ಎಲ್ಲರಿಗೂ ಜೂನ್ 5 ವಿಶ್ವ ಪರಿಸರ ದಿನವೆಂದು ಗೋತ್ತಾ ! ? ವಿಪರ್ಯಾಸವೆಂದರೆ ಎಷ್ಟೋ ಜನಕ್ಕೆ ಈ ವಿಷಯವೇ ತಿಳಿದಿಲ್ಲ. ರಾಜಕಾರಣಿಗಳು ಎಲೆಕ್ಷನ್ ಟೈಮ್ನಲ್ಲಿ ಜನರ ಕಾಲಿಗೆ ಬಿದ್ದು ವೋಟ್ ಕೇಳುವ ಹಾಗೆ ಪರಿಸರ ದಿನದೊಂದು ಹಸಿರನ್ನ ಉಳಿಸಿ , ಗಿಡನೆಡಿ, ಪರಿಸರ ಉಳಿಸಿ, ಎನ್ನುವ ಘೋಷಣೆ, ಭಾಷಣಕ್ಕೆ ಕೊರತೆ ಇಲ್ಲ ಬಿಡಿ.
ಇತ್ತೀಚಿನ ವರ್ಷಗಳಲ್ಲಿ ಮಳೆಗಾಲದ ಸಮಯದಲ್ಲಿ ಸರಿಯಾಗಿ ಮಳೆಯಾಗದೆ ನೀರಿನ ಹುಡುಕಾಟದಲ್ಲಿ ಜನರು ತೊಡಗಿ ನೀರಿನ ಕ್ಷಾಮದಿಂದ ಕುಡಿಯುವ ನೀರಿಗೂ ಪರಿತಪಿಸುತ್ತಿದ್ದಾರೆ. ಅತಿಯಾದ ವಾಯು ಮಾಲಿನ್ಯದಿಂದ ಬೃಹತ್ ನಗರಗಳು ತತ್ತರಿಸಿವೆ. ಪ್ರಕೃತಿ ಭೀಕರ ನರ್ತನಕ್ಕೆ ದೇಶದ ವಿವಿಧ ಭಾಗದ ಜನ ನಲುಗಿದ್ದಾರೆ. ಅತಿವೃಷ್ಟಿ, ಅನಾವೃಷ್ಟಿ ಹೆಚ್ಚಾಗಿ ಒಂದೆಡೆ ಮಳೆಯ ಕೊರತೆಯಿಂದ ಬರಆವರಿಸಿದೆ, ಇನ್ನೊಂದಡೆ ಅತಿಯಾದ ಮಳೆಯಿಂದ ಪ್ರವಾಹವಾಗಿ ಬೆಳೆದ ಬೆಳೆ ನೆಲಕಚ್ಚಿದೆ ಇದರಿಂದ ಜನಜೀವನ ಅದರ ಹೊಡೆತದಿಂದ ಬದುಕು ಕಟ್ಟಿಕೊಳ್ಳಲು ಹರಸಾಹಸಮಾಡುತ್ತಿದೆ ಸರಕಾರ ಪರಿಹಾರ ನೀಡಿಲು ಮುಂದೆಬಂದಿದೆ ಇದಕ್ಕೆಲ್ಲ ಮನುಷ್ಯ ಪ್ರತಿಕ್ಷಣ ಸ್ವಾರ್ಥಕ್ಕೆ ಲಾಭಕ್ಕೆ ನಿರಂತರವಾಗಿ ನಡೆಸುತ್ತಿರುವ ಪರಿಸರ ನಾಶವೇ ಕಾರಣ ಎಂಬುದು ವೈಜ್ಞಾನಿಕ ಸತ್ಯವಾಗಿದೆ.
