ತುಮಕೂರು:
ಮೂವರು ಪಿಯುಸಿ ವಿದ್ಯಾರ್ಥಿಗಳು ಮೃತ | ಗಾಯಾಳುಗಳಾಗಿ ಪರೀಕ್ಷೆ ಬರೆಯುವುದಾದರೂ ಹೇಗೆ..?
ಪಾವಗಡದ ಪಳವಳ್ಳಿ ಕೆರೆ ಏರಿ ಬಳಿ ನಡೆದ ಬಸ್ ಪಲ್ಟಿ ದುರಂತದÀಲ್ಲಿ ಮೂವರು ಪಿಯುಸಿ ವಿದ್ಯಾರ್ಥಿಗಳು ಮೃತಪಟ್ಟಿದ್ದು, ಹಲವು ಪದವಿ ಪೂರ್ವ ವಿದ್ಯಾರ್ಥಿಗಳು ಗಾಯಾಳುಗಳಾಗಿ ಬೆಂಗಳೂರು, ತುಮಕೂರು, ಪಾವಗಡದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ವಿದ್ಯಾರ್ಥಿಗಳಿಗೆ ಸದ್ಯ ಅಪಘಾತದಲ್ಲಿ ಪೆಟ್ಟು ತಿಂದ ನೋವಿನ ಜೊತೆಗೆ ಸನಿಹದಲ್ಲಿರುವ ಪಿಯುಸಿ ಪರೀಕ್ಷೆ ಬರೆಯುವುದು ಹೇಗೆ ಎಂಬ ಚಿಂತೆ ಕಾಡತೊಡಗಿದೆ.
ಪದವಿ ಪೂರ್ವ ಶಿಕ್ಷಣ ಇಲಾಖೆ ಅಂಕಿ-ಅಂಶದ ಪ್ರಕಾರ ಇಬ್ಬರು ವಿದ್ಯಾರ್ಥಿನಿಯರು, ಓರ್ವ ವಿದ್ಯಾರ್ಥಿ ಸೇರಿ ಮೂವರು ಪಿಯು ವಿದ್ಯಾರ್ಥಿಗಳು ಮೃತಪಟ್ಟಿದ್ದು, ಅಧಿಕ ಗಾಯಗೊಂಡÀವರಲ್ಲಿ ಐವರು ಪ್ರಥಮ ಪಿಯುಸಿ, ಐವರು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಸೇರಿದ್ದಾರೆ. ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಪ್ರಿಪರೇಟರಿ ಪರೀಕ್ಷೆ ಬರೆಯಲು ತೆರಳುವಾಗ ಅಪಘಾತ ಸಂಭವಿಸಿದ್ದು, ಕೈ, ತಲೆ, ಭುಜಕ್ಕೆ ಪೆಟ್ಟು ಮಾಡಿಕೊಂಡು ಆಸ್ಪತ್ರೆಯಲ್ಲಿರುವ ವಿದ್ಯಾರ್ಥಿಗಳು ಇದೀಗ ಪರೀಕ್ಷೆಯ ಶಾಕ್ಗೊಳಗಾಗಿದ್ದಾರೆ.
ಅಗತ್ಯ ಸಾರಿಗೆ ಬಸ್ ವ್ಯವಸ್ಥೆಗೆ ಕ್ರಮ, ಸಮಯಕ್ಕೆ ಸರಿಯಾಗಿ ಬಸ್ ಸಂಚಾರ ಇಲ್ಲದಿರುವುದೆ ದುರಂತಕ್ಕೆ ಕಾರಣ
ವಿದ್ಯಾರ್ಥಿಗಳಿಗೆ ಗಾಯದ ಮೇಲೆ ಬರೆ ಎಂಬಂತೆ ಅಪಘಾತದ ಪೆಟ್ಟಿನ ನೋವಿನ ಜೊತೆಗೆ ಶೀಘ್ರದಲ್ಲಿ ಎದುರಾಗುವ ಪಿಯುಸಿ ಪರೀಕ್ಷೆಯನ್ನು (ಮಾ.28ರಿಂದ ಪ್ರಥಮ ಪಿಯುಸಿ ಪರೀಕ್ಷೆ) ಕೈ, ತಲೆಗೆ ಪೆಟ್ಟುಮಾಡಿಕೊಂಡಿರುವ ಪರಿಸ್ಥಿತಿಯಲ್ಲಿ ಎದುರಿಸುವುದಾದರೂ ಹೇಗೆ ಎಂದು ಪ್ರಶ್ನಿಸುತ್ತಿದ್ದಾರೆ.
