕಿನ ಸರ್ಕಾರಿ ಶಾಲಾ ಮಕ್ಕಳ ಭವಿಷ್ಯ ಇತ್ತೀಚೆಗೆ ಇದೇ ಶಿಕ್ಷಣ ಇಲಾಖೆಯ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಬಗ್ಗೆ ವ್ಯಾಪಕ ದೂರುಗಳು ಪೋಷಕರಿಂದಲೇ ಕೇಳಿ ಬರತೊಡಗಿವೆ.

ತಾಲ್ಲೂಕಿನಲ್ಲಿ ಸರ್ಕಾರಿ ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳು ಸೇರಿದಂತೆ ಒಟ್ಟು 420ಕ್ಕೂ ಹೆಚ್ಚು ಶಾಲೆಗಳಿದ್ದು ಕೆಲವು ಶಾಲೆಗಳ ಮಕ್ಕಳ ಶಿಕ್ಷಣದ ಸ್ಥಿತಿಯನ್ನು ಕಂಡರೆ ನಿಜಕ್ಕೂ ಸಂಕಟವೆ ಎದುರಾಗುತ್ತದೆ.

ಶಿಕ್ಷಣ ಇಲಾಖೆಯ ದೌರ್ಬಲ್ಯದ ಅನಾಥ ಪ್ರಜ್ಞೆಯಿಂದಲೊ ಅಥವಾ ಜನಪ್ರತಿನಿಧಿಗಳ ನಿರ್ಲಕ್ಷ್ಯವೊ ಅಂತೂ ಈ ಭಾಗದ ಮಕ್ಕಳಿಗೆ ಪಾಠ ಹೇಳಿಕೊಡುವ ಶಿಕ್ಷಕರ ಕೊರತೆಯನ್ನು ಸದ್ಯಕ್ಕೆ ನೀಗಿಸುವ ಉಸಾಬರಿಯಂತೂ ಯಾರಿಗೂ ಇಲ್ಲವಾಗಿದೆ.

ತಾಲ್ಲೂಕಿನ ಒಟ್ಟು 420 ಸರ್ಕಾರಿ ಶಾಲೆಗಳ ಪೈಕಿ ಬಹುತೇಕ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚಾಗಿದ್ದರೂ ಅಗತ್ಯ ಪ್ರಮಾಣದ ಶಿಕ್ಷಕರಿಲ್ಲದಿರುವುದು, ಅತ್ಯಂತ ಕಡಿಮೆ ಮಕ್ಕಳಿರುವ ಶಾಲೆಗಳಲ್ಲಿ ಅತಿ ಹೆಚ್ಚು ಶಿಕ್ಷಕರಿರುವ ಪ್ರಕರಣಗಳು ಸಾಕಷ್ಟಿವೆ. ಇಂತಹ ಸಮಸ್ಯೆಗಳನ್ನು ಸರಿದೂಗಿಸಿಕೊಂಡು ಮಕ್ಕಳ ಭವಿಷ್ಯದತ್ತ ದಾಪುಗಾಲಿಡಬೇಕಾದ ಶಿಕ್ಷಣ ಇಲಾಖೆ ಬೆಟ್ಟದಷ್ಟು ಸಮಸ್ಯೆಗಳನ್ನು ಈಡೇರಿಸದಂತಾಗಿರುವುದು ನಿಜಕ್ಕೂ ವಿಪರ್ಯಾಸವೆ ಸರಿ.

ತಾಲ್ಲೂಕಿನಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಗಳ ಪೈಕಿ ಸುಮಾರು 31 ಶಾಲೆಗಳು ಶೂನ್ಯ ಶಿಕ್ಷಕರನ್ನು ಹೊಂದಿವೆ. ಅಂದರೆ ಈ 31 ಶಾಲೆಗಳಲ್ಲಿ ಸಂಪೂರ್ಣವಾಗಿ ಕಾಯಂ ಶಿಕ್ಷಕರೆ ಇಲ್ಲವಾದ್ದರಿಂದ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಂಡು ಕೆಲ ಶಾಲೆಗಳಲ್ಲಿನ ಮಕ್ಕಳಿಗೆ ಶಿಕ್ಷಣ ನೀಡಲಾಗುತ್ತಿದೆ.

ತಾಲ್ಲೂಕಿನಲ್ಲಿ ಒಟ್ಟು 31 ಶಾಲೆಗಳಲ್ಲಿ ಶೂನ್ಯ ಶಿಕ್ಷಕರ ಶಾಲೆಗಳಿರುವ ಪರಿಣಾಮ ಮಕ್ಕಳಿಗೆ ಶಿಕ್ಷಣ ನೀಡುವ ಸಲುವಾಗಿ ಬೇಕಾಗಿರುವ 285 ಮಂದಿ ಶಿಕ್ಷಕರ ಪೈಕಿ ಕೇವಲ 70 ಮಂದಿ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದ್ದು, ತಾಲ್ಲೂಕಿನಾದ್ಯಂತ ಬಹುತೇಕ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಎದ್ದು ಕಾಣುತ್ತಿದೆ.