ಅರಣ್ಯವನ್ನು ಕಡಿದು ಸೈಟ್,ಹೋಟೆಲ್,ರೆಸಾರ್ಟ್ ಮಾಡಿರುವುದೇ ಕೊಡಗು, ಕೇರಳ ಮುಳುಗಿಹೋಗಿದ್ದಕ್ಕೆ ಕಾರಣವೆನ್ನುತ್ತಾರೆ ಸಂಶೋಧಕರು. ಪರಿಸರವನ್ನು ನಾವು ನಾಶಮಾಡಿದರೆ ನಮ್ಮನ್ನು ಪರಿಸರ ನಾಶಮಾಡುತ್ತದೆ ಎಂಬುದಕ್ಕೆ ಇದು ತಾಜಾ ಉದಾಹರಣೆಯಾಗಿದೆ. ನಿರಂತರವಾಗಿ ಎಗ್ಗಿಲ್ಲದೆ ನಡೆಯುತ್ತಿರುವ ಅರಣ್ಯ ನಾಶ ಮತ್ತು ಕೃಷಿ ಭೂಮಿ ವಿಸ್ತರಣೆ, ಕೈಗಾರಿಕೆಗಳ ವಿಸ್ತರಣೆ ಮತ್ತು ರೈತರು ಅರಣ್ಯ ಕೃಷಿಗೆ ಒತ್ತುನೀಡದೆ ವರುಣನ ಮಾಯೆಯಿಂದ ಬರದ ಛಾಯೆ ಮೂಡಿ ರಾಜ್ಯದಲ್ಲಿ 2011 ರಲ್ಲಿ 123 ತಾಲೂಕುಗಳನ್ನು ಮತ್ತು 2018 ರಲ್ಲಿ 156 ತಾಲೂಕುಗಳನ್ನು ಬರಪೀಡಿತ ಪ್ರದೇಶವೆಂದು ರಾಜ್ಯ ಸರಕಾರ ಘೋಷಿಸಿರುವುದು ಉತ್ತಮ ನಿದರ್ಶನವಾಗಿದೆ.
ಬರಗಾಲ ಕೇವಲ ಮನುಕುಲವನ್ನು ಬಾದಿಸದೆ ಜಾನುವಾರು ಪಶು- ಪಕ್ಷಿಗಳು ಅರಣ್ಯವಾಸಿ ಪ್ರಾಣಿಗಳು ಕುಡಿಯಲು ನೀರಿಲ್ಲದೆ ಸಾವನ್ನಪ್ಪಿರುವುದನ್ನು ನಾವುಕಂಡಿದ್ದೇವೆ. ಮನುಷ್ಯನ ದುರಾಸೆಯಿಂದ ಯಾವ ತಪ್ಪು ಮಾಡದ ಪ್ರಾಣಿಸಂಕುಲವೆ ಬಲಿಯಾಗುತ್ತಿರುವುದು ವಿಪರ್ಯಾಸವಾಗಿದೆ. ಇತ್ತೀಚೆಗೆ ಧರ್ಮಸ್ಥಳದಲ್ಲಿ ಹರಿಯುವ ನೇತ್ರಾವತಿ ನದಿ ನೀರು ಕಡಿಮೆಯಾಗಿ ಸಮೃದ್ಧ ಅರಣ್ಯ ಸಂಪತ್ತು ತಂದಿರುವ ಪುಣ್ಯಕ್ಷೇತ್ರದಲ್ಲೇ ನೀರಿನ ಅಭಾವ ಶುರುವಾಗಿ ಯಾತ್ರಿಗಳನ್ನು ತಮ್ಮ ಪ್ರವಾಸವನ್ನು ಮುಂದೂಡಿ ಎಂದು ಮನವಿಮಾಡಿರುವುದು ಅಂತರ್ಜಲ ಕುಸಿತದ ತೀವ್ರತೆ ಮುನ್ನೆಚ್ಚರಿಕೆಯೆಂಬಂತೆ ಕಾಣುತ್ತದೆ. ಇಂತಹ ಪರಿಸ್ಥಿಯಲ್ಲಿ ಇದಕ್ಕೆಲ್ಲ ಮೂಲ ಕಾರಣವಾಗಿರುವ ಪರಿಸರ ರಕ್ಷಣೆಗೆ ಮನುಷ್ಯ ಯಾವ ರೀತಿಯಲ್ಲಿ ಸ್ಪಂದಿಸುತ್ತಿದ್ದಾನೆ ಎಂಬುದು ಸದ್ಯದ ಕುತೂಹಲವಾಗಿದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರ ಸಾವಿರಾರು ಕೋಟಿ ವೆಚ್ಚಮಾಡಿ ಸಾರ್ವಜನಿಕರಲ್ಲಿ ಜಾಗೃತಿ ಮತ್ತು ಪರಿಸರ ರಕ್ಷಣೆ, ಪ್ರತಿವರ್ಷವು ಕೋಟಿ ವೃಕ್ಷಗಳನ್ನು ನಡೆವವಂತಹ ಯೋಜನೆಗಳನ್ನು ಅನುಷ್ಟಾನ ಮಾಡುತ್ತಿದೆ ಆದರೆ ಈ ಎಲ್ಲವೂ ಯಶಸ್ವಿಯಾಗಬೇಕಾದರೆ ಜನರು ಪರಿಸರ ರಕ್ಷಣೆ, ಅರಣ್ಯಪ್ರದೇಶ ವಿಸ್ತರಣೆ ತಮ್ಮ ನೈತಿಕಹೊಣೆಯಾಗಿಸಿಕೊಳ್ಳಬೇಕು. ರೈತರು ಅರಣ್ಯ ಕೃಷಿಗೆ ಹೆಚ್ಚು ಒತ್ತು ನೀಡಬೇಕು. ಕೇಂದ್ರ ಸರ್ಕಾರ ತಂದ ಸ್ವಚ್ಛಭಾರತ ಯೋಜನೆ ಸ್ವಚ್ಛತೆಯನ್ನು ಜನತೆಗೆ ಬೋದಿಸಿದೆ.
ಪರಿಸರ ರಕ್ಷಣೆ ಮತ್ತು ಅರಣ್ಯ ಪ್ರದೇಶದ ವಿಸ್ತರಣೆ ಕೇವಲ ಸರ್ಕಾರದ ಕೆಲಸವೆಂಬ ಭಾವನೆಯಿಂದ ವರಬಂದು ಸರ್ಕಾರದ ಯಾವುದೇ ಯೋಜನೆಗಳು ಯಶಸ್ವಿಯಾಗಿ ಅನುಷ್ಠಾನವಾಗಬೇಕಾದರೆ ಸಾರ್ವಜನಿಕರ ಭಾಗವಹಿಸುವಿಕೆ ಪ್ರಮುಖ ಪಾತ್ರವಹಿಸುತ್ತದೆ ಎಂಬುದನ್ನು ಮನಗಾಣಬೇಕಿದೆ.
ತಂತ್ರಜ್ಞಾನ ಶರವೇಗದಲ್ಲಿ ಬೆಳೆಯುತ್ತಿರುವ ಸಂದರ್ಭದಲ್ಲಿ ಮಾನವ ತನ್ನ ಬುದ್ದಿ ಸಾಮಥ್ರ್ಯ ಬಳಸಿ ತನಗೆ ಅಗತ್ಯವಿರುವ ವಸ್ತುಗಳನ್ನು ಕೃತಕವಾಗಿ ತಯಾರುಮಾಡಿಕೊಂಡಿದ್ದಾನೆ ಮತ್ತು ಒಂದು ಹೆಜ್ಜೆ ಮುಂದೆ ಹೋಗಿ ಪ್ರಕೃತಿಯ ಶಕ್ತಿಯನ್ನು ಮೀರಿ ಬೇರೆ ಗ್ರಹಗಳಿಗೆ ತೆರಳಿ ಮನುಷ್ಯ ವಾಸಿಸಲು ಯೋಗ್ಯವೆ ಎಂಬುದನ್ನು ವೀಕ್ಷಿಸಿದ್ದಾನೆ ಮತ್ತು ಅದರೆ ಬಗ್ಗೆ ನಿರಂತರ ಅಧ್ಯಯನ ನಡೆಸುತ್ತಿದ್ದಾನೆ. ಇದೆಲ್ಲ್ಲಾ ಸಾಧ್ಯವಾದ ಮನುಷ್ಯನ ಕೈಯಲ್ಲಿ ತನ್ನನ್ನು ರಕ್ಷಿಸುತ್ತಿರುವ ಪರಿಸರವನ್ನು ರಕ್ಷಿಸಲು ಸಾಧ್ಯವಾಗುತ್ತಿಲ್ಲ. ಇದೇ ಮುಂದುವರೆದರೆ ಮನುಕುಲದ ಅಳಿವು ಸಮೀಪಿಸುತ್ತದೆ ಎಂಬುದನ್ನು ತಿಳಿಯುವ ಅಗತ್ಯತೆ ಹೆಚ್ಚಾಗಿದೆ.
