ಸಿಎಂ ವಿರುದ್ಧ ವಿಡಿಯೋ ಬಾಂಬ್ ಸಿಡಿಸಿದ ಮಾಜಿ ಸಿಎಂ!

ಬೆಂಗಳೂರು

     ಮುಡಾ ಹಗರಣದಲ್ಲಿ ಸಿಲುಕಿರುವ ಸಿಎಂ ಸಿದ್ದರಾಮಯ್ಯ, ಕೇಂದ್ರದಿಂದ ರಾಜಭವನ ದುರ್ಬಳಕೆಯಾಗುತ್ತಿದೆ ಎಂದು ಆರೋಪಿಸಿದ್ದಾರೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ಸಿದ್ದರಾಮಯ್ಯ ವಿರುದ್ಧ ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ವಿಡಿಯೋ ಬಾಂಬ್ ಹಾಕಿದ್ದಾರೆ. 2011ರಲ್ಲಿ ವಿರೋಧ ಪಕ್ಷದ ನಾಯಕನಾಗಿದ್ದಾಗ ಸಿದ್ದರಾಮಯ್ಯ, ಗವರ್ನರ್ ಬಗ್ಗೆ ಯಾವ ರೀತಿ ಮಾತನಾಡಿದ್ದರು ಎಂದು ಸುದ್ದಿಗೋಷ್ಠಿಯಲ್ಲಿ ವಿಡಿಯೋ ಬಿಡುಗಡೆ ಮಾಡುವ ಮೂಲಕ ಕೌಂಟರ್ ಕೊಟ್ಟಿದ್ದಾರೆ. 

   ಲೋಕಾಯುಕ್ತ ಎಸ್​ಐಟಿ ಚಂದ್ರಶೇಖರ್ ವಿರುದ್ಧವೂ ವಾಗ್ದಾಳಿ ನಡೆಸಿದ ಕುಮಾರಸ್ವಾಮಿ, ಚಂದ್ರಶೇಖರ ಎಷ್ಟು ಉದ್ಧಟ ಇರಬಹುದು? ರಾಜ್ಯಪಾಲರ ಕಚೇರಿ ಪರಿಶೀಲನೆ ಮಾಡುತ್ತೇವೆ ಎಂದರೆ ಏನು? ಇದಕ್ಕೆ ಸಿಎಂ ಆದೇಶ ಕೊಟ್ಟರೋ, ಸಚಿವರು ಕೊಟ್ಟರೋ ಎಂದು ಪ್ರಶ್ನಿಸಿದರು.  ಈ ಚಂದ್ರಶೇಖರ್ ಹಿನ್ನೆಲೆ ಗೊತ್ತಾ? ಈ ವ್ಯಕ್ತಿಯ ಹಿನ್ನೆಲೆ ಹುಡುಕಿ ಹೊರಟೆ. ಈ ವ್ಯಕ್ತಿ ಹಿಮಾಚಲ ಪ್ರದೇಶದ ಕೇಡರ್​​ನಲ್ಲಿ ಇರಬೇಕಾದವರು. ಯುಪಿಎಸ್​ಸಿಯಲ್ಲಿ ಸೆಲೆಕ್ಟ್ ಆಗಿ ಹಿಮಾಚಲದಲ್ಲಿ ಕೆಲಸ ಮಾಡಬೇಕಾದವನು. ಕೆಲವು ಸೂಕ್ಷ ವಿಚಾರಗಳನ್ನ ಹೇಳಲು ಆಗುವುದಿಲ್ಲ.

    ನಾನು ಹಿಟ್ ಅಂಡ್ ರನ್ ಮಾಡುವುದಿಲ್ಲ. 1998 ರಲ್ಲಿ ಚಂದ್ರಶೇಖರ ಆಯ್ಕೆ ಆಗಿರೋದು. 2008ರಲ್ಲಿ ಇಲ್ಲಿಗೆ ಬಂದರು. ಮನವಿ ಮೇರೆಗೆ ಬೇರೆ ರಾಜ್ಯಗಳನ್ನು ಕೇಳುತ್ತಾರೆ. ಹಿಮಾಚಲ ವಾತಾವರಣ ಹೊಂದಲ್ಲ ಅಂತ ಸುಳ್ಳು‌ ದಾಖಲೆ ಸೃಷ್ಟಿ ಮಾಡಿ ಇಲ್ಲೇ ಮುಂದುವರೆದಿದ್ದಾರೆ. ದೊಡ್ಡ ಸೂಪರ್ ಕಾಪು ಇರಬೇಕು ಅಂತ ಈ‌ ಚಂದ್ರಶೇಖರ ಹುಡಿಕೊಂಡು ಹೋದೆ, ಕಾನೂನುಬಾಹಿರವಾಗಿ ಇಲ್ಲೇ ಮುಂದುವರೆದಿದ್ದಾನೆ ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು. 

   ರಾಜ್ಯಪಾಲರ ವಿಚಾರದಲ್ಲಿ ಸಿದ್ದರಾಮಯ್ಯ ಉಪದೇಶ ಮಾಡಿದ್ದಾರೆ, ಉತ್ತರ ಕೊಡಲಿ ಎಂದು ವಿಡಿಯೋ ಸಮೇತ ಹೆಚ್​ಡಿಕೆ ಸವಾಲ್​ ಹಾಕಿದರು. ಇದಕ್ಕೆ ಕೌಂಟರ್ ಕೊಟ್ಟ ಸಿದ್ದರಾಮಯ್ಯ, ಅವರು ಹೇಳಿದ್ದಕ್ಕೆ ಉತ್ತರ ಕೊಡಬೇಕು ಎಂದು ಎಲ್ಲಿದೆ ಅಂತಾ ಗರಂ ಆದರು. ಡಿನೋಟಿಫಿಕೇಶನ್​ನಲ್ಲಿ ರಾಜೀನಾಮೆ ಕೊಡದೇ ಬೇಲ್ ಮೇಲೆ ಹೊರಗಿದ್ದಾರೆ ಎಂದ ಸಿದ್ದರಾಮಯ್ಯ ಹೇಳಿಕೆಗೆ ಹೆಚ್​ಡಿಕೆ ಸಿಡಿದೆದ್ದರು. ನಿಮ್ಮ (ಸಿದ್ದರಾಮಯ್ಯ) ರೀತಿ ರಾಜೀನಾಮೆ ಕೊಡದೇ ನಾನು ಭಂಡತನ ಪ್ರದರ್ಶಿಸಲ್ಲ ಎಂದರು.

   ಇದಿಷ್ಟೇ ಅಲ್ಲ, ರಾಜಕೀಯ ಕೇಸ್ ಹಾಕಿರೋದು ಇದೇ ಮೊದಲ ಸಾರಿ ಅಂದಿದ್ದ ಸಿಎಂಗೆ ಹೆಚ್​ಡಿಕೆ ಪಂಚ್​ ಕೊಟ್ಟರು. 50 ಪ್ರಕರಣ ಬಾಕಿ ಇದೆ, ಇಲ್ನೋಡಿ ಎಂದು ದಾಖಲೆಗಳನ್ನು ಪ್ರದರ್ಶಿಸಿದರು. ಒಟ್ಟಾರೆಯಾಗಿ ಹೆಚ್​ಡಿಕೆ ರಾಜೀನಾಮೆ ಕೇಳಿದ ಸಿದ್ದರಾಮಯ್ಯ ವಿರುದ್ಧ ಕುಮಾರಸ್ವಾಮಿ ಸುದ್ದಿಗೋಷ್ಠಿಯ ಮೂಲಕ ರೋಷಾವೇಶಗೊಂಡರು. ನಿಮ್ಮ ರೀತಿ ರಾಜೀನಾಮೆ ಕೊಡದೇ ಭಂಡತನ ಪ್ರದರ್ಶಿಸುವುದಿಲ್ಲ ಎಂಬ ಮೂಲಕ ತಿರುಗೇಟು ನೀಡಿದರು.