ನವದೆಹಲಿ:
ಮಣಿಪುರದಲ್ಲಿ ಹಲವು ದಿನಗಳಿಂದ ನಡೆಯುತ್ತಿರುವ ಹಿಂಸಾಚಾರ ಕುರಿತು ಎಲ್ಲಿಯೂ ತುಟ್ಟಿ ಬಿಚ್ಚದ ಪ್ರಧಾನಿ ಮೋದಿ ಬುಧವಾರ ರಾಜ್ಯಸಭೆಯಲ್ಲಿ ಕೊನೆಗೂ ಮೌನ ಮುರಿದಿದ್ದಾರೆ.
ಹಿಂಸಾಚಾರ ಪೀಡಿತ ಪ್ರದೇಶದಲ್ಲಿ ಸಹಜ ಪರಿಸ್ಥಿತಿಯನ್ನು ತರಲು ಸರ್ಕಾರ ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದೆ. ಹಿಂಸಾಚಾರ ಕ್ಷೀಣಿಸಿದ್ದು, ರಾಜ್ಯದ ಹಲವು ಭಾಗಗಳಲ್ಲಿ ಶಾಲೆಗಳು ಪುನರ್ ಆರಂಭವಾಗಿವೆ. ಮರಳಿ ಸಂಪೂರ್ಣ ಶಾಂತ ಪರಿಸ್ಥಿತಿಗೆ ತರಲು ಎಲ್ಲಾ ಪ್ರಯತ್ನ ಮಾಡಲಾಗುತ್ತಿದೆ ಎಂದರು.
ಮಣಿಪುರದಲ್ಲಿ ಶಾಂತಿ ಮರು ಸ್ಥಾಪಿಸಲು ಪ್ರಯತ್ನ ಮಾಡಲಾಗುತ್ತಿದೆ. ಈ ಸಂಬಂಧ 500 ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ. ಸುಮಾರು 11,000 ಎಫ್ ಐಆರ್ ದಾಖಲಿಸಲಾಗಿದೆ. ಮಣಿಪುರದ ಬಹುತೇಕ ಕಡೆಗಳಲ್ಲಿ ಸಹಜ ಪರಿಸ್ಥಿತಿವೇರ್ಪಟ್ಟಿದೆ. ಪ್ರವಾಹದ ಪರಿಸ್ಥಿತಿ ಉಂಟದಾಗ ಎರಡು ಎನ್ ಡಿಆರ್ ಎಫ್ ತಂಡವನ್ನು ಕಳುಹಿಸಲಾಗಿತ್ತು ಎಂದು ಸದನಕ್ಕೆ ತಿಳಿಸಿದ ಪ್ರಧಾನಿ, ಪರಿಸ್ಥಿತಿಯ ಲಾಭ ಪಡೆದುಕೊಂಡಿದ್ದಕ್ಕಾಗಿ ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಉಲ್ಲೇಖಿಸಿ ವಾಗ್ದಾಳಿ ನಡೆಸಿದ ಪ್ರಧಾನಿ, ಒಂದು ದಿನ ನಿಮ್ಮನ್ನು ತಿರಸ್ಕರಿಸುತ್ತಾರೆ. ಮಣಿಪುರ ವಿಷಯವನ್ನಿಟ್ಟುಕೊಂಡು ರಾಜಕೀಯ ಮಾಡುವುದನ್ನು ನಿಲ್ಲಿಸಿ ಎಂದರು.
ಮತ್ತೊಂದೆಡೆ ಪ್ರಧಾನಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್, ಈ ವಿಚಾರದಲ್ಲಿ ಹಲವು ತಿಂಗಳುಗಳ ಕಾಲ ಮೌನ ಬಳಿಕ ಅಜೀವಿಕ ಪ್ರಧಾನಿ ಮಣಿಪುರದಲ್ಲಿ ಸಹಜ ಪರಿಸ್ಥಿತಿ ಇದೆ ಎಂದು ಆಶ್ಚರ್ಯಕರವಾದ ಹೇಳಿಕೆ ನೀಡಿದ್ದಾರೆ. ವಾಸ್ತವದಲ್ಲಿ, ಜುಲೈ 1 ರಂದು ಲೋಕಸಭೆಯಲ್ಲಿ ಮಣಿಪುರದ ಸಂಸದರು ಸೂಚಿಸಿದಂತೆ ಪರಿಸ್ಥಿತಿ ಇನ್ನೂ ಉದ್ವಿಗ್ನವಾಗಿದೆ ಎಂದು ಹೇಳಿದ್ದಾರೆ. ಮೇ 3, 2023 ರ ರಾತ್ರಿ ಗಲಭೆ ಉಂಟಾದ ನಂತರ ಈವರೆಗೂ ಪ್ರಧಾನಿ ಮಣಿಪುರಕ್ಕೆ ಭೇಟಿ ನೀಡಿಲ್ಲ. ಅಥವಾ ಹರಿಯಾಣದ ಯಾವುದೇ ರಾಜಕೀಯ ನಾಯಕರನ್ನು ಭೇಟಿ ಮಾಡಿಲ್ಲ. ಅಧ್ಯಕ್ಷರ ಭಾಷಣವೂ ಈ ವಿಷಯದ ಬಗ್ಗೆ ಮೌನವಾಗಿದೆ ಎಂದು ಜೈರಾಮ್ ರಮೇಶ್ ಟೀಕಿಸಿದ್ದಾರೆ.
ಇದಕ್ಕೂ ಮುನ್ನಾ ಲೋಕಸಭೆಯಲ್ಲಿ ಮಣಿಪುರ ವಿಚಾರ ಕುರಿತು ಅಲ್ಲಿನ ಸಂಸದರು ಮಾತನಾಡಲು ಅವಕಾಶ ನೀಡದಿದ್ದಕ್ಕೆ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿತು. ಪ್ರಧಾನಿ ಮತ್ತೆ ಹಳೆಯ ಆರೋಪ, ಅರ್ಥವಿಲ್ಲದ ಜೋಕ್ ಗಳನ್ನು ಪುನರಾವರ್ತಿಸುತ್ತಾರೆ. ಅವರಿಗೆ ಮಣಿಪುರ ವಿಚಾರ ಕುರಿತು ಕೇಳುವ ವ್ಯವದಾನ ಇಲ್ಲ ಎಂದು ಟೀಕಾ ಪ್ರಹಾರ ನಡೆಸಿತು. ವಿಪಕ್ಷಗಳ ರಾಜ್ಯಸಭೆಯಲ್ಲಿ ಘೋಷಣೆ ಕೂಗುವ ಮೂಲಕ ಪ್ರಧಾನಿ ಭಾಷಣಕ್ಕೆ ಅಡ್ಡಿಪಡಿಸಲು ಯತ್ನಿಸಿ ಸಭಾತ್ಯಾಗ ನಡೆಸಿದವು.
![](https://prajapragathi.com/wp-content/uploads/2024/07/modi.gif)