ಬಡವರಿಗೆ ಕಡಿಮೆ ದರದಲ್ಲಿ ಗುಣಮಟ್ಟದ ಔಷಧಗಳು ದೊರೆಯುತ್ತಿದೆ :ಡಾ. ಮನ್ಸುಖ್ ಮಾಂಡವೀಯ

ಬೆಂಗಳೂರು

       ದೇಶದ ಬಡವರಿಗೆ ಕಡಿಮೆ ದರದಲ್ಲಿ ಗುಣಮಟ್ಟದ ಔಷಧಗಳು ಜನೌಷಧಿ ಕೇಂದ್ರಗಳಿಂದ ದೊರೆಯುತ್ತಿದ್ದು, ಜನೌಷಧಿ ಕೇಂದ್ರಗಳಿಂದ ಪ್ರತಿವರ್ಷ ಸಾವಿರಾರು ರೂಪಾಯಿಗಳ ಉಳಿತಾಯವಾಗುತ್ತಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಮನ್ಸುಖ್ ಮಾಂಡವೀಯ ಹೇಳಿದ್ದಾರೆ.

    ಬಡ ಮತ್ತು ಮಧ್ಯಮ ವರ್ಗಕ್ಕೆ ಸಹಾಯವಾಗುವ 100ನೇ ಜನೌಷಧಿ ಕೇಂದ್ರ ಹಾಗೂ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿ ಬಳಸಿ ಜಯನಗರದಲ್ಲಿರುವ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಆಸ್ಪತ್ರೆ ಆವರಣದಲ್ಲಿ ನಮೋ ಡಯಾಲಿಸಿಸ್ ಮತ್ತು ಡೇಕೇರ್ ಕೇಂದ್ರವನ್ನು ಉದ್ಘಾಟಿಸಿದರು. ಇದೇ ವೇಳೆ 4 ಮೊಬೈಲ್ ಹೆಲ್ತ್ ಕ್ಲಿನಿಕ್ ಗೂ ಹಸಿರು ನಿಶಾನೆ ತೋರಿದರು.

   ಬಳಿಕ ಮಾತನಾಡಿದ ಅವರು, ಹೃದ್ರೋಗ, ಮಧುಮೇಹ, ರಕ್ತದೊತ್ತಡ, ಕ್ಯಾನ್ಸರ್ ಸೇರಿದಂತೆ ಹಲವು ರೋಗಗಳಿಗೆ ಜೀವನವಿಡೀ ಔಷಧ ತೆಗೆದುಕೊಳ್ಳಬೇಕಾದ ಅನಿವಾರ್ಯತೆ ಇರುತ್ತದೆ. ಪ್ರತಿತಿಂಗಳು 2ರಿಂದ 5 ಸಾವಿರ ರೂಪಾಯಿ ವೆಚ್ಚ ಭರಿಸುವ ಸಾಮರ್ಥ್ಯ ಎಲ್ಲರಿಗೂ ಇರುವುದಿಲ್ಲ. ಜನೌಷಧಿ ಕೇಂದ್ರಗಳು ಬಡವರಿಗೆ ಕಡಿಮೆ ದರದಲ್ಲಿ ಉತ್ತಮ ಆರೋಗ್ಯ ಸೌಲಭ್ಯ ಒದಗಿಸುತ್ತಿವೆ ಎಂದು ಹೇಳಿದರು.

   ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಬೆಂಗಳೂರಿನ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿದ್ದು ಪ್ರತಿ ವಾರ್ಡಿಗೆ ನಮ್ಮ ಕ್ಲಿನಿಕ್ ಪ್ರಾರಂಭ ಮಾಡಲಾಗಿದೆ. ಈಗಾಗಲೇ 100 ಪ್ರಾರಂಭ ಮಾಡಲಾಗಿದ್ದು, ಇನ್ನೂ ನೂರು ಇದೇ ವಾರದಲ್ಲಿ ಪ್ರಾರಂಭಿಸಲಾಗುತ್ತಿದೆ. 240 ವಾರ್ಡುಗಳಲ್ಲಿ ನಮ್ಮ ಕ್ಲಿನಿಕ್ ಪ್ರಾರಂಭವಾಗುತ್ತಿದೆ. ಸುಮಾರು 19 ಪಿ.ಹೆಚ್.ಸಿ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ. 4 ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ.

    ಎಲ್ಲೆಡೆ ಜನೌಷಧಿ ಕೇಂದ್ರಗಳನ್ನು ತೆರೆಯಲಾಗಿದೆ. ಇಂದು ಸಂಚಾರಿ ಆಸ್ಪತ್ರೆಯನ್ನೂ ಹಾಗೂ ಡಯಾಲಿಸಿಸ್ ಕೇಂದ್ರವನ್ನೂ ಉದ್ಘಾಟಿಸಲಾಗಿದ್ದು, ರೋಗಿಗಳ ಮುಖದಲ್ಲಿ ಮಂದಹಾಸ ನೋಡಿದಾಗ ಸಾರ್ಥಕ ಭಾವ ಮೂಡುತ್ತದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

    ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ದೂರದೃಷ್ಟಿ ಮತ್ತು ಬಡವರ ಬಗ್ಗೆ ಅವರಿಗಿರುವ ಕಾಳಜಿಯನ್ನು ಇದು ತೋರಿಸುತ್ತದೆ. ಅವರು ಪ್ರಧಾನಿಯಾಗುವ ಮುನ್ನ ಅತ್ಯಂತ ಕಡಿಮೆ ದರದಲ್ಲಿ ಔಷಧಗಳನ್ನು ನೀಡುವ ಕಾರ್ಯಕ್ರಮ ಇರಲಿಲ್ಲ. ಆಡಳಿತಗಾರರಿಗೆ   ವಿಷಯಗಳ ಬಗ್ಗೆ ಕಳಕಳಿ ಇರಬೇಕು. ಬಡತನವನ್ನು ಅನುಭವಿಸಿದಾಗ, ಹತ್ತಿರದಿಂದ ನೋಡಿ ಬಡವರ ಸಂಕಷ್ಟವನ್ನು ತಿಳಿದುಕೊಂಡಾಗ ಮಾತ್ರ ಬರುತ್ತದೆ. ನರೇಂದ್ರ ಮೋದಿಯವರಿಗೆ ಬಡತನ ಎಂದರೇನು ಎಂದು ತಿಳಿದಿದೆ.

    ಔಷಧಿ ಕಂಪನಿಗಳ ದರಕ್ಕೆ ಹತ್ತುಪಟ್ಟು ಗೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಬಡವರ ಕಷ್ಟವನ್ನು ಅರ್ಥಮಾಡಿಕೊಂಡಿರುವ ಪ್ರಧಾನಿಗಳು ಬಡವರಿಗಾಗಿ ಸುಲಭ ಮತ್ತು ಕಡಿಮೆ ದರದಲ್ಲಿ ದೊರೆಯಬೇಕೆಂದು. ಗುಣಮುಖರಾಗಿ ಆರೋಗ್ಯವಂತರಾಗಬೇಕು. ಭಾರತ ಸಶಕ್ತವಾಗಬೇಕಾದರೆ , ಕಟ್ಟಕಡೆಯ ವ್ಯಕ್ತಿಗೂ ಸೌಲಭ್ಯಗಳು ತಲುಪಬೇಕೆಂದು ಇಂಥ ಕಾರ್ಯಕ್ರಮ ರೂಪಿಸಿದ್ದಾರೆ ಎಂದರು.

   ಆರೋಗ್ಯಕ್ಕೆ ಮೊದಲು ಅಗತ್ಯವಿರುವುದು ಶುದ್ಧವಾದ ನೀರು, ದೇಶದ ಗ್ರಾಮಗಳಲ್ಲಿರುವ ಎಲ್ಲರ ಮನೆಗೆ ಮುಂದಿನ 5 ವರ್ಷಗಳಲ್ಲಿ ನೀರು ಕೊಡುವುದಾಗಿ ಘೋಷಿಸಿದ್ದ ಪ್ರಧಾನಿಗಳು, ನಾಯಕನಿಗೆ ಬದ್ಧತೆ, ಛಲ,ಬುದ್ಧಿವಂತಿಕೆ ಹಾಗೂ ಬುದ್ದಿವಂತಿಕೆಗೆ ಹಣ ಕೊಡುವ ಹೃದಯ ವೈಶಾಲ್ಯವಿದ್ದರೆ ಅದು ಸಾಧ್ಯವಿದೆ. ಜಲ್ ಜೀವನ್ ಮಿಷನ್ ಅಡಿಯಲ್ಲಿ ಅಸಾಧ್ಯವಾದುದನ್ನು ಸಾಧ್ಯ ಮಾಡಲಾಗುತ್ತಿದೆ. ಅಸಾಧ್ಯವಾದುದನ್ನು ಸಾಧ್ಯ ಮಾಡುವುದೇ ನಿಜವಾದ ನಾಯಕತ್ವ.

    10 ಕೋಟಿಗಳಿಂತ ಹೆಚ್ಚು ಮನೆಗಳಿಗೆ ಮೋದಿಯವರು ಶುದ್ಧವಾದ ಕುಡಿಯುವ ನೀರನ್ನು ಕೊಡುತ್ತಿದ್ದಾರೆ. ಕರ್ನಾಟಕ ಒಂದರಲ್ಲಿಯೇ 72 ವರ್ಷ ಕೇವಲ 25 ಲಕ್ಷ ಮನೆಗಳಿಗೆ ನೀರು ಕೊಡಲಾಗಿತ್ತು. ಕಳೆದ ಮೂರು ವರ್ಷಗಳಲ್ಲಿ 40 ಲಕ್ಷ ಮನೆಗಳಿಗೆ ಕುಡಿಯುವ ನೀರನ್ನು ಒದಗಿಸಲಾಗಿದೆ. ಇದು ಬದ್ಧತೆಯ ನಾಯಕತ್ವ, ಹಾಗೂ ಬದ್ಧತೆ. ಕಾರ್ಯಕ್ರಮದಲ್ಲಿ ಸಚಿವ ಆರ್. ಅಶೋಕ, ಸಂಸದ ತೇಜಸ್ವಿ ಸೂರ್ಯ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link