ಚಿಕ್ಕನಾಯಕನಹಳ್ಳಿ :
ಪಟ್ಟಣದ ಕೇದಿಗೆಹಳ್ಳಿ ಪಾಳ್ಯದ ಗುಂಡುತೋಪಿನ ಗುಡಿಸಲಿಗೆ ಆಕಸ್ಮಿಕವಾಗಿ ಬೆಂಕಿ ಬಿದ್ದ ಕಾರಣ ಗುಡಿಸಲಿನಲ್ಲಿದ್ದ ದಾಖಲೆ ಪತ್ರಗಳು ಹಾಗೂ ಗುಡಿಸಲಿನಲ್ಲಿದ್ದ ವಸ್ತುಗಳು, ಆಹಾರ ಧಾನ್ಯಗಳು ಬೆಂಕಿಗೆ ಆಹುತಿಯಾಗಿವೆ.
ಗುಂಡುತೋಪಿನಲ್ಲಿ ವಾಸಿಸುತ್ತಿದ್ದ ಗಂಗಮ್ಮ, ಶಂಬುಲಿಂಗಯ್ಯನವರ ಗುಡಿಸಲಿಗೆ ಭಾನುವಾರ ಮಧ್ಯಾಹ್ನದ ವೇಳೆ ಬೆಂಕಿ ಬಿದ್ದಿದೆ. ಬೆಂಕಿ ಬಿದ್ದ ಸಮಯದಲ್ಲಿ ಮನೆಯಲ್ಲಿ ನಾಲ್ಕು ಮಂದಿ ವಾಸವಿದ್ದರು, ಬೆಂಕಿ ತಗುಲಿತ ತಕ್ಷಣ ಮನೆಯವರೆಲ್ಲರೂ ಹೊರ ಬಂದಿದ್ದರಿಂದ ಹಾಗೂ ಅಕ್ಕಪಕ್ಕದ ಮನೆಯವರು ಬೆಂಕಿಯನ್ನು ನೀರನ್ನು ಹಾಕಿಸಿ ಶಮನಗೊಳಿಸಲು ಪ್ರಯತ್ನಿಸಿದ್ದಾರೆ, ಯಾವುದೇ ಪ್ರಾಣಾಪಯವಾಗಿಲ್ಲ. ಗುಡಿಸಲಿಗೆ ಬೆಂಕಿ ಬಿದ್ದ ಕಾರಣ ಗುಡಿಸಲಿನಲಿದ್ದ ಆಧಾರ್ ಕಾರ್ಡ್, ರೇಷನ್ ಕಾರ್ಡ್, ತಾಯಿ ಕಾರ್ಡ್, ಆಹಾರ ಧಾನ್ಯಗಳು , ಬಟ್ಟೆ ಬರೆಗಳು ಬೆಂಕಿಗೆ ಆಹುತಿಯಾಗಿವೆ.
ಗುಡಿಸಲಿಗೆ ಬೆಂಕಿ ಬಿದ್ದ ತಕ್ಷಣ ಅಗ್ನಿಶಾಮಕ ಸ್ಥಳದ ಸಿಬ್ಬಂದಿ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಿದ ಹಿನ್ನೆಲೆಯಲ್ಲಿ ಹೆಚ್ಚಿನ ಅನಾಹುತ ತಪ್ಪಿತು. ಗುಂಡುತೋಪಿನಲ್ಲಿ 16 ಗುಡಿಸಲು ಇವೆ, ಇಲ್ಲಿ ವಾಸಿಸುತ್ತಿರುವ ಜನರಿಗೆ ಮೂಲಭೂತ ಸೌಕರ್ಯದ ತೊಂದರೆ ಇದೆ ಹಾಗೂ ಮಳೆ, ಗಾಳಿ ಬಂದರೆ ವಾಸಿಸಲು ತೀವ್ರ ಸಮಸ್ಯೆ ಎದುರಾಗುತ್ತದೆ ಹಾಗೂ ಬೇಸಿಗೆ ಆರಂಭವಾಗಿದೆ ಬಿಸಿಲಿಗೆ ಗುಂಡುತೋಪಲಿನಲ್ಲಿ ಗುಡಿಸಲು ಹಾಕಿಕೊಂಡು ವಾಸಿಸುವ ಜನರು ಒಣಗಿದ ತೆಂಗಿನ ಗರಿಯನ್ನು ಮನೆಯ ಮೇಲ್ಛಾವಣಿಗೆ ಹಾಕಿಕೊಂಡು ವಾಸಿಸುತ್ತಿದ್ದಾರೆ.
ಬಿಸಿಲಿನ ಧಗೆಗೆ ಯಾವಾಗ ಬೇಕಾದರೂ ಬೆಂಕಿ ಆವರಿಸಬಹುದು ಎಂದು ಅಲ್ಲಿನ ಸ್ಥಳೀಯರು ಈ ಹಿಂದೆಯೇ ಪತ್ರಿಕೆಯಲ್ಲಿ ಮನವಿ ಮಾಡಿ, ಪುರಸಭೆ ನಮ್ಮ ಸಮಸ್ಯೆಗೆ ಸ್ಪಂದಿಸುವಂತೆ ಆಗ್ರಹಿಸಿದ್ದರು ಈಗಲಾದರೂ ಗುಂಡುತೋಪಿನ ಜನರಿಗೆ ನೆರವಾಗಲು, ಅವರ ಸಮಸ್ಯೆ ನಿವಾರಿಸಲು ಪುರಸಭಾ ಆಡಳಿತ ಕ್ರಮ ಕೈಗೊಳ್ಳುತ್ತದೆಯೇ ಎಂದು ಸ್ಥಳೀಯ ನಿವಾಸಿಗಳು ಕಾದುಕುಳಿತಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