ತಾಲ್ಲೂಕಿನಲ್ಲಿದ್ದ 63 ಮಂದಿ ಶಿಕ್ಷಕರು ಬೇರೆ ತಾಲ್ಲೂಕಿಗೆ ವರ್ಗಾವಾಗಿ ಹೋಗಿದ್ದು ತೆರವುಗೊಂಡ ಈ ಶಾಲೆಗಳಿಗೆ ವರ್ಗವಾಗಿ ಬಂದದ್ದು ಕೇವಲ 8 ಮಂದಿ ಶಿಕ್ಷಕರು ಮಾತ್ರ……!

ತಾಲ್ಲೂಕಿನ ಹುಲಿಕುಂಟೆ ಹೋಬಳಿಯೊಂದರಲ್ಲಿಯೆ ಸುಮಾರು 19 ಕ್ಕೂ ಹೆಚ್ಚು ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದ್ದು, ಆಂಧ್ರÀ್ರ ಪ್ರದೇಶದ ಗಡಿಗೆ ಹೊಂದಿಕೊಂಡಿರುವ ಹುಲಿಕುಂಟೆ ಹೋಬಳಿಯ ಸರ್ಕಾರಿ ಶಾಲೆಗಳಲ್ಲಿನ ಮಕ್ಕಳ ಶೈಕ್ಷಣಿಕ ಬದುಕು ನಿಜಕ್ಕೂ ಚಿಂತಾಜನಕವೆ ಆಗಿದೆ.

ಹುಲಿಕುಂಟೆ ಹೋಬಳಿಯು ಶಿರಾ ಕ್ಷೇತ್ರದ ಶಾಸಕ ಡಾ.ಸಿ.ಎಂ.ರಾಜೇಶ್‍ಗೌಡರ ಸ್ವಂತ ಹೋಬಳಿ ಆಗಿದ್ದರೂ ಶಾಸಕರಿಗೆ ಈ ಹೋಬಳಿಯ ಶಾಲೆಗಳ ಶಿಕ್ಷಕರ ಕೊರತೆಯ ಸಮಸ್ಯೆಯನ್ನು ನೀಗಿಸಲು ಸಾದ್ಯವಾಗಿಲ್ಲದಿರುವುದು ನಿಜಕ್ಕೂ ವಿಷಾದÀದ ಸಂಗತಿಯೇ ಸರಿ.

ಹುಲಿಕುಂಟೆ ಹೋಬಳಿಯಲ್ಲಿ ಶಿಕ್ಷಕರಿಲ್ಲದ ಶಾಲೆಗಳಿಗೆ ಅತಿಥಿತಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವಂತೆ ಶಿಕ್ಷಣ ಇಲಾಖೆಯು ಆಯಾ ವ್ಯಾಪ್ತಿಯ ಸಿ.ಆರ್.ಪಿ.ಗಳಿಗೆ ಆಡಳಿತಾತ್ಮಕ ಜವಾಬ್ದಾರಿ ನೀಡಿತ್ತು. ಇದರಿಂದಾಗಿ ಶಿಕ್ಷಕರಿಲ್ಲದ ಶಾಲೆಗಳಿಗೆ ತಾತ್ಕಾಲಿಕವಾಗಿ ಇಲಾಖೆ ಅತಿಥಿ ಶಿಕ್ಷಕರ ನೇಮಕ ಮಾಡಿಕೊಂಡಿತ್ತು.

ಧರ್ಮಸ್ಥಳ ಯೋಜನೆಯ ವತಿಯಿಂದಲೂ ಕೆಲ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಂಡು ಅವರಿಗೆ ಈ ಯೋಜನೆಯೆ ವೇತನ ನೀಡುತ್ತಿತ್ತು. ಆದರೆ ಕಡಿಮೆ ವೇತನ ಎಂಬ ಕಾರಣಕ್ಕೆ ಅನೇಕ ಅತಿಥಿ ಶಿಕ್ಷಕರು ಕೂಡ ಶಾಲೆಗೆ ಹೋಗದಂತಾಗಿದ್ದಾರೆ.

ಶಿಕ್ಷಕರಿಲ್ಲದ ಶಾಲೆಗೆ ಅತಿಥಿ ಶಿಕ್ಷಕರು ವೇತನ ಕಡಿಮೆ ಎಂಬ ಕಾರಣಕ್ಕೆ ಶಾಲೆಗೆ ಬರುತ್ತಿಲ್ಲ, ನಮಗೆ ಕಾಯಂ ಶಿಕ್ಷಕರನ್ನು ಕೊಡಿ ಎಂಬ ಈ ಹೋಬಳಿಯ ಗ್ರಾಮಸ್ಥರ ಅಳಲನ್ನು ಕೇಳಿಸಿಕೊಳ್ಳುವವರೆ ಇಲ್ಲದಂತಾಗಿದ್ದಾರೆ.