ಅಪಘಾತದಲ್ಲಿ ನಮ್ಮ ತಲೆಗೆ ಪೆಟ್ಟುಬಿದ್ದು ಓದಿದ್ದು ಜ್ಞಾಪಕಕ್ಕೆ ಬರುತ್ತಿಲ್ಲ. ಪುಸ್ತಕ, ನೋಟ್ಸ್ಗಳು ಸಹ ಅಪಘಾತದಲ್ಲಿ ಹಾಳಾಗಿದೆ. ಇನ್ನೂ ಪರೀಕ್ಷೆ ಬರೆಯದಿದ್ದರೆ ನಮ್ಮ ಶೈಕ್ಷಣಿಕ ಭವಿಷ್ಯವೂ ಹಾಳಾಗುತ್ತದೆ ಎಂದು ಪೋಷಕರ ಬಳಿ ವೇದನೆ ತೋಡಿಕೊಳ್ಳುತ್ತಿದ್ದಾರೆ.
ಸಚಿವರ ಬಳಿ ಕೋರಿಕೆ:
ಇದು ತಮ್ಮ ಮಕ್ಕಳು ಬೇಗ ಚೇತರಿಕೆಯಾಗಬೇಕೆಂದು ಬಯಸುತ್ತಿರುವ ಅವರ ಪೋಷಕರನ್ನು ಆತಂಕಕ್ಕೆ ದೂಡಿದ್ದು, ಗಾಯಾಳುಗಳ ಯೋಗಕ್ಷೇಮ ವಿಚಾರಿಸಲು ಜಿಲ್ಲಾಸ್ಪತ್ರೆಗೆ ಭೇಟಿ ಕೊಟ್ಟ ಗೃಹಸಚಿವರು, ವೈದ್ಯಕೀಯ ಶಿಕ್ಷಣ ಸಚಿವರ ಬಳಿ ಪರೀಕ್ಷೆ ಕುರಿತಂತೆ ಮಕ್ಕಳ ಮನಸ್ಥಿತಿ ಬಗ್ಗೆ ಅಳಲು ತೋಡಿಕೊಂಡಿದ್ದಾರೆ. ಈ ಸಂಬಂಧ ಸಚಿವರು ಶಿಕ್ಷಣ ಸಚಿವರ ಜೊತೆಗೆ ಮಾತನಾಡಿ ಗುಣಮುಖರಾದ ಮೇಲೆ ಪರೀಕ್ಷೆ ಬರೆಯುವ ವಿಶೇಷ ಅವಕಾಶದ ಬಗ್ಗೆ ಪ್ರಯತ್ನಿಸುವುದಾಗಿ ಭರವಸೆ ನೀಡಿದ್ದಾರೆ.
ಉಡುಪಿಯಲ್ಲಿ ಸಿಲಿಂಡರ್ ಸ್ಫೋಟ! ಇಬ್ಬರು ದುರ್ಮರಣ ಓರ್ವನಿಗೆ ಗಂಭೀರ ಗಾಯ
ಸಪ್ಲಿಮೆಂಟರಿ ಅವಕಾಶವಿದೆ, ಆತಂಕ ಬೇಡ ಗುಣಮುಖರಾಗಿ: ವಿದ್ಯಾರ್ಥಿಗಳ ಈ ಅಹವಾಲಿನ ಕುರಿತು, ಪದವಿ ಪೂರ್ವ ಶಿಕ್ಷಣ ಇಲಾಖೆಯ ಮುಂದೆ ಅಂತಹ ಪ್ರಸ್ತಾಪ, ಕೋರಿಕೆಗಳು ಲಿಖಿತವಾಗಿ ಬಂದಿಲ್ಲ ಎಂದು ಸ್ಪಷ್ಪಪಡಿಸಿರುವ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಗಂಗಾಧರ್ ಅವರು, ಕಾಲೇಜುಗಳಿಂದ ಅಂತಹ ಕೋರಿಕೆ ಬಂದಲ್ಲಿ ಇಲಾಖೆಗೆ ಪ್ರಸ್ತಾವನೆ ಕಳುಹಿಸಿಕೊಡಲಾಗುವುದು. ದ್ವಿತೀಯ ಪಿಯುಸಿ ಗಾಯಾಳು ವಿದ್ಯಾರ್ಥಿಗಳಿಗೆ ಹಾಲಿ ನಡೆಯುತ್ತಿದ್ದ ಪ್ರಿಪರೇಟರಿ ಪರೀಕ್ಷೆ ಪ್ರಮುಖ ಮಾನದಂಡವಲ್ಲ.
