ಬೆಂಗಳೂರು :
ರಾಜ್ಯದಲ್ಲಿ ನಡೆದ ಬೆಳಗಾವಿ ಲೋಕಸಭೆ, ಮಸ್ಕಿ ಮತ್ತು ಬಸವ ಕಲ್ಯಾಣ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗಣನೀಯ ಸಾಧನೆ ಮಾಡಿದ್ದು, ರಾಜ್ಯ ಮತ್ತು ದೇಶದಲ್ಲಿ ಯುವ ಸಮೂಹ ಬದಲಾವಣೆ ಬಯಸಿರುವುದು ಈ ಜನಾದೇಶದಿಂದ ಸ್ಪಷ್ಟವಾಗಿದೆ ಎಂದು ಪ್ರದೇಶ ಯುವ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್. ರಕ್ಷಾ ರಾಮಯ್ಯ ಹೇಳಿದ್ದಾರೆ.
ರಾಜ್ಯ ಮತ್ತು ದೇಶದ ಭವಿಷ್ಯ ಬರೆಯುವ ಸಾಮರ್ಥ್ಯ ಯುವ ಸಮೂಹಕ್ಕಿದ್ದು, ರಾಜ್ಯ ಮತ್ತು ದೇಶದ ವಿವಿಧೆಡೆ ನಡೆದ ಚುನಾವಣಾ ಫಲಿತಾಂಶವೇ ಇದಕ್ಕೆ ಸಾಕ್ಷಿಯಾಗಿದೆ. ಜನರ ತೀರ್ಪು ಕಾಂಗ್ರೆಸ್ನ ಮುಂದಿನ ಭವಿಷ್ಯಕ್ಕೆ ದಿಕ್ಸೂಚಿಯಾಗಲಿದೆ ಎಂದಿದ್ದಾರೆ.
ಚುನಾವಣಾ ಫಲಿತಾಂಶ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ಬೆಳಗಾವಿಯಲ್ಲಿ ಹಿಂದೆಂದೂ ಇಲ್ಲದಷ್ಟು ತೀವ್ರ ಕುತೂಹಲ ಕೆರಳಿಸಿದ್ದ ಚುನಾವಣೆ ಇದಾಗಿತ್ತು. 20 ವರ್ಷಗಳ ಬಿಜೆಪಿ ಪಾರುಪತ್ಯಕ್ಕೆ ಅಂತ್ಯ ಹಾಡಲು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರು ಮಾಡಿದ ಪ್ರಯತ್ನ ಚರಿತ್ರೆಯಲ್ಲಿ ದಾಖಲಾಗಲಿದೆ. ಅವರು ವೀರೋಚಿತವಾಗಿ ಸೋತಿದ್ದು, ಅವರ ಈ ಪ್ರಯತ್ನ ಮುಂಬೈ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್ ಸಂಘಟನೆಗೆ ಹೊಸ ಅಧ್ಯಾಯದ ಪುಟ ತೆರೆದಂತಾಗಿದೆ ಎಂದು ಹೇಳಿದ್ದಾರೆ.
ಲೋಕಸಭೆ, ವಿಧಾನಸಭೆ ಉಪ ಚುನಾವಣೆಗಳಲ್ಲಿ ನಮ್ಮ ತಂಡ ಎಲ್ಲೆಡೆ ಪ್ರಚಾರದಲ್ಲಿ ತೊಡಗಿತ್ತು. ಬೆಳಗಾವಿಯಲ್ಲಿ ಕಾಂಗ್ರೆಸ್ ಹೊಸ ಹೆಗ್ಗುರುತುಗಳನ್ನು ಮೂಡಿಸುತ್ತದೆ ಎನ್ನುವ ನಿರೀಕ್ಷೆ ಇತ್ತು. ಆದರೆ ಈ ವೀರೋಚಿತ ಸೋಲಿನಿಂದ ನಾವು ದೃತಿಗೆಡುವುದಿಲ್ಲ. ಇನ್ನಷ್ಟು ಸ್ಫೂರ್ತಿಯಿಂದ ಪಕ್ಷ ಸಂಘಟನೆಯಲ್ಲಿ ತೊಡಗುತ್ತೇವೆ ಎಂದು ಹೇಳಿದ್ದಾರೆ.
ಬಿಜೆಪಿಯಿಂದ ಆಯ್ಕೆಯಾಗಿರುವ ಸಂಸದರು ರಾಜ್ಯದ ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸದಿದ್ದರೆ ಮುಂಬರುವ ದಿನಗಳಲ್ಲಿ ರಾಜ್ಯದ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ ಎನ್ನುವುದಕ್ಕೆ ಈ ಚುನಾವಣಾ ಫಲಿತಾಂಶ ಎಚ್ಚರಿಕೆ ಗಂಟೆಯಾಗಿದೆ ಎಂದು ತಿಳಿಸಿದ್ದಾರೆ.