ಹುಲಿಕುಂಟೆ ಹೋಬಳಿಯ ಶೆಟ್ಟಿಗಾನಹಳ್ಳಿಯಲ್ಲಿ ಇದ್ದ ಕಾಯಂ ಶಿಕ್ಷಕರು ವರ್ಗಾವಣೆ ಮಾಡಿಸಿಕೊಂಡು ಬೇರೆ ಕಡೆ ಹೋದ ಪರಿಣಾಮ ಈ ಶಾಲೆಯಲ್ಲಿ ಕಾಯಂ ಶಿಕ್ಷಕರೆ ಇಲ್ಲದಂತಾಗಿದೆ. ಕೇವಲ ಶೆಟ್ಟಿಗಾನಹಳ್ಳಿಯಷ್ಟೇ ಅಲ್ಲದೆ ಇದೇ ಹೋಬಳಿಯ ಇಂತಹ ಅದೆಷ್ಟೊ ಶಾಲೆಗಳಲ್ಲಿ ಶಿಕ್ಷಕರೆ ಇಲ್ಲವಾಗಿದ್ದು ಮಕ್ಕಳ ಶೈಕ್ಷಣಿಕ ಬದುಕು ಅತಂತ್ರವಾಗಿದೆ.

ತಾಲ್ಲೂಕಿನ ಎಲ್ಲಾ ಹೋಬಳಿಗಳಿಗಿಂತಲೂ ಪ್ರಮುಖವಾಗಿ ಕ್ಷೇತ್ರದ ಶಾಸಕರ ಸ್ವಂತ ಹೋಬಳಿಯಾದ ಹುಲಿಕುಂಟೆ ಹೋಬಳಿಯಲ್ಲಿ ಶಿಕ್ಷಕರ ಕೊರತೆ ಹೆಚ್ಚಾಗಿರಲು ಪ್ರಮುಖ ಕಾರಣವೂ ಇದೆ.

ಕಳೆದ ಎರಡು ತಿಂಗಳ ಹಿಂದೆ ತಾಲ್ಲೂಕಿನ ಸುಮಾರು 25 ಮಂದಿ ಕಾಯಂ ಶಿಕ್ಷಕರು ನಿಯಮಾನುಸಾರ ಕೌನ್ಸ್ಸೆಲಿಂಗ್ ಮೂಲಕ ತಮಗೆ ಅನುಕೂಲವಾಗುವಂತಹ ಶಾಲೆಗಳನ್ನು ಆಯ್ಕೆ ಮಾಡಿಕೊಂಡು ಬೇರೆಡೆಗೆ ವರ್ಗವಾಗಿ ಹೋದರು. ವರ್ಗವಾಗಿ ಹೋದ ಶಾಲಾ ಶಿಕ್ಷಕರ ಖಾಲಿ ಸ್ಥಾನಗಳಿಗೆ ಕಾಯಂ ಶಿಕ್ಷಕರ ನೇಮಕವಾಗಬೇಕಿತ್ತು ಆದರೆ ಕೌನ್ಸ್ಸೆಲಿಂಗ್‍ನಲ್ಲಿ ಈ ಹೋಬಳಿಯ ಶಾಲೆಗಳನ್ನು ಯಾವ ಶಿಕ್ಷಕರು ಕೂಡ ಆಯ್ಕೆ ಮಾಡಿಕೊಳ್ಳಲೆ ಇಲ್ಲ.

ಹುಲಿಕುಂಟೆ ಹೋಬಳಿಯು ತಾಲ್ಲೂಕು ಕೇಂದ್ರದಿಂದ 40 ಕಿ.ಮೀ. ದೂರವಿದೆ ಎಂಬ ಕಾರಣಕ್ಕಾಗಿ ಅನೇಕ ಶಿಕ್ಷಕರು ಹಿಂದಿನಿಂದಲೂ ಈ ಹೋಬಳಿಯ ಶಾಲೆಗಳನ್ನು ಕೌನ್ಸ್ಸೆಲಿಂಗ್‍ನಲ್ಲಿ ಆಯ್ಕೆ ಮಾಡಿಕೊಳ್ಳಲು ಹಿಂದೇಟು ಹಾಕುವುದು ಸಾಮಾನ್ಯವೆ ಆಗಿದೆ. ಕ್ಷೇತ್ರದ ಶಾಸಕರು ಇಂತಹ ಪ್ರಬಲ ಸಮಸ್ಯೆಯೊಂದಕ್ಕೆ ಪರಿಹಾರ ಕಂಡುಕೊಳ್ಳದೇ ಇದ್ದಲ್ಲಿ ಮುಂದೆ ಈ ಹೋಬಳಿಯ ಶಾಲೆಗಳಲ್ಲಿ ಕಾಯಂ ಶಿಕ್ಷಕರೆ ಇಲ್ಲ ದಂತಾಗುವುದರಲ್ಲಿ ಆಶ್ಚರ್ಯವೂ ಇಲ್ಲ.

