ಚಂಡೀಗಢ:
ಪಂಜಾಬ್ನ ಸಿರ್ಹಿಂದ್ ನಿಲ್ದಾಣದಲ್ಲಿ ಇಂದು ಬೆಳಿಗ್ಗೆ 7:30 ರ ಸುಮಾರಿಗೆ ಅಮೃತಸರ-ಸಹರ್ಸಾ ಎಕ್ಸ್ಪ್ರೆಸ್ ನ ಒಂದು ಬೋಗಿಯಲ್ಲಿ ಬೆಂಕಿ ಕಾಣಿಸಿಕೊಂಡಿತು. ಹೊಗೆಯನ್ನು ಗಮನಿಸಿದ ರೈಲ್ವೆ ಅಧಿಕಾರಿಗಳು, ತೊಂದರೆಗೊಳಗಾದ ಬೋಗಿಯಿಂದ ಎಲ್ಲಾ ಪ್ರಯಾಣಿಕರನ್ನು ರೈಲಿನ ಇತರ ಭಾಗಗಳಿಗೆ ಸ್ಥಳಾಂತರಿಸಿದರು. ತಕ್ಷಣ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಬೆಳಿಗ್ಗೆ 7:30 ರ ಸುಮಾರಿಗೆ ರೈಲು ಅಮೃತಸರದಿಂದ ಬರುತ್ತಿದ್ದಾಗ ಬೆಂಕಿ ಕಾಣಿಸಿಕೊಂಡಿತು. ರೈಲಿನ ಎಸಿ ಕೋಚ್ಗಳಲ್ಲಿ ಒಂದರಲ್ಲಿ ಹೊಗೆ ಕಾಣಿಸಿಕೊಂಡಿದೆ ಎಂದು ಸರ್ಕಾರಿ ರೈಲ್ವೆ ಪೊಲೀಸ್ (ಜಿಆರ್ಪಿ) ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರೈಲು ನಿಲ್ಲಿಸಲು ಪ್ರಯಾಣಿಕನೊಬ್ಬ ಸರಪಳಿಯನ್ನು ಎಳೆದ, ನಂತರ, ಪ್ರಯಾಣಿಕರನ್ನು ಸುರಕ್ಷಿತವಾಗಿ ಬೋಗಿಯಿಂದ ಸ್ಥಳಾಂತರಿಸಲಾಯಿತು ಎಂದು ಅಧಿಕಾರಿ ತಿಳಿಸಿದ್ದಾರೆ. ಬೆಂಕಿ ಶೀಘ್ರದಲ್ಲೇ (ಜಿ -19) ಕೋಚ್ ಅನ್ನು ಆವರಿಸಿತು. ಇತರ ಎರಡು ಕೋಚ್ಗಳು ಸಹ ಸಣ್ಣ ಪ್ರಮಾಣದ ಪರಿಣಾಮವನ್ನು ಎದುರಿಸಿದವು. ಮೂರು ಕೋಚ್ಗಳನ್ನು ರೈಲಿನ ಉಳಿದ ಭಾಗದಿಂದ ಬೇರ್ಪಡಿಸಲಾಯಿತು ಮತ್ತು ತಕ್ಷಣವೇ ಅಗ್ನಿಶಾಮಕ ದಳದವರನ್ನು ಕರೆಸಲಾಯಿತು ಎಂದು ಜಿಆರ್ಪಿ ಅಧಿಕಾರಿ ತಿಳಿಸಿದ್ದಾರೆ.
ಘಟನೆಯಲ್ಲಿ ಒಬ್ಬ ವ್ಯಕ್ತಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ರೈಲ್ವೆ ಮಂಡಳಿ ತಿಳಿಸಿದೆ. 32 ವರ್ಷದ ಮಹಿಳೆಯೊಬ್ಬರು ಸುಟ್ಟ ಗಾಯಗಳಿಂದ ಬಳಲುತ್ತಿದ್ದು, ಅವರನ್ನು ಫತೇಘರ್ ಸಾಹಿಬ್ನ ಸಿವಿಲ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಜಿಆರ್ಪಿ ಸಿರ್ಹಿಂದ್ನ ಸ್ಟೇಷನ್ ಹೌಸ್ ಅಧಿಕಾರಿ ರತ್ತನ್ ಲಾಲ್ ತಿಳಿಸಿದ್ದಾರೆ. ಬೆಂಕಿ ಕಾಣಿಸಿಕೊಂಡ ಕೂಡಲೇ ರೈಲ್ವೆ ಅಧಿಕಾರಿಗಳು ಪ್ರಯಾಣಿಕರನ್ನು ಹಾನಿಗೊಳಗಾದ ಬೋಗಿಯಿಂದ ಬೇರೆ ಬೋಗಿಗಳಿಗೆ ಸ್ಥಳಾಂತರಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬೆಂಕಿಗೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ.
ಭಾರತೀಯ ರೈಲ್ವೆ ಈ ಘಟನೆಯ ಬಗ್ಗೆ X (ಹಿಂದೆ ಟ್ವಿಟರ್) ನಲ್ಲಿ ಮಾಹಿತಿಯನ್ನು ಪೋಸ್ಟ್ ಮಾಡಿದೆ, ಅಲ್ಲಿ IR ಹೀಗೆ ಬರೆದಿದೆ, ‘ಇಂದು ಬೆಳಿಗ್ಗೆ (7:30 am) ಸಿರ್ಹಿಂದ್ ನಿಲ್ದಾಣದಲ್ಲಿ ರೈಲು ಸಂಖ್ಯೆ 12204 (ಅಮೃತಸರ-ಸಹರ್ಸಾ) ನ ಕೋಚ್ ಬೆಂಕಿಗೆ ಆಹುತಿಯಾಗಿದೆ. ರೈಲ್ವೆ ಸಿಬ್ಬಂದಿ ತಕ್ಷಣ ಎಲ್ಲಾ ಪ್ರಯಾಣಿಕರನ್ನು ಸ್ಥಳಾಂತರಿಸಿ ಬೆಂಕಿಯನ್ನು ನಂದಿಸಿದರು. ಯಾವುದೇ ಗಾಯಗಳು ವರದಿಯಾಗಿಲ್ಲ. ಪೀಡಿತ ಕೋಚ್ ಅನ್ನು ಪ್ರತ್ಯೇಕಿಸಲಾಗಿದೆ. ಬೆಂಕಿಯ ಕಾರಣ ತನಿಖೆಯಲ್ಲಿದೆ’ ಎಂದು ಬರೆದುಕೊಂಡಿದೆ. ರೈಲ್ವೆ ಅಧಿಕಾರಿಗಳ ಪ್ರಕಾರ, ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಮತ್ತು ಯಾವುದೇ ಸಾವುನೋವುಗಳು ಅಥವಾ ಗಾಯಗಳು ವರದಿಯಾಗಿಲ್ಲ. ಬೆಂಕಿಯ ಕಾರಣ ಇನ್ನೂ ಸ್ಪಷ್ಟವಾಗಿಲ್ಲ, ಆದರೆ ತಾಂತ್ರಿಕ ದೋಷ ಅಥವಾ ಶಾರ್ಟ್ ಸರ್ಕ್ಯೂಟ್ ಕಾರಣವೆಂದು ಪರಿಗಣಿಸಲಾಗುತ್ತಿದೆ.








