ಹೊನ್ನಾಳಿ:
ಪ್ರಕೃತಿ-ಪರಿಸರ ಸಮತೋಲನ ಪಾದಯಾತ್ರೆಯನ್ನು ಹಾವೇರಿ ಜಿಲ್ಲೆಯ ನೆಗಳೂರು ಗ್ರಾಮದಿಂದ ಬಾಳೆಹೊನ್ನೂರು ರಂಭಾಪುರಿ ಪೀಠದವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ನೆಗಳೂರು ಮಠದ ಗುರು ಶಾಂತೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.ಹಾವೇರಿ ಜಿಲ್ಲೆಯ ನೆಗಳೂರು ಗ್ರಾಮದಿಂದ ಪಾದಯಾತ್ರೆ ಮೂಲಕ ಇಲ್ಲಿನ ಹಿರೇಕಲ್ಮಠಕ್ಕೆ ಗುರುವಾರ ತಡರಾತ್ರಿ ಆಗಮಿಸಿದ ಸಂದರ್ಭದಲ್ಲಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಪ್ರಕೃತಿ ವಿಕೋಪದಿಂದ ವಿಚಿತ್ರ ಘಟನಾವಳಿಗಳು ಭೂಮಂಡಲದಲ್ಲಿ ಘಟಿಸುತ್ತಿವೆ. ಕೇರಳ ರಾಜ್ಯ ಹಾಗೂ ನಮ್ಮ ರಾಜ್ಯದ ಕೊಡಗು ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗಿ ಜಲ ಸಮಸ್ಯೆ ಉಂಟಾಗಿರುವುದೇ ಇದಕ್ಕೆ ಸಾಕ್ಷಿಯಾಗಿದೆ. ಇದಕ್ಕಾಗಿ ಪ್ರಕೃತಿ-ಪರಿಸರ ಸಮತೋಲನವನ್ನು ನಾವು ಕಾಪಾಡಬೇಕಿದೆ. ಪ್ರಕೃತಿಯ ಬಗ್ಗೆ ಅರಿವು ಮೂಡಿಸುವ ಹಿನ್ನೆಲೆಯಲ್ಲಿ ನಾವು ನೆಗಳೂರು ಗ್ರಾಮದಿಂದ ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು ಪೀಠಕ್ಕೆ ಸುಮಾರು 260ಕಿಮೀ.ಗಳಷ್ಟು ದೂರ ಪಾದಯಾತ್ರೆ ಹಮ್ಮಿಕೊಂಡಿದ್ದೇವೆ ಎಂದರು.
ಮಂಗಳವಾರ ಆರಂಭವಾದ ನಮ್ಮ ಪಾದಯಾತ್ರೆ ಮೊದಲ ದಿನ ರಾಣೆಬೆನ್ನೂರು ಪಟ್ಟಣದಲ್ಲಿ ವಾಸ್ತವ್ಯ ಹೂಡಿದ್ದೆವು.
ಬುಧವಾರ 2ನೇ ದಿನದ ರಾತ್ರಿ ರಟ್ಟೇಹಳ್ಳಿ ತಾಲೂಕು ಹಳ್ಳೂರು ಗ್ರಾಮದಲ್ಲಿ ವ್ಯಾಸ್ತವ್ಯ ಮಾಡಿ ಗುರುವಾರ ಹೊನ್ನಾಳಿಯ ಹಿರೇಕಲ್ಮಠದಲ್ಲಿ ಪ್ರಸಾದ ತೆಗೆದುಕೊಂಡು 3ನೇ ದಿನದ ರಾತ್ರಿ ಚೀಲೂರು ಗ್ರಾಮದಲ್ಲಿ ವಾಸ್ತವ್ಯ ಮಾಡುತ್ತೇವೆ ಎಂದು ಹೇಳಿದರು.ದಿನಕ್ಕೆ 20ರಿಂದ 26ಕಿಮೀ.ಗಳಷ್ಟು ದೂರ ಕ್ರಮಿಸಿ ಸೆ.25ಕ್ಕೆ ರಂಭಾಪುರಿ ಪೀಠ ತಲುಪಿ ಜಗದ್ಗುರುಗಳ ಪಾದ ಪೂಜೆ ಮಾಡಿದ ಬಳಿಕ ಸಮಾರೋಪ ಸಮಾರಂಭ ಹಮ್ಮಿಕೊಳ್ಳಲಾಗುವುದು. ಪಾದಯಾತ್ರೆಯಲ್ಲಿ ನಮ್ಮೊಂದಿಗೆ ನೂರಕ್ಕೂ ಹೆಚ್ಚು ಭಕ್ತಾದಿಗಳು ಪಾಲ್ಗೊಂಡಿದ್ದಾರೆ ಎಂದು ಹೇಳಿದರು. ಹಿರೇಕಲ್ಮಠದ ವ್ಯವಸ್ಥಾಪಕ ಚನ್ನಬಸಯ್ಯ ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