ಹುಲಿಕುಂಟೆ ಹೋಬಳಿಯಷ್ಟೇ ಅಲ್ಲದೆ ತಾಲ್ಲೂಕಿನ ಬಹುತೇಕ ಹಳೆಯ ಸರ್ಕಾರಿ ಶಾಲೆಗಳಿಗೆ ಶಾಸಕರು ತಮ್ಮ ಸ್ವಂತ ಖರ್ಚಿನಲ್ಲಿ ಸುಣ್ಣ-ಬಣ್ಣ ಬಳಿಸುತ್ತಿರುವುದು ಪ್ರಶಂಸಾರ್ಹ ಸಂಗತಿಯಾದರೂ, ನೋಡಲಿಕ್ಕೆ ಶಾಲೆಗಳು ಸುಂದರವಾಗಿ ಕಾಣುವುದರ ಜೊತೆಗೆ ಆ ಶಾಲೆಯೊಳಗೆ ಶಿಕ್ಷಕರಿದ್ದಾರೊ, ಇಲ್ಲವೊ ಎಂಬುದನ್ನು ಕಂಡುಕೊಂಡು ಶಿಕ್ಷಕರನ್ನು ಭರಿಸುವ ಕೆಲಸ ಮಾಡಬೇಕಿದೆ.

ಹುಲಿಕುಂಟೆ ಹೋಬಳಿಯು ತಾಲ್ಲೂಕು ಕೇಂದ್ರದಿಂದ 40 ಕಿ.ಮೀ. ದೂರವಿದೆ ಎಂಬ ಕಾರಣಕ್ಕಾಗಿ ಅನೇಕ ಶಿಕ್ಷಕರು ಹಿಂದಿನಿಂದಲೂ ಈ ಹೋಬಳಿಯ ಶಾಲೆಗಳನ್ನು ಕೌನ್ಸ್ಸೆಲಿಂಗ್‍ನಲ್ಲಿ ಆಯ್ಕೆ ಮಾಡಿಕೊಳ್ಳಲು ಹಿಂದೇಟು ಹಾಕುವುದು ಸಾಮಾನ್ಯವೆ ಆಗಿದೆ.

ಕ್ಷೇತ್ರದ ಶಾಸಕರು ಇಂತಹ ಪ್ರಬಲ ಸಮಸ್ಯೆಯೊಂದಕ್ಕೆ ಪರಿಹಾರ ಕಂಡುಕೊಳ್ಳದೇ ಇದ್ದಲ್ಲಿ ಮುಂದೆ ಈ ಹೋಬಳಿಯ ಶಾಲೆಗಳಲ್ಲಿ ಕಾಯಂ ಶಿಕ್ಷಕರೆ ಇಲ್ಲದಂತಾಗುವುದರಲ್ಲಿ ಆಶ್ಚರ್ಯವೂ ಇಲ್ಲ.

ಹುಲಿಕುಂಟೆ ಹೋಬಳಿಯ ಶೆಟ್ಟಿಗಾನಹಳ್ಳಿಯಲ್ಲಿ ಇದ್ದ ಕಾಯಂ ಶಿಕ್ಷಕರು ವರ್ಗಾವಣೆ ಮಾಡಿಸಿಕೊಂಡು ಬೇರೆ ಕಡೆ ಹೋದ ಪರಿಣಾಮ ಈ ಶಾಲೆಯಲ್ಲಿ ಕಾಯಂ ಶಿಕ್ಷಕರೆ ಇಲ್ಲದಂತಾಗಿದೆ. ಕೇವಲ ಶೆಟ್ಟಿಗಾನಹಳ್ಳಿಯಷ್ಟೇ ಅಲ್ಲದೆ ಇದೇ ಹೋಬಳಿಯ ಇಂತಹ ಅದೆಷ್ಟೋ ಶಾಲೆಗಳಲ್ಲಿ ಶಿಕ್ಷಕರೇ ಇಲ್ಲವಾಗಿದ್ದು ಮಕ್ಕಳ ಶೈಕ್ಷಣಿಕ ಬದುಕು ಅತಂತ್ರವಾಗಿದೆ.

(ಮುಂದುವರಿಯುವುದು)

–ಬರಗೂರು ವಿರೂಪಾಕ್ಷ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap