ನವದೆಹಲಿ:
ಆಮ್ ಆದ್ಮಿ ಪಕ್ಷ(ಎಎಪಿ)ದಲ್ಲಿ ಆಂತರಿಕ ಭಿನ್ನಾಭಿಪ್ರಾಯ ಸ್ಫೋಟಗೊಂಡಿದೆ ಎಂಬ ಊಹಾಪೋಹಗಳನ್ನು ಸ್ಪಷ್ಟವಾಗಿ ತಳ್ಳಿಹಾಕಿದ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್, ಪಕ್ಷದಲ್ಲಿ “ಎಲ್ಲವೂ ಚೆನ್ನಾಗಿದೆ” ಎಂದು ಮಂಗಳವಾರ ಹೇಳಿದ್ದಾರೆ.
ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಸೋಲಿನ ನಂತರ, ದೆಹಲಿಯ ಕಪುರ್ತಲಾ ಹೌಸ್ನಲ್ಲಿ ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಮತ್ತು ಪಂಜಾಬ್ ಶಾಸಕರು, ಸಂಸದರೊಂದಿಗೆ ಸಭೆ ನಡೆಸಿದ ನಂತರ ಮಾನ್ ಈ ಹೇಳಿಕೆ ನೀಡಿದ್ದಾರೆ.
ಚುನಾವಣೆಯ ಸಮಯದಲ್ಲಿ ಶಾಸಕರ ಪ್ರಯತ್ನಗಳಿಗೆ ಧನ್ಯವಾದ ಹೇಳಲು ಕೇಜ್ರಿವಾಲ್ ಈ ಸಭೆಯನ್ನು ಕರೆದಿದ್ದರು ಎಂದು ಪಂಜಾಬ್ ಮುಖ್ಯಮಂತ್ರಿ ಹೇಳಿದ್ದಾರೆ. “ಪಂಜಾಬ್ನಲ್ಲಿ ಎಎಪಿ ಸರ್ಕಾರವು ಶಿಕ್ಷಣ ಅಥವಾ ಮೂಲಸೌಕರ್ಯ ಕ್ಷೇತ್ರಗಳಲ್ಲಿ ಸದಾ ಸಾರ್ವಜನಿಕ ಕಲ್ಯಾಣಕ್ಕಾಗಿ ಕೆಲಸ ಮಾಡಿದೆ” ಎಂದು ಮಾನ್ ತಿಳಿಸಿದರು.”ಗೆಲುವು ಮತ್ತು ಸೋಲು ಚುನಾವಣೆಯ ಒಂದು ಭಾಗವಾಗಿದೆ. ದೆಹಲಿಯ ಜನ ಅವರಿಗಾಗಿ ಕೆಲಸ ಮಾಡಿದ ವ್ಯಕ್ತಿಯಾಗಿ ನೆನಪಿಸಿಕೊಳ್ಳುತ್ತಾರೆ” ಎಂದು ಅವರು ಹೇಳಿದರು.
ಪಂಜಾಬ್ನಲ್ಲಿ ಪಕ್ಷವು ಇನ್ನೂ ಎರಡು ವರ್ಷಗಳ ಕಾಲ ಅಧಿಕಾರದಲ್ಲಿರುತ್ತದೆ. ನಾವು ಪಂಜಾಬ್ನಲ್ಲಿ ದೆಹಲಿಯ ಅನುಭವವನ್ನು ಬಳಸಿಕೊಳ್ಳುತ್ತೇವೆ. ನಾವು ಒಟ್ಟಾಗಿ ಕೆಲಸ ಮಾಡುತ್ತೇವೆ. ನಮ್ಮ ಪಕ್ಷವು ತನ್ನ ಕೆಲಸಕ್ಕೆ ಹೆಸರುವಾಸಿಯಾಗಿದೆ. ಇಂದಿನ ಸಭೆಯಲ್ಲಿ, ಮುಂಬರುವ ಎರಡು ವರ್ಷಗಳಲ್ಲಿ, ಪಂಜಾಬ್ ಅನ್ನು ಇಡೀ ರಾಷ್ಟ್ರ ನೋಡುವ ಮಾದರಿ ರಾಜ್ಯವನ್ನಾಗಿ ಮಾಡಲು ನಿರ್ಧರಿಸಲಾಯಿತು… ಪಂಜಾಬ್ ಯಾವಾಗಲೂ ಎಲ್ಲಾ ಹೋರಾಟಗಳಲ್ಲಿ ಮುಂಚೂಣಿಯಲ್ಲಿದೆ” ಎಂದರು.
