ತುಮಕೂರು:
ನಿರ್ಧಾರ ವಾಪಸ್ ಪಡೆಯಲು ಎಐಡಿಎಸ್ಓ ಪ್ರತಿಭಟನೆ
ಎಂಜಿನಿಯರಿಂಗ್ ಪ್ರವೇಶಾತಿ ವಿದ್ಯಾರ್ಥಿಗಳಿಗೆ ಸರ್ಕಾರಿ ಸೀಟುಗಳ ಮೇಲೆ ಏಕಾಏಕಿ 10 ಸಾವಿರದವರೆಗೂ
ಶುಲ್ಕ ಏರಿಕೆ ಮಾಡಿರುವುದನ್ನು ವಾಪಸ್ ಪಡೆಯಲು ಆಗ್ರಹಿಸಿ ಅಖಿಲ ಕರ್ನಾಟಕ ಪ್ರತಿಭಟನಾ ದಿನ ಹಿನ್ನೆಲೆಯಲ್ಲಿ ನಗರದ ಖಾಸಗಿ ಬಸ್ ನಿಲ್ದಾಣದ ಹತ್ತಿರ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಎಐಡಿಎಸ್ಓ ಜಿಲ್ಲಾ ಕಾರ್ಯದರ್ಶಿ ಲಕ್ಕಪ್ಪ ಮಾತನಾಡಿ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಶುಲ್ಕ ರಚನೆ 21-22 (ದಿನಾಂಕ: 14-11-2021)ರ ಸುತ್ತೋಲೆ ಹೊರಡಿಸಿದೆ. ಅದರ ಪ್ರಕಾರ, ಈ ವರ್ಷದ ಸರ್ಕಾರಿ ಕೋಟಾದಡಿ ಎಂಜಿನಿಯರಿಂಗ್ ಪ್ರವೇಶಾತಿ ಪಡೆಯುವ ವಿದ್ಯಾರ್ಥಿಗಳಿಗೆ 10 ಸಾವಿರದವರೆಗೂ ಶುಲ್ಕ ಏರಿಕೆ ಮಾಡಿರುವ ನಿರ್ಧಾರ ರಾಜ್ಯದ ವಿದ್ಯಾರ್ಥಿಗಳನ್ನು ಅತ್ಯಂತ ಆತಂಕಕ್ಕೆ ತಳ್ಳಿದೆ. ಈಗಾಗಲೇ ದಾಖಲೆ ಪರಿಶೀಲನೆ ಪ್ರಕ್ರಿಯೆ ಮುಗಿದು, ಮೊದಲ ಸುತ್ತಿನ ಸೀಟು ಹಂಚಿಕೆ ಆಗಿದೆ. ಈಗ ದಿಢೀರನೆ ಶುಲ್ಕ ಏರಿಕೆ ಮಾಡಿರುವುದು ವಿದ್ಯಾರ್ಥಿ ವಿರೋಧಿ ಮಾತ್ರವಲ್ಲ ಕಾನೂನು ಬಾಹಿರ ನಡೆಯಾಗುತ್ತದೆ ಎಂದರು.
ಎಐಡಿಎಸ್ಓ ಜಿಲ್ಲಾ ಅಧ್ಯಕ್ಷೆ ಅಶ್ವಿನಿ ಮಾತನಾಡುತ್ತಾ, ಈಗಾಗಲೇ ರಾಜ್ಯದ ಜನತೆ ಹಾಗು ವಿದ್ಯಾರ್ಥಿ ಸಮೂಹವು ಕೋವಿಡ್ ಸಾಂಕ್ರಾಮಿಕ ಹಾಗೂ ಲಾಕ್ಡೌನ್ ಸಮಯದಲ್ಲಿ ಅತ್ಯಂತ ಸಂಕಷ್ಟವನ್ನು ಎದುರಿಸಿದ್ದಾರೆ. ಸಂಸಾರವನ್ನು ತೂಗಿಸಲು ಹಲವರು ಉದ್ಯೋಗ ಅರಸಿದ್ದರೆ, ಹಲವರು ತಮ್ಮ ಪೋಷಕರು-ಸಂಬಂಧಿಕರನ್ನು ಕಳೆದುಕೊಂಡು ಈಗಲೂ ಆ ಆಘಾತದಿಂದ ಹೊರ ಬರಲು ಸಾಧ್ಯವಾಗಿಲ್ಲ. ಜನಸಾಮಾನ್ಯರ ಆದಾಯ ಕುಂಠಿತವಾಗಿದೆ ಇಂತಹ ಸಂದರ್ಭದಲ್ಲಿ ಈ ನಿರ್ಧಾರ ಸರಿಯಲ್ಲ ಎಂದು ಆಗ್ರಹಿಸಿದರು. ಪ್ರತಿಭಟನೆಯ ನಂತರ ಜಿಲ್ಲಾಧಿಕಾರಿಗಳಿಗೆ ಮನವಿಪತ್ರ ಸಲ್ಲಿಸಲಾಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