ಮುಖ್ಯ ಪರೀಕ್ಷೆಗೆ ಇನ್ನೂ ಒಂದು ತಿಂಗಳಿದ್ದು, ಗುಣಮುಖರಾದ ವಿದ್ಯಾರ್ಥಿಗಳು ಪರೀಕ್ಷೆ ಬರೆಯಬಹುದು. ಇದು ಸಾಧ್ಯವಾಗದಿದ್ದರೆ, ಪ್ರಥಮ ಪಿಯುಸಿ, ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಬ್ಬರು ಸಪ್ಲಿಮೆಂಟರಿ ಪರೀಕ್ಷೆ ಬರೆಯಬಹುದು. ಯಾವ ವಿದ್ಯಾರ್ಥಿಗಳೂ ಆತಂಕ ಪಡುವುದು ಬೇಡ. ಗುಣಮುಖರಾಗುವುದು ಮುಖ್ಯ ಎಂದು ಕಿವಿಮಾತು ಹೇಳಿದ್ದಾರೆ.
ಅಪಘಾತದ ಶಾಕ್ಗೊಳಗಾಗಿರುವ ವಿದ್ಯಾರ್ಥಿಗಳಲ್ಲಿ ಪರೀಕ್ಷೆ ಬರೆಯಲಾಗುತ್ತದೆಯೋ ಇಲ್ಲವೋ ಎನ್ನುವ ಆತಂಕವನ್ನು ನಿವಾರಿಸುವ ಕಾರ್ಯವನ್ನು ಶಿಕ್ಷಣ ಇಲಾಖೆಯವರು, ಆರೋಗ್ಯ ಇಲಾಖೆಯ ಮಾನಸಿಕ ತಜ್ಞರು ಮಾಡುವ ಅವಶ್ಯಕತೆ ಇದೆ.
ಅಪಘಾತದಲ್ಲಿ ಗಾಯಗೊಂಡಿರುವ ವಿದ್ಯಾರ್ಥಿಗಳಲ್ಲಿ ಕೆಲವರಿಗೆ ಕೈ ಭುಜಕ್ಕೆ ಪೆಟ್ಟಾಗಿದ್ದು, ತಲೆಗೆ ಮೈಲ್ಡ್ ಇಂಜ್ಯೂರಿಗಳಾಗಿದೆ. ಶಸ್ತ್ರಚಿಕಿತ್ಸೆ ಅವಶ್ಯಕವಿದ್ದವರಿಗೆ ಶಸ್ತ್ರಚಿಕಿತ್ಸೆಯನ್ನು ಮಾಡಲಾಗಿದ್ದು, ತುಮಕೂರು, ಪಾವಗಡ ಆಸ್ಪತ್ರೆಗೆ ದಾಖಲಾಗಿದ್ದವರಲ್ಲಿ ಹಲವರು ಸೋಮವಾರ ಡಿಸ್ಚಾರ್ಜ್ ಆಗಿದ್ದಾರೆ. ಸೂಕ್ತ ಚಿಕಿತ್ಸೆ ನೀಡುತ್ತಿದ್ದು, ದ್ವಿತೀಯ ಪಿಯುಸಿ ಪರೀಕ್ಷೆ ಹೊತ್ತಿಗೆ ಶಕ್ತ್ಯರಾಗುವ ವಿಶ್ವಾಸವಿದೆ.
-ಡಾ.ನಾಗೇಂದ್ರಪ್ಪ ಡಿಎಚ್ಓ,
-ಡಾ.ವೀರಭದ್ರಯ್ಯ ಜಿಲ್ಲಾ ಸರ್ಜನ್.
ಅಪಘಾತದಲ್ಲಿ ತೀವ್ರ ಗಾಯಗೊಂಡಿರುವ ನನ್ನ ಮಗ ಮುಂದಿನ ವಾರ ಇರುವ ಪ್ರಥಮ ಪಿಯುಸಿ ಪರೀಕ್ಷೆ ಬರೆಯಲು ಸಾಧ್ಯವಾಗುತ್ತಿಲ್ಲ ಎನ್ನುವುದಕ್ಕೆ ತೀವ್ರ ನೊಂದಿದ್ದಾನೆ. ಊಟ ಮಾಡುವುದಿಲ್ಲ ಎಂದು ಹಠ ಹಿಡಿದಿದ್ದಾನೆ. ಗುಣಮುಖರಾದ ಮೇಲೆ ಪ್ರತ್ಯೇಕ ಪರೀಕ್ಷೆ ಬರೆಯಲು ಅವಕಾಶ ಕೊಡಿ.
-ಅಪಘಾತದಲ್ಲಿ ಗಾಯಗೊಂಡ ಪ್ರಥಮ ಪಿಯುಸಿ ವಿದ್ಯಾರ್ಥಿ ರಂಜಿತ್ಕುಮಾರ್ ತಾಯಿ
- ಎಸ್.ಹರೀಶ್ ಆಚಾರ್ಯ ತುಮಕೂರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