ರಾಯಚೂರು ಜಿಲ್ಲೆಯ ಮಸ್ಕಿಯಲ್ಲಿ ಮತದಾರರು ಆಪರೇಷನ್ ಕಮಲ ಕಾರ್ಯಾಚರಣೆಯಲ್ಲಿ ಮಾರಾಟವಾದ ಪ್ರತಾಪ್ ಗೌಡ ಪಾಟೀಲ್ ಅವರಿಗೆ ಸೂಕ್ತ ಜಾಗ ತೋರಿಸಿದ್ದು, ಬಿಜೆಪಿಯ ಆಪರೇಷನ್ ವಿಫಲವಾಗಿದೆ. ಮಸ್ಕಿಯಲ್ಲಿ ರೈತರ ಸಮಸ್ಯೆಗಳಿಗೆ ಸ್ಪಂದಿಸಲು ಬಿಜೆಪಿ ಸರ್ಕಾರದಿಂದ ಸಾಧ್ಯವಾಗದೇ ಇರುವುದು ನಿಜಕ್ಕೂ ದುರಂತ. ಬಿಜೆಪಿ ಈ ಕ್ಷೇತ್ರದಲ್ಲಿ ಹಣ ಬಲ, ಆಡಳಿತ ಯಂತ್ರ, ತೋಳ್ಬಲ ಸೇರಿ ಎಲ್ಲವನ್ನೂ ದುರುಪಯೋಗಪಡಿಸಿಕೊಂಡಿತ್ತು. ಕಾಂಗ್ರೆಸ್ ಅಭ್ಯರ್ಥಿ ಬಸವನಗೌಡ ತುರವಿಹಾಳ್ ಅವರನ್ನು ಅಭೂತಪೂರ್ವವಾಗಿ ಗೆಲ್ಲಿಸಲು ಯುವ ಕಾಂಗ್ರೆಸ್ ತಂಡ ಅಭೂತಪೂರ್ವವಾಗಿ ಕೆಲಸ ಮಾಡಿದ್ದು, ಈ ಗೆಲುವು ನಮ್ಮಲ್ಲಿ ಹುರುಪು ಮೂಡಿಸಿದ್ದು, ಯುವ ಸಮೂಹಕ್ಕೆ ಸ್ಫೂರ್ತಿಯಾಗಿದೆ ಎಂದು ರಕ್ಷಾ ರಾಮಯ್ಯ ವರ್ಣಿಸಿದ್ದಾರೆ.
ಬಸವ ಕಲ್ಯಾಣದಲ್ಲಿ ಮತದಾರರು ನೀಡಿರುವ ತೀರ್ಪನ್ನು ವಿನಮ್ರವಾಗಿ ಸ್ವಾಗತಿಸುತ್ತೇವೆ. ಮುಂದಿನ ಚುನಾವಣೆಯಲ್ಲಿ ಉತ್ತಮ ಸಾಧನೆ ಮಾಡಲು ನಾವು ಈಗಿನಿಂದಲೇ ಸಜ್ಜಾಗುತ್ತೇವೆ. ಒಟ್ಟಾರೆ ರಾಜ್ಯ ಮತ್ತು ದೇಶದಲ್ಲಿ ಬದಲಾವಣೆ ಗಾಳಿ ಬೀಸುತ್ತಿದ್ದು, ಮುಂಬರುವ ದಿನಗಲ್ಲಿ ಕಾಂಗ್ರೆಸ್ ಉತ್ತಮ ಸಾಧನೆ ಮಾಡಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ದಾರಿ ತಪ್ಪಿಸುವ ಹೇಳಿಕೆಗಳಿಂದ ಜನರನ್ನು ಯಾಮಾರಿಸಲು ಸಾಧ್ಯವಿಲ್ಲ. ಪ್ರಬುದ್ಧ ಮತದಾರರು ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳದಲ್ಲಿ ತಕ್ಕ ಉತ್ತರ ನೀಡಿದ್ದಾರೆ. ಚುನಾವಣೆಯಲ್ಲಿ ಗೆಲ್ಲುವುದೊಂದೇ ಬಿಜೆಪಿಗೆ ಗುರಿ ಮತ್ತು ಆಡಳಿತ ನಡೆಸಲು ಮಾನದಂಡ ಆಗಬಾರದು. ಜನಪರ ಸಮಸ್ಯೆಗಳಿಗೆ ಅದರಲ್ಲೂ ಕೊರೋನಾದಂತಹ ಈ ಸಂಕಷ್ಟ ಸಂದರ್ಭದಲ್ಲಿ ರಾಜ್ಯ ಮತ್ತು ಕೇಂದ್ರದ ಬಿಜೆಪಿ ಸರ್ಕಾರಗಳು ಮತ್ತಷ್ಟು ಜನಪರ, ಜನ ಸ್ನೇಹಿಯಾಗಿ ಕೆಲಸ ಮಾಡಬೇಕು ಎಂದು ರಕ್ಷಾ ರಾಮಯ್ಯ ಒತ್ತಾಯಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2020/11/Sira-Election.jpg)