ಪರಿಸರ ದಿನ ಎಂದ ತಕ್ಷಣ ಮೈಕೊಡವಿ ಎದ್ದುನಿಲ್ಲುವ ಕೆಲವು ಖಾಸಗಿ ಸಂಸ್ಥೆಗಳು ಮತ್ತು ಕೋಟ ಪರಿಸರ ಪ್ರೇಮಿಗಳಿಂದ ಬರೀ ಪ್ರಚಾರಕ್ಕೆ ಪರಿಸರ ದಿನ ಸಿಮೀತವಾದರೆ ಸಾಲದು ಅದು ಪ್ರತಿದಿನದ ಕಾಯಕ ವಾಗಬೇಕು. ಪ್ರಕೃತಿಗೆ ಮನುಷ್ಯನ ಅನಿವಾರ್ಯತೆ ಇಲ್ಲ ಆದರೆ ಮನುಷ್ಯನಿಗೆ ಪ್ರಕೃತಿಯ ಅನಿವಾರ್ಯತೆ ಇದೆ ಆದ್ದರಿಂದ ಅಲ್ಪ ಸಂತೋಷಕ್ಕೆ ಅರಣ್ಯ ಭಕ್ಷಕರಾದರೆ ಬದುಕಿನಲ್ಲಿ ಸಂಭ್ರಮದ ದಿನಗಳ ಬದಲಾಗಿ ಕರಾಳ ದಿನಗಳೆ ಬರುತ್ತವೆ.
ಯುವಜನತೆಯನ್ನು ಪರಿಸರ ಕಾಯದಲ್ಲಿ ಪ್ರೇರೇಪಿಸಲು ಪ್ರಸ್ತುತ ಸರಕಾರ ಪರಿಸರ ರಕ್ಷಣೆಯಲ್ಲಿ ಅದ್ವೀತಿಯ ಸಾಧನೆ ಮಾಡಿದವರ ಜೀವನ ಚರಿತ್ರೆಯನ್ನು ಪಠ್ಯವಾಗಿಟ್ಟಿರುವುದು ಆದರ್ಶಪ್ರಾಯವಾಗಿದೆ. ಚಿಕ್ಕಂದಿನಲ್ಲೇ ಪರಿಸರ ರಕ್ಷಣೆ ಮತ್ತು ಸ್ವಚ್ಛತೆ ಬಗ್ಗೆ ಮಕ್ಕಳಿಗೆ ತಿಳಿಹೇಳುವುದು ಪೋಷಕರ, ಶಿಕ್ಷಕರ ಆದ್ಯ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ವಿಶ್ವ ಪರಿಸರ ದಿನದಂದು ದೃಢನಿರ್ಧಾರ ಮಾಡೋಣ ನಮ್ಮ ಜೀವನದ ಸಂಭ್ರಮದ ದಿನಗಳಲ್ಲಿ ಉಡುಗೊರೆಯಾಗಿ ಯಾವುದೋ ಕೆಲಸಕ್ಕೆ ಬಾರದ ಉಡುಗೊರೆ ಕೊಡುವ ಬದಲು ಜೀವನವನ್ನೆ ಸಂಭ್ರಮವಾಗಿಸುವ ಸಸಿಗಳನ್ನು ಉಡುಗೊರೆ ಕೊಡುವ ಮೂಲಕ ಪರಿಸರ ಉಳಿವಿಗೆ ನಮ್ಮೆಲ್ಲರ ಉಳಿವಿಗೆ ನಾವೇ ಕಾರ್ಯೋನ್ಮುಖರಾಗೋಣ, ಪರಿಸರ ಉಳಿಸೋಣ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
![](https://prajapragathi.com/wp-content/uploads/2019/06/cover-envi.gif)